PLEASE LOGIN TO KANNADANET.COM FOR REGULAR NEWS-UPDATES


ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾರತೀಯ ಜನತಾ ಪಕ್ಷದ ಒಳಜಗಳಗಳೇನೇ ಇದ್ದರೂ ಆರೆಸ್ಸೆಸ್‌ನ ಹಿಂದೂ ರಾಷ್ಟ್ರ ನಿರ್ಮಾಣದ ರಹಸ್ಯ ಕಾರ್ಯಸೂಚಿಯಂತೂ ಸಾಂಗೋಪಾಂಗವಾಗಿ ಮುಂದುವರಿಯುತ್ತಿದೆ ಎನ್ನುವುದಕ್ಕೆ ಹಲವು ಪುರಾವೆಗಳನ್ನು ಕೊಡಬಹುದು.ಅಲ್ಪ ಸಂಖ್ಯಾತರ ಮೇಲೆ ಮತ್ತು ಅವರ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ, ನೈತಿಕ ಪೊಲೀಸ್ ಗಿರಿ, ಶಾಲೆಗಳಲ್ಲಿ ಭಗವದ್ಗೀತೆಯ ಪಠಣ, ಆಯಕಟ್ಟಿನ ಇಲಾಖೆಗಳ ಕೇಸರೀಕರಣ, ಶಿಕ್ಷಣದ ಕೇಸರೀಕರಣ, ಜಾನುವಾರು ಹತ್ಯಾ ನಿಷೇಧ ಕಾಯ್ದೆ ಮುಂತಾದ ಕಾರ್ಯಕ್ರಮಗಳು ಇದೇ ಕಾರ್ಯ ಸೂಚಿಗೆ ಅನುಗುಣವಾಗಿ ನಡೆಯುತ್ತಿವೆ. ದುರಂತವೆಂದರೆ ಸಂಘಪರಿವಾರ ಧರ್ಮವನ್ನು ಕೇವಲ ರಾಜಕೀಯ ಗದ್ದುಗೆಗೇರುವ ಉದ್ದೇಶಕ್ಕಾಗಿ ಬಳಸುತ್ತಿದೆಯೆಂಬ ಸತ್ಯ ದರ್ಶನ ಹೆಚ್ಚಿನವರಿಗೆ ಇನ್ನೂ ಆಗಿಲ್ಲ. ಈ ದೇಶದ ಪ್ರಜೆಗಳೇ ಆಗಿರುವ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಾ ಅಂತಿಮವಾಗಿ ಅವರು ಮತ್ತೆಂದೂ ತಲೆಎತ್ತದಂತೆ ಮಾಡಿ ಅವರನ್ನು ಭವಿಷ್ಯದ ಹಿಂದೂ ರಾಷ್ಟ್ರದಲ್ಲಿ ಎರಡನೆ ದರ್ಜೆಯ ಗುಲಾಮ ಪ್ರಜೆಗಳಾಗಿಸುವ ಅಥವಾ ದೇಶ ಬಿಟ್ಟು ತೊಲಗಿಸುವ ಹುನ್ನಾರ ಜಾರಿಯಲ್ಲಿದೆ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ.
2002ರ ನರಮೇಧದ ನಂತರ ಗುಜರಾತ್‌ನ ಅಲ್ಪಸಂಖ್ಯಾತರು ಅಕ್ಷರಶಃ ಎರಡನೆ ದರ್ಜೆಯ ಪ್ರಜೆಗಳಾಗಿಬಿಟ್ಟಿದ್ದಾರೆ. ಬಿಜೆಪಿ ಆಡಳಿತವಿರುವ ಕರ್ನಾಟಕ ಮತ್ತು ಮಧ್ಯಪ್ರದೇಶಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನವಿಟ್ಟು ನೋಡಿದರೆ ಅವೆರಡೂ ಗುಜರಾತ್ ಹಾದಿಯನ್ನೇ ಹಿಡಿದಿರುವುದನ್ನು ಕಾಣಬಹುದು. ಮಧ್ಯ ಪ್ರದೇಶದ ವಿದ್ಯಮಾನಗಳನ್ನು ನೋಡೋಣ. ಭೋಪಾಲದ ಪೊಲೀಸ್ ಮುಖ್ಯಸ್ಥರು ಕಳೆದ ವರ್ಷ ಎಲ್ಲಾ ಪೊಲೀಸ್ ಠಾಣೆಗಳಿಗೆ ಒಂದು ರಹಸ್ಯ ಸುತ್ತೋಲೆಯನ್ನು ಕಳುಹಿಸಿ ಅವರವರ ಕಾರ್ಯವ್ಯಾಪ್ತಿ ಪ್ರದೇಶಗಳಲ್ಲಿರುವ ಕ್ರೈಸ್ತ ಸಂಸ್ಥೆಗಳ ಬಗ್ಗೆ ನಾನಾ ತೆರನಾದ ಮಾಹಿತಿಗಳನ್ನು ಕಲೆಹಾಕುವಂತೆ ಹೇಳಿದ್ದರು.
