PLEASE LOGIN TO KANNADANET.COM FOR REGULAR NEWS-UPDATES

Chief Minister of Karnataka Shri Siddaramaiah's speech at the 81st Kannada Sahithya Sammelana at Shravanabelagola
ಫೆಬ್ರವರಿ 1, 2015 / ಬೆಳಿಗ್ಗೆ 10-30 ಗಂಟೆ / ಶ್ರವಣಬೆಳಗೊಳ
——————————————–
ಶ್ರೀ ಕ್ಷೇತ್ರ ಶ್ರವಣಬೆಳಗೊಳ ಶ್ರೀ ಜೈನಮಠದ ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರೆ,
ಈ ಸಮ್ಮೇಳನಾಧ್ಯಕ್ಷರಾದ ಡಾ ಸಿದ್ಧಲಿಂಗಯ್ಯ ಅವರೆ,
ಭಾರತದ ಮಾಜಿ ಪ್ರಧಾನ ಮಂತ್ರಿಗಳೂ ಹಾಗೂ ಲೋಕಸಭಾ ಸದಸ್ಯರಾದ ಶ್ರೀ ಹೆಚ್. ಡಿ. ದೇವೇಗೌಡ ಅವರೆ,                               
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಶ್ರೀ ಅನಂತಕುಮಾರ್ ಅವರೆ,
ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಡಾ ಹೆಚ್. ಸಿ. ಮಹದೇವಪ್ಪ ಅವರೆ,
ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಉಮಾಶ್ರೀ ಅವರೆ,
ನನ್ನ ಸಚಿವ ಸಂಪುಟದ ಎಲ್ಲಾ ಸಹೋದ್ಯೋಗಿಗಳೆ,
ಸಂಸದ – ಶಾಸಕ ಮಿತ್ರರೆ,                                       
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಪುಂಡಲೀಕ ಹಾಲಂಬಿ ಅವರೆ,
ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಡಾ ಎಸ್. ಎಲ್. ಭೈರಪ್ಪ ಅವರೆ,
ಕನ್ನಡ ಸಾರಸ್ವತಲೋಕದ ದಿಗ್ಗಜರೆ,
ವೇದಿಕೆಯ ಮೇಲಿನ ಎಲ್ಲಾ ಗಣ್ಯರೆ,
ನುಡಿ ಹಬ್ಬಕ್ಕೆ ಸಾಕ್ಷಿಯಾಗಲು ಆಗಮಿಸಿರುವ ಎಲ್ಲಾ ಸೋದರ-ಸೋದರಿಯರೆ,
ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಆಯೋಜಿಸಿರುವ ಎಂಬತ್ತೊಂದನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲು ನನಗೆ ಅತ್ಯಂತ ಸಂತಸವಾಗುತ್ತಿದೆ.
ಈ ಅಕ್ಷರ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದು ನನಗೆ ಅಭಿಮಾನವನ್ನು ಉಂಟುಮಾಡಿದೆ. ಎಂಟು ಜ್ಞಾನಪೀಠ ಪ್ರಶಸ್ತಿ ಹಾಗೂ ಸರಸ್ವತಿ ಸಮ್ಮಾನದ ಗರಿ ಮೂಡಿಸಿಕೊಂಡ ಕನ್ನಡ ನಾಡು ಹೆಮ್ಮೆಯ ಬೀಡು. ಈ ಸಂದರ್ಭದಲ್ಲಿ ಸಂತಸದಿಂದ ಪಾಲ್ಗೊಳ್ಳುವ ಮೂಲಕ ನಾಡು-ನುಡಿಯ ಬಗ್ಗೆ ಅಭಿಮಾನ ತೋರಿಸುತ್ತಿರುವ ತಮ್ಮೆಲ್ಲರಿಗೂ ನನ್ನ ಶುಭ ಕಾಮನೆಗಳನ್ನು ಸಲ್ಲಿಸುತ್ತೇನೆ. ಇದೊಂದು ಚರಿತ್ರಾರ್ಹ ಸಮ್ಮೇಳನವಾಗಲಿ ಎಂದು ಮನದಾಳದಿಂದ ಹಾರೈಸುತ್ತೇನೆ.
ಕನ್ನಡ ಸಾರಸ್ವತ ಲೋಕದ ಪ್ರತಿಭಾ ಸಂಪನ್ನರು, ಸರಳ-ಸಜ್ಜನಿಕೆಗೆ ಹೆಸರಾದ, ಕ್ರಾಂತಿಗೀತೆಗಳ ಮೂಲಕ ಮನೆಮಾತಾದ ಡಾ ಸಿದ್ಧಲಿಂಗಯ್ಯ ಅವರು ಈ ಸಮ್ಮೇಳನದ ಅಧ್ಯಕ್ಷರಾಗಿರುವುದು ಕನ್ನಡದ ಗೌರವ ಹೆಚ್ಚಿಸಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶಯಕ್ಕೆ ಶಕ್ತಿ ತುಂಬಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಅಭಿನಂದನಾರ್ಹರು. ಡಾ ಸಿದ್ಧಲಿಂಗಯ್ಯ ಅವರ ಸಮಾಜಮುಖಿ ಭಾಷಣ ಕೇಳಲು ನಾನು ಉತ್ಸುಕನಾಗಿದ್ದೇನೆ.
ನನ್ನ ಸಂಪುಟದ ಸಹೋದ್ಯೋಗಿ ಡಾ ಹೆಚ್.ಸಿ. ಮಹದೇವಪ್ಪ ಹಾಗೂ ಇಲ್ಲಿನ ಜನಪ್ರಿಯ ಶಾಸಕರ ನೇತೃತ್ವದ ಸಮ್ಮೇಳನ ಸ್ವಾಗತ ಸಮಿತಿಯು ಈ ವರ್ಷ ಈ ಸಮ್ಮೇಳನವನ್ನು ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಏರ್ಪಡಿಸಲು ಬಹುವಾಗಿ ಶ್ರಮಿಸಿದ್ದಾರೆ. ಅವರನ್ನೂ ಕೂಡ ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.
ಕನ್ನಡ ಸಾಹಿತ್ಯ ಪರಿಷತ್ತು ನೂರರ ಹೊಸ್ತಿಲಿನಲ್ಲಿದೆ. ಇದೊಂದು ಐತಿಹಾಸಿಕ ಹಾಗೂ ಮಹತ್ವದ ಸಂದರ್ಭ. ಈ ಸಂದರ್ಭದಲ್ಲಿ ನೆನೆಯಲೇಬೇಕಾದ ವ್ಯಕ್ತಿಯೊಬ್ಬರಿದ್ದಾರೆ. ಅವರೇ ನಾಡಪ್ರಭು ನಾಲ್ವಡಿ ಕೃಷ್ಣರಾಜ ಒಡೆಯರ್. ಅರಮನೆ ಗುರುಮನೆಗಳಲ್ಲಿದ್ದ ಸಾಹಿತ್ಯವನ್ನು ಜನಸಾಮಾನ್ಯರತ್ತ ತರುವ ಮಹೋದ್ದೇಶದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು.
