PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಡಿ. ೦೪ (ಕ ವಾ) ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಆಕಾಶವಾಣಿ ಹೊಸಪೇಟೆ ಕೇಂದ್ರವು ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿದೆ. ಈ ಬಾರಿ ಡಾ. ಬಿ.ಆರ್. ಅಂಬೇಡ್ಕರ್ ಜೀವನ, ಸಾಧನೆ, ಸಂವಿಧಾನ ಹಾಗೂ ಸಂವಿಧಾನ ರಚನಾ ಸಭೆಗಳು ಎಂಬ ವಿಷಯ ಕುರಿತು ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ.
     ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ೧೬ ರಿಂದ ೨೧ ವರ್ಷದೊಳಗಿನ ಕಾಲೇಜು ವಿಧ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆಸಕ್ತ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಾಚಾರ್ಯರ ಮುಖಾಂತರ ಡಿಸೆಂಬರ್ ೧೨ ರೊಳಗಾಗಿ, ಹೆಸರು ನೋಂದಾಯಿಸಿಕೊಳ್ಳಬೇಕು.  ಡಿಸೆಂಬರ್ ೧೫ ಮಂಗಳವಾರ ಬೆಳಿಗ್ಗೆ ೧೦ ಗಂಟೆಗೆ ಹೊಸಪೇಟೆ ಆಕಾಶವಾಣಿ ಎಫ್‌ಎಂ ಕೇಂದ್ರದಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ.  ವಿಜೇತ ತಂಡವು ಧಾರವಾಡದಲ್ಲಿ ನಡೆಯುವ ರಾಜ್ಯಮಟ್ಟದ ಆಕಾಶವಾಣಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತದೆ.
     ಹೆಚ್ಚಿನ ಮಾಹಿತಿಗಾಗಿ ಅರುಣನಾಯಕ್, ಕಾರ್ಯಕ್ರಮ ನಿರ್ವಾಹಕರು (ಮೊ.೯೪೪೮೨೨೪೩೧೯) ಮಂಜುನಾಥ ಡೊಳ್ಳಿನ, ಪ್ರಸಾರ ನಿರ್ವಾಹಕರು (ಮೊ.೯೪೮೦೬೫೪೩೬೫) ಅವರನ್ನು  ಸಂಪರ್ಕಿಸಬಹುದು ಎಂದು ಕಾರ್ಯಕ್ರಮ ಮುಖ್ಯಸ್ಥೆ ಡಾ|| ಅನುರಾಧ ಕಟ್ಟಿ ತಿಳಿಸಿದ್ದಾರೆ. 
ಡಿ. ೦೬ ರಂದು ಈಶಾನ್ಯದ ಐಸಿರಿ ಸರಣಿಯ ೧೨ ನೇ ಸಂಚಿಕೆ ಪ್ರಸಾರ.
ಕೊಪ್ಪಳ ಡಿ. ೦೪ (ಕ ವಾ) ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ, ಸಂಸ್ಕೃತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು ಮುಂತಾದ ಸಂಗತಿಗಳನ್ನು ಪರಿಚಯಿಸುವ ಈಶಾನ್ಯದ ಐಸಿರಿ ಸರಣಿಯ ೧೨ ನೇ ಸಂಚಿಕೆ ಡಿ. ೦೬ ರಂದು ಬೆಳಿಗ್ಗೆ ೧೦ ಗಂಟೆಗೆ ಹೊಸಪೇಟೆ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ.
