PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಆ.೨೮ (ಕ ವಾ) ಕೊಪ್ಪಳ ತಾಲೂಕಾ ಪಂಚಾಯಿತಿಯ ಸಾಮಾನ್ಯ ಸಭೆಯನ್ನು ಸೆ.೧೦ ರಂದು ಬೆಳಿಗ್ಗೆ ೧೧ ಗಂಟೆಗೆ ತಾಲೂಕಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
     ಕೊಪ್ಪಳ ತಾಲೂಕಾ ಮಟ್ಟದ ಎಲ್ಲಾ ಅಧಿಕಾರಿಗಳು ಸಭೆಗೆ ತಪ್ಪದೇ, ಖುದ್ದಾಗಿ ಹಾಜರಾಗಬೇಕು ಹಾಗೂ ಆಗಸ್ಟ್ ೨೦೧೫ ರ ಅಂತ್ಯದ ತಮ್ಮ ಇಲಾಖೆಯ ಪ್ರಗತಿ ವರದಿಯ ೪೦ ಪ್ರತಿಗಳನ್ನು (ಎ-೪ ಸೈಜಿನಲ್ಲಿ) ಸೆ.೦೫ ರೊಳಗಾಗಿ ತಾಲೂಕಾ ಪಂಚಾಯಿತಿ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಕೊಪ್ಪಳ ತಾಲೂಕಾ ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಉಚಿತ ಕುರಿ ಮತ್ತು ಆಡು ಸಾಕಾಣಿಕೆ ಶಿಬಿರ
ಕೊಪ್ಪಳ, ಆ.೨೮ (ಕ ವಾ) ಬಾಗಲಕೋಟೆಯ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರದ ವತಿಯಿಂದ ಎರಡು ದಿನಗಳ ಕುರಿ ಮತ್ತು ಆಡು ಸಾಕಾಣಿಕೆ ತರಬೇತಿ ಶಿಬಿರವನ್ನು ಸೆಪ್ಟಂಬರ್ ತಿಂಗಳಿನಲ್ಲಿ ಆಯೋಜಿಸಲಾಗಿದೆ.
     ಶಿಬಿರದಲ್ಲಿ ಕುರಿ ಮತ್ತು ಆಡು ಸಾಕಾಣಿಕೆಯಲ್ಲಿ ಅಧಿಕ ಆದಾಯಕ್ಕಾಗಿ ಅನುಸರಿಸಬೇಕಾದ ಆಧುನಿಕ ಪದ್ಧತಿಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಕುರಿತು ತರಬೇತಿ ನೀಡಲಾಗುವುದು. ಶಿಬಿರವು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, ಆಸಕ್ತ ರೈತರು, ಸ್ವಸಹಾಯ ಸಂಘದ ಸದಸ್ಯರು, ಯುವಕರು ತಮ್ಮ ಹೆಸರು, ವಿಳಾಸ, ದೂರವಾಣಿ ಅಥವಾ ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಸೆ.೦೫ ರೊಳಗಾಗಿ ಕೇಂದ್ರದಲ್ಲಿ ನೊಂದಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ. ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟೆ-೫೮೭೧೦೩, ಮೊಬೈಲ್ : ೯೪೮೨೬೩೦೭೯೦ ಇವರನ್ನು ಸಂಪರ್ಕಿಸಬಹುದಾಗಿದೆ..  
ಭಾರಿ ವಾಹನ ಚಾಲನಾ ತರಬೇತಿ : ಅರ್ಜಿ ಆಹ್ವಾನ
ಕೊಪ್ಪಳ, ಆ.೨೮ (ಕ ವಾ)  ಕೊಪ್ಪಳದ ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ   ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿಯ ನಿರುದ್ಯೋಗಿ ವಿದ್ಯಾವಂತ ಯುವಕ, ಯುವತಿಯರಿಗೆ ಭಾರಿ ವಾಹನ ಚಾಲನಾ ತರಬೇತಿ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸಲಿಚ್ಛಿಸುವವರು ಕಳೆದ ೧೫ ವರ್ಷಗಳಿಂದ  ಜಿಲ್ಲೆಯ ನಿವಾಸಿ ಆಗಿರಬೇಕು. ಪರಿಶಿಷ್ಟ ಜಾತಿಗೆ ಸೇರಿದ್ದು, ವಯೋಮಿತಿ ೨೧ ರಿಂದ ೪೦ ವರ್ಷದ ಒಳಗಿರಬೇಕು. ಲಘು ವಾಹನ ಚಾಲನೆ ಪರವಾನಿಗೆ ಪಡೆದು ಕನಿಷ್ಠ ೧ ವರ್ಷ ಪೂರ್ಣಗೊಂಡಿರಬೇಕು ಅಥವಾ ೨ ವರ್ಷಗಳ  ಟ್ರ್ಯಾಕ್ಟರ್ ಚಾಲನಾ ಪರವಾನಿಗೆ ಹೊಂದಿರಬೇಕು. ಎಸ್.ಎಸ್.ಎಲ್.ಸಿ ಉತ್ತೀರ್ಣ, ಅನುತ್ತೀರ್ಣ, ಟಿ.ಸಿ ಅಥವಾ ಅಂಕಪಟ್ಟಿ ಹೊಂದಿರಬೇಕು. ನಿಗಮದಿಂದ ವಿತರಿಸಲಾಗುವ ಅರ್ಜಿಗಳನ್ನು ಸ್ವತಃ ಅರ್ಜಿದಾರರೇ ಖುದ್ದಾಗಿ ಬಂದು, ತಮ್ಮ ವೈಯಕ್ತಿಕ  ದಾಖಲೆಗಳಾದ ಪಡಿತರ ಚೀಟಿ, ಚುನಾವಣೆ ಗುರುತಿನ ಚೀಟಿ, ಆಧಾರ್ ಗುರುತಿನ ಚೀಟಿಗಳನ್ನು ಹಾಜರುಪಡಿಸಿ ಪಡೆದುಕೊಳ್ಳಬೇಕು. ಮಧ್ಯವರ್ತಿಗಳಿಂದ ಪಡೆದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
     ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸೆ.೦೫ ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ, ಕೊಠಡಿ ಸಂಖ್ಯೆ :೧೦೯, ಜಿಲ್ಲಾಡಳಿತ ಭವನ, ಕೊಪ್ಪಳ, ದೂರವಾಣಿ ಸಂಖ್ಯೆ : ೦೮೫೩೯-೨೨೧೧೭೬ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ನವೋದಯ ವಿದ್ಯಾಲಯ : ೬ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ
ಕೊಪ್ಪಳ, ಆ.೨೮ (ಕ ವಾ) ರಾಷ್ಟ್ರೀಯ ಶಿಕ್ಷಣ ನೀತಿಗನುಗುಣವಾಗಿ ಭಾರತ ಸರ್ಕಾರ ಆರಂಭಿಸಿರುವ ಜವಾಹರ ನವೋದಯ ವಿದ್ಯಾಲಯಗಳ ೬ನೇ ತರಗತಿ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸಲಿಚ್ಛಿಸುವವರು ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಅಥವಾ ಮಾನ್ಯತೆ ಪಡೆದ ಶಾಲೆಯಲ್ಲಿ ೫ನೇ ತರಗತಿಯಲ್ಲಿ ಓದುತ್ತಿರಬೇಕು. ಅಭ್ಯರ್ಥಿಯು ೨೦೦೩ ರ ಮೇ.೦೧ ಕ್ಕಿಂತ ಮೊದಲು ಮತ್ತು ೨೦೦೭ ರ ಏ.೩೦ ರ ನಂತರ ಜನಿಸಿರಬಾರದು. ಇದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಒಳಗೊಂಡಂತೆ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಅನ್ವಯವಾಗುತ್ತದೆ. ಅರ್ಜಿ ನಮೂನೆಗಳನ್ನು ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರು, ಸಹಾಯಕ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರ ಕಛೇರಿ ಅಥವಾ ಪ್ರಾಚಾರ್ಯರು, ಜವಾಹರ ನವೋದಯ ವಿದ್ಯಾಲಯ, ಕುಕನೂರು (ಜಿಲ್ಲೆ ಕೊಪ್ಪಳ) ಇವರಿಂದ ಉಚಿತವಾಗಿ ಪಡೆಯಬಹುದಾಗಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರ ಮೂಲಕ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೆ.೩೦ ರೊಳಗಾಗಿ ಸಲ್ಲಿಸಬಹುದಾಗಿದೆ.
     ನವೋದಯ ವಿದ್ಯಾಲಯಗಳ ೬ನೇ ತರಗತಿ ಪ್ರವೇಶ ಪರೀಕ್ಷೆಯು ೨೦೧೬ ರ ಜನೆವರಿ ೦೯ ರಂದು ಬೆಳಿಗ್ಗೆ ೧೧.೩೦ ಗಂಟೆಗೆ ಆಯಾ ತಾಲೂಕಾ ಕೇಂದ್ರಗಳಲ್ಲಿ ನಡೆಯಲಿದೆ. ಪ್ರವೇಶ ಪರೀಕ್ಷೆಯು  ಎರಡು ಗಂಟೆಗಳ ಕಾಲ ನಡೆಯಲಿದ್ದು, ಇದರಲ್ಲಿ ಗಣಿತ, ಮಾನಸಿಕ ಸಾಮರ್ಥ್ಯ ಹಾಗೂ ಭಾಷಾ ಪರೀಕ್ಷೆಗಳು ಇರುತ್ತವೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ  ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಥವಾ ಪ್ರಾಚಾರ್ಯರು, ಜವಾಹರ ನವೋದಯ ವಿದ್ಯಾಲಯ, ಕುಕನೂರು (ಜಿಲ್ಲೆ ಕೊಪ್ಪಳ), ದೂರವಾಣಿ ಸಂಖ್ಯೆ : ೦೮೫೩೪-೨೩೦೪೪೪, ೨೩೦೦೫೧ ಇವರನ್ನು ಸಂಪರ್ಕಿಸಬಹುದಾಗಿದೆ.

Advertisement

0 comments:

Post a Comment

 
Top