PLEASE LOGIN TO KANNADANET.COM FOR REGULAR NEWS-UPDATES





  ಡಿಸೆಂಬರ್ ೨೧ ರಂದು ಮುಂಜಾನೆ ಎತ್ತು ಹೊಡಕೊಂಡು ಹೊಲಕ ಹ್ವಾಂಟಿದ್ದ ನಮ್ಮೂರು ರೈತ ಕಲ್ಲಪ್ಪನ ನಾನು ಕೇಳಿದೆ.." ಅಲ್ಲೋ ಕಾಕ ಇವತ್ತು ಪ್ರಳಯವಾಗುತ್ತಂತ ಮತ್ತೆ ನೀನು ಹೊಲಕ್ಕ ಹರಗಕ್ಕ್ ಹೊಂಟಿಯಲ್ಲಾ. ಪ್ರಳಯವಾದ್ರ ಯಾಕಬೇಕೈತಿ ಹೊಲದ್ದು ಬದುಕು" ಅಂತ ಅಂದೆ. ಅದಕ್ಕ ಅವ ಹೇಳಿದ " ತಮ್ಮ ಪ್ರಳಯ ಗಿಳಿಯಾ ಎನು ಗೊತ್ತಿಲ್ಲಾ ನಮಗ, ಅದನ್ನ ತೊಗೊಂಡು ನಾ ಏನ್ ಮಾಡಬೇಕಾಗೈತಿ. ಈಗ ದಿನ ಮನಿ ನಿಭಾಸೋದ ಐತಿ ಅಲ್ಲಾ ಅದಕ್ಕಿಂತ ಹೆಚ್ಚಿನದ್ದು ಪ್ರಳಯ ಐತ್ತೇನು? ಪ್ರಳಯ ಆದ್ರ ಆಗಲಿ ಬಿಡು ದಿನ ಗೋಳಾಡುದಕ್ಕಿಂತ ಒಮ್ಮೆ ಎಲ್ಲ್ರೂ ನಿಶ್ಚಿಂತಿಯಿಂದ ಹೋಗಿ ಬಿಡ್ತಿವು" ಅಂತ ಅಂದ. ಅದಕ್ಕ ನಾನು. ಆದ್ರು ಇವತ್ತು ಒಂದಿನ ಕಾಯ್ದು, ನಾಳೆ ಸೂರ್ಯ ಹುಟ್ಟೊದನ್ನು ನಾವು ನೋಡಿ ಬಾಳೇವು ಬದುಕು ಮಾಡಣೊಲ್ಲಾ" ಅಂದಿದ್ದಕ್ಕ. ತಮ್ಮ ನಿಮ್ಮಂತಹ ಓದಿದವರು ತಲ್ಯಾಗ ಏನೊ ತುಂಬುಕೊಂಡು ಬದುಕು ಮರೆಯಾಕತ್ತಿರಿ. ಪ್ರಳಯ ಗಿಳಿಯ ಏನು ಆಗುವುದಿಲ್ಲಾ, ಅದು ನಮಗ ಬೇಕಾಗಿನೂ ಇಲ್ಲಾ, ಇವತ್ತು ದುಡಿದು ತಿಂದ್ರ ಸಾಕಾಗೈತಿ" ಅಂತ ಅನಕೊಂತ ಅವಸರದಿಂದ ಹ್ವಾದ.
      ಇನ್ನ ನಮ್ಮೂರಿನ ಶೆಟ್ಟರ್ ಅಂಗಡಿಯಲ್ಲಿ ಶೇಟ್ಟರು ರ್‍ವಕ್ಕ ಎಣಿಸಿ ತೀಜೊರಿಯಲ್ಲಿ ಇಟ್ಟು ಬೀಗ ಹಾಕುತ್ತಿದ್ದರು ನಾನು ಹೋಗಿ " ಅಲ್ಲಾ ಶೇಟ್ರ ನಾಳೆ ನಾವು ಇರುತ್ತೆವೋ ಇಲ್ಲವೋ ಗೊತ್ತಿಲ್ಲಾ, ಯಾಕ ರ್‍ವಕ್ಕ ಕೂಡಿ ಇಡುತ್ತಿರಿ" ಅಂದೆ ಅದಕ್ಕೆ ಆತ " ಯಾಕ? ಅಂದ. ಅದಕ್ಕ ನಾನು " ನಾಳೆ ಪ್ರಳಯವಾಗುತ್ತದೆ ಅಲ್ಲಾ " ಅಂದೆ. ಅದಕ್ಕ ಅತ ' ಅದು ಎಲ್ಲಾ ನಿಮ್ಮಂತವರಿಗೆ ಮಾತ್ರ ಗೊತ್ತು, ಪ್ರಳಯ ಗಿಳಯ ಎಲ್ಲಾ ಬಿಡು" ಅಂತ ತನ್ನ ವ್ಯಾಪಾರದ ಕಡೆ ಲಕ್ಷ್ಯ ವಹಿಸಿದ.
