PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಏ. 06-  ಕೃಷಿ ಚಟುವಟಿಕೆಗಳಲ್ಲಿ ರೈತರು ಉತ್ತಮ ಲಾಭವನ್ನು ಪಡೆದು, ಆರ್ಥಿಕ ಸಬಲತೆ ಸಾಧಿಸುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ.  ಜೇನು ಕೃಷಿ ಒಂದು ಉತ್ತಮ ಲಾಭದಾಯಕ ಉಪಕಸುಬಾಗಿದ್ದು, ರೈತರು ಜೇನು ಕೃಷಿ ಕೈಗೊಳ್ಳುವುದು ಉತ್ತಮ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಜಿಲ್ಲಾಧಿಕಾರಿಗಳ ನಿವಾಸದ ಆವರಣದಲ್ಲಿ ರೈತ ಅನುವುಗಾರರೊಂದಿಗೆ ಜೇನು ಕೃಷಿ ಕುರಿತು ಇತ್ತೀಚೆಗೆ ಪ್ರಾತ್ಯಕ್ಷಿಕೆ ವೀಕ್ಷಿಸಿದ ಅವರು, ಸಮಗ್ರ ಕೃಷಿ ಇಂದಿನ ಅಗತ್ಯವಾಗಿದೆ. ಒಂದೆರಡು ಬೆಳೆಗಳನ್ನು ಬೆಳೆದಾಗ ಹವಾಮಾನದ ವೈಪರೀತ್ಯದಿಂದಾಗಿ ಒಂದೇ ಬೆಳೆ ಇದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಆದರೆ ಕೃಷಿ ಜೊತೆಗೆ ತೋಟಗಾರಿಕೆ, ಅರಣ್ಯ ಬೆಳೆಗಳು, ಹೈನುಗಾರಿಕೆ, ಪಶುಸಾಂಗೋಪನೆ ಲಾಭದಾಯಕವಾಗಿದೆ. ಇದರ ಜೊತೆಗೆ ಉಪಕಸುಬುಗಳಾದ ರೇಷ್ಮೆ ಸಾಕಾಣಿಕೆ ಯಂತಹ ಕಸುಬುಗಳು ಕೃಷಿಯಲ್ಲಿ ನಷ್ಟ ತಡೆಗಟ್ಟಿ ಸ್ಥಿರತೆ ಕಾಪಾಡುವಲ್ಲಿ ಮತ್ತು ಸ್ವಾವಲಂಬನೆಯತ್ತ ಹೆಜ್ಜೆ ಇಡುವಲ್ಲಿ ಸಹಕಾರಿಯಾಗಿವೆ. ಅಂತಹ ಉಪಕಸುಬುಗಳಲ್ಲಿ ಸರಳ ಮತ್ತು ಹೆಚ್ಚಿನ ಲಾಭ ಕೊಡುವ ಮತ್ತು ಕಡಿಮೆ ಸಮಯ ಬಯಸುವ ಕಸುಬು ಎಂದರೆ ಜೇನುಸಾಕಣೆ ಯಾಗಿದೆ. ದಿನದ ತುಸು ಸಮಯ ಮಾತ್ರ ಈ ಉಪಕಸುಬಿಗೆ ಸಾಕು, ಲಾಭ ಮಾತ್ರ ಅಧಿಕ. ರೈತ ಮಹಿಳೆಯರಿಗೆ ಇದು ಅತ್ಯಂತ ಸೂಕ್ತ ಉದ್ಯಮ.  ಜಿಲ್ಲೆಯಲ್ಲಿನ ರೈತರಿಗೆ ಹಾಗೂ ರೈತ ಮಹಿಳೆಯರಿಗೆ ಜೇನು ಕೃಷಿ ಅತ್ಯಂತ ಉಪಯುಕ್ತ ಹಾಗೂ ಸೂಕ್ತ ಕೃಷಿ ಚಟುವಟಿಕೆಯಾಗಿದ್ದು, ರೈತರು ಇದನ್ನು ಅಳವಡಿಸಿಕೊಳ್ಳುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಮನವಿ ಮಾಡಿಕೊಂಡಿದ್ದಾರೆ.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರೈತ ಅನುವುಗಾರ ನಿಂಗಪ್ಪ ಕುಂಬಾರ ಅವರು,  ಒಂದು ಜೇನು ಪೆಟ್ಟಿಗೆಯಿಂದ ವರ್ಷಕ್ಕೆ ಹಲವು  ಬಾರಿ ಜೇನುತುಪ್ಪ ಪಡೆಯಬಹುದು. ನಿರಂತರ ಬೆಳೆ ಇದ್ದಲ್ಲಿ, ಪ್ರತೀ ತಿಂಗಳೂ ತುಪ್ಪ ಪಡೆಯಲು ಸಾಧ್ಯ. ಅಂದರೆ ೮-೧೦ ಕಿ.ಗ್ರಾಂ. ಅಂದರೆ ರೂ.೩೦೦೦ ದಿಂದ ೬೦೦೦ ಆದಾಯ ಪಡೆಯಬಹುದಾಗಿದೆ. ಚೆನ್ನಾಗಿ ಬೆಳೆ ಇದ್ದು, ನಿರ್ವಹಣೆ ಮಾಡಿದಲ್ಲಿ  ಇನ್ನೂ ಅಧಿಕ ಆದಾಯ ನಿರೀಕ್ಷಿಸಬಹುದು.ಅಲ್ಲದೇ ಪರೋಕ್ಷವಾಗಿ ಬೆಳೆಗಳಲ್ಲಿ ಪರಾಗಸ್ಪರ್ಷ ಹೆಚ್ಚಾಗಿ ಬೆಳೆಯ ಇಳುವರಿಯೂ ಅಧಿಕವಾಗುತ್ತದೆ. ೧ ಎಕರೆ ಜಾಗವಿದ್ದಲ್ಲಿ ೪ರಿಂದ ೮ ಜೇನುಪೆಟ್ಟಿಗೆಗಳನ್ನು ನಿರ್ವಹಣೆ ಮಾಡಬಹುದಾಗಿದೆ ಎಂದರು.ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ್ ಕೋಟಿಮನಿ ಅವರು ತೋಟಗಾರಿಕೆ ಇಲಾಖೆಯಲ್ಲಿ " ಮಧುವನ ಅಭಿವೃಧ್ಧಿ ಯೋಜನೆ "ಅಡಿ ಒಬ್ಬ ಫಲಾನುಭವಿ ರೈತನಿಗೆ ೨ ಜೇನು ಪಟ್ಟಿಗೆ ಪಡೆಯಲು ಶೇ. ೫೦ ರ ಸಹಾಯಧನ ಲಭ್ಯವಿದೆ.

Advertisement

0 comments:

Post a Comment

 
Top