PLEASE LOGIN TO KANNADANET.COM FOR REGULAR NEWS-UPDATES


ಬಳ್ಳಾರಿ, ಫೆ.೯:ಪತ್ರಕರ್ತ ಬಾಷ ಗೂಳ್ಯಂ (ಎಂ ಮಹಮ್ಮದ್ ಬಾಷ ಗೂಳ್ಯಂ) ಅವರಿಗೆ ಪಿಎಚ್.ಡಿ ಪದವಿ ಲಭಿಸಿದೆ.
ಗೂಳ್ಯಂ ಅವರು ಬೆಂಗಳೂರು ವಿಶ್ವ ವಿದ್ಯಾಲಯಕ್ಕೆ ಮಂಡಿಸಿದ ಎರಡನೆಯ ನಾಗವರ್ಮನ ಶಾಸ್ತ್ರ ಸಾಹಿತ್ಯ-ಒಂದು ಅಧ್ಯಯನ ಮಹಾ ಪ್ರಬಂಧವನ್ನು ಅಂಗೀಕರಿಸಿ ವಿವಿ ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ.
ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕಿ ಡಾ. ಶಾಂತ ಲಕ್ಷ್ಮಿ ಅವರ ಮಾರ್ಗದರ್ಶನದಲ್ಲಿ ಬಾಷ ಗೂಳ್ಯಂ ಅವರು ಈ ಮಹಾ ಪ್ರಬಂಧವನ್ನು ಮಂಡಿಸಿದ್ದರು.
ಪರಿಚಯ:ಪ್ರಸ್ತುತ ವಿಜಯ ಕರ್ನಾಟಕ ಬೆಂಗಳೂರು ಕಚೇರಿಯಲ್ಲಿ ಸಿನೀಯರ್ ಕಾಪಿ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬಾಷ ಅವರು ಬಳ್ಳಾರಿ ನೆಲದ ಪ್ರತಿಭೆ.
ಗಡಿ ಪ್ರದೇಶವಾದ ಗೂಳ್ಯಂ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಡ ಶಿಕ್ಷಣವನ್ನು ಕನ್ನಡದಲ್ಲಿಯೇ ಪಡೆದು, ಬಳಿಕ ನಗರದ ಮುನಿಸಿಪಲ್ ಜ್ಯೂ. ಸರಕಾರಿ ಕಾಲೇಜ್ ಮತ್ತು ವೀರಶೈವ ಕಾಲೇಜಿನಲ್ಲಿ ಪಿಯುಸಿ ಮತ್ತು ಪದವಿ(ಐಚ್ಚಿಕ ಕನ್ನಡ)ಯನ್ನು ಕಲಿತರು.
ವಿದ್ಯಾರ್ಥಿ ದೆಸೆಯಲ್ಲಿಯೇ ಸಾಹಿತ್ಯದ ಕಡೆ ಒಲವುಹೊಂದಿದ್ದ ಬಾಷ ವರು ಚೆನ್ನೈನಲ್ಲಿ ಕನ್ನಡ ಎಂ.ಎ ಓದುತ್ತಿರುವ ಸಂದರ್ಭದಲ್ಲಿ ಮಕ್ಕಳ ಪ್ರಸಿದ್ಧ ಚಂದಮಾಮ ಕನ್ನಡ ಮಾಸ ಪತ್ರಿಕೆಯ ಸಂಪಾದಕರಾಗಿ ಗಮನಸೆಳೆದವರು.