    ಮುಂದ ಅತ್ತ ಕಡೆ ತಲೆಮ್ಯಾಲೆ ಕೈ ಹೊತ್ತುಕೊಂಡು ಕುಳಿತಿದ್ದ ನಮ್ಮ ಮೀಡಿಯ ಗೆಳೆಯರತ್ತ ಹೋದೆ. ಅಲ್ಲಿ ದೃಶ್ಯನೆ ಬೇರೆ. ಎಲ್ಲರು ಒಂದೆ ಮಾತು ನಾಳೆ ನಾವು ಯಾರು ಇರುದಿಲ್ಲಾ. ನಾವು ಇರುವುದಿಲ್ಲಾ, ನಾವು ಕಳುಹಿಸು ಸುದ್ದಿ ಸಂಸ್ಥೆನೂ ಇರಲ್ಲಾ. ಅದಕ್ಕ ಇವತ್ತು ಈ ಪ್ರಳಯಕ್ಕ ಸಂಬಂಧಿಸಿ ಸುದ್ದಿನ ಕಳುಹಿಸಿಬಿಡೋಣ ಎಂದು ಹೇಳುತ್ತಿದ್ದರು. ಅಲ್ಲಿ ಪ್ರಳಯಕ್ಕೆ ಅಂಜಿಕೊಂಡು ಮಂದಿ ಪೂಜೆ ಮಾಡುತ್ತಿದ್ದಾರೆ. ಜೋತಿಷಿಗಳನ್ನು, ಕೆಲವು ಸ್ವಾಮಿಗಳ ಬೈಟ್ ತೆಗೆದುಕೊಂಡು ಕಳುಹಿಸಬೇಕು ಎಂಬ ದಾವಂತ.
     ಅತ್ತ ಜೋತಿಷ್ಯಾಲಯದಲ್ಲಿ ಜನ ಜಂಗುಳಿ ಕಾರಣ ಕೇಳಿದರೆ. ಪ್ರಳಯ ತಡೆಗಟ್ಟುವ ಬಗ್ಗೆ ಜೋತಿಷಿಗಳು ಯಾವದೋ ನಿಯಮ ನಿತ್ಯಾ ಹೇಳುತ್ತಿದ್ದಾರೆ. ಯಾವ ನಕ್ಷತ್ರದವರಿಗೆ, ಯಾವ ಆಚರಣೆ ಮಾಡಬೇಕು, ನಾವು ಬದುಕಬೇಕು, ನಮ್ಮ ಮಕ್ಕಳು, ಮನೆ, ಆಸ್ತಿಗಳು ಉಳಿಯಬೇಕು ಅದಕ್ಕೆ ಎಷ್ಟು ಖರ್ಚಾಗಲಿ ಎಂದು ಜೋತಿಷಿಗಳನ್ನ ಕೇಳುತ್ತಿದ್ದರು. ಅವರಿಂದ ಮಾಹಿತಿ ಪಡೆದ ಜೋತಿಷಿಗಳು ಅವರಿಂದ ಇಂತಿಷ್ಟು ಹಣ ಪಡೆದು ಅವರಿಗೆ ಧೈರ್ಯ ಹೇಳುತ್ತಿದ್ದರು.