ಪ್ರಭುವಾಗಿ ಪ್ರಜಾಪ್ರಭುತ್ವದ ಮಾದರಿಯಲ್ಲಿ ಆಡಳಿತವನ್ನು ನಡೆಸಿದ ಜನಪರ ಕಾಳಜಿಯ ಮಹಾರಾಜರು ನಾಲ್ವಡಿ ಕೃಷ್ಣರಾಜ ಒಡೆಯರ್. ಅವರ ಕಾಲದಲ್ಲಿ ಮೈಸೂರು ರಾಜ್ಯದಲ್ಲಿ ಆಗಿರುವ ಜನಪರ ಕಾಳಜಿಯ ಪ್ರಗತಿ ರಾಜ್ಯದ ಬದುಕನ್ನೇ ಬದಲಾಯಿಸಿದ ಬೆಳವಣಿಗೆ ಎಂದರೆ ಅತಿಶಯೋಕ್ತಿಯಲ್ಲ. ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವುದರ ಮೂಲಕ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಿದರು. ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸುವುದರ ಮುಖೇನ ಆಡಳಿತದಲ್ಲಿ ಪ್ರಜಾಪ್ರಭುತ್ವದ ಆಶಯವನ್ನು ಅನುಷ್ಠಾನಗೊಳಿಸಿದರು. ಹಲವು ಕೈಗಾರಿಕೆಗಳನ್ನು ಸ್ಥಾಪಿಸಿ ಜನಸಾಮಾನ್ಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿದರು.
ಎಲ್ಲಕ್ಕಿಂತ ಮಿಗಿಲಾಗಿ ಕೆರೆ ಕಟ್ಟೆ ಅಣೆಕಟ್ಟುಗಳನ್ನು ನಿರ್ಮಿಸಿ ರೈತಪರವಾದ ಅಭಿವೃದ್ಧಿಯನ್ನು ಸಾಧಿಸಿದರು. ಕನ್ನಂಬಾಡಿ ಜಲಾಶಯವನ್ನು ಕಟ್ಟಿಸುವುದಕ್ಕೆ ಅರಮನೆಯ ಆಭರಣಗಳನ್ನಷ್ಟೇ ಅಲ್ಲದೆ ಮಹಾರಾಣಿಯ ಮೈಮೇಲಿನ ಒಡವೆಗಳನ್ನೂ ಮುಂಬೈ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದು, ಅವರ ಜನಪರ ಕಾಳಜಿಯ ಬದ್ಧತೆಯನ್ನು ತೋರಿಸುತ್ತದೆ. ಇಂತಹ ನಾಡಪ್ರಭು ಸ್ಥಾಪಿಸಿದ ಸಂಸ್ಥೆಯೇ ನಮ್ಮ ಹೆಮ್ಮೆಯ ಕನ್ನಡ ಸಾಹಿತ್ಯ ಪರಿಷತ್ತು.
ಅವರ ಒತ್ತಾಸೆಯ ಫಲವಾಗಿ 1915ರ ಮೇ 5 ರಂದು ಕನ್ನಡ ಸಾಹಿತ್ಯ ಪರಿಷತ್ತು ಆರಂಭವಾಯಿತು. ಈಗಿನ ಬೆಂಗಳೂರು ಕೋಟೆ ಪ್ರೌಢ ಶಾಲಾ ಆವರಣದಲ್ಲಿ ಸಭೆ ಸೇರಿ ಶ್ರೀ ಹೆಚ್. ವಿ. ನಂಜುಂಡಯ್ಯ ಅವರನ್ನು ಪರಿಷತ್ತಿನ ಪ್ರಥಮ ಅಧ್ಯಕ್ಷರನ್ನಾಗಿ ಮಾಡಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಸಮ್ಮೇಳನ ನಡೆಯಿತು. ಅಂದೇ ಸಾಹಿತ್ಯ ಪರಿಷತ್ತಿನ ಉದಯವೂ ಆಯಿತು.
ಸಾಹಿತ್ಯ ಪರಿಷತ್ತು ಬೆಳೆದು ಬಂದ ನಡೆಯನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಅದು ಸರಳ ರೇಖೆಯ ದಾರಿಯಲ್ಲಿ ನಡೆದದ್ದಲ್ಲ. ಸಂಘರ್ಷಾತ್ಮಕ ವಕ್ರ ರೇಖೆಗಳ ರೀತಿಯಲ್ಲಿ ನಡೆದ ಮಹಾಯಾನ. ಇಲ್ಲಿ ವರ್ಗ-ವರ್ಣಗಳ ಅಧಿಪತ್ಯ ಹೆಚ್ಚಾಗಿ ಕೆಲವು ಕಾಲಘಟ್ಟಗಳಲ್ಲಿ ಸಾಹಿತ್ಯ ಪರಿಷತ್ತು ಎಂದರೆ ಕೆಲವರ ಸ್ವತ್ತಾಗಿದ್ದೂ ಉಂಟು. ಮಹಾ ಚುನಾವಣೆಗಳು ನಡೆದಂತೆ ಪ್ರಾಬಲ್ಯದ ಹಿಡಿತದಿಂದ ಬಿಡಿಸಿ ಕೊಂಡು ಜನಪರ ನಡೆಯ ಹೆಜ್ಜೆ ಹಾಕಿದ್ದೂ ಉಂಟು.