       ೧೨ನೇ ಸಂಚಿಕೆಯಲ್ಲಿ ಮೂಡಿ ಬರಲಿರುವ ಕಾರ್ಯಕ್ರಮದ ವಿವರಗಳು ಹೀಗಿವೆ.  ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃಧ್ಧಿ ಮಂಡಳಿಯ ಸ್ಥಾಪನೆಯ ಇತಿಹಾಸ, ಸಾಧನೆಗಳ ಕುರಿತು ಪರಿಚಯ.  ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಯಗಳ ಬಲವರ್ಧನೆ ಕುರಿತು ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರಾಗಿರುವ ಎನ್.ಬಿ. ಪಾಟೀಲ ಅವರಿಂದ ಮಾಹಿತಿ.  ಮಹಿಳೆಯರ ಸಬಲೀಕರಣಕ್ಕಾಗಿ ಇರುವ ಕಾನೂನುಗಳ ಕುರಿತು ನಿವೃತ್ತ ನ್ಯಾಯಮೂರ್ತಿಗಳಾಗಿರುವ ಎಮ್.ಬಿ. ಬಿರಾದಾರ ಅವರಿಂದ ಮಾಹಿತಿ.  ಪರಿಣಿತ ಗುಂಪಿನ ಮಹಿಳೆಯರಿಂದ ಅಕ್ಕಿ ಹುಗ್ಗಿ, ವಿವಿಧ ಬಗೆಯ ಉಪ್ಪಿನಕಾಯಿಗಳ ತಯಾರಿಕೆ, ನಿಂಬೆ ಹಣ್ಣಿನ ಮಹತ್ವ ಮುಂತಾದ ವಿಷಯಗಳ ಕುರಿತು ಚರ್ಚೆ.  ರಂಗಕರ್ಮಿ, ರಂಗ ಸಜ್ಚಿಕೆ ನಿರ್ಮಿಸುವ ಕಲಬುರಗಿಯ ಸುರೇಶ ಖೂನಿಯವರ ಪ್ರತಿಭೆಯ ಅನಾವರಣ.  ಚಿತ್ತಾಪೂರ ತಾ. ಹಾಲೊಳ್ಳಿ ತರಿ ತಾಂಡಾದ ಶ್ರೀಮತಿ ಶಕುಂತಲಾ ದೇವಲಾ ನಾಯಕ್ ಹಾಗೂ ಸಂಗಡಿಗರಿಂದ ಗೀಗೀ ಪದಗಳು ಮೂಡಿ ಬರಲಿವೆ.  ಇವುಗಳ ಜೊತೆಗೆ. ಕಳೆದ ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್‍ಯಕ್ರಮಗಳು, ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ 'ವಾರದ ವರದಿ', ಸಾಮಾಜಿಕ ವಿಷಯಗಳ ಕುರಿತು ಜಿಂಗಲ್‌ಗಳು ಮೂಡಿ ಬರಲಿವೆ.
      ಸರಣಿಯ ನಿರೂಪಣಾ ಸಾಹಿತ್ಯ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಶ್ರೀs ಸೋಮಶೇಖರ ಎಸ್. ರುಳಿಯವರು  ವಹಿಸಿಕೊಂಡಿದ್ದಾರೆ ಎಂದು ಕಲಬುರಗಿ ಆಕಾಶವಾಣಿ ಮುಖ್ಯಸ್ಥೆ ಅಂಜನಾ ಯಾತನೂರ ತಿಳಿಸಿದ್ದಾರೆ.
ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ ಆರೋಪಿಗೆ ೫ ವರ್ಷ ಜೈಲು ಶಿಕ್ಷೆ.
ಕೊಪ್ಪಳ, ಡಿ.೦೪ (ಕ ವಾ) ಹೆಂಡತಿಯ ಶೀಲ ಶಂಕಿಸಿ, ತನ್ನ ಸ್ನೇಹಿತನಿಗೆ ಕೊಡಲಿಯಿಂದ ಹೊಡೆದು ಮಾರಣಾಂತಿಕ ಗಾಯಗೊಳಿಸಿದ್ದ ಆರೋಪಿ ದುರುಗಪ್ಪ ಮಾಲೀಗೌಡ್ರ ಎಂಬ ಆರೋಪಿಗೆ ಕೊಪ್ಪಳ ಜಿಲ್ಲಾ ಮತ್ತು ಸತ್ರ  ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
     ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಲಿಂಗದಹಳ್ಳಿಯಲ್ಲಿ ಆರೋಪಿ ದುರುಗಪ್ಪ ಮಾಲೀಗೌಡ್ರ ತನ್ನ ಹೊಲದ ಮನೆಯಲ್ಲಿ ಸಂಜೆ ಕುಷ್ಟಗಿ ತಾಲೂಕಿನ ವಿರುಪಾಪೂರ ಗ್ರಾಮದ ಶ್ಯಾಮಪ್ಪ ತಳವಾರ ಎಂಬಾತನೊಂದಿಗೆ ಆರೋಪಿತನ ಹೆಂಡತಿ ಮಾತನಾಡುತ್ತಿರುವುದನ್ನು ಕಂಡು, ತನ್ನ ಹೆಂಡತಿಯ ಶೀಲದ ಬಗ್ಗೆ ಸಂಶಯಗೊಂಡಿದ್ದಾನೆ.  