PLEASE LOGIN TO KANNADANET.COM FOR REGULAR NEWS-UPDATES


ಗುಜರಾತ್ ನರಮೇಧಕ್ಕೆ 10 ವರ್ಷ: ಮೋದಿಗೆ 25 ಪ್ರಶ್ನೆಗಳು; 

2002ರ ಭೀಕರ ಗುಜರಾತ್ ನರಮೇಧದಲ್ಲಿನ ತನ್ನ ಪಾತ್ರ ಅಥವಾ ಆರೋಪಗಳಿಗೆ ಸಂಬಂಧಿಸಿದ ಹಲವಾರು ಪ್ರಶ್ನೆಗಳಿಗೆ ಕಳೆದ ಹತ್ತು ವರ್ಷಗಳಿಂದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವೌನ ಹಾಗೂ ಚುನಾವಣಾ ಗೆಲುವುಗಳ ಮೂಲಕ ಉತ್ತರ ನೀಡುತ್ತಾ ಬಂದಿದ್ದಾರೆ. ಅವರು ಟಿವಿ ಸಂದರ್ಶನಗಳಿಂದ ಹೊರ ನಡೆದಿದ್ದಾರೆ, ಸಂದರ್ಶಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ, ನ್ಯಾಯಾಲಯದ ಚೌಕಟ್ಟನ್ನೂ ಉಲ್ಲಂಘಿಸಿದ್ದಾರೆ. 2010, ಮಾರ್ಚ್‌ನಲ್ಲಿ ಸಿಟ್ ಸದಸ್ಯರ ಮುಂದೆ ಒಂದು ಬಾರಿ ಮಾತ್ರ ಅವರು ವಿಚಾರಣೆಗೊಳಪಟ್ಟಿದ್ದಾರೆ ಮತ್ತು ಅದಕ್ಕೆ ಸಂಬಂಧಿಸಿದ ಅವರ ಪ್ರತಿಕ್ರಿಯೆ ಇದೀಗ ಸಾರ್ವಜನಿಕರ ಮುಂದೆ ಇದೆ. ಆದರೆ ಮೋದಿ ಇನ್ನೂ ಹಲವಾರು ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಇದೀಗ ಅವರು ಈ ಪ್ರಶ್ನೆಗಳಿಗೆ ಉತ್ತರಿಸಬಹುದು.
-ಕೃಪೆ: ಔಟ್ ಲುಕ್

ಪ್ರಶ್ನೆಗಳು: ಸಂದೀಪ್ ದೌಗಲ್

1. ಮೋದಿಯವರೆ, ಗೋಧ್ರೋತ್ತರ ಗಲಭೆಗೆ ಸಂಬಂಧಿಸಿ 2002, ಮಾರ್ಚ್ 1ರಂದು ಝೀ ಟಿವಿ ಸಂದರ್ಶನದಲ್ಲಿ, ‘‘ಕ್ರಿಯೆ ಮತ್ತು ಪ್ರತಿಕ್ರಿಯೆಯ ಸಂಕೋಲೆಯು ನಡೆಯುತ್ತಾ ಇದೆ. ಆದರೆ ನಾವು ಅದನ್ನು ಬಯಸುವುದಿಲ್ಲ’’ ಎಂದು ನೀವು ಹೇಳಿದ್ದೀರಿ. ಇಂತಹ ಹೇಳಿಕೆಗಳು 1984ರ ಸಂದರ್ಭ ರಾಜೀವ್ ಗಾಂಧಿಯವರ ‘ಭೂಮಿಯು ನಡುಗುತ್ತದೆ’ ಹೇಳಿಕೆಯನ್ನು ಪ್ರತಿಧ್ವನಿಸುವುದಿಲ್ಲವೇ?