ಈ ಏಳುಬೀಳುಗಳ ಜೊತೆಯಲ್ಲೇ ಆದ ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕೃತಿಕ ಸಂಘರ್ಷಗಳಲ್ಲಿ ತಾನೂ ಮುಖಾಮುಖಿಯಾಗುತ್ತಾ ಒಂದು ದಿಕ್ಕು-ದೆಸೆಯನ್ನು ಕಂಡುಕೊಂಡದ್ದೂ ಉಂಟು. ಎಪ್ಪತ್ತು-ಎಂಭತ್ತರ ದಶಕದಲ್ಲಿ ಕರ್ನಾಟಕದಲ್ಲಾದ ಚಳುವಳಿಗಳ ಜೊತೆಯಲ್ಲಿ ಪರಿಷತ್ತು ಸಹಯೋಗ ಮತ್ತು ಸಂಘರ್ಷ ಈ ಎರಡೂ ಬಗೆಯ ಮುಖಾಮುಖಿತ್ವದಲ್ಲಿ ಪಾಲ್ಗೊಂಡಿರುವುದು ಚಾರಿತ್ರಿಕ ವಿದ್ಯಮಾನವೇ ಸರಿ. ಪರಿಷತ್ತನ್ನು ಕೆಲವು ಸಾಹಿತಿಗಳು ಬಹಿಷ್ಕರಿಸಿದ ಕಾಲಘಟ್ಟವೂ ಒಂದಿತ್ತು. ಕೊನೆಗೆ ಕಾಲ ಕಳೆದಂತೆ ಅದೇ ಸಾಹಿತಿಗಳು ಪರಿಷತ್ತಿನ ಒಳಬಂದು ಪರಿಷತ್ತಿನ ಭಾಗವೇ ಆಗಿ ಪರಿಷತ್ತಿನ ಚಟುವಟಿಕೆಗಳನ್ನು ಹೆಚ್ಚು ಪ್ರಜಾಸತ್ತಾತ್ಮಕಗೊಳಿಸಿದ್ದೂ ಉಂಟು. ಇಂದು ಪರಿಷತ್ತು ತನ್ನ ಮೂಲ ಆಶಯವಾದ ಸ್ವಾಯತ್ತತೆಯನ್ನು ಉಳಿಸಿಕೊಂಡು ಕನ್ನಡದ ಸಾಂಸ್ಕೃತಿಕ ಲೋಕವನ್ನು ಜವಾಬ್ದಾರಿಯಿಂದ ನಡೆಸುವ ಒಂದು ಸಾಕ್ಷಿ ಪ್ರಜ್ಞೆಯ ರೀತಿಯೊಳಗೆ ಬೆಳೆದಿದೆ. ಬೆಳೆಯುತ್ತಿದೆ ಹಾಗೂ ಬೆಳಗುತ್ತಿದೆ.
ಸಾಮಾಜಿಕ ನ್ಯಾಯ, ಪ್ರಾದೇಶಿಕ ಪ್ರಾತಿನಿಧ್ಯ ಇವುಗಳನ್ನು ಗೌರವಿಸಿದಂತೆ ನಾಡಿನ ಎಲ್ಲಾ ವರ್ಗಮೂಲಗಳನ್ನೂ ತನ್ನ ಕ್ರಿಯಾ ಚಟುವಟಿಕೆಯ ಭಾಗವಾಗಿಸಿಕೊಂಡಿದೆ. ಸಾಹಿತ್ಯ ಪರಿಷತ್ತಿನಲ್ಲಿ ನಡೆಯುವ ಸಮ್ಮೇಳನಗಳು ಇತ್ತೀಚಿನ ದಿನಗಳಲ್ಲಿ ಕೇವಲ ಸಾಹಿತ್ಯಿಕ ವಿಚಾರಗೋಷ್ಠಿಗಳನ್ನು ನಡೆಸುವ ಸಮ್ಮೇಳನಗಳಾಗಿ ಉಳಿದಿಲ್ಲ. ಕೃಷಿ, ವಿಜ್ಞಾನ, ರಾಜಕೀಯ, ಶಿಕ್ಷಣ, ನಾಡು-ನುಡಿಗೆ ಸಂಬಂಧಿಸಿದ ಸಮಸ್ಯೆಗಳು, ನೆಲಜಲದ ಸಮಸ್ಯೆ, ನಿರುದ್ಯೋಗ ಸಮಸ್ಯೆ….. ಹೀಗೆ ಕನ್ನಡ ಬದುಕಿಗೆ ಸಂಬಂಧಿಸಿದ ಎಲ್ಲಾ ಆಯಾಮಗಳನ್ನು ಹಾಗೂ ಆತಂಕಗಳನ್ನು ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಚರ್ಚಿಸಲಾಗುತ್ತಿದೆ.
ಕೇವಲ ಸಾಹಿತಿಗಳು ಮಾತ್ರವಲ್ಲದೆ, ಬದುಕಿನ ಜ್ಞಾನ ಶಾಖೆಗಳ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಈ ಸಮ್ಮೇಳನಗಳಲ್ಲಿ   ಪಾಲ್ಗೊಳ್ಳುತ್ತಿದ್ದಾರೆ. ತಮ್ಮ ತಮ್ಮ ವಿಚಾರಧಾರೆಯನ್ನು ಜನತೆಗೆ ಹಂಚುತ್ತಿದ್ದಾರೆ. ಸಮ್ಮೇಳನಗಳನ್ನು ಜಾತ್ರೆ ಎಂದು ಕರೆಯುವ ಜನರೂ ಇದ್ದಾರೆ. ಹೌದು. ಇದೊಂದು ನಿಜವಾದ ಅರ್ಥದಲ್ಲಿ ಜಾತ್ರೆಯೇ. ಜಾತ್ರೆ ಎಂಬುದು ಕೀಳ್ಗಳೆದು ನೋಡಬೇಕಾದ ಆಚರಣೆಯಲ್ಲ. ಸರ್ವ ಜನಾಂಗಗಳೂ ಸಹಭಾಗಿತ್ವವನ್ನು ಪಡೆದುಕೊಂಡಂತೆ ಆಚರಿಸುವ ಒಂದು ಮಹೋನ್ನತ ಹಬ್ಬ. ಸಾಹಿತ್ಯ ಪರಿಷತ್ತಿನ ಸಮ್ಮೇಳನ ಸರ್ವ ಜನಾಂಗಗಳ ಪಾಲ್ಗೊಳ್ಳುವಿಕೆಯ ಜಾತ್ರೆಯಾಗಿದ್ದರೆ, ಅದು ಸಂಭ್ರಮಿಸಬೇಕಾದ ವಿಚಾರ. ಇದು ಅಕ್ಷರ ಜಾತ್ರೆ. ಇದು ನಾಡ ಬದುಕಿನ ವಿಚಾರಗಳನ್ನು ಕುರಿತು ಚರ್ಚಿಸುವ ನುಡಿ ಜಾತ್ರೆ. ಈ ಜಾತ್ರೆಯಲ್ಲಿ ಅಖಂಡ ಕರ್ನಾಟಕದ ಜನ ಮನಸ್ಸುಗಳು ಪಾಲ್ಗೊಳ್ಳುತ್ತವೆ ಎಂಬುದು ಹೆಮ್ಮೆಯ ವಿಚಾರ.
ಇನ್ನು ಸರ್ಕಾರ ಮತ್ತು ಪರಿಷತ್ತಿಗೆ ಸಂಬಂಧಪಟ್ಟ ಸಹಭಾಗಿತ್ವದ ವಿಚಾರವನ್ನು ಕುರಿತು ಎರಡು ಮಾತು ಹೇಳಲೇಬೇಕು. ನಾಡಪ್ರಭು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಭುವಾಗಿ ಈ ಪರಿಷತ್ತನ್ನು ಸ್ಥಾಪಿಸಿದರೂ ಅದಕ್ಕೆ ಸ್ವಾಯತ್ತತೆಯನ್ನು ನೀಡಿ ಗೌರವಿಸಿದ್ದರು. ಪ್ರಜಾಪ್ರಭುತ್ವದ ಸಂದರ್ಭದಲ್ಲಿಯೂ ಪ್ರತಿಯೊಂದು ಸರ್ಕಾರಗಳೂ ಅದರ ಸ್ವಾಯತ್ತತೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ.