ಉತ್ತಮ ಚರ್ಚಾ ಪಟು:ಕಾಲೇಜು ದಿನಗಳಲ್ಲಿ ಕಾವ್ಯ ರಚನೆಯಲ್ಲಿ ಭರವಸೆ ಮೂಡಿಸಿದ್ದ ಬಾಷ, ಉತ್ತಮ ಭಾಷಣಕಾರರಾಗಿಯೂ ಹೆಸರು ಮಾಡಿದ್ದರು. ಪದವಿ ವಿದ್ಯಾರ್ಥಿಗಳಿಗೆ ಗುಲ್ಬರ್ಗಾ ವಿವಿ ಏರ್ಪಡಿಸಿದ್ದ ಅಂತರ ವಿವಿ ಚರ್ಚಾ ಸ್ಪರ್ಧೆಯಲ್ಲಿ ನಾಲ್ಕುಬಾರಿ ಬಹುಮಾನ ಪಡೆದ ಹೆಗ್ಗಳಿಕೆ ಇವರದು.
ಚಿತ್ರ ಸಾಹಿತಿ:ವೃತ್ತಿಯಿಂದ ಪತ್ರಕರ್ತರಾಗಿದ್ದು ಪ್ರಸ್ತುತ ಚಿತ್ರಸಾಹಿತಿಯಾಗಿಯೂ ಹೆಸರು ಮಾಡಿರುವ ಗೂಳ್ಯಂ, ಸೈನಿಕ, ಗ್ರಾಮ ದೇವತೆ, ಗೀಯಗೀಯ ಚಿತ್ರಗಳಿಗೆ ಹಾಡು ಬರೆದಿದ್ದಾರೆ. ಚಂದನ, ಈ ಟಿವಿ, ಜೀ ಟಿವಿ ಮತ್ತಿತರ ಚಾನೆಲ್‌ಗಳಲ್ಲಿ ಪ್ರಸಾರವಾಗಿರುವ ಸಾಕ್ಷಿ, ಕಲ್ಲಿನ ವೀಣೆ, ಮಡಿಲು, ಸಾಧನಾ, ನಾನಿನ್ನ ಬಿಡಲಾರೆ ಸೇರಿದಂತೆ ಹಲವು ಧಾರವಾಹಿಗಳ ಶೀರ್ಷಿಕೆ ಗೀತೆ ರಚನೆ ಮಾಡಿದ್ದಾರೆ.
ನಾಲ್ಕು ಬಾರಿ ರಾಜ್ಯಮಟ್ಟದ ಮಟ್ಟದ ಕಾವ್ಯ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಹೆಗ್ಗಳಿಕೆ ಬಾಷ ಗೂಳ್ಯಂ ಅವರದು.
ಅಭಿನಂದನೆ: ಪಿಎಚ್. ಡಿ ಪದವಿ ಪಡೆದಿರುವ ಅಪ್ಪಟ ಬಳ್ಳಾರಿ ಪ್ರತಿಭೆ ಬಾಷ ಗೂಳ್ಯಂ ಅವರಿಗೆ ಗುಲ್ಬರ್ಗಾ ವಿಶ್ವ ವಿದ್ಯಾಲಯ ಮಾಜಿ ಸೆನೆಟ್ ಸದಸ್ಯ, ಪತ್ರಕರ್ತ ಸಿ. ಮಂಜುನಾಥ್, ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಗೌರವಾಧ್ಯಕ್ಷ ಡಾ. ವೆಂಕಟಯ್ಯ ಅಪ್ಪಗೆರೆ, ಡಾ. ಸುಭಾಷ್‌ಭರಣಿ ಸಾಂಸ್ಕೃತಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ಬಿ. ಸುರೇಶ್ ಕುಮಾರ್, ನಿರ್ದೇಶಕ ಡಾ. ಕೆ. ಬಸಪ್ಪ, ಹಂದ್ಯಾಳ್ ಶ್ರೀ ಮಹಾದೇವ ತಾತಾ ಕಲಾಸಂಘದ ಸಂಸ್ಥಾಪಕ ಅಧ್ಯಕ್ಷ, ಪತ್ರಿಕಾ ಛಾಯಾಗ್ರಾಹಕ ಪುರುಷೋತ್ತಮ ಹಂದ್ಯಾಳ್ ಮತ್ತಿತರರು ಅವರು ಅಭಿನಂದಿಸಿದ್ದಾರೆ.

Advertisement

0 comments:

Post a Comment

 
Top