    ಇವು ಡಿಸೆಂಬರ್ ೨೧ ರಂದು ನಡೆದ ಸಾಮಾನ್ಯ ದೃಶ್ಯಗಳು, ಈ ರೀತಿ ದೃಶ್ಯಗಳಲ್ಲಿ ಹೆಚ್ಚುಕಡಿಮೆ ಬದಲಾವಣೆಯಾಗಿರಬಹುದು ಆದರೆ ಅವುಗಳ ಒಳರ್ಥ ಇದೆ ರೀತಿ ಇತ್ತಲ್ಲಾ., ಹೌದೊ ಅಲ್ಲಾ ಸ್ವಲ್ಪ ವಿಚಾರ ಮಾಡ್ರಿ. ಇಲ್ಲಿಯವರಿಗೂ ಒಮ್ಮೆ ಪ್ರಳಯವಾಗಿಲ್ಲದಿದ್ದರು ಆಗಾಗ ಪ್ರಳಯದ ಬಗ್ಗೆ ಜನರಲ್ಲಿ ಭಯ ಹುಟ್ಟಿಸುವ ಕಾರ್ಯವನ್ನು ಮಾಡುತ್ತಲ್ಲೆ ಬರಲಾಗುತ್ತಿದೆ. ಈ ರೀತಿ ಸುದ್ದಿ ಹುಟ್ಟಿಸುವವರಿಗೂ ಹಾಗೂ ಪ್ರಸಾರ ಮಾಡುವವರಿಗೂ ಗೊತ್ತಿದೆ. ಪ್ರಳಯ ಗಿಳಯ ಕೇವಲ ಬುರಡೆ ಪುರಾಣ ಅಂತ ಆದರೆ ಜನರನ್ನು ಸಾವಿನ ಭಯದಲ್ಲಿ ಇಟ್ಟು ಪತ್ರಿಕೆ ಪ್ರಸಾರ, ಚಾನೆಲ್‌ಗಳ ಟಿಆರ್‌ಪಿ ಹೆಚ್ಚಿಸಿಕೊಂಡು ಜಾಹಿರಾತು ಪಡೆದು ದುಡ್ಡು ಮಾಡಿಕೊಳ್ಳೊದು. ಇದೆ ಭಯದಲ್ಲಿ ಜೋತಿಷಿಗಳು ಒಂದಿಷ್ಟು ಜನ ದೋಚಿಕೋಳ್ಳೊದು ಅಂತ.
       ಸಾವು ಎಂಬುವದು ಯಾವಗಲೂ ಭಯ ಹುಟ್ಟಿಸುವ ವಾರ್ತೆ. ಇಂದು ನಾಳೆ ಸಾಯಿಯುತ್ತಿರುವವರನ್ನು ಕೇಳಿದರು ಸಾವು ಬರುತ್ತದೆ ಎಂದು ಹೇಳಿದರೆ, ಹೊರಗೆ ಸಾವು ಬರಲಿ ಎನ್ನುತ್ತಿರುವವರು ಮನಸ್ಸಿನಲ್ಲಿ ದೇವರೆ ಈ ಸಾವು ಬಾರದಿರಲಿ ಎಂದು ಪ್ರಾರ್ಥಿಸುತ್ತಾರೆ. ಆದರೆ ಕನ್ನಡದ ಚಾನೆಲ್‌ಗಳು ಕಳೆದು ಒಂದು ವರ್ಷದಿಂದ ಭೂಮಿಗಿಂತ ಎರಡು ಪಟ್ಟು ದೊಡದು ಇರುವ ನಿಬೀರು ಗ್ರಹ ಭೂಮಿಗೆ ಆಪ್ಪಳಿಸಲಿದೆ. ಇದರಿಂದಾಗಿ ಭೂಮಿ ಲಯವಾಗುತ್ತದೆ. ಮೇಯಾನ್ ಕ್ಯಾಲೆಂಡರಿನಲ್ಲಿ ೨೧.೧೨.೧೨ ರಿಂದ ಕ್ಯಾಲೆಂಡರ ಇಲ್ಲಾ ಅದಕ್ಕಾಗಿ ಭೂಮಿಯಲ್ಲಿ ಪ್ರಳಯವಾಗುತ್ತದೆ ಎಂದು ಅತಿ ರಂಜಿತ ಕಾರ್ಯಕ್ರಮ ಬಿತ್ತರಿಸಿದವು. ಪ್ರತಿ ಚಾನೆಲ್‌ನಲ್ಲಿಯೂ ಒಬ್ಬ ಜೋತಿಷಿಯನ್ನು ಕರೆದುಕೊಂಡು ಬಂದು ಆತನಿಂದ ಪ್ರಳಯ ಹೇಗೆ ಆಗುತ್ತದೆ. ಅದಕ್ಕೆ ಕಾರಣಗಳೇನು ಎಂದು ಪ್ಯಾನೆಲ್ ಡಿಸ್ಕಷನ್ ಮಾಡಿದರು. ಬಹಳಷ್ಟು ಸಮಯ ಖಗೋಳ, ಭೂ ವಿಜ್ಞಾನಿಗಳನ್ನ ಕರೆಯಲಿಲ್ಲಾ. ಇನ್ನು ಒಂದು ಚಾನೆಲ್ ಅಂತೂ ಪ್ರಳಯದ ಕೌಂಟ ಡೌನ ತೋರಿಸಿದರು. ಇದರಿಂದ ಜನ ದಿಗುಲು ಬಿದ್ದು ಚಾನೆಲ್ ನೋಡಿದರು, ಆಲ್ಲಲ್ಲಿ ಚರ್ಚೆ ಮಾಡಿದರು. ಇದನ್ನೆ ಕೆಲವು ಪತ್ರಿಕೆಗಳು ಪ್ರಳಯದ ಬಗ್ಗೆ ಪುಟಗಟ್ಟಲೆ ಬರೆದರು. 
