PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಡಿ. ೦೫ (ಕ ವಾ) ಕ್ರೀಡಾಕೂಟದಲ್ಲಿ ಸೋಲು, ಗೆಲುವಿನ ಲೆಕ್ಕಾಚಾರ ಹಾಕುವುದಕ್ಕಿಂತ, ಭಾಗವಹಿಸುವಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ತ್ಯಾಗರಾಜನ್ ಅವರು ಹೇಳಿದರು.
     ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಜಿಲ್ಲಾ ಶಾಖೆ ಆಶ್ರಯದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ   ಏರ್ಪಡಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ಎರಡು ದಿನಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
     ಸರ್ಕಾರಿ ನೌಕರರು ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.  ಇಂತಹ ಒತ್ತಡದ ಬದುಕಿನಲ್ಲಿ, ಕ್ರೀಡಾಕೂಟಗಳು, ಸರ್ಕಾರಿ ನೌಕರರಿಗೆ ಹೊಸ ಹುರುಪು ಮೂಡುವಲ್ಲಿ ಸಹಕಾರಿಯಾಗುತ್ತವೆ.  ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಭಾಗವಹಿಸಬೇಕಿತ್ತು.  ಆದರೆ ನೌಕರರು ಕರ್ತವ್ಯ ನಿರ್ವಹಣೆಯತ್ತ ಹೆಚ್ಚು ಆದ್ಯತೆ ನೀಡಿದ ಕಾರಣಕ್ಕೆ ಬಹುಶಃ ಬಹಳಷ್ಟು ನೌಕರರು ಕ್ರೀಡಾಕೂಟಕ್ಕೆ ಆಗಮಿಸದಿರಬಹುದು.  ಕ್ರೀಡಾಕೂಟದಲ್ಲಿ ಗೆಲವು ಸಾಧಿಸಬೇಕು ಎನ್ನುವ ಛಲ ಇರಬೇಕು, ಗೆಲುವು ಮುಖ್ಯವಲ್ಲ ಸ್ಪರ್ಧಾತ್ಮಕ ಮನೋಭಾವನೆ ಮುಖ್ಯವಾಗಿರಬೇಕು.  ಪ್ರತಿಯೊಬ್ಬರೂ ಕ್ರೀಡಾ ಮನೋಭಾವ ಬೆಳೆಸಿಕೊಂಡಾಗ ಮಾತ್ರ, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನಸ್ಸು ರೂಪಗೊಳ್ಳಲು ಸಾಧ್ಯ.   ಕ್ರೀಡೆಗಳು ದೈಹಿಕ ಮತ್ತು ಮನೋ ಬಲವನ್ನು ಹೆಚ್ಚಿಸುತ್ತವೆ.  ಕ್ರೀಡೆಯಲ್ಲಿ ಸೋಲು-ಗೆಲವನ್ನು ಲೆಕ್ಕ ಹಾಕಬಾರದು. ಭಾಗವಹಿಸುವುದು ಮುಖ್ಯ. ಯಾವುದೇ ವಿಷಯದಲ್ಲಿ ಸತತ ಅಭ್ಯಾಸ, ಪರಿಶ್ರಮ ಇದ್ದರೆ ಗೆಲುವು ಸಾಧಿಸಬಹುದು. ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಮುಂದಿನ ದಿನಗಳಲ್ಲಿ ಎಲ್ಲರೂ ಕ್ರೀಡಾಸಕ್ತಿ ಬೆಳೆಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
     ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನೌಕರರಲ್ಲಿ ಸೇವಾ ದಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಲು ಕ್ರೀಡಾಕೂಟಗಳು ಚೇತೋಹಾರಿಯಾಗಿ ಪರಿಣಾಮ ಬೀರುತ್ತವೆ.  ನೌಕರರು ಆಸಕ್ತಿ ವಹಿಸಿ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವಂತಾಗಬೇಕು.  ಈ ನಿಟ್ಟಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಆಯೋಜಿಸಿದೆ ಎಂದರು.
     ರಾಜ್ಯ ಸರಕಾರ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಆರ್.ಜುಮ್ಮನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ, ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ್ ಕಾರ್ಯಕ್ರಮ ಕುರಿತು ಮಾತನಾಡಿದರು.
     ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ, ಡಾ.ಶಾರದಾ ನಿಂಬರಗಿ,  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿ ಬಿ.ವಿ. ತುಕಾರಾಮರಾವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.  ಶ್ರೀಕಾಂತ ಬಾಸೂರು, ಜಿ.ಪಂ. ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ತಾಲೂಕುವೈದ್ಯಾಧಿಕಾರಿ ಎಸ್.ಪಿ. ದಾನರೆಡ್ಡಿ, ನೌಕರರ ಸಂಘದ ತಾಲೂಕು ಅಧ್ಯಕ್ಷ ಗುರಪ್ಪ ಕುರಿ, ವೈ.ಜಿ.ಪಾಟೀಲ್, ಎನ್.ಎಂ.ಸವದತ್ತಿ, ಗೌರವಾಧ್ಯಕ್ಷ ಡಾ.ಜಿ.ಕೆ. ಸಾಲಿ, ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ, ರಾಜ್ಯ ಪರಿಷತ್ ಸದಸ್ಯ ಧನಂಜಯ ಮಾಲಗಿತ್ತಿ, ಖಜಾಂಚಿ ಸುಶಿಲೇಂದ್ರರಾವ್ ದೇಶಪಾಂಡೆ ಇತರರು ಇದ್ದರು. ಶಿಕ್ಷಕರಾದ ಎಂ.ಎಂ.ಮುಜಗುಂಡ, ಮೆಹಬೂಬ್ ನಿರ್ವಹಿಸಿದರು.

Advertisement

0 comments:

Post a Comment

 
Top