PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದ ಹನುಮವ್ವ ಡೋಲಿ ಆತ್ಮಹತ್ಯೆಗೆ ಕಾರಣರಾದ ೪ ಜನ ಅತ್ಯಾಚಾರಿಗಳನ್ನು   
       ಬಂಧಿಸಿ, ಮಹಿಳೆಯರ ಮಾನ ಪ್ರಾಣಕ್ಕೆ ರಕ್ಷಣೆ ನೀಡಲು ಆಗ್ರಹಿಸಿ ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ ಪ್ರತಿಭಟನೆ ಹಮ್ಮಿಕೊಂಡಿತ್ತು.
      ಕೊಪ್ಪಳದ ಹ್ಯಾಟಿ ಗ್ರಾಮದಲ್ಲಿ ಹನುಮವ್ವ ಡೋಲಿ ಎನ್ನುವ ಯುವತಿ ಮೇಲೆ ಕಾಮಪಿಶಾಚಿ ೪ ಜನ ಯುವ ಪಡ್ಡೆಗಳು  ಅತ್ಯಾಚಾರ ಮಾಡಿ, ಅತ್ಯಾಚಾರದ ದೃಷ್ಯಗಳನ್ನು ಮೊಬೈಲ್ ಮೂಲಕ ಸೆರೆ ಹಿಡಿದು ಯುವ ಪಡ್ಡೆಗಳು ಮೊಬೈಲ್‌ಗಳಲ್ಲಿ ಹರಿದಾಡಿಸಿ ಆಯುವತಿಯನ್ನು ಸತತವಾಗಿ ಚುಡಾಯಿಸುತ್ತಾ ಕಾಮಕೇಳಿಗೆ ತೊಡಗಿದ್ದಾರೆ. ಅಷ್ಟೊತ್ತಿಗೆ ಹನುಮವ್ವಳ ಪಾಲಕರು ಗ್ರಾಮದ ಮುಖಂಡರ ಮುಂದೆ ತಂದಾಗ ಆ ಕಾಮದಾಹಿಗಳಿಗೆ ಥಳಿಸಿ ೩೦,೦೦೦ (ಮೂವತ್ತು ಸಾವಿರ) ದಂಡ ವಿಧಿಸಿದ್ದಾರೆ. ಇಷ್ಟೊಂದು ಸಾರ್ವತ್ರಿಕರಣಗೊಂಡ ಪ್ರಕರಣದಿಂದ ನ.೨೬ ರಂದು ಯುವತಿ ವಿಷ ಸೇವಿಸಿ ಗದುಗಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಇದೊಂದು ಹೃದಯ ವಿದ್ರಾವಕ ಪ್ರಕರಣವಾಗಿದ್ದು ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂತಹದ್ದಾಗಿದೆ.
          ಈ ಪ್ರಕರಣವನ್ನು ಇಲ್ಲಿನ ರಕ್ಷಣಾ ಇಲಾಖೆ ಪ್ರಾಮಾಣಿಕತೆ ಮತ್ತು ಪಾರದರ್ಶಕವಾಗಿ ತನಿಖೆ ನಡೆಸಬೇಕಾಗಿದ್ದು, ಮಹಿಳೆಯಾಗಿರುವ ಜಿಲ್ಲಾಧಿಕಾರಿಗಳು ಬೇಜವಬ್ದಾರಿ ಹೇಳಿಕೆ ನೀಡಿ ಕೈತೊಳೆದುಕೊಂಡಿರುವುದು ದುರಂತವೇ ಸರಿ. ಇತ್ತೀಚಿಗೆ ಜುಲೈ, ೨ರಂದು ತಾಲೂಕಿನ ಹಲವಾಗಲು ಗ್ರಾಮದಲ್ಲಿ ಮೀನಾಕ್ಷಿ ವಾಲ್ಮೀಕಿ(೧೪) ಎನ್ನುವ ಅಪ್ರಾಪ್ತ ಯುವತಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಕಳೆದ ೧೮ ತಿಂಗಳ ಹಿಂದೆ ಕುಷ್ಟಗಿ ತಾಲೂಕಿನ ತಾವರಗೇರಾದ ಹನೀಫಾ ಬೇಗಂ ಎನ್ನುವ ವಿವಾಹಿತ ಮಹಿಳೆ ರಾತ್ರಿ ಬಹಿರ್ದೆಸೆಗೆ ಹೋದಾಗ ಸಾಮೂಹಿಕವಾಗಿ ಅತ್ಯಾಚಾರವೆಸಗಿ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಯಲಬುರ್ಗಾ ತಾಲೂಕಿನ ವಟಪರ್ವಿ ಗ್ರಾಮದ ೫ ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಅಲ್ಲದೇ ಕೆಳಜಾತಿ ಹುಡುಗರನ್ನು ಪ್ರೀತಿಸಿದ ಯುವತಿಯರನ್ನು ಬಹಿರಂಗವಾಗಿ ಮರ್ಯಾದಾ ಹತ್ಯೆಗಳನ್ನು ಮಾಡಲಾಗುತ್ತಿದೆ. ಈ ಎಲ್ಲಾ ಪ್ರಕರಣಗಳು ರಾಜಕಾರಣದ ಸಂಚಿನಿಂದ ಮತ್ತು ಭ್ರಷ್ಟಾಚಾರದ ಹಣದ ಪೂರೈಕೆಯಿಂದ ಕೇವಲ ಸ್ವಭಾವಿಕ ಪ್ರಕರಣಗಳೆಂದು ದಾಖಲಾಗಿ ಸಾಕ್ಷಿಗಳ ಮತ್ತು ನ್ಯಾಯ ಕೇಳುವವರ ಕೊರತೆಯಿಂದ ಮುಚ್ಚಿ ಹೋಗುತ್ತಿವೆ.
           ಗ್ರಾಮೀಣ ಮಹಿಳೆಯರಿಗೆ ಕಿಂಚಿತ್ತು ಮಾನ-ಪ್ರಾಣಗಳಿಗೆ ರಕ್ಷಣೆ ಸಿಗುತ್ತಿಲ್ಲ. ಬದಲಾಗಿ ಅಕ್ರಮವಾಗಿ ಬ್ರಾಂಡಿ ಮಾರಾಟ, ದಾಬಾ, ಜೂಜಾಟ ಮಾಮೂಲಾಗಿದ್ದು, ರಾಜಕೀಯ ಕಟಾಕ್ಷವು ಅಪರಾಧಿಗಳಿಗೆ ಸದಾ ಪ್ರೇರಣೆ ನೀಡುತ್ತಿದೆ. ರಾಜಕೀಯ ಗೂಂಡಾಗಿರಿಯಂತೂ ಇತ್ತೀಚಿಗೆ ಅಧಿಕವಾಗುತ್ತಿದೆ. ಅಪರಾಧ ಮತ್ತು ಅಕ್ರಮಗಳನ್ನು ನಿಯಂತ್ರಿಸಬೇಕಾದ ರಕ್ಷಣಾ ಇಲಾಖೆ ನಿಷ್ಕ್ರೀಯವಾಗಿದ್ದು, ಇಂತಹ ಅತ್ಯಾಚಾರ, ಆತ್ಮಹತ್ಯೆ, ಮಾನ-ಪ್ರಾಣ ಹಾನಿ ಮಾಮೂಲಿಯಾಗಿದ್ದು, ಜಿಲ್ಲೆಯ ಮಹಿಳೆಯರು ಅದರಲ್ಲೂ ಬಡ ಮತ್ತು ದಲಿತ ಗ್ರಾಮೀಣ ಮಹಿಳೆಯರು ಆತಂಕದಲ್ಲಿ ದಿನ ದೂಡುವಂತಾಗಿದೆ. ಅಕ್ರಮ ಅಪರಾಧಗಳನ್ನು ನಿಯಂತ್ರಣಕ್ಕೆ ತರುವಲ್ಲಿ ಸತತವಾಗಿ ವಿಫಲವಾಗುತ್ತಿರುವ ಸಂಬಂಧಿಸಿದ ರಕ್ಷಣಾ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ, ಕೂಡಲೇ ಹ್ಯಾಟಿ ಗ್ರಾಮದ ಪ್ರಕರಣದ ಅಪರಾಧಿಗಳನ್ನು ಬಂಧಿಸುವುದರೊಂದಿಗೆ ಪ್ರಕರಣವನ್ನು ಕೂಡಲೆ ಸಿಒಡಿ ತನಿಖೆಗೊಪ್ಪಿಸಬೇಕೆಂದು ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ  ಸಂಘಟನೆಯ  ವಿದ್ಯಾ ನಾಲವಾಡ ,ಮಲ್ಲಿಕಾ ಪೂಜಾರ್, ಕೆ.ಷಮ್‌ಷಾದ್ ಬೇಗಂ ಒತ್ತಾಯಿಸಿದ್ದಾರೆ. 
ಪ್ರತಿಭಟನಾ ಹೋರಾಟವವನ್ನುದ್ಧೇಸಿಶಿ ಸಿಪಿಐ(ಎಂಎಲ್) ಜಿಲ್ಲಾ ಕಾರ್ಯದರ್ಶಿ ಕೆ.ಬಿ.ಗೋನಾಳ ಬೆಂಬಲಿಸಿ ಭಾಗವಹಿಸಿ ಮಾತನಾಡಿದರು. ಶಿವಲೀಲಾ ಹಿರೇಮಠ, ನೀಲಮ್ಮ ಮಡಿವಾಳರ್, ಹನುಮೇಶ ಪೂಜಾರ್, ಹನುಮೇಶ ಕವಿತಾಳ, ಈಶಪ್ಪ ಹೂಗಾರ್, ಆಸೀಫ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Advertisement

0 comments:

Post a Comment

 
Top