2. ಕೆಲವು ದಿನಗಳ ನಂತರ ಔಟ್‌ಲುಕ್‌ಗೆ ನೀಡಿರುವ ಸಂದರ್ಶನದಲ್ಲಿ (ಮಾರ್ಚ್ 18, 2002) ನೀವು, ‘‘ಗುಜರಾತ್‌ನಲ್ಲಿ ಕೋಮುವಾದ ತೀವ್ರವಾಗಿತ್ತು ಎಂಬುದನ್ನು ನೀವು ನೆನಪಿಸಿಕೊಳ್ಳಬೇಕು, ಒಂದು ಸಣ್ಣ ಘಟನೆಯೂ ಹಿಂಸಾಚಾರಕ್ಕೆ ಕಾರಣವಾಗುವಂತಿತ್ತು ಮತ್ತು ಗೋಧ್ರಾ ಘಟನೆಯು ತುಂಬಾ ದೊಡ್ಡ ಘಟನೆ’’ ಎಂದು ಹೇಳಿದ್ದೀರಿ. ಗೋಧ್ರಾ ಸಂತ್ರಸ್ತರ ಮೃತದೇಹಗಳನ್ನ್ನು ಅಹ್ಮದಾಬಾದ್‌ಗೆ ಕೊಂಡೊಯ್ಯಲು ನಿರ್ಧರಿಸಿದ್ದಾಗ, ಹಿಂಸೆಯ ಕಿಡಿ ಭುಗಿಲೇಳುವುದು ಎಂದು ನಿಮಗೆ ಹೊಳೆದಿರಲಿಲ್ಲವೇ?
3. ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಅಧಿಕಾರಿಗಳ ಸಭೆ (2002, ಫೆ.27)ಯಲ್ಲಿ ನೀವು ಅವರಿಗೆ ನಿರ್ದೇಶನಗಳನ್ನು ನೀಡಿದ್ದೀರಿ ಎಂಬ ಆರೋಪಗಳನ್ನು ನಿರಾಕರಿಸಿದ್ದೀರಿ. ‘‘ಕೋಮು ಸಂಘರ್ಷಗಳಲ್ಲಿ ಪೊಲೀಸರು ಹಿಂದೂಗಳು ಮತ್ತು ಮುಸ್ಲಿಮರ ವಿರುದ್ಧ ಒಂದಕ್ಕೊಂದು ಆಧಾರದಲ್ಲಿ ಕ್ರಮ ಕೈಗೊಳ್ಳುತ್ತಾರೆ. ಅದು ಈಗ ನಡೆಯುವುದಿಲ್ಲ, ಹಿಂದೂಗಳಿಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಬಿಟ್ಟುಬಿಡಿ’’ ಎಂದು ನೀವು ತಿಳಿಸಿರುವುದಾಗಿ ಗುಪ್ತಚರ ಇಲಾಖೆಯ ಉಪ ಆಯುಕ್ತ ಸಂಜೀವ್ ಭಟ್ ಮತ್ತು ಮೃತ ಸಚಿವ ಹರೇನ್ ಪಾಂಡ್ಯರ ಹೇಳಿಕೆಗಳಲ್ಲಿ ಆರೋಪಿಸಲಾಗಿದೆ. ಯಾಕೆ ಈ ಆರೋಪ ನಿಮ್ಮ ಬೆನ್ನುಹತ್ತಿದೆ?
4. ಫೆಬ್ರವರಿ 27ರ ಸಭೆಯಲ್ಲಿ ಹಾಜರಿದ್ದವರ ಬಗ್ಗೆ ಮಾತ್ರ ನಿಮ್ಮಲ್ಲಿ ಕೇಳಿದಾಗ, ಭಟ್ ಒಬ್ಬರನ್ನೇ ಯಾಕೆ ನೀವು ಪ್ರತ್ಯೇಕಿಸಿದಿರಿ ಮತ್ತು ಅವರು ಉಪಸ್ಥಿತರಿರಲಿಲ್ಲ ಎಂದು ಹೇಳಿದಿರಿ?