ಸರಕಾರಿ ಶಾಲೆಗಳಲ್ಲಿ ‘ಸೂರ್ಯ ನಮಸ್ಕಾರ’ ವಿಧಿಯನ್ನು 2007ರಷ್ಟು ಹಿಂದೆಯೇ ಕಡ್ಡಾಯವಾಗಿಸಲಾಗಿದೆ.2009ರಲ್ಲಿ ಹೊರಡಿಸಲಾದ ಮತ್ತೊಂದು ಸರ್ವಾಧಿಕಾರಿ ಆದೇಶದ ಪ್ರಕಾರ ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ಮಧ್ಯಾಹ್ನದ ಬಿಸಿಯೂಟಕ್ಕೆ ಮೊದಲು ಸಂಸ್ಕೃತದ ‘ಭೋಜನ ಮಂತ್ರ’ವೊಂದನ್ನು ಪಠಿಸಬೇಕಾಗಿದೆ.ಎಲ್ಲಾ ಮಕ್ಕಳೂ ಕಡ್ಡಾಯವಾಗಿ ‘ಗೀತಾ ಸಾರ’ವನ್ನು ಕಲಿಯಬೇಕೆಂಬ ಆದೇಶವೊಂದು ಕಳೆದ ವರ್ಷ ಹೊರಬಿದ್ದಿದೆ.ಸಂಘ ಪರಿವಾರದ ವಿವಿಧ ಸಂಘಸಂಸ್ಥೆಗಳಿಗೆ ಸರಕಾರದ ವತಿಯಿಂದ ಜಮೀನುಗಳನ್ನು ವಿತರಿಸಲಾಗಿದೆ.ಮಧ್ಯಪ್ರದೇಶದ ಸರಕಾರಿ ನೌಕರರೆಲ್ಲರೂ ಆರೆಸ್ಸೆಸ್‌ನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಖುದ್ದು ಅಲ್ಲಿನ ಮುಖ್ಯ ಮಂತ್ರಿ ಶಿವರಾಜ್ ಸಿಂಗ್ ಚೌಹಾಣರೇ ಬಹಿರಂಗವಾಗಿ ಆಜ್ಞಾಪಿಸುತ್ತಿದ್ದಾರೆ. 
ಅನೇಕ ಸರಕಾರಿ ಕಾರ್ಯಕ್ರಮಗಳಿಗೆ ಹಿಂದೂ ಧಾರ್ಮಿಕ ಆಚರಣೆಗಳ ಹೆಸರನ್ನು ನೀಡಲಾಗುತ್ತಿದೆ. ಕೆಲವು ತಿಂಗಳ ಹಿಂದೆಯೇ ರಾಷ್ಟ್ರಪತಿಯವರಿಗೆ ಕಳುಹಿಸಲಾಗಿದ್ದ ಜಾನುವಾರು ಹತ್ಯಾ ನಿಷೇಧ ಮಸೂದೆಗೆ ಕೆಲವು ತಿದ್ದುಪಡಿಗಳನ್ನು ಮಾಡುವಂತೆ ರಾಜ್ಯ ಸರಕಾರಕ್ಕೆ ಸೂಚಿಸಲಾಯಿತು. ಆ ಮೇರೆಗೆ ಮಸೂದೆಯ ವ್ಯಾಪ್ತಿಯಿಂದ ಎಮ್ಮೆಯ ಸಂತತಿಗಳನ್ನು ಹೊರಗಿಡುವುದು ಸೇರಿದಂತೆ ಇನ್ನಿತರ ಕೆಲವು ತಿದ್ದುಪಡಿಗಳನ್ನು ಮಾಡಿ, ಅದಕ್ಕೆ ರಾಷ್ಟ್ರಪತಿಯವರ ಅಂಕಿತ ಪಡೆದುಕೊಂಡ ನಂತರ ಇದೀಗ 2012ರಿಂದ ‘ಗೋವಂಶ ವಧಾ ಪ್ರತಿಷೇಧ’ ಕಾಯ್ದೆ ಜಾರಿಗೆ ಬಂದಿದೆ.ಮಧ್ಯಪ್ರದೇಶದ ಈ ವಿದ್ಯಮಾನಗಳನ್ನು ಕರ್ನಾಟಕದೊಂದಿಗೆ ಹೋಲಿಸಿ ನೋಡಿದಾಗ ಆರೆಸ್ಸೆಸ್‌ನ ರಹಸ್ಯ ಕಾರ್ಯಸೂಚಿಯ ಅನುಷ್ಠಾನದ ವಿಷಯದಲ್ಲಿ ಅವೆರಡರ ನಡುವೆ ಇರುವ ಸಾಮ್ಯಗಳನ್ನು ಸ್ಪಷ್ಟವಾಗಿ ಗುರುತಿಸಬಹುದು.