         ನಿಗಿದಿಯಾದಂತೆ ೨೧.೧೨.೧೨ ಹತ್ತಿರವಾಗುತ್ತಿದ್ದಂತೆ ಎಲ್ಲಾ ಚಾನೆಲ್‌ಗಳು ಪ್ರಳಯ ಸುದ್ದಿ ಬಿತ್ತರಿಸುತ್ತಿದ್ದವು ಇದರಿಂದ ಟಿಆರ್‌ಪಿ ಯಥಾಸ್ಥಿತಿಗೆ ಉಳಿಯಿತು ಅದಕ್ಕಾಗಿ ಚಾನೆಲ್‌ಗಳು ಪ್ರಳಯವಾಗುದಿಲ್ಲಾ. ಮೇಯಾನ್ ಕ್ಯಾಲೆಂಡರ ತಿಂಗಳಿಗೆ ೨೦ ದಿನ ಇರುವ ಕ್ಯಾಲೆಂಡರ್ ಇದನ್ನೆ ಸುಳ್ಳು ಸುದ್ದಿ ಹಬ್ಬಿಸುತ್ತವೆ ಎಂದು ಮತ್ತೆ ಸುದ್ದಿ ಪ್ರಸಾರ ಮಾಡಿದವು. ಪ್ರಳಯ ಜಷ್ಟ್ ಮಿಸ್ ಅಂತಲೂ ಪ್ರಸಾರ ಮಾಡಿದವು. ಮತ್ತೆ ಟಿಆರ್‌ಪಿ ಹೆಚ್ಚಳಕ್ಕೆ ಪ್ರಯತ್ನಿಸಿದರು. ಎಲ್ಲಾ ಮಾಡಿದ್ದು ಜನರ ಬುದ್ದಿಮತ್ತಿ ಮೇಲೆ ಸವಾರಿ ಹಣ ಮಾಡಿಕೋಳ್ಳುವ ಆಸೆಗೆ ಬಿದ್ದರು.
    ಈ ಮಧ್ಯೆ ಬೆಂಗಳೂರಿನಲ್ಲಿ ಕಳೆದ ಏಳೆಂಟು ತಿಂಗಳ ಹಿಂದೆ ಲಘು ಭೂಕಂಪವಾಯಿತು. ಅಂದು ಚಾನೆಲ್‌ಗಳು "ಇದು ಪ್ರಳಯದ ಮುನ್ಸೂಚನೆಯಾ.. ಪ್ರಳಯ ಪ್ರಾರಂಭವಾಯಿತೆ?. ೨೧.೧೨.೧೨ರ ಮುಂಚೆ ಭೂಮಿ ಇಲ್ಲವಾಗುತ್ತದೆಯೇ?" ಎಂದು ಸ್ಕ್ರೊಲ್‌ಗಳನ್ನು ಬಿತ್ತರಿಸಿದವು. ಅಂದು ಸಹ ಜನತೆ ಹೌದೆ ಪ್ರಳಯವಾಗುತ್ತಾ ಎಂದು ಆತಂಕದಿಂದಲೆ ಟಿವಿ ನೋಡಿದರು.  