5. ಆಗಿನ ಸಚಿವ ಹರೇನ್ ಪಾಂಡ್ಯ ಸ್ವತಂತ್ರ ನಾಗರಿಕರ ಟ್ರಿಬ್ಯೂನಲ್‌ನಲ್ಲಿ ಫೆ. 27ರ ಸಭೆಯ ಕುರಿತು ಸಾಕ್ಷ ನುಡಿದಿರುವ ಬಗ್ಗೆ ದೃಢೀಕರಿಸುವಂತೆ ನಿಮ್ಮ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ, ಗುಪ್ತಚರ ಇಲಾಖೆಯ ಆಗಿನ ಹೆಚ್ಚುವರಿ ಡಿಜಿ ಆರ್.ಬಿ. ಶ್ರೀಕುಮಾರ್‌ಗೆ ಸೂಚಿಸಿದ್ದುದು ನಿಜವೇ? ಪಾಂಡ್ಯರ ಮೊಬೈಲ್ ಸಂಖ್ಯೆ 9824030629ನ್ನು ಕದ್ದಾಲಿಸುವಂತೆ ಅವರು ಸೂಚಿಸಿರುವ ಆರೋಪಗಳು ನಿಜವೇ?
6. ಹರೇನ್ ಪಾಂಡ್ಯರ ಹತ್ಯೆ (2003, ಮಾರ್ಚ್ 26) ಕುರಿತಂತೆ ನಿಮ್ಮ ಆಡಳಿತದ ಮೇಲೆ ಇರುವ ಸಂಶಯಗಳ ಬಗ್ಗೆ, ನಿಮ್ಮ ಹೆಸರನ್ನು ಮುಕ್ತಗೊಳಿಸುವುದಕ್ಕೆ ಮತ್ತು ನಿಜವಾದ ಹಂತಕರು ಯಾರು ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಸಂಬಂಧಿಸಿ ಯಾವ ಕ್ರಮ ಕೈಗೊಳ್ಳಲಾಗಿದೆ?
7. 2002, ಫೆ. 28ರ ಗುಜರಾತ್ ಬಂದ್ ಮತ್ತು 2002, ಮಾರ್ಚ್ 1ರ ಭಾರತ್ ಬಂದ್‌ನಲ್ಲಿ ಬಿಜೆಪಿ ಕೈಜೋಡಿಸಿದ್ದ ಬಗ್ಗೆ ಸುದ್ದಿ ಪತ್ರಿಕೆಗಳ ವರದಿಯಿಂದ ತಿಳಿಯಿತು ಎಂದು ನೀವು ಸಿಟ್‌ಗೆ ತಿಳಿಸಿದ್ದೀರಿ. ಪಕ್ಷದ ವ್ಯವಹಾರಗಳ ಬಗ್ಗೆ ತುಂಬಾ ಸುಳಿವು ಹೊಂದಿರುವ ಒಬ್ಬರಿಗೆ ಈ ಬಗ್ಗೆ ತಿಳಿದಿಲ್ಲವೆಂದರೆ ಅದು ಅಸಂಬದ್ಧವೆನಿಸುವುದಿಲ್ಲವೇ?
8. ರಾಜ್ಯ ಪೊಲೀಸ್ ಕಂಟ್ರೋಲ್ ರೂಂ ಮತ್ತು ಅಹ್ಮದಾಬಾದ್ ನಗರ ಕಂಟ್ರೋಲ್ ರೂಂನಲ್ಲಿ (2002, ಫೆ. 28ರಂದು) ಬಿಜೆಪಿ ಸಚಿವರುಗಳಾದ ಅಶೋಕ್ ಭಟ್ ಮತ್ತು ಐ.ಕೆ. ಜಡೇಜಾ ಹಾಜರಿದ್ದರು ಎಂಬುದರ ಬಗ್ಗೆ ವೈಯಕ್ತಿಕ ಅರಿವು ಇರಲಿಲ್ಲ ಎಂದು ನೀವು ಸಿಟ್ ಮುಂದೆ ಪ್ರತಿಪಾದಿಸಿದ್ದೀರಿ. ಇದು ತಮ್ಮ ಪಾಲಿನ ಅಸಮರ್ಥತೆಯನ್ನು ಪ್ರದರ್ಶಿಸುವುದಿಲ್ಲವೇ?