ಕೆಲವು ಅಂಶಗಳಲ್ಲಿ ಮಧ್ಯಪ್ರದೇಶವೇ ಮುಂದಿರುವುದಕ್ಕೆ ಕರ್ನಾಟಕ ಬಿಜೆಪಿಯ ಆಂತರಿಕ ಕಿತ್ತಾಟಗಳೇ ಕಾರಣವಿರಬಹುದು. ಆದರೂ ‘ಕೇಶವ ಕೃಪಾ’ದ ಮೇಲುಸ್ತುವಾರಿಯಲ್ಲಿ ಕರ್ನಾಟಕದಲ್ಲೂ ಆರೆಸ್ಸೆಸ್ ಕಾರ್ಯ ಸೂಚಿಯ ಅಂಶಗಳು ಒಂದೊಂದಾಗಿ ಕಾರ್ಯ ಗತಗೊಳ್ಳುತ್ತಿರುವುದು ನಿರ್ವಿವಾದ. ಕಳೆದ ವರ್ಷ ಕರ್ನಾಟಕ ಸರಕಾರ ಕೂಡ ಜಾನುವಾರು ಹತ್ಯಾ ನಿಷೇಧ ಕಾಯ್ದೆಯೊಂದನ್ನು ಜಾರಿಗೆ ತರಲುದ್ದೇಶಿಸಿತ್ತು. ಇದಕ್ಕೆ ವ್ಯಾಪಕ ಜನಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯಪಾಲರು ಮಸೂದೆಯನ್ನು ರಾಷ್ಟ್ರಪತಿಯವರಿಗೆ ಕಳುಹಿಸಿಕೊಟ್ಟಿದ್ದರು. ಈಗ ಇದಕ್ಕೂ ಮಧ್ಯಪ್ರದೇಶದ ಮಾದರಿಯಲ್ಲೇ ಕೆಲವು ತಿದ್ದುಪಡಿಗಳನ್ನು ಮಾಡಿದರೆ ರಾಷ್ಟ್ರಪತಿಯವರ ಅಂಗೀಕಾರ ದೊರೆಯಲಿದೆಯೆಂದು ವರದಿಯಾಗಿದೆ.
ಇತ್ತೀಚೆಗೆ ತುಮಕೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿಯವರು ‘‘ರಾಷ್ಟ್ರ ಪತಿಯವರ ಸಲಹೆ ಪ್ರಕಾರ ‘ಎಮ್ಮೆ’ಯನ್ನು ಮಸೂದೆಯ ವ್ಯಾಪ್ತಿಯಿಂದ ಹೊರಗಿಡಲಾಗುವುದು ಮತ್ತು ಇನ್ನಿತರ ಸಣ್ಣಪುಟ್ಟ ತಿದ್ದುಪಡಿಗಳನ್ನು ಮಾಡಿ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು’’ ಎಂದು ತಿಳಿಸಿದ್ದಾರೆ. ಮಾತ್ರವಲ್ಲ ರಾಜ್ಯದಲ್ಲೊಂದು ಗೋಸೇವಾ ಆಯೋಗವನ್ನು ರಚಿಸಲಾಗುವುದೆಂದೂ ಹೇಳಿದ್ದಾರೆ.ಆದುದರಿಂದ ಕರ್ನಾಟಕದ ಪರಿಷ್ಕೃತ ಮಸೂದೆ ಕೂಡಾ ಮಧ್ಯ ಪ್ರದೇಶದ ‘ಗೋವಂಶ ವಧಾ ಪ್ರತಿಷೇಧ’ ಕಾಯ್ದೆಯ ಮಾದರಿಯಲ್ಲೇ ರೂಪುಗೊಳ್ಳ ಲಿದೆ ಎಂದು ಧಾರಾಳವಾಗಿ ಅರ್ಥೈಸಿಕೊಳ್ಳ ಬಹುದಾಗಿದೆ.

