PLEASE LOGIN TO KANNADANET.COM FOR REGULAR NEWS-UPDATES

 ಕೃಷ್ಣಾ ಜಲ ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ಕೃಷ್ಣಾ ನ್ಯಾಯಾಧಿಕರಣದ ತೀರ್ಪು ಇಂದು ಪ್ರಕಟಗೊಂಡಿದ್ದು, ಆಲಮಟ್ಟಿ ಜಲಾಶಯದ ಎತ್ತರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದ್ದು, ಇದರಿಂದ ಆಂಧ್ರ ಪ್ರದೇಶಕ್ಕೆ ತೀವ್ರ ಮುಖಭಂಗ ವಾದಂತಾಗಿದೆ.
ಇಂದು ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ನೇತೃತ್ವದ ನ್ಯಾಯಾಧಿಕರಣ, ಆಲಮಟ್ಟಿ ಜಲಾಶಯದ ಎತ್ತರದಲ್ಲಿ ಬದಲಾವಣೆ ಇಲ್ಲ. 524 ಮೀಟರ್ ಎತ್ತರವೇ ಅಂತಿಮ ಎಂದು ಹೇಳಿದ್ದು, ಆಲಮಟ್ಟಿಯ ಎತ್ತರದ ಬಗ್ಗೆ ಆಂಧ್ರಪ್ರದೇಶ ಸಲ್ಲಿಸಿದ್ದ ಆಕ್ಷೇಪವನ್ನು ತಿರಸ್ಕರಿಸಿದೆ.
ಇದೇ ವೇಳೆ ನ್ಯಾಯಾಧಿಕರಣವು ಕೃಷ್ಣಾ ನದಿ ಕೊಳ್ಳದ ಹೆಚ್ಚುವರಿ ನೀರು ಬಳಕೆಗೆ ಕರ್ನಾಟಕಕ್ಕೆ ಒಪ್ಪಿಗೆ ನೀಡಿದೆ. ಆಂಧ್ರಪ್ರದೇಶದ ರಾಜೊಳ್ಳಿ ಬಂಡಾ ನಾಲೆಗೆ ತುಂಗಭದ್ರಾ ಡ್ಯಾಂನಿಂದ 4 ಟಿಎಂಸಿ ನೀರು ಬಿಡುವಂತೆ ನ್ಯಾಯಾಧಿಕರಣ ಆದೇಶಿಸಿದೆ. ಹಂಚಿಕೆ ಯಾಗದ 513 ಟಿಎಂಸಿ ನೀರಿನ ಹಂಚಿಕೆಗೆ ಕೃಷ್ಣಾ ನ್ಯಾಯಾಧಿಕರಣದ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬಹುದು ಎಂದು ನ್ಯಾಯಾಧಿಕರಣ ತಿಳಿಸಿದೆ. ರಾಜೊಳ್ಳಿ ನಾಲೆಗೆ 4 ಟಿಎಂಸಿ ನೀರು ಬೀಡುವುದರಿಂದಾಗಿ ರಾಜ್ಯದ ಪಾಲಿಗೆ 4 ಟಿಎಂಸಿ ನೀರಿನ ಕೊರತೆ ಉಂಟಾಗಲಿದೆ. 2010ರ ಡಿ.30ರಂದು ಕೃಷ್ಣಾ ನ್ಯಾಯಾಧಿಕರಣ ಐ ತೀರ್ಪು ಪ್ರಕಟಿಸಿ ಆಂಧ್ರಪ್ರದೇಶಕ್ಕೆ 1001 ಟಿಎಂಸಿ, ಕರ್ನಾಟಕಕ್ಕೆ 911 ಟಿಎಂಸಿ ಮತ್ತು ಮಹಾರಾಷ್ಟ್ರಕ್ಕೆ 666 ಟಿಎಂಸಿ ನೀರು ನಿಗದಿಪಡಿಸಿತ್ತ್ತು. ಆದರೆ ಈ ತೀರ್ಪಿನ ವಿರುದ್ಧ ಕೃಷ್ಣಾ ಕಣಿವೆ ಪ್ರದೇಶದ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದುದರಿಂದಾಗಿ ನ್ಯಾಯಾಧಿಕರಣ ತೀರ್ಪನ್ನು ಪುನರ್ವಿಮರ್ಶಿಸಿದೆ.
ಕೃಷ್ಣಾ ನ್ಯಾಯಾಧಿಕರಣದ ತೀರ್ಪನ್ನು ಸ್ವಾಗತಿಸಿರುವ ಕರ್ನಾಟಕದ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಉತ್ತರ ಕರ್ನಾಟಕದ ಜನತೆಯ ಪಾಲಿಗೆ ಇದೊಂದು ಐತಿಹಾಸಿಕ ದಿನ ಎಂದು ಹೇಳಿದ್ದಾರೆ.

Advertisement

0 comments:

Post a Comment

 
Top