 9. ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ಹತ್ಯೆಯಾದ ಕಾಂಗ್ರೆಸ್‌ನ ಮಾಜಿ ಸಂಸದ ಇಹ್ಸಾನ್ ಜಾಫ್ರಿ, ನಿಮಗೆ ದೂರವಾಣಿ ಕರೆ ಮಾಡಿ ತನ್ನ ಮನೆ ಬಾಗಿಲ ಮುಂದೆ ಗಲಭೆಕೋರರು ನೆರೆದಿರುವ ಬಗ್ಗೆ ಹಾಗೂ ತನಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದ ಕುರಿತು ಸಿಟ್ ಮುಂದೆ ನೀವು ನಿರಾಕರಿಸಿದ್ದೀರಿ. ನಿಮ್ಮೆಂದಿಗೆ ಅವರು ಮಾತನಾಡಿದ್ದರು ಎಂದು ಪ್ರತ್ಯಕ್ಷದರ್ಶಿಗಳೇ ಹೇಳುತ್ತಿದ್ದಾರೆ. ಇದೊಂದು ವೈಯಕ್ತಿಕ ದ್ವೇಷದ ಮತ್ತು ಕಡು ಹಗೆತನದ ಪ್ರಕರಣವೆಂದು ಯಾಕೆ ವಾದಿಸಲಾಗುತ್ತಿದೆ?
10. ಪೊಲೀಸರು ಮತ್ತು ರಾಜಕಾರಣಿಗಳ ಜೊತೆಗೆ ಗಲಭೆಕೋರರಿಗೆ ಸಂಪರ್ಕವಿದ್ದ ಕುರಿತು ತಿಳಿಸುವ ದೂರವಾಣಿ ಸಂಭಾಷಣೆಯ ದಾಖಲೆಗಳನ್ನು ನಾನಾವತಿ ಆಯೋಗಕ್ಕೆ ಒದಗಿಸಿರುವ ಪೊಲೀಸ್ ಅಧಿಕಾರಿ ರಾಹುಲ್ ಶರ್ಮಾ ವಿರುದ್ಧ ನಿಮ್ಮ ಸರಕಾರ ಗೌಪ್ಯ ದಾಖಲೆಗಳ ಕಾನೂನಿನ್ವಯ ಕ್ರಮ ಕೈಗೊಂಡಿದೆಯೇ?
11. ತಮ್ಮ ಸರಕಾರವನ್ನು ಇತ್ತೀಚೆಗೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿರುವ, ಸಾಮಾಜಿಕ ಕಾರ್ಯಕತೆ ತೀಸ್ತಾ ಸೆಟಲ್ವಾಡ್ ವಿರುದ್ಧ ಕ್ರಿಮಿನಲ್ ಪ್ರಕ್ರಿಯೆಯನ್ನು ಆರಂಭಿಸಿರುವ ಪ್ರಕರಣವು, ಅವರ ವಿರುದ್ಧದ ಪ್ರತೀಕಾರದಂತೆ ಕಾಣುವುದಿಲ್ಲವೇ?
12. ಸಂಜೀವ್ ಭಟ್ ವಿರುದ್ಧದ 21 ವರ್ಷಗಳ ಹಳೆಯ ಕಸ್ಟಡಿ ಸಾವಿನ ಪ್ರಕರಣವನ್ನು ಮತ್ತೆ ಕೆದಕಿರುವುದು ಮತ್ತು ಅವರ ವಿರುದ್ಧ ಅಮಾನತು ಆದೇಶ ಜಾರಿಗೊಳಿಸಿರುವುದೂ ಇದರಂತೆಯೇ ಅನಿಸುವುದಿಲ್ಲವೇ?