ಸಾಹಿತ್ಯ ಪರಿಷತ್ತು ಎಲ್ಲಾದರೂ ತಪ್ಪು ಹೆಜ್ಜೆಗಳನ್ನಿಟ್ಟಿದ್ದರೆ ಆಳುವ ಪ್ರಭುತ್ವವಾಗಲಿ ಇಂದಿನ ಪ್ರಜಾಪ್ರಭುತ್ವವಾಗಲಿ ಕಾರಣವಲ್ಲ. ಅದರ ಆಡಳಿತದ ನಿರ್ವಹಣೆಯನ್ನು ಹೊತ್ತ ವ್ಯಕ್ತಿಗಳ – ಸಮಿತಿಗಳ ತಪ್ಪು ನಿರ್ಧಾರದಿಂದಾಗಿ ಆ ತರಹದ ನಡೆಗಳು ಜರುಗಿರಬಹುದು. ಆದರೆ, ಅಂತಹ ಸಂದರ್ಭದಲ್ಲಿ ಅದನ್ನು ಸರಿದಾರಿಯಲ್ಲಿ ನಡೆಸುವ ಕಾರ್ಯವನ್ನು ಸರ್ಕಾರ ಮತ್ತು ಸಾರ್ವಜನಿಕರು ಒಟ್ಟುಗೂಡಿದಂತೆ ಮಾಡಲಾಗಿರುವುದನ್ನು ಗೌರವದಿಂದ ನೋಡಬೇಕಾದ ಸಂಗತಿ.
ಕರ್ನಾಟಕದಲ್ಲಿ ಯಾವುದೇ ಆಡಳಿತ ಬಂದರೂ ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆಗೆ ಎಂದೂ ಕಂಟಕ ಬಂದಿಲ್ಲ. ಮುಂದೆಯೂ ಬರುವುದಿಲ್ಲ ಎಂಬ ವಿಶ್ವಾಸ ನನ್ನಲ್ಲಿದೆ. ಅದು ಇಡೀ ಕನ್ನಡಿಗರ ಕನ್ನಡ ಬದುಕಿನ ಸಾಕ್ಷಿಪ್ರಜ್ಞೆಯ ಪ್ರತೀಕವೆಂಬುದನ್ನು ಪ್ರತಿಯೊಬ್ಬ ಕನ್ನಡಿಗನೂ ವಿನಯದಿಂದ ಗೌರವಿಸಬೇಕು. ಅದು ಹಾಗೆಯೇ ಪ್ರಜಾಸತ್ತಾತ್ಮಕ ದೃಷ್ಟಿಯಲ್ಲಿ ನಡೆದುಕೊಂಡು ಹೋಗಲು ಸಹಕರಿಸಬೇಕು. ನಮ್ಮ ಹಿಂದಿನ ಸರ್ಕಾರಗಳು ಈ ಕಾರ್ಯವನ್ನು ಅಲ್ಪ-ಸ್ವಲ್ಪ ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಸರಿದೂಗಿಸಿಕೊಂಡು ಬಂದಿದ್ದಾರೆ. ಅನುದಾನ ಕೊಡುವುದರಲ್ಲಿ ಹೆಚ್ಚು ಕಡಿಮೆ ಆಗಿರಬಹುದು. ಆಡಳಿತದೊಳಗೆ ಮಾತ್ರ ಎಂದೂ ಮೂಗು ತೂರಿಸಿಲ್ಲ ಎಂಬುದು ಮುಖ್ಯ ವಿಚಾರ. ನಮ್ಮ ಸರ್ಕಾರವೂ ಈ ವಿಚಾರದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಪರಂಪರೆಯನ್ನು ಗೌರವಿಸಿ ಹಿಂದೆಂದಿಗಿಂತಲೂ ಹೆಚ್ಚಿನ ಅನುದಾನವನ್ನು ನೀಡಿ ಸಹಕರಿಸುತ್ತಿದ್ದೇವೆ. ಸಾಂಸ್ಕೃತಿಕ ಲೋಕ ಆರೋಗ್ಯಕರವಾಗಿದ್ದರೆ ಪ್ರಜಾಸತ್ತೆ ಉಳಿಯುತ್ತದೆ ಬೆಳೆಯುತ್ತದೆ ಎಂಬುದನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಮತ್ತೊಂದು ವಿಶೇಷವೆಂದರೆ, ನಮ್ಮ ಸರ್ಕಾರದ ಭಾಗ್ಯವೆಂಬಂತೆ ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷ ತುಂಬುತ್ತಿದೆ. ಈ ನೂರು ವರ್ಷದ ಸಂಭ್ರಮಾಚರಣೆಯನ್ನು ಆಚರಿಸಲು ಬೇಕಾಗುವ ಎಲ್ಲಾ ಧನಸಹಾಯವನ್ನೂ ನಮ್ಮ ಸರ್ಕಾರ ಪರಿಷತ್ತಿಗೆ ನೀಡುತ್ತಿದೆ.
ನಮ್ಮ ಸರ್ಕಾರ ತನ್ನ ಸಾಂಸ್ಕೃತಿಕ ಕರ್ತವ್ಯ ನೆರವೇರಿಸುವಲ್ಲಿ ಎಂದಿಗೂ ಹಿಂದೆ ಬೀಳುವುದಿಲ್ಲ. ಸಾಹಿತ್ಯ-ಸಾಂಸ್ಕೃತಿಕ ಸಂವರ್ಧನೆಗೆ ಪೂರಕವಾಗುವಂತಹ ಕಾರ್ಯಕ್ರಮಗಳಿಗೆ 250 ಕೋಟಿ ರೂ. ಗಳಿಗೂ ಹೆಚ್ಚು ವಾರ್ಷಿಕ ಆಯವ್ಯಯ ಅನುದಾನವನ್ನು ನಮ್ಮ ಸರ್ಕಾರ ನೀಡಿದೆ. ಇದು ಈ ದೇಶದಲ್ಲಿಯೇ ಇತರೆ ರಾಜ್ಯಗಳು ಕೊಡುವ ಅನುದಾನಕ್ಕಿಂತ ಹೆಚ್ಚಾಗಿರುವುದು ಸ್ಪಷ್ಟವಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಅಗತ್ಯವಾದ ಹಣಕಾಸಿನ ಬೆಂಬಲವನ್ನು ನಮ್ಮ ಸರ್ಕಾರ ನೀಡಿದೆ. ಮುಂದೆಯೂ ಯಾವುದೇ ಲೋಪಕ್ಕೆ ಎಡೆಗೊಡದಂತೆ ನಡೆದುಕೊಳ್ಳುವ ಭರವಸೆ ನೀಡುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ   ಕ್ರಿಯಾ ಯೋಜನೆ ಸಲ್ಲಿಸಿದ್ದು, ಸರ್ಕಾರ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸುತ್ತೇನೆ.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ತಲಾ ಐದು ಲಕ್ಷದ ರೂಪಾಯಿಗಳ ಅನುದಾನವನ್ನು ಸರ್ಕಾರ ನೀಡುತ್ತಿದೆ. ಅಷ್ಟೇ ಅಲ್ಲದೆ, ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳಿಗೂ ಅನುದಾನ ನೀಡಲಾಗುತ್ತಿದೆ. ಅದನ್ನೂ ಸರ್ಕಾರ ಮುಂದುವರಿಸಿಕೊಂಡು ಹೋಗುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡುತ್ತಿದ್ದೇನೆ.