ಮಧ್ಯಪ್ರದೇಶದ ಕಾಯ್ದೆಯಡಿ ದನ, ಕರುಗಳ ವಧೆ ಅಥವಾ ಅವುಗಳ ಮಾಂಸವನ್ನು ಸಾಗಾಟ ಮಾಡುವುದು ಅಥವಾ ಇರಿಸಿಕೊಳ್ಳುವುದು ಅಪರಾಧವಾಗುತ್ತದೆ.ಇದಕ್ಕೆ ಕನಿಷ್ಠ 7ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ವಿಪರ್ಯಾಸವೆಂದರೆ ಪೂಜಾಕೇಂದ್ರವೊಂದನ್ನು ಧ್ವಂಸಗೊಳಿಸುವವರಿಗೆ ಅಥವಾ ಹಾನಿ ಉಂಟುಮಾಡುವವರಿಗೆ ಅಥವಾ ಅಪವಿತ್ರಗೊಳಿಸುವವವರಿಗೆ ಐಪಿಸಿ ಕಲಮು 295ರ ಪ್ರಕಾರ ಸಿಗುವುದು ಗರಿಷ್ಠ 2ವರ್ಷಗಳ ಶಿಕ್ಷೆ ಮಾತ್ರ. ಹೊಸ ಕಾಯ್ದೆ ಜಾರಿಗೊಂಡ ಬಳಿಕ ಮಧ್ಯಪ್ರದೇಶದ ಮುಸಲ್ಮಾನರ ಮೇಲೆ ಹೆಚ್ಚೆಚ್ಚು ಅತ್ಯಾಚಾರಗಳು ನಡೆಯಲಾರಂಭಿಸಿವೆ. ಇತ್ತೀಚೆಗೆ ದನ ಸಾಗಾಟ ಮಾಡಿದ ಮುಸ್ಲಿಂ ಪ್ರಜೆಯೊಬ್ಬನನ್ನು ಹಿಡಿದು, ಥಳಿಸಿ, ಗಡ್ಡ ಮೀಸೆಗಳನ್ನು ಅರ್ಧ ಬೋಳಿಸಿ ಮೆರವಣಿಗೆ ಮಾಡಲಾಯಿತು. ಈ ಕಾಯ್ದೆಯ ಹಿಂದೆ ಏನು ದುರುದ್ದೇಶ ಅಡಗಿದೆ ಎನ್ನುವುದು ಇದರಿಂದ ಸ್ಪಷ್ಟ ವಾಗುತ್ತದೆ.
ಕಾಯ್ದೆಯಲ್ಲಿ ಮತ್ತೊಂದು ಕಳವಳಕಾರಿ ಅಂಶವೂ ಇದೆ. ಯಾವುದೇ ಒಂದು ಜಾಗದಲ್ಲಿ ಅಪರಾಧ ನಡೆದಿದೆ ಅಥವಾ ನಡೆಯುತ್ತಿದೆ ಅಥವಾ ನಡೆಯುವ ಸಾಧ್ಯತೆಗಳಿವೆ ಎಂದು ನಂಬಲು ಕಾರಣವಿದ್ದರೆ ಒಬ್ಬ ಸಾಮಾನ್ಯ ಹೆಡ್ ಕಾನ್ಸ್‌ಟೇಬಲ್ ಅಥವಾ ‘ನ್ಯಾಯಸಮ್ಮತ ಪ್ರಾಧಿಕಾರದಿಂದ ಅನುಮತಿ ಪಡೆದಿರುವ ಯಾವನೇ ವ್ಯಕ್ತಿ’ ಅಂತಹ ಜಾಗಕ್ಕೆ ಪ್ರವೇಶಿಸಬಹುದಾಗಿದೆ ಮತ್ತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬಹುದಾಗಿದೆ. ಇಲ್ಲಿ ವೈಯಕ್ತಿಕ ನಿರ್ಧಾರಗಳ ಮೂಲಕ ಕಾಯ್ದೆಯ ದುರುಪಯೋಗಕ್ಕೆ ಎಷ್ಟೊಂದು ವಿಪುಲ ಅವಕಾಶಗಳನ್ನು ಒದಗಿಸಲಾಗಿದೆ ಎಂಬುದನ್ನು ಪ್ರಜ್ಞಾವಂತ ಓದುಗರೇ ನಿರ್ಧರಿಸಬಹುದು.