13. 2002ರ ಗಲಭೆಯ ಸಂದರ್ಭ ವಿಧೇಯರಾಗಿದ್ದ ಪೊಲೀಸ್ ಅಧಿಕಾರಿಗಳಿಗೆ ಭಡ್ತಿ ನೀಡಲಾಗಿದೆ ಮತ್ತು ತಮ್ಮ ಕರ್ತವ್ಯವನ್ನು ಅಚಲವಾಗಿ ನಿರ್ವಹಿಸಿರುವವರನ್ನು ಕಡೆಗಣಿಸಲಾಗಿದೆ ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅಂತಹ ಹಲವಾರು ಪ್ರಕರಣಗಳು ವ್ಯಾಪಕವಾಗಿ ದಾಖಲಾಗಿವೆ ಮತ್ತು ತಮ್ಮ ಗಮನಕ್ಕೂ ತರಲಾಗಿದೆ. ಈ ಬಗ್ಗೆ ತಾವು ಯಾವ ಕ್ರಮ ಕೈಗೊಂಡಿದ್ದೀರಿ?
14. ಹಿಂಸಾತ್ಮಕ ಗುಂಪುಗಳನ್ನು ಮುನ್ನಡೆಸುವಲ್ಲಿ ನಿಮ್ಮ ಸಚಿವರು ಭಾಗಿಯಾಗಿದ್ದರು ಎಂಬ ಆರೋಪವನ್ನು ನೀವು ಸಿಟ್ ಮುಂದೆ ನಿರಾಕರಿಸಿ ದ್ದೀರಿ. ಭರತ್ ಬರೋಟ್, ಮಾಯಾಬೆನ್ ಕೊಡ್ನಾನಿ, ನಿತಿನ್‌ಭಾಯಿ ಪಟೇಲ್ ಮತ್ತು ನಾರಾಯಣ ಲಲ್ಲು ಪಟೇಲ್‌ರತಂಹವರ ಭಾಗೀದಾರಿ ಕೆಗೆ ಸಂಬಂಧಿಸಿ ಅಧಿಕೃತವಾಗಿ ನಿಮ್ಮ ಗಮನಕ್ಕೆ ತಂದಾಗ ನೀವು ಏನು ಕ್ರಮ ಕೈಗೊಂಡಿದ್ದೀರಿ?
15. ಗಲಭೆಗೆ ಸಂಬಂಧಿಸಿದ ಮಾಧ್ಯಮಗಳಲ್ಲಿ ಪ್ರಸಾರವಾದ ತುಣುಕುಗಳ ಆಧಾರದಲ್ಲಿ ಕ್ರಮ ಕೈಗೊಳ್ಳದಿರುವಂತೆ ನಿಮ್ಮನ್ನು ತಡೆದವರ್ಯಾರು? ದುರಂತವನ್ನು ಗುಜರಾತ್ ಪೊಲೀಸರು ಯಾಕೆ ದಾಖಲಿಸಿಕೊಂಡಿಲ್ಲ?
16. ಹರೀಶ್ ಭಟ್, ಬಾಬು ಬಜರಂಗಿ ಮತ್ತು ರಾಜೇಂದ್ರ ವ್ಯಾಸ್‌ರಂತಹವರು ತಾವು ನಡೆಸಿರುವ ದೌರ್ಜನ್ಯಕ್ಕೆ ಸಂಬಂಧಿಸಿ ಮತ್ತು ತಮ್ಮ ಹಾಗೂ ತಮ್ಮ ಆಡಳಿತದ ಹೆಸರನ್ನೂ ಪ್ರಸ್ತಾಸಿರುವ ತೆಹಲ್ಕಾದ ಆಪರೇಶನ್ ಕಳಂಕ್ ಬಗ್ಗೆ ನೀವು ಏನಾದರೂ ಕ್ರಮಗಳನ್ನು ತೆಗೆದುಕೊಂಡಿದ್ದೀರೇ? ತೆಗೆದುಕೊಂಡಿದ್ದರೆ ಯಾವುದು?
17. 2002, ಫೆ. 27ರಿಂದ ಮಾ. 4ರರ ನಡುವೆ ಗಲಭೆಗಳಲ್ಲಿ ಭಾಗಿಯಾಗಿದ್ದ ಗಲಭೆಕೋರರ ಮೇಲೆ ಪ್ರಾಮಾಣಿಕ ಕ್ರಮ ಕೈಗೊಳ್ಳಲು ವಿಫಲರಾಗಿದ್ದ ಜಿಲ್ಲಾಧಿಕಾರಿಗಳು ಹಾಗೂ ಇತರ ಹಿರಿಯ ಅಧಿಕಾರಿಗಳ ವಿರುದ್ಧ ಯಾಕೆ ಯಾವುದೇ ಕ್ರಮ ಕೈಗೊಂಡಿಲ್ಲ ಅಥವಾ ತನಿಖೆಗೆ ಆದೇಶಿಸಿಲ್ಲ?
18. ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾಗಿ ಬಿಜೆಪಿ/ವಿಎಚ್‌ಪಿ ಪರ ನ್ಯಾಯವಾದಿಗಳನ್ನು ನೇಮಕಗೊಳಿಸಲು ಶಿಫಾರಸು ಮಾಡಿರುವ ಆರೋಪಗಳನ್ನು ನೀವು ತಳ್ಳಿ ಹಾಕಿದ್ದೀರಿ. ಹಾಗಿದ್ದಲ್ಲಿ, ಅಂತಹ ಪೂರ್ವಗ್ರಹ ಪೀಡಿತ ಆಯ್ಕೆಯನ್ನು ನಡೆಸಿರುವ ಜಿಲ್ಲಾಧಿಕಾರಿಗಳ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಅಥವಾ ತನಿಖೆಗೆ ಆದೇಶಿಸಿಲ್ಲ?
19. ಧಾರ್ಮಿಕತೆಯ ಆಧಾರದಲ್ಲಿ ತಾರತಮ್ಯ ಎಸಗುವುದಿಲ್ಲ ಎಂದು ನೀವು ಯಾವಾಗಲೂ ಬಡಾಯಿ ಕೊಚ್ಚುತ್ತೀರಿ. ಆದರೆ 2002, ಸೆಪ್ಟಂಬರ್ 9ರಂದು ನಿಮ್ಮ ಗೌರವ ಯಾತ್ರೆಯ ನಿಮ್ಮ ಭಾಷಣದಲ್ಲಿ ನೀವು , ಮುಸ್ಲಿಂ ಪರಿಹಾರ ಶಿಬಿರಗಳನ್ನು ‘ಮಕ್ಕಳನ್ನು ಉತ್ಪಾದಿಸುವ ಕೇಂದ್ರ’ಗಳೆಂದು ಎಂದು ಹೇಳಿದ್ದೀರಿ. ಈ ಬಗ್ಗೆ ನೀವು ‘ಹಂ ಪಾಂಚ್, ಹಮಾರೇ ಪಚ್ಚೀಸ್ (ನಾವು ಐವರು, ನಮ್ಮದು ಇಪ್ಪತ್ತೈದು)’ ಎಂದೂ ವ್ಯಂಗ್ಯವಾಡಿದ್ದೀರಿ. ಇಂತಹ ಹೇಳಿಕೆಗಳ ಬಗ್ಗೆ ನಿಮಗೆ ಹೆಮ್ಮೆಯಿದೆಯೇ?
20. ಗಲಭೆಗಳಲ್ಲಿ ಅಂಗಡಿಗಳು ಸುಟ್ಟು ಹೋಗಿರುವವರಿಗೆ ಪರಿಹಾರ ನೀಡದಿರುವುದಕ್ಕೆ ಕೊನೆಗೂ ನಿಮ್ಮ ಸರಕಾರಕ್ಕೆ ಗುಜರಾತ್ ಹೈಕೋರ್ಟ್ ಇತ್ತೀಚೆಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸುವ ಮೂಲಕ ತಮ್ಮನ್ನು ತರಾಟೆಗೆ ತೆಗೆದುಕೊಂಡಿದೆ ಎನಿಸುವುದಿಲ್ಲವೇ? ಕಳೆದ ಹತ್ತು ವರ್ಷಗಳಲ್ಲಿ ನಿಮ್ಮ ‘ಸದ್ಭಾವನಾ’ ಎಲ್ಲಿ ಹೋಗಿತ್ತು?