ಈ ಸಮ್ಮೇಳನದ ವಿಶಿಷ್ಟತೆಯ ಬಗ್ಗೆ ಎರಡು ಮಾತುಗಳನ್ನು ಹೇಳಲೇಬೇಕು:
ಮೊದಲನೆಯದು ಹಾಸನ ಜಿಲ್ಲೆ. ಕನ್ನಡ ಸಾರಸ್ವತ ಲೋಕಕ್ಕೆ ಗೊರೂರು ರಾಮಸ್ವಾಮಿ ಅಯ್ಯಂಗಾರ್, ರಾಜಾರಾವ್, ಡಾ ಎಸ್.ಎಲ್. ಭೈರಪ್ಪ, ಡಾ ಹೆಚ್. ಜೆ. ಲಕ್ಕಪ್ಪ ಗೌಡ, ಬಾನು ಮುಷ್ತಾಕ್ ಅಂತಹ ಪ್ರತಿಭೆಗಳನ್ನು ಕೊಡುಗೆ ನೀಡಿದೆ.
ಎರಡನೆಯದು ಶ್ರವಣಬೆಳಗೊಳ. ಇದೊಂದು ಧಾರ್ಮಿಕ ಕ್ಷೇತ್ರ. ಜಗತ್ತಿನಲ್ಲಿಯೇ ಮಹಾದ್ಭುತಗಳಲ್ಲಿ ಒಂದೆನಿಸಿದ ಬಾಹುಬಲಿ ಗೊಮ್ಮಟಸ್ವಾಮಿಯು ನೆಲೆಗೊಂಡಿರುವ ಕ್ಷೇತ್ರ. ಜೈನ ಧರ್ಮ ಅತ್ಯಂತ ಪ್ರಾಚೀನ ಕಾಲದಲ್ಲಿಯೇ ಇಲ್ಲಿಗೆ ಬಂದು ಬೇರೂರಿ ತನ್ನ ಪ್ರಭಾವವನ್ನು ಈ ಜನತೆಯ ಮೇಲೆ ಅಚ್ಚಳಿಯದ ರೀತಿಯಲ್ಲಿ ಬೀರಿದೆ. ಕನ್ನಡ ಸಾಹಿತ್ಯ ಪ್ರಾರಂಭವಾಗುವುದೇ ಜೈನ ಯುಗದ ಮುಖೇನ.
ಕನ್ನಡದ ಆದಿಕವಿ ಪಂಪ ಜೈನಧರ್ಮಕ್ಕೆ ಸೇರಿದವನು. ರನ್ನ, ಪೊನ್ನ, ನಾಗಚಂದ್ರ ಇವರೆಲ್ಲರೂ ಕನ್ನಡದ ಮಹತ್ವದ ಕವಿಗಳು. ತಮ್ಮ ಕಾವ್ಯ ರಚನೆಗೆ ಸಂಸ್ಕೃತ ಪ್ರಾಕೃತ ಭಾಷೆಗಳನ್ನು ಅವಲಂಭಿಸುವುದು ಬಿಟ್ಟು ಈ ನೆಲದ ಜನರ ಭಾಷೆಯಾದ ಕನ್ನಡವನ್ನು ಆಶ್ರಯಿಸಿ ಜೈನ ಧರ್ಮದ ಕಾವ್ಯ ಕೃತಿಗಳನ್ನು ಬರೆದರು. ಜೈನ ಕವಿಗಳು ಒಂದು ಧಾರ್ಮಿಕ ಕಾವ್ಯವನ್ನು ಬರೆದರೆ ಮತ್ತೊಂದು ಲೌಕಿಕ ಕಾವ್ಯವನ್ನು ಬರೆದರು. ಪಂಪ, ರನ್ನ, ಪೊನ್ನರನ್ನು ಕನ್ನಡದ ರತ್ನತ್ರಯರೆಂದು ಕರೆಯುತ್ತಾರೆ. ಆ ಮೂವರೂ ಜೈನಧರ್ಮಕ್ಕೆ ಸೇರಿದ ಮಹನೀಯರು.
ಮತ್ತೊಂದು ವಿಶೇಷವೆಂದರೆ ಆದಿಕವಿ ಪಂಪ ಮನುಷ್ಯ ಜಾತಿ ತಾನೊಂದೆ ವಲಂ ಎಂದು ವಿಶ್ವ ಮಾನವತ್ವವನ್ನು ಮೆರೆದ ಕವಿ. ಗೊಮ್ಮಟೇಶ್ವರ ಅರ್ಥಾತ್ ಬಾಹುಬಲಿ ಜಗತ್ತಿನ ಚರಿತ್ರೆಯಲ್ಲಿ ವಿಶೇಷವಾದ ವ್ಯಕ್ತಿ ಸಂಪನ್ನತೆಯನ್ನು ಮೆರೆದ ಮಹಾನುಭಾವ. ಯುದ್ಧದಲ್ಲಿ ಗೆದ್ದರೂ ಸೋತವನಿಗೆ ನಮಸ್ಕರಿಸಿ, ಅವನಿಗೆ ತನ್ನ ಸಾಮ್ರಾಜ್ಯವನ್ನು ಒಪ್ಪಿಸಿ, ತಪಸ್ಸಿಗೆ ತೆರಳಿದ ತ್ಯಾಗಮೂರ್ತಿ ಬಾಹುಬಲಿ. ಜಗತ್ತಿನ ಯಾವ ಚರಿತ್ರೆಯಲ್ಲಿಯೂ ಗೆದ್ದವನು ಸೋತವನಿಗೆ ಸಾಮ್ರಾಜ್ಯ ಒಪ್ಪಿಸಿದ ಉದಾಹರಣೆಯಿಲ್ಲ. ಇದು ಈ ದೇಶದ ಚರಿತ್ರೆಯಲ್ಲಿ ಘಟಿಸಿದ ಮಹತ್ವದ ಘಟನೆ.