ಬಿಜೆಪಿ ಆಡಳಿತವಿರುವಲ್ಲೆಲ್ಲ ನ್ಯಾಯಸಮ್ಮತ ಪ್ರಾಧಿಕಾರದಿಂದ ಅನುಮತಿ ಪಡೆದಿರುವ ಯಾವನೇ ವ್ಯಕ್ತಿ ಯಾರಾಗಿರುತ್ತಾರೆ ಎಂಬುದನ್ನು ಬಿಡಿಸಿ ಹೇಳಬೇಕಾದ ಅಗತ್ಯವೇ ಇಲ್ಲ.ಕೇಸರಿ ಪಾಳೆಯದ ಆಜ್ಞಾವರ್ತಿಯಾಗಿರುವ ಯಾವನೇ ಕಾನೂನುಪಾಲಕ ಅಥವಾ ಅಧಿಕೃತ ವ್ಯಕ್ತಿಯೂ ನಿರ್ದಿಷ್ಟ ಜಾಗವೊಂದರಲ್ಲಿ ಅಪರಾಧ ನಡೆಯುತ್ತಿದೆ/ನಡೆಯುವ ಸಾಧ್ಯತೆಗಳಿವೆ ಎಂದು ನಿರ್ಧರಿಸಿ ಅಲ್ಲಿಗೆ ದಾಳಿಮಾಡಬಹುದಾಗಿದೆ. ಅಂತಹ ಸಂದರ್ಭಗಳಲ್ಲಿ ಮನೆಯ ಫ್ರಿಜ್‌ನಲ್ಲಿ ಅಥವಾ ಹೊಟೇಲ್‌ನ ಫ್ರೀಜರ್‌ನಲ್ಲಿ ಅಥವಾ ಒಲೆಯ ಮೇಲಿರುವ ಮಾಂಸ ದನದ್ದಲ್ಲ,ಎಮ್ಮೆಯದು ಎಂದು ತೋರಿಸಿಕೊಡುವ ಆಸ್ಪದವಾದರೂ ಮಾಲಕನಿಗೆ ಎಲ್ಲಿರುತ್ತದೆ? ಈ ಕಾಯ್ದೆಯ ಪ್ರಕಾರ ಆರೋಪವನ್ನು ನ್ಯಾಯಾಲಯದಲ್ಲಿ ಸಾಬೀತು ಮಾಡುವ ಹೊಣೆಗಾರಿಕೆಯೂ ಪ್ರಾಸಿಕ್ಯೂಷನ್‌ನದಲ್ಲ; ಆರೋಪಿಯೇ ತಾನು ನಿರ್ದೋಷಿ ಎಂದು ಸಾಬೀತುಪಡಿಸಬೇಕಾಗುತ್ತದೆ.

