PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ನಗರದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಜಿಲ್ಲಾ ಟಿಯುಸಿಐ ಏರ್ಪಡಿಸಿದ ಕಾರ್ಮಿಕರ ಸಮಾವೇಶ ಅತ್ಯಂತ ಯಶಸ್ವಿಯಾಗಿ ನೆರವೇರಿತು. 
ಜಿಲ್ಲಾ ಕಾರ್ಮಿಕ ಸಮಾವೇಶ ಉದ್ಘಾಟಿಸಿದ ಕರ್ನಾಟಕ ರೈತ ಸಂಘ ರಾಜ್ಯಾಧ್ಯಕ್ಷರಾದ ಕಾಂ|| ಆರ್.ಮಾನಸಯ್ಯ ಮಾತನಾಡಿ, ಭಾರತದ ರಕ್ಷಣಾ ವ್ಯವಸ್ಥೆಯನ್ನು ವಿದೇಶಿ ಕಂಪನಿಗಳಿಗೆ ಗುತ್ತಿಗೆ ನೀಡಿದ ನರೇಂದ್ರ ಮೋದಿ ಸರಕಾರ ಜನರ ಭರವಸೆ ಆರಂಭದಲ್ಲೇ ಹುಸಿಗೊಳಿಸಿದೆ. ಮೋದಿ ರಾಷ್ಟ್ರಾಭಿವೃದ್ದಿ ಇನ್ನೂ ಐದು ವರ್ಷಗಳಲ್ಲಿ ಯಾವ ರೀತಿ ಜರುಗಬಹುದೆಂಬುದನ್ನು ಈಗಲೇ ನಾವು ಕಾಣಬಹುದಾಗಿದೆ. ಮೋದಿ ಒಳಗೊಂಡು ಈವರೆಗಿನ ಎಲ್ಲಾ ಸರಕಾರಗಳು ದುಡಿಯುವ ವರ್ಗದ ಪರವಾಗಿ ಕೆಲಸ ಮಾಡಿಲ್ಲ.  ಸಾಮ್ರಾಜ್ಯಶಾಹಿ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಸೇವೆಯನ್ನು ಮಾಡಿ ರಾಷ್ಟ್ರವನ್ನು ದಿವಾಳಿತನಕ್ಕೆ ತಳ್ಳಿದೆ. ದುಡಿಯುವ ಜನತೆ ಐಕ್ಯತಾ ಹೋರಾಟವನ್ನು ತೀವ್ರಗೊಳಿಸುವುದರೊಂದಿಗೆ ಜನತ ಪರ್ಯಾಯಕ್ಕೆ ಹೆಗಲೊಡ್ಡಬೇಕಿದೆ ಎಂದರು. ಪ್ರತಿಯೊಂದು ವಸ್ತುವಿಗು ಬೆಲೆ ಇದೆ. ಆದರೆ, ಕಾರ್ಮಿಕನ ಶ್ರಮ ಶಕ್ತಿಗೆ ಬೆಲೆ ಇಲ್ಲ. ಜನತೆ ಪರವಾಗಿ ಇಲ್ಲದ ಆಡಳಿತ ಗೆದ್ದರೇನು ಬಿದ್ದರೇನು? ಎಂದು ಪ್ರಶ್ನಿಸಿದರು. 
ಸಿಪಿಐ(ಎಂಎಲ್) ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ, ಶ್ರಮಶಕ್ತಿ ಶೋಷಣೆ ವಿರುದ್ದ ಸಿಡಿದ್ಹೇಳಿ ಎಂದು ಕರೆಯಿತ್ತರು. ಟಿಯುಸಿಐನ ರಾಜ್ಯಾಧ್ಯಕ್ಷರಾದ ಡಿ.ಹೆಚ್.ಪೂಜಾರಿ ಮಾತನಾಡಿ, ವರ್ಗ ಹೋರಾಟಕ್ಕೆ ಹೆಗಲೊಡ್ಡಲು ಕಾರ್ಮಿಕರಿಗೆ ಕರೆ ನೀಡಿದರು. ಟಿಯುಸಿಐ ರಾಜ್ಯ ಕಾರ್ಯದರ್ಶಿ ಕಾಂ|| ಚಿನ್ನಪ್ಪ ಕೊಟ್ರಿಕಿ, ಕೆ.ಬಿ.ಗೋನಾಳ್, ರಾಜ್ಯ ರೈತ ಸಂಘದ ಮುಖಂಡ ಶಿವಣ್ಣ, ಕೃಷಿ ವಿವಿ ಕಾರ್ಮಿಕ ಸಂಘದ ವಿರೇಶ್, ಹೋರಾಟಗಾರರಾದ ದೇವರಾಜ ವೀರಾಪೂರು, ಕಟ್ಟಡ ಕಾರ್ಮಿಕ ಸಂಘದ ಶರಣಪ್ಪ ಹೂವಿನಾಳ್, ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಮುಂತಾದವರು ಮಾತನಾಡಿದರು. ಟಿಯುಸಿಐ ಜಿಲ್ಲಾಧ್ಯಕ್ಷ ಬಸವರಾಜ ನರೆಗಲ್ ಅಧ್ಯಕ್ಷತೆ ವಹಿಸಿದ್ದರು. 
ಜನ ಸಾಂಸ್ಕೃತಿಕ ಸಂಘದ ಆರ್.ಹುಚ್ಚರೆಡ್ಡಿ, ಹನುಮೇಶ್ ಕವಿತಾಳ್, ನಾಗರಾಜ್ ಪೂಜಾರ್ ಕಲಾತಂಡ ಕ್ರಾಂತಿಕಾರಿ ಹಾಡುಗಳನ್ನು ಹಾಡಿದರು. ಆರಂಭದಲ್ಲಿ ಗವಿಸಿದ್ದೇಶ್ವರ ಮಠದಿಂದ ಆರಂಭಗೊಂಡ ಮೇ ಡೇ ರ‍್ಯಾಲಿಯಲ್ಲಿ ನೂರಾರು ಕಾರ್ಮಿಕರು ಕೆಂಭಾವುಟ ಹಿಡಿದು ಘೋಷಣೆಗಳನ್ನು ಮೊಳಗಿಸಿದರು. ಗಡಿಯರ ಕಂಬ, ಅಶೋಕ ಸರ್ಕಲ್, ಭೀಮರಯ ಸರ್ಕಲ್ ಮೂಲಕ ಪ್ರಮುಖ ಬೀದಿಗಳಲ್ಲಿ ಸಾಗಿದ ರ‍್ಯಾಲಿಯು ಎಪಿಎಂಎಸಿ ಜಿಲ್ಲಾ ಕಾರ್ಮಿಕ ಸಮಾವೇಶವಾಗಿ ಮಾರ್ಪಾಟ್ಟಯಿತು.
ಹನುಮೇಶ್ ಪೂಜಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Advertisement

0 comments:

Post a Comment

 
Top