       ನಿಗಿದಿಯಾದಂತೆ ೨೧.೧೨.೧೨ ಬಂತು ಅಂದು ಎಂದಿನಂತೆ ಸೂರ್ಯ ಹುಟ್ಟಿದ. ಹೊಲಕ್ಕೆ ಎತ್ತುಗಳನ್ನು ಹೊಡಕೊಂಡು ರೈತ ಹೋದ. ಅಂಗಡಿ ಶೇಟ್ಟರು ಮತ್ತಷ್ಟು ವ್ಯಾಪಾರಕ್ಕಾಗಿ ಸಿದ್ದತೆ ಮಾಡಿಕೊಂಡ. ಪ್ರಳಯದ ಬಗ್ಗೆ ಚಿಂತೆಯಲ್ಲಿ ವರದಿಗಾರ ನಿರಾಳವಾಗಿದ್ದ, ಆದರೆ ವರದಿ ಬಿತ್ತರಿಸಿದ ಚಾನೆಲ್ ಮತ್ತು ಪತ್ರಿಕೆ ಸಂಪಾದಕರು ಮುಂದೇನು ಬರೆಯಬೇಕು ಎಂಬ ಚಿಂತೆಯಲ್ಲಿದ್ದರು. ಹಾಗದರೆ ಪ್ರಳಯದ ಬಗ್ಗೆ ಯಾರು ಅತಿ ಹೆಚ್ಚು ಭೀತಿಗೊಂಡವರು ಯಾರು ಎಂಬುವದು ಜನತೆಯಲ್ಲಿ ಜಿಜ್ಞಾಸೆ ಪ್ರಾರಂಭವಾಗಿದೆ. 
        ಕ್ಷಮಾ ಧರಿತ್ರಿಯಾಗಿರುವ ಈ ಭೂಮಿಯ ಮೇಲೆ ಸಾಕಷ್ಟು ಆಕ್ರಮಗಳು ನಡೆದರು ಭೂಮಿ ಬಾಯಿ ಬಿಡುತ್ತಿಲ್ಲಾ. ಬಿಡುವುದಿಲ್ಲಾ ಕಾರಣ ಭೂಮಿಗೆ ಮನುಷ್ಯನ ಆಕ್ರಮಣಗಳನ್ನು ತಡೆಯುವ ಶಕ್ತಿ ಇದೆ. ಪರಿಸರ ಹಾನಿಯಿಂದಾಗಿ ಹವಾಮಾನ ವೈಪರಿತ್ಯದಿಂದಾಗಿ ಮಳೆ ಬೇಳೆಗಳು ಹೆಚ್ಚು ಕಡಿಮೆಯಾಗುತ್ತವೆ. ಆದರೂ ಭುಮಿ ಮಾತ್ರ ತನ್ನ ಕ್ಷಮಾಗುಣವನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಆದರೂ ಸುದ್ದಿಶೂರರು ಭೂಮಿಯನ್ನು ಇಲ್ಲಾ ಎಂದು ಸಾಯಿಸುತ್ತಿದ್ದಾರೆ.
       ಇನ್ನು ಕೆಲವರು, ಭೂಮಿಯಲ್ಲಿಯ ಅನಾಚಾರ, ಭ್ರಷ್ಟಾಚಾರ, ಅನೈತಿಕತೆಯಿಂದಾಗಿ ಜನತೆಯಲ್ಲಿ ಬದುಕಿನ ಬಗ್ಗೆ ನಿರಾಸೆ ಮೂಡುತ್ತಿದೆ. ವಾಹನಗಳು, ಯಂತ್ರಗಳ ಅವಘಡ, ಭಯೋತ್ಪಾದನೆ, ಸುನಾಮಿ, ಪ್ರವಾಹಗಳು ಕಾಣಿಸಿಕೊಳ್ಳುತ್ತಿವೆ, ಇವುಗಳನ್ನು ಕೊನೆಗಾಣಿಸುವ ಚರ್ಚೆ ನಡೆಯುತ್ತಿವೆ. ಭೂಮಿಯಲ್ಲಿ ಜಾಗತಿಕ ತಾಪಮಾನ ತಡೆಗಟ್ಟುವ, ಭೂಮಿ ಉಳಿವಿಗಾಗಿ ವಿಶ್ವ ಮಟ್ಟದಲ್ಲಿ ಆನೇಕ ಕಾರ್ಯಕ್ರಮಗಳು ನಡೆಯುತ್ತವೆ. ಇದರಿಂದಾಗಿ ನಿರಾಸೆಯಿಂದ ಬದುಕು ಕೊನೆಗಾಣುತ್ತದೆ ಎಂಬ ಚಿಂತೆಯನ್ನು ಬಿಡಬೇಕಾಗಿದೆ.
                                                           ಶರಣಪ್ಪ ಬಾಚಲಾಪೂರ
                                                              ಹನುಮಸಾಗರ 
images  : net

Advertisement

0 comments:

Post a Comment

 
Top