ಇಲ್ಲಿ ಜನರು ಒಂದೆರಡು ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು.ಮನುಷ್ಯರು ಕೇವಲ ದನದ ಹಾಲನ್ನಷ್ಟೇ ಕುಡಿಯುವುದಲ್ಲ; ಆಡು, ಎಮ್ಮೆ, ಒಂಟೆ,ಯಾಕ್‌ಗಳ ಹಾಲನ್ನೂ ಕುಡಿಯುವವರಿದ್ದಾರೆ. ಹೀಗಿರುವಾಗ ಸಂತತಿ ರಕ್ಷಣೆಯ ಕಾಯ್ದೆಯನ್ನು ಕೇವಲ ಗೋವುಗಳಿಗಷ್ಟೇ ಯಾಕೆ ಸೀಮಿತಗೊಳಿಸಲಾಗುತ್ತಿದೆ? ಆಡು,ಎಮ್ಮೆ,ಯಾಕ್ ಮೊದಲಾದ ಪ್ರಾಣಿಗಳು ರಕ್ಷಣೆಗೆ ಯೋಗ್ಯವಲ್ಲವೇ?.ದನಗಳ ಸಾಗಾಟ, ಮಾರಾಟ ಮತ್ತು ಮಾಂಸಕ್ಕೆ ಸಂಬಂಧಿಸಿದಂತೆ ಈಶಾನ್ಯ ರಾಜ್ಯಗಳಲ್ಲಾಗಲಿ ಬಿಹಾರ, ಪಶ್ಚಿಮ ಬಂಗಾಳ, ಕೇರಳಗಳಲ್ಲಾಗಲಿ ಯಾವುದೇ ರೀತಿಯ ನಿರ್ಬಂಧಗಳಿಲ್ಲ. ಇತರ ಕೆಲವು ರಾಜ್ಯಗಳಲ್ಲಿ ತೀರಾ ಕನಿಷ್ಠ ನಿರ್ಬಂಧಗಳಿವೆ. ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಲ್ಲಿರುವ ರಾಜ್ಯಗಳಲ್ಲಿ ಸಹ 12 ವರ್ಷಕ್ಕೆ ಮೇಲ್ಪಟ್ಟ ಗೊಡ್ಡು ಹಸುಗಳನ್ನು ವಧೆ ಮಾಡುವ ಅವಕಾಶವಿದೆ. ಇದಕ್ಕೆ ತಪ್ಪಿದವರಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣ ಕೂಡ 6 ತಿಂಗಳುಗಳಿಂದ ಹಿಡಿದು ಗರಿಷ್ಠ 2 ವರ್ಷ.
ಹೀಗಿರುವಾಗ ಅದು ಯಾಕೆ ಅತ್ಯಂತ ಕಠೋರ ನಿಬಂಧನೆಗಳಿರುವ ಈ ನೂತನ ಕಾಯ್ದೆಯನ್ನು ಕೇವಲ ಬಿಜೆಪಿ ಆಡಳಿತವಿರುವ ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ, ಕರ್ನಾಟಕಗಳಲ್ಲಿ ಮಾತ್ರ ಜಾರಿಗೊಳಿಸಲಾಗುತ್ತಿದೆ? ಉತ್ತರ ಸ್ಪಷ್ಟವಿದೆ. ಕರ್ನಾಟಕದಲ್ಲಂತೂ ಮಧ್ಯಪ್ರದೇಶದಂತಹ ಕಾಯ್ದೆ ಜಾರಿಯಾಗುವುದಕ್ಕೂ ಮೊದಲೇ ಎಷ್ಟೆಲ್ಲ ದಾಳಿ, ಹಲ್ಲೆ, ಕೊಲೆಗಳು ನಡೆಯುತ್ತಿವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಂಘಪರಿವಾರದ ಸಂಘಟನೆಗಳು ಜಾನುವಾರು ಸಾಗಾಟಗಾರರ ಮೇಲೆ ಕೆಲವೊಮ್ಮೆ ನೇರವಾಗಿ, ಕೆಲವೊಮ್ಮೆ ಪರೋಕ್ಷವಾಗಿ ಪೊಲೀಸರ ಮೂಲಕ ದಾಳಿ ನಡೆಸುವುದು ಹೆಚ್ಚುಕಮ್ಮಿ ದಿನನಿತ್ಯದ ವಿದ್ಯಮಾನ ಆಗಿಬಿಟ್ಟಿದೆ.