ಇಂತಹ ನೆಲದಲ್ಲಿ ಸಾಹಿತ್ಯ ಸಮ್ಮೇಳನ ಜರುಗುತ್ತಿದೆ. ನಮ್ಮ ಸಾಹಿತ್ಯ ನೀಡುವ ಲೋಕದರ್ಶನಕ್ಕೂ ಜೈನ ಧರ್ಮ ಸಾರುವ ಲೋಕದರ್ಶನಕ್ಕೂ ಇರುವ ಸಾಮ್ಯತೆ ಈ ಸಮ್ಮೇಳನದ ಯಶಸ್ಸಿನ ಪರಿಣಾಮವಾಗಬೇಕು ಎಂಬುದು ನಮ್ಮ ಆಶಯ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಮನುಷ್ಯ-ಮನುಷ್ಯರ ನಡುವೆ ಧರ್ಮ-ಧರ್ಮಗಳ ನಡುವೆ ಜಾತಿ-ಜಾತಿಗಳ ನಡುವೆ ದ್ವೇಷವನ್ನು ಹುಟ್ಟುಹಾಕುವ ವಿದ್ಯಮಾನಗಳು ಎಗ್ಗಿಲ್ಲದೆ ನಡೆಯುತ್ತಿವೆ. ಜೈನ ಧರ್ಮವೂ ಸೇರಿದಂತೆ ಎಲ್ಲ ಧರ್ಮಗಳ ಮೂಲ ಉದ್ದೇಶ ಮಾನವ ಕಲ್ಯಾಣವೇ ಆಗಿದೆ. ಆದರೆ ಈ ಧರ್ಮಗಳ ಅನುಯಾಯಿಗಳೆಲ್ಲರೂ ತಮ್ಮ ಧರ್ಮಗಳ ಮೂಲ ಆಶಯಕ್ಕೆ ಅನುಗುಣವಾಗಿಯೇ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗದು. ಇದು ಬಹಳ ಆತಂಕಕಾರಿ ಸಂಗತಿ. ಯಾವುದೇ ಪ್ರಜ್ಞಾವಂತ ವ್ಯಕ್ತಿಗೆ ಹೆಚ್ಚು ಸಂಕಟವನ್ನು ಉಂಟು ಮಾಡುವ ವಿಚಾರ. ಇಂತಹ ಆತಂಕಗಳ ನಿವಾರಣೆಗೆ ಸಮ್ಮೇಳನಗಳು ಆತ್ಮಾವಲೋಕನದ ವೇದಿಕೆಗಳಾಗಬೇಕು. ಅದು ಈ ಸಮ್ಮೇಳನದಲ್ಲಿ ಧರ್ಮಕ್ಷೇತ್ರದಲ್ಲಿ ಆಗುತ್ತದೆನ್ನುವ ನಂಬಿಕೆ ನಮ್ಮದಾಗಿದೆ.
ಇನ್ನು ಕನ್ನಡ ಭಾಷೆಗೆ ಸಂಬಂಧಿಸಿದಂತೆ ನಾನು ಪ್ರಸ್ತಾಪಿಸಲೇಬೇಕಾದ ಕೆಲವು ಮುಖ್ಯ ಸಂಗತಿಗಳಿವೆ. ಇಂದು ಕನ್ನಡ ಭಾಷೆ ಅಷ್ಟೇ ಅಲ್ಲ ಎಲ್ಲಾ ಪ್ರಾದೇಶಿಕ ಭಾಷೆಗಳು ಬಹುದೊಡ್ಡ ಆತಂಕಗಳನ್ನು ಎದುರಿಸುತ್ತಿವೆ. ಅವುಗಳ ಅಸ್ತಿತ್ವಕ್ಕೆ ಧಕ್ಕೆ ತರುವ ರೀತಿಯೊಳಗೆ ವಿದ್ಯಮಾನಗಳು ಬೆಳೆಯುತ್ತಿವೆ. ಇತ್ತೀಚೆಗೆ ಭಾರತ ಸರ್ವೋಚ್ಛ ನ್ಯಾಯಾಲಯವೂ ಕೂಡಾ ಮಗು ಯಾವ ಭಾಷೆಯಲ್ಲಿ ಕಲಿಯಬೇಕೆಂಬ ತೀರ್ಮಾನ ಪಾಲಕರಿಗೆ ಸೇರಿದ್ದು ಎಂಬ ತೀರ್ಪು ನೀಡಿದೆ. ಇದು ಕೇವಲ ಕನ್ನಡ ಭಾಷೆಗೆ ಮಾತ್ರವಲ್ಲ ದೇಶದ ಎಲ್ಲಾ ರಾಜ್ಯ ಭಾಷೆಗಳಿಗೆ ಬಂದಿರುವ ಕುತ್ತು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು.
ನಮ್ಮದು ಬಹುತ್ವದ ವ್ಯವಸ್ಥೆ. ಇಲ್ಲಿ ಬಹು ಭಾಷೆಗಳಿವೆ, ಬಹು ಸಂಸ್ಕೃತಿಗಳಿವೆ. ಬಹು ಮಾದರಿಯ ಜನಾಂಗಗಳಿವೆ. ಈ ಎಲ್ಲಾ ಸಮುದಾಯಗಳು ತಮ್ಮ ಸಾಮುದಾಯಿಕ ಅನನ್ಯತೆಯನ್ನು ಉಳಿಸಿಕೊಂಡೇ ಸಂವಿಧಾನಬದ್ಧವಾದ ಗಣತಂತ್ರ ವ್ಯವಸ್ಥೆಯನ್ನು ಗೌರವಿಸುವ ರೀತಿಯಲ್ಲಿ ಬದುಕನ್ನು ಕಟ್ಟಿಕೊಂಡಿವೆ. ಇಂತಹ ಬಹುತ್ವದ ಸ್ಥಳೀಯತೆಯನ್ನು ಗೌರವಿಸುವ ಹಾಗು ಒಕ್ಕೂಟದ ಭಾವೈಕ್ಯತೆಯನ್ನು ಬಲಗೊಳಿಸುವ ಮಾದರಿಯಲ್ಲಿ ನಮ್ಮ ಸಂವಿಧಾನ ರಚನೆಗೊಂಡಿದೆ. ಈ ಸಂವಿಧಾನದ ಆಶಯಕ್ಕೆ ಅನುಗುಣವಾಗಿಯೇ ಭಾಷಾವಾರು ಪ್ರಾಂತ್ಯಗಳ ವಿಂಗಡನೆಯಾಗಿದೆ.