ನಂತರ ದುರುಗಪ್ಪ,  ಶ್ಯಾಮಪ್ಪ ತಳವಾರ ಮೇಲೆ ಜಾತಿ ನಿಂದನೆ ಮಾಡಿ, ಕೊಡಲಿಯಿಂದ ಹೊಡೆದು ಮಾರಣಾಂತಿಕವಾಗಿ ಗಾಯಗೊಳಿಸಿದ್ದನು. ಅಲ್ಲದೆ, ಬಿಡಿಸಿಕೊಳ್ಳಲು ಬಂದ ತನ್ನ ಹೆಂಡತಿಗೂ ಸಹ ಕೊಡಲಿಯಿಂದ ಹೊಡೆದು ಗಾಯಗೊಳಿಸಿದ್ದನು. ೨೦೧೨ರ ಅಕ್ಟೋಬರ್.೦೨ ರಂದು ನಡೆದ ಈ ಘಟನೆ ಕುರಿತು ಶ್ಯಾಮಪ್ಪ ತಂದೆ ನಿಂಗಪ್ಪ ತಳವಾರ ಇವರು ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
     ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ನಾಗರತ್ನ ಅವರು ಡಿ.೦೧ ರಂದು ತೀರ್ಪು ನೀಡಿದ್ದು, ಆರೋಪಿ ದುರುಗಪ್ಪಗೆ  ಭಾ.ದಂ.ಸಂ. ಕಲಂ: ೩೨೬, ಅಪರಾಧಕ್ಕಾಗಿ ೫ ವರ್ಷ ಜೈಲು ಶಿಕ್ಷೆ ಮತ್ತು ೧೦,೦೦೦ ರೂ.ಗಳ ದಂಡ ವಿಧಿಸಿದ್ದಾರೆ. ಘಟನೆ ಕುರಿತು ತಾವರಗೇರಾ ಠಾಣೆ ಪಿ.ಎಸ್.ಐ ರೇವಪ್ಪ ಎಚ್.ಕಟ್ಟಿಮನಿ ಪ್ರಕರಣ ದಾಖಲಿಸಿಕೊಂಡಿದ್ದರು ಹಾಗೂ ಗಂಗಾವತಿ ಡಿ.ಎಸ್.ಪಿ ಡಿ.ಎಲ್.ಹಣಗಿ ಪ್ರಕರಣದ ತನಿಖೆ ನಡೆಸಿ, ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣವನ್ನು ಅಭಿಯೋಜನೆಯ ಪರವಾಗಿ ಸಾರ್ವಜನಿಕ ಅಭಿಯೋಜಕ ಎಂ.ಎ. ಪಾಟೀಲ ಅವರು ವಾದ ಮಂಡಿಸಿದ್ದರು. 
ಡಿ.೦೫ ರಂದು ವಿಶ್ವ ಮಣ್ಣು ದಿನಾಚರಣೆ ಮತ್ತು ಭತ್ತದ ಬೆಳೆ ಕ್ಷೇತ್ರೋತ್ಸವ.
ಕೊಪ್ಪಳ, ಡಿ.೦೪ (ಕ ವಾ) ಕೃಷಿ ವಿಶ್ವವಿದ್ಯಾಲಯ, ರಾಯಚೂರು ಮತ್ತು ಕೃಷಿ ಇಲಾಖೆ, ಕೊಪ್ಪಳ, ಕೃಷಿ ಸಂಶೋಧನಾ ಕೇಂದ್ರ, ಭಾ.ಕೃ.ಅ.ಪ ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಮಣ್ಣು ದಿನಾಚರಣೆ ಮತ್ತು ಭತ್ತದ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಡಿ.೦೫ ರಂದು ಬೆಳಿಗ್ಗೆ ೧೧ ಗಂಟೆಗೆ ಗಂಗಾವತಿಯ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಏರ್ಪಡಿಸಲಾಗಿದೆ.
     ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಮಣ್ಣು ಆರೋಗ್ಯ ಕಾರ್ಡ್ ವಿತರಿಸಲಿದ್ದಾರೆ. ರಾಯಚೂರಿನ ಕೃಷಿ ವಿಶ್ವ ವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ||ಎಸ್.ಕೆ.ಮೇಟಿ ಅಧ್ಯಕ್ಷತೆ ವಹಿಸುವರು. ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ ಸವಳು ಮಣ್ಣು ಮತ್ತು ನೀರು ಯೋಜನೆ ಮುಖ್ಯಸ್ಥ ಡಾ||.ಜೆ.ವಿಶ್ವನಾಥ ಹಾಗೂ ಕೇಂದ್ರದ ಮುಖ್ಯಸ್ಥ ಡಾ||ಬಿ.ಜಿ.ಮಸ್ತಾನರೆಡ್ಡಿ ಅವರು ಕಾರ್ಯಕ್ರಮದಲ್ಲಿ ವಿಶೇಷ  ಉಪನ್ಯಾಸ ನೀಡಲಿದ್ದಾರೆ ಎಂದು ಕೃಷಿ ಇಲಾಖೆ, ಜಂಟಿ ಕೃಷಿ ನಿರ್ದೇಶಕ ಎ.ರಾಮದಾಸ್ ಅವರು ತಿಳಿಸಿದ್ದಾರೆ.  

Advertisement

0 comments:

Post a Comment

 
Top