21. ನಾಶಕ್ಕೊಳಪಟ್ಟಿರುವ ನೂರಾರು ಧಾರ್ಮಿಕ ಕೇಂದ್ರಗಳ ಪುನರ್ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡುವಂತೆ ಕೂಡ ನಿಮ್ಮ ಆಡಳಿತದ ವಿವಿಧ ವಿಭಾಗಕ್ಕೆ ಗುಜರಾತ್ ಹೈಕೋರ್ಟ್ ಆದೇಶಿಸಬೇಕಾಯಿತು. ಇಂತಹ ಸ್ಥಿತಿ ಯಾಕೆ ನಿರ್ಮಾಣವಾಯಿತು?
22. 2002ರ ಗಲಭೆಯು ‘‘ರಾಜ್ಯದ ನಿರ್ಲಕ್ಷ’’ ಎಂಬ ಗುಜರಾತ್ ಹೈಕೋರ್ಟ್‌ನ ಟೀಕೆಗೆ ನಿಮ್ಮ ಪ್ರತಿಕ್ರಿಯೆ ಏನು?

23. ಗಲಭೆಯ ಸಂದರ್ಭ ತಪ್ಪು ಸುದ್ದಿಗಳನ್ನು ಪ್ರಕಟಿಸುತ್ತಾ, ಭೀಕರ ಮತ್ತು ಕೋಮು ಗಲಭೆಗೆ ಪ್ರಚೋದಿಸುವ ಅಪ ಪ್ರಚಾರಗಳನ್ನು ನಡೆಸಿದ ಸಂದೇಶ್ ಮತ್ತು ಗುಜರಾತ್ ಸಮಾಚಾರ್ ಪತ್ರಗಳಿಗೆ ಕಡಿವಾಣ ಹಾಕುವುದರ ಬದಲು, ಹಿಂಸಾಚಾರದಲ್ಲಿ ನಿಮ್ಮ ಆಡಳಿತದ ಭಾಗಿತ್ವವನ್ನು ಬಹಿರಂಗಗೊಳಿಸಿರುವ ಮಾಧ್ಯಮಗಳನ್ನು ನಿಷೇಧಿಸುವಂತೆ ಆಗ್ರಹಿಸುತ್ತಾ, ಮೇಲೆ ತಿಳಿಸಿರುವ ಪತ್ರಿಕೆಗಳನ್ನು ಹೊಗಳಿದಂತಹ ಪತ್ರವನ್ನು ಹೇಗೆ ಬರೆದಿರಿ?
24. 2002ರ ಹತ್ಯಾಕಾಂಡದ ಬಗ್ಗೆ ಖಂಡಿಸುವ ನೀವು, ಅದೇ ಸಂದರ್ಭ ಈ ಗಲಭೆಗೆ ಸಂಬಂಧಿಸಿ ವಿಷಾದ ವ್ಯಕ್ತಪಡಿಸಲು ನಿರಾಕರಿಸುತ್ತೀರಿ ಎಂದು ಹೇಳಲಾಗುತ್ತದೆ. ಇದು ನಿಮ್ಮೆಳಗೆ ಆಳವಾಗಿ ಬೇರೂರಿರುವ ಮುಸ್ಲಿಂ ವಿರೋಧಿ ಪೂರ್ವಗ್ರಹ ವೆನಿಸುತ್ತದೆ. ಇದನ್ನು ನೀವು ಒಪ್ಪುತ್ತೀರಾ?

25. ನಿಮ್ಮಲ್ಲಿ ಯಾವುದನ್ನೂ ಮುಚ್ಚಿಡಲು ಇಲ್ಲವಾದಲ್ಲಿ, ನಿಮ್ಮ ಬಗ್ಗೆ ಅಂತಹ ಆರೋಪಗಳನ್ನು ಮಾಡಿರುವವರೊಂದಿಗೆ ಮಾತನಾಡಲು ನೀವು ಯಾಕೆ ನಿರಾಕರಿಸುತ್ತಿದ್ದೀರಿ?   ಕೃಪೆ: ವಾರ್ತಾಭಾರತಿ

Advertisement

0 comments:

Post a Comment

 
Top