PLEASE LOGIN TO KANNADANET.COM FOR REGULAR NEWS-UPDATES


ವಿಸ್ತಾರ್ ಥಿಯೇಟರ್‌ನ ’ವಿಸ್ತಾರ್ ಸಮುದಾಯ ಕಾಲೇಜಿನ’ ವಿದ್ಯಾರ್ಥಿನಿಯರಿಂದ ಇಂದು ಸಂಜೆ (ಶುಕ್ರವಾರ) ಕೊಪ್ಪಳದ ಸಾಹಿತ್ಯ ಭವನದಲ್ಲಿ ಸಂಜೆ ೬.೩೦ ಕ್ಕೆ ’ಆ ನಗುವಿನ ಚಿತ್ರಗಳು’ ಎಂಬ ನಾಟಕ ಪ್ರಯೋಗ ನಡೆಯಲಿದೆ.
 ಆಧುನಿಕ ಹೆಣ್ಣಿನ ಜಾಗತಿಕ ತಲ್ಲಣಗಳು ಪರಿಕಲ್ಪನೆಯಲ್ಲಿ  ಈ ನಾಟಕವನ್ನು ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ ರವರು ರಚಿಸಿ ನಿರ್ದೇಶಿಸಿದ್ದು ಪ್ರಥಮ ಪ್ರಯೋಗ ಇಂದು ಜರುಗಲಿದೆ.
  ಸಮಕಾಲಿನ ಹಾಗೂ ಜಾಗತಿಕ ಹೆಣ್ಣಿನ ಮನೋತಲ್ಲಣಗಳು ಹಾಗೂ ಬದುಕಿನ ವಿಸ್ತಾರಗಳನ್ನು ಸೂಕ್ಷ್ಮವಾಗಿ ರಂಗದ ಮೇಲೆ ಹಿಡಿದಿಡಲು ಈ ನಾಟಕ ಪ್ರಯತ್ನಿಸಿದೆ. 
 ನಾಟಕದಲ್ಲಿ ಅಭಿನಯಿಸುತ್ತಿರುವ ವಿದ್ಯಾರ್ಥಿನಿಯರು ಕೊಪ್ಪಳ ಜಿಲ್ಲೆಯ ಹಳ್ಳಿ ಬದುಕಿನ ಹಿನ್ನಲೆಯವರಿರುವುದು ಈ ನಾಟಕದ ವಿಶೇಷವಾಗಿದೆ. ಇವರಿಗೆ ಜಾಗತಿಕ ಜಗತ್ತಿನ ವಿಸ್ಮಯವಾಗಲಿ  ಕೌತುಕವಾಗಲಿ ದೂರದ ಮಾತು ಆದರೆ ಇಡೀ ನಾಟಕದ ಪರಿಕಲ್ಪನೆ ಜಾಗತಿಕ ಬದುಕಿನ ಒಟ್ಟು ಸಾಂದ್ರತೆಯನ್ನು ಹಿಡಿಯುವುದಾಗಿದೆ. ಹಾಗಾಗಿ ನಟಿಯರಿಗೆ ಜಾಗತಿಕ ಜಗತ್ತಿನ ಸಂಸ್ಕೃತಿ ಹಾಗೂ ಸ್ವಭಾವಗಳನ್ನು ಪರಿಚಯಕ್ಕಾಗಿ ಬೆಂಗಳೂರಿನಲ್ಲಿ ತಾಲೀಮು ಮಾಡಿಸಬೇಕಾಯಿತು. ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಮಲ್ಟಿಪ್ಲೇಕ್ಸ್ ಬಿಲ್ಡಿಂಗ್‌ಗಳು, ಮಾಲ್ ಗಳು, ಜಗಮಗಿಸುವ ಬಣ್ಣ ಬಣ್ಣದ ಬೆಳಕು , ಕಾಸ್ಟೂಮ್ ವಿನ್ಯಾಸಗಳು, ತರಾವರಿ ತೊಗಲಿನ ಜನರ ಉಡುಪು, ಕೇಶ ವಿನ್ಯಾಸ, ಮುಖದ ಮೇಲಿನ ಮೇಕಪ್ ವಿವಿಧ ಬಗೆಯ ಜಾಗತಿಕ ಝಲಕ್‌ಗಳನ್ನು ನೋಡಿದ ನಟಿಯರು ನಾಟಕದೊಳಗಿನ ಪಾತ್ರಗಳಾಗಿದ್ದಾರೆ. ಸುಮಾರು ಇಪ್ಪತ್ತು ದಿನ ಬೆಂಗಳೂರಿನ ವಿಸ್ತಾರ್ ಕ್ಯಾಂಪಸ್‌ನಲ್ಲಿ ತಾಲೀಮು ಮಾಡಿ ಕೊಪ್ಪಳದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಇದೊಂದು ಕನ್ನಡ ರಂಗಭೂಮಿಯ ರಂಗ ಸಾಧ್ಯತೆಯ ಹುಡುಕಾಟವೇ ಆಗಿದೆ. 
ನಾಟಕದ ಉದ್ಘಾಟನೆಯನ್ನು ಶಂ.ನಿಂ.ತಿಮ್ಮನಗೌಡರ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಾಝರ್ ಪಿ. ಎಸ್, ಶೈಲಜಾ, ಆಶಾ ಭಾಗವಹಿಸಲಿದ್ದಾರೆ. ಪ್ರಾಸ್ತಾವಿಕವಾಗಿ ಹಾಲ್ಕುರಿಕೆ ಶಿವಶಂಕರ ಮಾತನಾಡಲಿದ್ದಾರೆ ಎಂದು ಶೀಲಾ ಹಾಲ್ಕುರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ ಶೀಲಾ ಹಾಲ್ಕುರಿಕೆ ಮೊ;೯೮೪೪೯೦೪೪೩೪

Advertisement

0 comments:

Post a Comment

 
Top