ಪ್ರತಿಯೊಂದು ರಾಜ್ಯದ ರಾಜ್ಯಭಾಷೆಯು ಆ ನೆಲದ ಸಾರ್ವಭೌಮ ಭಾಷೆ. ಇದನ್ನು ಸಂವಿಧಾನ ಅಂಗೀಕರಿಸಿದೆ. ಮಾನ್ಯ ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಆಯಾ ರಾಜ್ಯಗಳ ರಾಜ್ಯಭಾಷೆ ಸಾರ್ವಭೌಮ ಭಾಷೆಯಾಗಬೇಕು. ಬೇರಾವುದೇ ಭಾಷೆ ಆ ನೆಲದ ಬದುಕಿನ ಮೇಲೆ ಅಧಿಪತ್ಯವನ್ನು ಮೆರೆಯುವುದು ಭಾಷಾವಾರು ಪ್ರಾಂತ್ಯ ರಚನೆಯ ನೀತಿಗೆ ವಿರುದ್ಧವಾದುದು. ಸಂವಿಧಾನವೂ ಇದನ್ನು ಒಪ್ಪುವುದಿಲ್ಲ. ಸ್ಥಳೀಯತ್ವವನ್ನು ಉಳಿಸಿಕೊಂಡೇ, ಅರ್ಥಾತ್ ಸ್ಥಳೀಯ ಭಾಷೆಯ ಸ್ವಾಯತ್ತತೆಯನ್ನು ಉಳಿಸಿಕೊಂಡೇ, ಅನ್ಯಭಾಷೆಗಳನ್ನು ಕಲಿಯುವುದಕ್ಕೆ ಅವಕಾಶ ಕೊಡಬೇಕಾದ್ದು ಒಕ್ಕೂಟ ವ್ಯವಸ್ಥೆಯೊಳಗಿನ ನೀತಿ ಸಂಹಿತೆ.
ಆದರೆ ಇಂದು ಇಂಗ್ಲೀಷ್ ಭಾಷೆಯ ಹೆಸರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ಹಲ್ಲೆ, ರಾಜ್ಯ ಭಾಷೆಗಳ ಅಳಿವಿಗೆ ಬೀಸಿದ ಪ್ರಹಾರವಾಗಿದೆ. ಕರ್ನಾಟಕದೊಳಗೆ ಈ ಎಲ್ಲಾ ಭಾಷೆಗಳನ್ನಾಡುವ ಭಾಷಿಕ ಸಮುದಾಯಗಳಿವೆ. ಇಂಗ್ಲೀಷ್ ಈ ನೆಲದ ಮಾತೃಭಾಷೆಯಲ್ಲ. ಅಕಸ್ಮಾತ್ ಮಾತೃ ಭಾಷೆಯನ್ನಾಗಿ ಇರುವವರು ಯಾರಾದರೂ ಇದ್ದರೆ, ಅವರು ಆಂಗ್ಲೊಇಂಡಿಯನ್ನರು. ಶೇಕಡಾ 0.5 ರಷ್ಟಕ್ಕೂ ಕಡಿಮೆ ಇರುವವರು. ಆದರೆ ಇಂಗ್ಲೀಷನ್ನೇ ಮಾತೃ ಭಾಷೆ ಎಂದು ಘೋಷಿಸಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುವ ಸಂಖ್ಯಾ ಪ್ರಮಾಣವನ್ನು ನೋಡಿದರೆ ಈ ಮಹಾಸುಳ್ಳನ್ನೇ ಸತ್ಯವೆಂದು ಒಪ್ಪಿ ಅಂಗೀಕರಿಸುವುದನ್ನು ನೋಡಿದಾಗ ನ್ಯಾಯ ಎಲ್ಲಿದೆ ? ಎಂದು ಯೋಚಿಸಬೇಕಾಗಿದೆ.
ನನ್ನ ಬಹುಕಾಲದ ಸ್ನೇಹಿತರೂ, ಗೌರವಾನ್ವಿತ ಸಾಹಿತಿಗಳಾದ ದೇವನೂರ ಮಹದೇವ ಅವರು ಭಾಷಾ ಮಾಧ್ಯಮದ ಬಗ್ಗೆ ಬಹು ಮುಖ್ಯವಾದ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ನಾಡು-ನುಡಿಯ ಬಗ್ಗೆ ಅವರಿಗೆ ಇರುವ ಕಾಳಜಿ ಸಾಟಿ ಇಲ್ಲದ್ದು. ಅವರ ಅಭಿಪ್ರಾಯಕ್ಕೆ ಸರ್ಕಾರದ ಸಮ್ಮತಿಯೂ ಇದೆ. ಆದರೆ ಈಗಿನ ಸಮಸ್ಯೆ ಕೇವಲ ರಾಜ್ಯ ಸರ್ಕಾರದ ನಿರ್ಧಾರದಿಂದ ಪರಿಹಾರವಾಗುವಂತಹುದಲ್ಲ. ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ನಂತರ ದೇಶದ ಎಲ್ಲಾ ಜನಭಾಷೆಗಳ ಅಸ್ತಿತ್ವ ಡೋಲಾಯಮಾನವಾಗಿದೆ.
ಶಿಕ್ಷಣದ ವ್ಯಾಪಾರೀಕರಣದ ದಂಧೆಯಿಂದ ಪ್ರಾದೇಶಿಕ ಭಾಷೆಗಳನ್ನು ರಕ್ಷಿಸಬೇಕಾಗಿದೆ. ಅದಕ್ಕಾಗಿ ಶಾಸನಬದ್ಧವಾಗಿ ಹೊಸ ಕಾನೂನನ್ನು ತರಬೇಕಾಗಿದೆ. ಅಗತ್ಯವಾದರೆ ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಾಗಬಹುದು. ಇದೇ ಬೇಡಿಕೆಯನ್ನು ಮುಂದಿಟ್ಟುಕೊಂಡು ಸರ್ವಪಕ್ಷಗಳ ನಿಯೋಗದೊಂದಿಗೆ ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಈ ಬಗ್ಗೆ ದೇಶದ ಎಲ್ಲಾ ಮುಖ್ಯಮಂತ್ರಿಗಳಿಗೂ ಪತ್ರ ಬರೆದಿದ್ದೇನೆ.
ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ನೀಡುವುದನ್ನು ಕಡ್ಡಾಯಗೊಳಿಸುವುದಕ್ಕೆ ಪೂರಕವಾಗಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ 2012ಕ್ಕೆ ತಿದ್ದುಪಡಿ ತರುವ ದಿಟ್ಟ ನಿರ್ಧಾರವನ್ನು ನಮ್ಮ ಸರ್ಕಾರ ಕೈಗೊಂಡಿದೆ. ಇಲ್ಲಿಯವರೆಗೆ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಮಕ್ಕಳ ಮಾತೃ ಭಾಷೆಯಲ್ಲಿಯೇ ಇರಬೇಕು ಎಂಬ ಒಕ್ಕಣಿಕೆ ಇತ್ತು. ಅದನ್ನು ಒಂದನೆ ತರಗತಿಯಿಂದ ಐದನೇ ತರಗತಿವರೆಗಿನ ಶಿಕ್ಷಣ ಕಡ್ಡಾಯವಾಗಿ ಕನ್ನಡದಲ್ಲಿಯೇ ಇರತಕ್ಕದ್ದು ಎಂದು ತಿದ್ದುಪಡಿ ಮಾಡಲಾಗಿದೆ.
ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷಾ ಮಾಧ್ಯಮ ಕಡ್ಡಾಯಗೊಳಿಸಿರುವ ಆದೇಶವನ್ನು ರದ್ದುಮಾಡಿರುವ ತೀರ್ಪು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ಪರಿಹಾರತ್ಮಕ ಅರ್ಜಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಮೊಕದ್ದಮೆಗಳನ್ನು ಎದುರಿಸುವುದಕ್ಕಾಗಿ ಈ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ತಮಿಳುನಾಡು ಸರ್ಕಾರ ಸ್ಥಳೀಯ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಿರುವ ಮಾದರಿ ಆಧರಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಇತ್ತೀಚೆಗೆ ದೇಶದ ಪ್ರಸಿದ್ಧ ಭಾಷಾ ತಜ್ಞರನ್ನು ಕರೆಸಿ ರಾಷ್ಟ್ರೀಯ ವಿಚಾರ ಸಂಕಿರಣ ನಡೆಸಿ ಅವರ ಅಭಿಪ್ರಾಯಗಳನ್ನು ಪಡೆದಿದೆ. ಇದರ ಆಧಾರದಲ್ಲಿ ನಮ್ಮ ಮುಂದಿನ ಕಾನೂನಿನ ಮತ್ತು ರಾಜಕೀಯ ಹೋರಾಟದ ಸ್ವರೂಪವನ್ನು ನಿರ್ಧರಿಸಲಾಗುವುದು. ಕನ್ನಡದ ಭಾಷೆ, ನೆಲ ಮತ್ತು ಜಲದ ರಕ್ಷಣೆ ಬಗ್ಗೆ ನಮ್ಮ ಸರ್ಕಾರದ ಬದ್ಧತೆ ರಾಜಿ ಇಲ್ಲದ್ದು. ಈ ಬಗ್ಗೆ ಅನುಮಾನವೇ ಬೇಡ.
ಪ್ರತಿಯೊಂದು ಸಾಹಿತ್ಯ ಸಮ್ಮೇಳನಕ್ಕೂ ನಾಡು, ನುಡಿ ಕುರಿತಾದ ಜ್ವಲಂತ ಸಮಸ್ಯೆಗಳನ್ನು ಚರ್ಚಿಸುತ್ತಿರುವುದು ಒಳ್ಳೆಯ ಸಂಗತಿಯಾಗಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವ ಸಲಹೆಗಳನ್ನು ಸರ್ಕಾರಕ್ಕೆ ನೀಡುವುದು ಸೂಕ್ತವಾಗಿದೆ.
ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಂಡ ನಿರ್ಣಯಗಳನ್ನೆಲ್ಲಾ ಅನುಷ್ಠಾನಕ್ಕೆ ತರಲು ನಿರ್ಣಯವನ್ನು ಕೈಗೊಳ್ಳುವುದಾಗಿ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರ ಸಾಧ್ಯವಾದಷ್ಟು ಈ ನಿರ್ಣಯಗಳನ್ನು ಪುನರ್ ಪರಿಶೀಲಿಸಿ ಅನುಷ್ಠಾನಗೊಳಿಸುವ ಬಗ್ಗೆ ಕ್ರಮ ಜರುಗಿಸುವುದು. ಅವುಗಳ ಅನುಷ್ಠಾನಕ್ಕೆ ಪೂರಕವಾದ ವಿಧಿ ವಿಧಾನಗಳನ್ನು ಕಾರ್ಯಗತಗೊಳಿಸಲು ನಮ್ಮ ಸರ್ಕಾರ ಶ್ರಮಿಸಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲು ಇಚ್ಛಿಸುತ್ತೇನೆ.
ಕನ್ನಡ ನಾಡಿನ ಜನತೆಯ ಹಿತರಕ್ಷಣೆ, ಜನತೆಯ ಬದುಕು ಹಸನಾದರೆ, ಆ ಜನರು ಆಡುವ ಭಾಷೆ, ಸಂಸ್ಕೃತಿ, ಆ ಜನರ ಭವಿಷ್ಯ ಉಜ್ವಲಗೊಳ್ಳುತ್ತದೆ. ನಾವು ಈ ಕುರಿತು ವಿಶೇಷ ಹಾಗೂ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದೇವೆ. ಈ ಸಮ್ಮೇಳನದಲ್ಲಿ ಮೂರು ದಿನ ನಾಡು ಮತ್ತು ನುಡಿಯ ಬೆಳವಣಿಗೆಗೆ ಪೂರಕವಾದ ವಿವಿಧ ವಿಷಯಗಳ ಬಗ್ಗೆ ವಿದ್ವತ್ ಗೋಷ್ಠಿಗಳಿವೆ. ಅವುಗಳ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಿ ಎಂದು ಸಾಹಿತ್ಯಾಸಕ್ತರಲ್ಲಿ ಮನವಿ ಮಾಡುತ್ತೇನೆ.
ಈ ಸಮ್ಮೇಳನದ ಎಲ್ಲಾ ಕಾರ್ಯಕ್ರಮಗಳೂ ಯಶಸ್ವಿಯಾಗಿ ನೆರವೇರಲಿ. ಕನ್ನಡ ಜನಮನದಲ್ಲಿ ಹೊಸ ಸ್ಫೂರ್ತಿ ತುಂಬಲಿ ಎಂದು ಹೃದಯಾಂತರಾಳದಿಂದ ಶುಭ ಕೋರುತ್ತಾ, ಕವಿ ನಿಸಾರ್ ಅಹಮದ್ ಅವರ ಈ ಸಾಲುಗಳೊಂದಿಗೆ ನನ್ನ ಮಾತುಗಳನ್ನು ಮುಗಿಸುತ್ತೇನೆ.
ಕನ್ನಡವಲ್ಲ ತಿಂಗಳು ನಡೆಸುವ ಗುಲ್ಲಿನ ಕಾಮನಬಿಲ್ಲು
ರವಿಶಶಿ ತಾರೆಯ ನಿತ್ಯೋತ್ಸವವಿದು
ಸರಸ್ವತಿ ವೀಣೆಯ ಸೊಲ್ಲು
ಜೈ ಹಿಂದ್ ! ಜೈ ಕರ್ನಾಟಕ !
http://goo.gl/gpOLvM

Advertisement

0 comments:

Post a Comment

 
Top