
ಕೊಪ್ಪಳ: ಸ್ಥಳೀಯ ಶಾಸನಗಳು, ಸ್ಮಾರಕಗಳು, ನಾಣ್ಯಗಳು, ಕೋಟೆ - ಕೊತ್ತಲುಗಳು ಇತಿಹಾಸದಲ್ಲಿನ ಚರಿತ್ರೆಯನ್ನು ತಿಳಿಯಲು ಸಹಾಯಕವಾಗಿವೆ ಎಂದು ಸಾಹಿತಿ ಎಚ್.ಎಸ್. ಪಾಟೀಲ ನುಡಿದರು. ಅವರು ಇಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಜರುಗಿದ ಪರಂಪರಾ ಕೂಟದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಮೌರ್ಯ ಸಾಮ್ರಾಟ ಅಶೋಕನು ಆಳಿದ ಬಗ್ಗೆ ಕೊಪ್ಪಳದಲ್ಲಿ ೨ ಶಾಸನಗಳಿವೆ. ಮತ್ತು ಶಾತವಾಹನರು ಆಳಿದ ಬಗ್ಗೆ ಕೊಪ್ಪಳ ತಾಲೂಕಿನ ಚಿಕ್ಕ ಸಿಂಧೋಗಿಯಲ್ಲಿ ೫೫೮೪ ಬೆಳ್ಳಿಯ ನಾಣ್ಯಗಳು ೧ ತಾಮ್ರ ಪಾತ್ರೆಯಲ್ಲಿ ದೊರೆತದ್ದೂ ಅದರಲ್ಲಿ ಸಿಂತಸ ಎಂಬ ಪದ ಇದ್ದು, ಬ್ರಾಹ್ಮಿ ಲಿಪಿ ಮತ್ತು ಪ್ರಾಕೃತ ಭಾಷೆಯಲ್ಲಿ ಬರೆಯಲಾಗಿದೆ. ಇದೇ ರೀತಿ ಚಾಲುಕ್ಯರು, ರಾಷ್ಟ್ರಕೂಟರು , ಕಲ್ಯಾಣ ಚಾಲುಕ್ಯರು ಈ ಪ್ರದೇಶವನ್ನು ಆಳಿದ್ದಾರೆ. ಕವಿರಾಜ ಮಾರ್ಗದಲ್ಲಿ ವಿದಿತ ಮಹಕೋಪಣ ನಗರವೆಂದೂ, ರನ್ನನ ಅಜಿತನಾಥ ಪುರಾಣದಲ್ಲಿ ಕೊಪಾಣಾಚಲದಂತೆ ಪವಿತ್ರ ಅತ್ತಿಮಬ್ಬೆ ಚರಿತೆ ಎಂಬ ಉಲ್ಲೇಖಗಳು ದೊರೆತ ಪರಿಣಾಮ ಇತಿಹಾಸದಲ್ಲಿ ಕೊಪ್ಪಳದ ಚರಿತ್ರೆ ಅಜರಾಮರವಾಗಿದೆ.ಕಮ್ಮಟ ದುರ್ಗದ ಕುಮಾರ ರಾಮ, ಚಂದ್ರಗಿರಿಯ ಚಂದಾಲಿಂಗಶ್ವರ, ಮುದೋಳದ ಸಮಗಾರ ಚಂದ ಇಂತಹ ಸಾಂಸ್ಕೃತಿಕ ವೀರರು ಕೊಪ್ಪಳ ನೆಲದಲ್ಲಿ ದೊರೆಯುತ್ತಾರೆ. ಇಟಗಿ ಮಹಾದೇವದೇವಾಲಯ, ಕಾಟಾಪುರದ ಮಹಾಬಲೇಶ್ವರ ದೇವಾಲಯ, ಪುರದಲ್ಲಿ ದೊರಕುವ ಕೋಟಿಲಿಂಗಗಳು ನಮ್ಮ ಕಲಾ ಪರಂಪರೆಯನ್ನು ತಿಳಿಸುತ್ತವೆ. ಇಂದು ನಾವು ವರ್ತಮಾನದಲ್ಲಿ ನಿಂತು ನಿನ್ನೆಯ ಬಗ್ಗೆ ಕಾಳಜಿ ಮಾಡುತ್ತಾ ನಾಳಿನ ಭವಿಷ್ಯವನ್ನು ಕೂಡಾ ನಮ್ಮ ಪರಂಪರೆಯ ಮೂಲಕ ಕಟ್ಟಕೊಳ್ಳ ಬೇಕಾಗುತ್ತದೆ ಎಂದರು. ಉಪನ್ಯಾಸಕ ಸುರೇಶ ಸೊನ್ನದ ವಿಶೇಷ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ವಹಿಸಿ ಪ್ರಾಚಾರ್ಯ ಶಿವಪ್ಪ ಶಾಂತಪ್ಪನವರ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದರು. ಈ ಮೊದಲು ಪರಂಪರಾ ಕೂಟದ ಸಂಚಾಲಕಿಯರಾದ ಇತಿಹಾಸ ಉಪನ್ಯಾಸಕಿ ಶುಭಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾರ್ಥನೆ ಲಕ್ಷ್ಮಿ, ಸ್ವಾಗತ ಜ್ಞಾನೇಶ್ವರ ಪತ್ತಾರ, ವಂದನಾರ್ಪಣೆ ಗೋಣಿಬಸಪ್ಪ, ನಿರೂಪಣೆ ಶರಣಪ್ಪ ನೆರವೇರಿಸಿದರು.ಅಪಾರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
0 comments:
Post a Comment