PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ೬೩ ರಸ್ತೆ ಕಾಮಗಾರಿ   ಹಾಗೂ ನಗರದ ವಿವಿಧ ಕಾಮಗಾರಿಗಳ ಸಮಗ್ರ ತನಿಖೆ ಆಗ್ರಹ
 
 ಕೊಪ್ಪಳ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ೬೩ ರ  ೪ ಕಿ.ಮೀ.ರಸ್ತೆ ಕಾಮಗಾರಿ ಕಳಪೆ ಹಾಗೂ ಅವೈಜ್ಞಾನಿಕವಾಗಿ ಕೂಡಿದ್ದು, ಇದರಲ್ಲಿ ಸುಮಾರು ೧೦ ಕೋ ರೂ.ಗಳಿಗಿಂತ ಹೆಚ್ಚಿನ ಹಣದ ಅವ್ಯವಹಾರ ನಡೆದ ಬಗ್ಗೆ ಶಂಕೆ ಇದೆ. ಸದರಿ ಹೆದ್ದಾರಿಯು ೨೦೦೮ ರಲ್ಲಿ ಅಗಲೀಕರಣಗೊಂಡಿದ್ದು, ಮಾನ್ಯ ಮುಖ್ಯಮಂತ್ರಿಗಳ ಅನುದಾನದಲ್ಲಿ ನಗರಸಭೆಗೆ ೩೦ ಕೋಟಿ ರೂ. ಹಣ ಬಿಡುಗಡೆಗೊಂಡಿತ್ತು. ಆದರ ಪೈಕಿ ೧೦ ಕೋಟಿ. ರೂ.ಗಳನ್ನು ಈ ರಾ.ಹೆ.೬೩ ರಸ್ತೆ ಕಾಮಗಾರಿಗಾಗಿ ನಗರಸಭೆಯಿಂದ ಲೋಕೋಪಯೋಗಿ ಇಲಾಖೆ ಕೊಪ್ಪಳ ಇವರಿಗೆ ನೀಡಿರುತ್ತಾರೆ. ಸದರಿ ಕಾಮಗಾರಿಯನ್ನು ೨೦೧೨ ನೇ ಸಾಲಿನಲ್ಲಿ ಆಗಿನ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ನಿರ್ಮಿತಿ ಕೇಂದ್ರ ಕೊಪ್ಪಳ ಇವರಿಗೆ ಹಾಗೂ ಅಹಮದಾಬಾದ್ ಮೂಲದ ಖಾಸಗಿ ಕಂಪನಿಯೊಂದಕ್ಕೆ ನೀಡಿದ್ದರು. ಆದರೆ ಕಾಮಗಾರಿ ಪೂರ್ಣಗೊಳ್ಳಲಿಲ್ಲ. ಮತ್ತೇ ೧ ವರ್ಷದ ನಂತರ ಲೋಕೋಪಯೋಗಿ ಇಲಾಖೆಗೆ ವಹಿಸಲಾಯಿತು. 
ಮತ್ತೇ ೧ ವರ್ಷದ ನಂತರ ಇದೇ ರಾ.ಹೆ.೬೩ ಹಾಗೂ ಕೊಪ್ಪಳ ನಗರದ ಪ್ರಮುಖ ೫ ವೃತ್ತಗಳನ್ನು ಅಗಲೀಕರಣಗೊಳಿಸಿ ನಿರ್ಮಿಸಲು ೧೭ ಕೋಟಿ ರೂ.ಗಳನ್ನು ಮಂಜೂರುಗೊಳಿಸಲಾಯಿತು.
ಕಳೆದ ನಾಲ್ಕು ವರ್ಷಗಳಲ್ಲಿ ಈ ರಸ್ತೆ ಕಾಮಗಾರಿಗೆ ಒಟ್ಟು ಸುಮಾರು ೩೧ ಕೋಟಿ ರೂ.ಬಿಡುಗಡೆಯಾದರೂ ರಸ್ತೆ ಕಾಮಗಾರಿಯು ಅವೈಜ್ಞಾನಿಕ ಹಾಗೂ ಅತ್ಯಂತ ಕಳಪೆ ಮಟ್ಟದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ಸದರಿ ಕಾಮಗಾರಿಯಲ್ಲಿ ನಡೆದ ಅವ್ಯವಹಾರವನ್ನು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಹಾಗೂ  
* ಕೊಪ್ಪಳ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಕಾರಣರಾದ ಎಲ್ಲ ಅಧಿಕಾರಿಗಳ ವಿರುದ್ಧ ಶೀಘ್ರದಲ್ಲಿಯೇ ಕಾನೂನು ಕ್ರಮ ಜರುಗಿಸಬೇಕು.
* ಕೊಪ್ಪಳ ನಗರದಲ್ಲಿ ನಡೆಯುತ್ತಿರುವ ನಗರೋತ್ಥಾನ ಯೋಜನೆಯ ಎಲ್ಲ ಕಾಮಗಾರಿಗಳ ಗುಣಮಟ್ಟ ತಪಾಸಣೆಗೊಳಿಸಬೇಕು. ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು.
* ಕೊಪ್ಪಳ ನಗರದ ಜನಜೀವನ ಅವ್ಯವಸ್ಥೆಗೆ ಕಾರಣರಾಗಿರುವ ಹಾಗೂ ಅರ್ಧಕ್ಕೆ ನಿಂತಿರುವ ಒಳಚರಂಡಿ (ಯುಜಿಡಿ) ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿ ಕಾಮಗಾರಿ ವಿಳಂಬಕ್ಕೆ ಕಾರಣರಾದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು.
 ಎಂದು ಒತ್ತಾಯಿಸಿ ನಗರದ ಅಶೋಕ ವೃತ್ತದಲ್ಲಿ ವಿವಿಧ ಸಂಘಟನೆಗಳ ಒಕ್ಕೂಟ ಸೇರಿ ರಸ್ತೆ ತಡೆ ನಡೆಸಿ ರಸ್ತೆ ಕಾಮಗಾರಿಯಲ್ಲಾದ ಭ್ರಷ್ಟಾಚಾರ, ಕಳಪೆ ಹಾಗೂ ಜನಪ್ರತಿನಿಧಿಗಳ, ಅಧಿಕಾರಿಗಳ ಬೇಜವಾಬ್ದಾರಿತನ ಖಂಡಿಸಿ ಘೋಷಣೆಗಳನ್ನು ಕೂಗಿದರು. 