ಉಡುಪಿಯ ಹಾಜಬ್ಬ ಹಸನಬ್ಬರನ್ನು ಸಾರ್ವಜನಿಕರೆದುರೇ ಬೆತ್ತಲೆ ಮಾಡಿ ಥಳಿಸಲಾಗಿದ್ದರೆ ಅಸಂಖ್ಯಾತ ಜಾನುವಾರು ಸಾಗಾಟಗಾರರು ಪೆಟ್ಟು ತಿಂದು ಕೈಕಾಲು ಮುರಿದುಕೊಂಡಿದ್ದಾರೆ.ಪ್ರಾಣ ಕಳೆದುಕೊಂಡಿರುವವರ ಸಂಖ್ಯೆಯೂ ಬೆಳೆಯುತ್ತಿದೆ. ಈಗಲೇ ಹೀಗಿರುವಾಗ ಇನ್ನು ಈ ಹೊಸ ಕಾಯ್ದೆ ಜಾರಿಗೆ ಬಂದಲ್ಲಿ ಏನೆಲ್ಲ ಅನಾಹುತಗಳಾಗಲಿವೆಯೆಂದು ಊಹಿಸಿಕೊಂಡರೇ ಮೈನಡುಗುತ್ತದೆ.ಇಲ್ಲಿಯವರೆಗೆ ಕರ್ನಾಟಕದ ರೈತಾಪಿ ಜನ ತಮ್ಮಲ್ಲಿರುವ ಗೊಡ್ಡು ಮತ್ತು ಮುದಿ ಅನುಪಯುಕ್ತ ಜಾನುವಾರುಗಳನ್ನು ಹಾಗೂ ಗಂಡು ಕರುಗಳನ್ನು ಮಾರಾಟ ಮಾಡಿ ಹೊಸ ದನ, ಎತ್ತುಗಳನ್ನು ಖರೀದಿಸುವ ಸಂಪ್ರದಾಯವೊಂದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ಇದರಿಂದಾಗಿ ಕೆಲವರಿಗೆ ಪೌಷ್ಟಿಕ ಆಹಾರ ದೊರೆತರೆ ಸಕ್ಕರೆ, ಚರ್ಮೋದ್ಯಮ ಮತ್ತು ರಫ್ತಿನಂತಹ ಉದ್ದಿಮೆಗಳಿಗೆ ಕಚ್ಚಾ ಸಾಮಗ್ರಿಗಳ ಪೂರೈಕೆಯೂ ನಿರಂತರವಾಗಿ ನಡೆಯುತ್ತಿದೆ. ಈ ಆರ್ಥಿಕ ಸಮತೋಲನವೇ ಗ್ರಾಮೀಣ ಪ್ರದೇಶಗಳಲ್ಲಿ ಹೈನುಗಾರಿಕೆಯನ್ನು ನೂರಾರು ವರ್ಷಗಳಿಂದ ಮುಂದುವರಿಸಿಕೊಂಡು ಬಂದಿದೆ.
ಈ ಹೊಸ ಕಠೋರ ಕಾಯ್ದೆ ಜಾರಿಗೊಂಡರೆ ಮುದಿ ಜಾನುವಾರುಗಳನ್ನು ಮಾರಾಟ ಮಾಡುವಂತಿಲ್ಲ. ಅವುಗಳನ್ನು ಸರಕಾರಿ ಗೋಶಾಲೆಯಲ್ಲಿರಿಸಬೇಕಾದರೆ ವೆಚ್ಚದ ಹಣವನ್ನೂ ರೈತರೇ ಪಾವತಿಸಬೇಕಂತೆ! ಹೀಗೆ ಬಡ ಮತ್ತು ಮಧ್ಯಮ ವರ್ಗಗಳ ರೈತರ ಪಾಲಿಗೆ ಹೈನುಗಾರಿಕೆ ಒಂದು ನಷ್ಟದಾಯಕ ಉಪಕಸುಬಾಗಿ ಪರಿಣಮಿಸಲಿದೆ. ಹೈನುಗಾರಿಕೆಗೆ ವಿದಾಯ ಹೇಳದೆ ವಿಧಿಯಿಲ್ಲ ಎಂದಾಗಲಿದೆ. ಇದರಿಂದ ಗ್ರಾಮೀಣ ಆರ್ಥಿಕತೆಯ ಮೇಲಾಗುವ ದುಷ್ಪರಿಣಾಮಗಳನ್ನು ಈಗಲೇ ಊಹಿಸಿಕೊಳ್ಳಬಹುದು. ಇಡೀ ಸಮಾಜದಲ್ಲಿ ಭಾರಿ ಅಲ್ಲೋಲಕಲ್ಲೋಲಗಳು ಉಂಟಾಗುವ ಸಾಧ್ಯತೆಗಳೂ ದಟ್ಟವಾಗಿವೆ. ಇಂತಹ ಕಾಯ್ದೆಯೊಂದನ್ನು ಜಾರಿಗೊಳಿಸಲು ಹೊರಟಿರುವ ಕರ್ನಾಟಕದ ಬಿಜೆಪಿ ಸರಕಾರ ಅದೆಷ್ಟು ರೈತ ವಿರೋಧಿ, ದಲಿತ ವಿರೋಧಿ ಹಾಗೂ ಅಲ್ಪಸಂಖ್ಯಾತ ವಿರೋಧಿಯಾಗಿದೆ ಎಂಬುದನ್ನು ತಿಳಿಯಲು ಇಷ್ಟೇ ಸಾಕು.
