PLEASE LOGIN TO KANNADANET.COM FOR REGULAR NEWS-UPDATES


ಯುವ ಪೀಳಿಗೆ ದುಶ್ಚಟಗಳಿಂದ ದೂರವಿದ್ದು, ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು  ಇರಕಲ್ಲಗಡ ಸರ್ಕಾರಿ ಪ.ಪೂ. ಕಾಲೇಜು ಉಪನ್ಯಾಸಕ ಜೆ.ಪಿ. ಬೆನ್ನೂರ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು. ಸರ್ವೋದಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಕ್ಕಳ ಸಹಾಯವಾಣಿ ೧೦೯೮,  ಇವರ ಸಂಯುಕ್ತ ಆಶ್ರಯದಲ್ಲಿ ಇರಕಲ್ಲಗಡದ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ’ಮದ್ಯ, ಮಾದಕಗಳ  ದುಷ್ಪರಿಣಾಮಗಳು’ ಹಾಗೂ ಜನಜಾಗೃತಿ ಕುರಿತ ವಿಚಾರ ಸಂಕಿರಣದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ದುಶ್ಚಟಗಳು ಸಮಾಜದ ಶಾಂತಿಭಂಗ, ಅನಾರೋಗ್ಯಕ್ಕೆ ಕಾರಣವಾಗುವುದರಿಂದ, ಯುವಜನತೆ ಮಾದಕ ಲೋಕದಿಂದ ದೂರವಾಗಿ, ಸತ್ಸಂಗ ಕಾರ್ಯಗಳಲ್ಲಿ ಸಕ್ರಿಯರಾಗಬೇಕು. ಆರೋಗ್ಯವಂತ ಸಮಾಜದಿಂದ ದೇಶದ ಅಭಿವೃದ್ಧಿ ಸಾಧ್ಯ, ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯವೇ ಪರಿಪೂರ್ಣ ಆರೋಗ್ಯವಾಗಿದೆ. ಸಮಾಜದಲ್ಲಿನ ಸದ್ಯದ ಪರಿಸ್ಥಿತಿಯಲ್ಲಿ ಆಧುನಿಕ ಜೀವನ ಶೈಲಿ ಮಾನಸಿಕ ಒತ್ತಡ, ಮಾನಸಿಕ ಸಮಸ್ಯೆಗೆ ಕಾರಣವಾಗುತ್ತಿದೆ.  ವಿದ್ಯಾರ್ಥಿಗಳು ಗುಟ್ಕಾ ಸೇವನೆಯಂತಹ ಕೆಟ್ಟ ಚಟಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು ಇದರಿಂದ ಕ್ಯಾನ್ಸರ್ ರೋಗ, ಹೃದಯ ಸಂಬಂಧಿ ರೋಗಗಳಿಗೆ ಒಳಗಾಗುತ್ತಿದ್ದಾರೆ.  ಇದಕ್ಕೆ ಪರಿಹಾರವೆಂದರೆ ಸಜ್ಜನರ ಸಹವಾಸ ಮತ್ತು ಮದ್ಯ, ಮಾದಕಗಳ ಬಗ್ಗೆ ತಿರಸ್ಕಾರ ಮನೋಭಾವ ಬೆಳೆಸಿಕೊಳ್ಳುವುದಾಗಿದೆ ಎಂದರು.
  ಕಾರ್ಯಕ್ರಮ ಕುರಿತು ವಿಶೇಷ ಉಪನ್ಯಾಸ ನೀಡಿದ ಸಿ.ವಿ. ಜಡಿಯವರ್ ಅವರು, ’ಮಾನವ ಜನ್ಮ ದೊಡ್ಡದು, ಇದನು ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರ’ ಎಂಬ ದಾಸರ ವಾಣಿಯಂತೆ ಶರಣರು, ಸಂತರು, ದಾರ್ಶನಿಕರ ಮಾರ್ಗ ಅನುಸರಿಸುವದರಿಂದ, ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ.  ಒಳ್ಳೆಯ ಹವ್ಯಾಸಗಳು ಸಾವನ್ನು ದೂರಕ್ಕೆ ದೂಡಿದರೆ, ದುಶ್ಚಟಗಳು ಸಾವನ್ನು ಹತ್ತಿರ ತರುತ್ತವೆ.   ದುಶ್ಚಟಗಳಿಂದ ದೂರವಿರಬೇಕು ಎಂದರೆ, ಕ್ರೀಡೆಗಳಂತಹ ಉತ್ತಮ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
  ಸರ್ವೋದಯ ಸಂಸ್ಥೆ ಜಿಲ್ಲಾ ಸಂಚಾಲಕ ಶರಣಪ್ಪ ತೆಮ್ಮಿನಾಳ ಅವರು ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಸಹಾಯವಾಣಿ-೧೦೯೮ ಕುರಿತು ಮಾತನಾಡಿ, ರಾಜ್ಯದ ಕೊಪ್ಪಳ ಜಿಲ್ಲೆಯೂ ಸೇರಿದಂತೆ ೧೭ ಜಿಲ್ಲೆಳಲ್ಲಿ ಮಕ್ಕಳ ಸಹಾಯವಾಣಿ- ೧೦೯೮ ಕಾರ್ಯ ನಿರ್ವಹಿಸುತ್ತಿದ್ದು, ಶೋಷಣೆಗೆ ಅಥವಾ ನಿರ್ಲಕ್ಷ್ಯಕ್ಕೆ ಒಳಗಾದ ಮಕ್ಕಳಿಗೆ ನೆರವು ಕಲ್ಪಿಸಲು ನೆರವಾಗುವಂತೆ ಮನವಿ ಮಾಡಿದರು.
  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜಶೇಖರ ಅಂಗಡಿ, ಖಾಜಾಬಿ, ಶರಣಪ್ಪ ತೊಣಸಿಹಾಳ ಅವರು ಉಪಸ್ಥಿತರಿದ್ದರು.  ಜಿ. ಮಿಯಾಸಾಬ್ ಸ್ವಾಗತಿಸಿದರು, ಶರಣಪ್ಪ ವಂದಿಸಿದರು, ಆರ್.ಎಸ್. ಸರಗಣಾಚಾರ್ ಕಾರ್ಯಕ್ರಮ ನಿರೂಪಿಸಿದರು.  ಅನ್ನಪೂರ್ಣ ಪ್ರಾರ್ಥನೆಗೈದರು

Advertisement

0 comments:

Post a Comment

 
Top