PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಜ.೨೩ (ಕ ವಾ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕ್ರೀಡೆ, ಸಾಂಸ್ಕೃತಿಕ ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಯುವ ಜನರಿಗೆ ಹಾಗೂ ನೊಂದಾಯಿತ ಯುವಕ/ಯುವತಿ ಸಂಘಗಳಿಗೆ ಜಿಲ್ಲಾ ಯುವ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸಲಿಚ್ಛಿಸುವ ಯುವಕ ಯುವತಿಯರು ೧೫ ರಿಂದ ೩೫ ವರ್ಷದೊಳಗಿನ ವಯೋಮಿತಿಯನ್ನು ಹೊಂದಿರಬೇಕು. ಸಂಘಗಳು ಇಲಾಖೆಯಲ್ಲಿ ನೊಂದಾವಣಿಯಾಗಿರಬೇಕು ಮತ್ತು ಸಂಘದ ಸದಸ್ಯರಾಗಿರಬೇಕು.  ಪ್ರಸಕ್ತ ಸಾಲಿನಲ್ಲಿ ಯುವಜನ ಸೇವೆ, ಕ್ರೀಡೆ ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸಿದ್ದನ್ನು ಪ್ರಶಸ್ತಿಗಾಗಿ ಪರಿಗಣಿಸಲಾಗುವುದು. ಯಾವುದೇ ಒಂದು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ. ತಮ್ಮ ಹಾಗೂ ಸಂಘದ ಬಗ್ಗೆ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗದಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕೊಪ್ಪಳ ಇವರಿಂದ ಪ್ರಮಾಣ ಪತ್ರ ಪಡೆದು ಅರ್ಜಿಯೊಂದಿಗೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಪರಿಸರ ಸಂರಕ್ಷಣೆ, ಅರಣ್ಯೀಕರಣ, ಗ್ರಾಮ ನೈರ್ಮಲೀಕರಣ, ಕೊಳಚೆ ನಿರ್ಮೂಲನೆ, ಸಾರ್ವಜನಿಕ ಸ್ವತ್ತುಗಳ ರಕ್ಷಣೆ, ಪ್ರತಿಭಾನ್ವಿತ ಕ್ರೀಡಾಪಟುಗಳ ಶೋಧನೆ, ಆರೋಗ್ಯ ಕಾರ್ಯಕ್ರಮಗಳು, ವಯಸ್ಕರ ಶಿಕ್ಷಣ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕಾರ್ಯ ನಿರ್ವಹಿಸಿದ ಬಗ್ಗೆ ದಾಖಲೆಗಳನ್ನು ಪ್ರಸ್ತಾವನೆಯೊಂದಿಗೆ ಸಲ್ಲಿಸಬೇಕು.
     ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಕಛೇರಿಯನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: ೦೮೫೩೯-೨೦೧೪೦೦ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ||ಶಾರದಾ ನಿಂಬರಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ. ೨೪ ರಂದು ಈಶಾನ್ಯದ ಐಸಿರಿ ಸರಣಿಯ ೧೯ ನೇ ಸಂಚಿಕೆ ಪ್ರಸಾರ.
ಕೊಪ್ಪಳ ಜ. ೨೩ (ಕ ವಾ) ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ, ಸಂಸ್ಕೃತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು ಮುಂತಾದ ಸಂಗತಿಗಳನ್ನು ಪರಿಚಯಿಸುವ ಈಶಾನ್ಯದ ಐಸಿರಿ ಸರಣಿಯ ೧೯ ನೇ ಸಂಚಿಕೆ ಜ. ೨೪ ರಂದು ಬೆಳಿಗ್ಗೆ ೧೦ ಗಂಟೆಗೆ ಹೊಸಪೇಟೆ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ.
        ಹೈ.ಕ.ಪ್ರದೇಶ ಅಭಿವೃದ್ಧಿ ಮಂಡಳಿ ಈ ಸಂಪೂರ್ಣ ಸರಣಿಯನ್ನು ಪ್ರಾಯೋಜಿಸಿದ್ದು, ೧೯ನೇ ಸಂಚಿಕೆಯಲ್ಲಿ ಮೂಡಿ ಬರಲಿರುವ ಕಾರ್ಯಕ್ರಮದ ವಿವರಗಳು ಹೀಗಿವೆ.   ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರಾಗಿರುವ ಎನ್.ಬಿ. ಪಾಟೀಲ ಅವರಿಂದ ವ್ಯಕ್ತಿತ್ವ ನಿರ್ಮಾಣದಲ್ಲಿ  ಸ್ವ ಅರಿವು ಮಾಡಿಸಿಕೊಳ್ಳುವ ಬಗೆ ಕುರಿತು ಪಾಠ.  ನಿವೃತ್ತ ನ್ಯಾಯ ಮೂರ್ತಿ ಎಂ.ಬಿ ಬಿರಾದರ ಅವರಿಂದ 'ಕಾನೂನು ಅರಿವು ಸೇವಾ ಸೌಲಭ್ಯ' ಕುರಿತು ಮಾಹಿತಿ.  ಕಲಬುರಗಿಯ ಯುವ ವಿಕಲ ಚೇತನ ಪ್ರತಿಭೆ ರಶ್ಮಿ ಸುಂದರೇಶ ಔರಸಂಗ ಅವರ ಪ್ರತಿಭೆಯ ಅನಾವರಣ. ಆಳಂದ ತಾಲುಕಾ ನರೋಣಾ ಗ್ರಾಮದ ಈರವ್ವ ಆಯಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯಿಯರ ಸ್ವಾವಲಂಬನೆಯ ಹಾದಿ.  ಕಲಬುರಗಿಯ ಕಲಾವಿದೆ ಲಕ್ಷ್ಮೀ ಶಂಕರ ಜೋಶಿಯವರಿಂದ ಪುರಂದರ ದಾಸರ ಕೃತಿ. ಊರು-ಟೂರಿನಲ್ಲಿ ಯಾದಗಿರಿಯ  ಪ್ರೇಕ್ಷಣಿಯ ಸ್ಥಳಗಳಿಗೆ ಒಂದು ಸುತ್ತು.  ಇವುಗಳ ಜೊತೆಗೆ. ಕಳೆದ ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್‍ಯಕ್ರಮಗಳು, ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ 'ವಾರದ ವರದಿ', ಸಾಮಾಜಿಕ ವಿಷಯಗಳ ಕುರಿತು ಜಿಂಗಲ್, ನುಡಿಮುತ್ತು , ನಗೆಹನಿ ಮೂಡಿ ಬರಲಿವೆ.
      ಸರಣಿಯ ನಿರೂಪಣಾ ಸಾಹಿತ್ಯ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಸೋಮಶೇಖರ ಎಸ್. ರುಳಿಯವರು ವಹಿಸಿಕೊಂಡಿದ್ದಾರೆ ಎಂದು ಕಲಬುರಗಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಅಂಜನಾ ಯಾತನೂರ ತಿಳಿಸಿದ್ದಾರೆ.

Advertisement

0 comments:

Post a Comment

 
Top