ಈಗಾಗಲೇ ಮೃದು ಹಿಂದೂತ್ವವಾದಿ ಎಂದು ಕರೆಸಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷದ ಮೇಲೆ ಹಿಂದೂತ್ವವಾದಿಗಳ ಹಿಡಿತ ಇನ್ನಷ್ಟು ಬಿಗಿಯಾಗಿರುವುದಕ್ಕೆ ಈ ಕಾಯ್ದೆಯೊಂದೇ ಅಲ್ಲ, ಇನ್ನೂ ಅನೇಕ ನಿದರ್ಶನಗಳನ್ನು ಕೊಡಬಹುದು. ಶಾಲೆಗಳಲ್ಲಿ ಗೀತಾ ಬೋಧನೆಯನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿರುವವರ ಪಟ್ಟಿಯಲ್ಲಿ ಕೆಲವು ಕಾಂಗ್ರೆಸಿಗರೂ ಇರುವುದು ರಹಸ್ಯವಾಗುಳಿದಿಲ್ಲ. ಬಿಜೆಪಿ ಸರಕಾರಗಳ ಈ ಜನಕಂಟಕ ಕಾಯ್ದೆಗೆ ರೈತರನ್ನೂ ಒಳಗೊಂಡಂತೆ ಬಹುಸಂಖ್ಯಾತ ಜನರ ಬೆಂಬಲವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಮಧ್ಯಪ್ರದೇಶದ ಕಾಯ್ದೆಗೆ ಅನುಮೋದನೆ ನೀಡುವ ಮೂಲಕ ಮತ್ತು ಅದೇ ಮಾದರಿಯ ಕರ್ನಾಟಕದ ಕಾಯ್ದೆಗೆ ಅನುಮೋದನೆ ನೀಡಲೊಪ್ಪುವ ಮೂಲಕ ಯುಪಿಎ ಸರಕಾರ ತನ್ನ ಆಷಾಢಭೂತಿತನವನ್ನು ಪೂರ್ತಿಯಾಗಿ ಬಿಚ್ಚಿಟ್ಟಿದೆ.
ನಿಜ ಹೇಳಬೇಕೆಂದರೆ ಇಂತಹದೊಂದು ದಮನಕಾರಿ ಕಾಯ್ದೆಗೆ ಸಮ್ಮತಿ ನೀಡುವ ಮೂಲಕ ಅದು ತನ್ನ ಅಸಲಿ ಜನವಿರೋಧಿ ಮುಖವನ್ನು ತೋರಿಸಿಕೊಂಡಿದೆ. ಜನತೆಗೆ ವಿಶ್ವಾಸದ್ರೋಹ ಬಗೆದಿದೆ. ಲಕ್ಷಾಂತರ ರೈತರನ್ನು ಆತ್ಮಹತ್ಯೆಗೆ ದೂಡಿದ, ಸಾಚಾರ್ ಮತ್ತು ರಂಗನಾಥ ಮಿಶ್ರಾ ವರದಿಗಳನ್ನು ಕಸದ ಬುಟ್ಟಿಗೆಸೆದ, ಮೀಸಲಾತಿಯಿದ್ದರೂ ದಲಿತರಿಗೆ ಅನ್ಯಾಯ ಬಗೆಯುತ್ತಿರುವ ಯುಪಿಎ ಸರಕಾರ ಇನ್ನಾದರೂ ತನ್ನ ಉತ್ತರದಾಯಿತ್ವವನ್ನು ಅರಿತುಕೊಳ್ಳುವುದೇ? ಈ ರೈತವಿರೋಧಿ, ದಲಿತ ವಿರೋಧಿ, ಅಲ್ಪಸಂಖ್ಯಾತ ವಿರೋಧಿ ಕಾಯ್ದೆಯನ್ನು ತಡೆಗಟ್ಟುವಂತಹ ನೈಜ ಜನಪರ ಕೆಲಸವನ್ನು ಮಾಡುವುದೇ? *************

ಆಧಾರ: ಜನವರಿ 2012ರ ಕಮ್ಯೂನಲಿಸಂ ಕಾಂಬ್ಯಾಟ್‌ನಲ್ಲಿ ಜಾವೆದ್ ಆನಂದ್ ಬರೆದಿರುವ ಲೇಖನ‘Violating Sanctity  vbnewsonline.com

Advertisement

0 comments:

Post a Comment

 
Top