ಪ್ರತಿಭಟನೆ ನೇತೃತ್ವವನ್ನು  ಹೈ.ಕ.ಹೋರಾಟ ಸಮಿತಿ ಯುವ ಘಟಕ ಜಿಲ್ಲಾಧ್ಯಕ್ಷ ರಮೇಶ ತುಪ್ಪದ, ತಾಲೂಕಾಧ್ಯಕ್ಷ ಮಂಜುನಾಥ ಅಂಗಡಿ, ಜಿಲ್ಲಾ ಸಂಚಾಲಕ ಸಂತೋಷ ದೇಶಪಾಂಡೆ, ಶಿವಕುಮಾರ ಕುಕನೂರ, ಹುಲಗಪ್ಪ ಕಟ್ಟಿಮನಿ, ಸಿದ್ಧಲಿಂಗಪ್ಪ ಕೊಟ್ನೇಕಲ್, ಮಾಜಿ ಸಚಿವ ವಿರುಪಾಕ್ಷಪ್ಪ ಅಗಡಿ, ನಗರಸಭೆ ಮಾಜಿ ಸದಸ್ಯ ವೀರಣ್ಣ ಹಂಚಿನಾಳ ವಹಿಸಿದ್ದರು.

ಪ್ರತಿಭಟನೆಯಲ್ಲಿ ಹಿರಿಯರಾದ ನೀಲಕಂಠಯ್ಯ ಹಿರೇಮಠ, ಸಂಗಮೇಶ ಡಂಬಳ, ಸಿದ್ಧಪ್ಪ ವಾರದ, ವೀರೇಶ ಮಹಾಂತಯ್ಯನಮಠ, ಡಾ| ಸಿ.ಎಸ್.ಕರಮುಡಿ ಹಾಗೂ  ವಿವಿಧ ಸಂಘಟನೆಗಳ ಗಿರೀಶ ಪಾನಘಂಟಿ, ಕೊಟ್ರೇಶ ಶೆಡ್ಮಿ,   ಸತೀಶ ಮುರಾಳ, ವಂದೇ ಮಾತರಂ ಯುವಕ ಸಂಘದ ರಾಕೇಶ ಕಾಂಬ್ಳೇಕರ್,  ಹೇಮರಾಜ ವೀರಾಪುರ,  ಬಸವ ಸೇವಾ ಪ್ರತಿಷ್ಠಾನದ ಗವಿಸಿದ್ದಪ್ಪ ಪಲ್ಲೆದ್, ಕರವೇಯ ಪ್ರವೀಣ ಬ್ಯಾಹಟ್ಟಿ, ಜಯಕರ್ನಾಟಕ ಸಂಘಟನೆಯ ಮಂಜುನಾಥ ಯಲಬುರ್ಗಿ, ಜೀವನಕುಮಾರ ಹಿರೇಮಠ, ಸಿಐಟಿಯುನ ಹನುಮೇಶ ಕಲ್ಮಂಗಿ, ಎಸ್.ಎಫ್.ಐ. ನ ಬಾಳಪ್ಪ ಹುಲಿಹೈದರ, ದೀಪಕ್ ಕುಮಾರ, ರವಿಚಂದ್ರ ಮಾಲಿಪಾಟೀಲ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. 

Advertisement

0 comments:

Post a Comment

 
Top