ಅಪಘಾತಗೊಂಡ ಜೆಸಿಬಿ ವಾಹನದ ದುರಸ್ತಿ ವೆಚ್ಚವನ್ನು ಪಾವತಿಸದೇ ಇರುವುದು ಸೇವಾ ನ್ಯೂನತೆ ಎಂದು ಪರಿಗಣಿಸಿರುವ ಕೊಪ್ಪಳ ಗ್ರಾಹಕರ ವೇದಿಕೆ, ದುರಸ್ತಿ ವೆಚ್ಚ ಹಾಗೂ ಸೇವಾ ನ್ಯೂನತೆಗೆ ಪರಿಹಾರವನ್ನು ಪಾವತಿಸುವಂತೆ ವಿಮಾ ಕಂಪನಿಗೆ ಆದೇಶಿಸಿದೆ.
ಕೊಪ್ಪಳದ ಸೈಯದ್ ಮೆಹಮೂದ್ ಹುಸೇನಿ ಎಂಬುವವರು ತಮ್ಮ ಜೆಸಿಬಿ ಯಂತ್ರಕ್ಕೆ ಚೆನ್ನೈನ ಚೋಲಮಂಡಲಂ ಎಂ.ಎಸ್. ಜನರಲ್ ಇನ್ಸೂರೆನ್ಸ್ ಕಂ.ಲಿ. ಇವರ ಬಳಿ ವಿಮೆ ಮಾಡಿಸಿದ್ದರು. ವಿಮಾ ಪಾಲಿಸಿ ಚಾಲ್ತಿಯಲ್ಲಿರುವ ಸಂದರ್ಭದಲ್ಲಿ ವಾಹನ ಅಪಘಾತಗೊಂಡಿದ್ದರಿಂದ, ವಿಮಾ ಕಂಪನಿಗೆ ಮಾಹಿತಿ ನೀಡಿದರು. ಕಂಪನಿಯ ಸರ್ವೇಯರ್ ಅಪಘಾತ ಸ್ಥಳಕ್ಕೆ ಬಂದು ವಿವರಗಳನ್ನು ಪಡೆದುಕೊಂಡು ಹೋದ ನಂತರ, ಅವರ ನಿರ್ದೇಶನದಂತೆ ವಾಹನದ ದುರಸ್ತಿಯನ್ನು ಮಾಡಿಸಲಾಯಿತು. ನಂತರ ವಾಹನ ದುರಸ್ತಿಯ ಮೊತ್ತ ೧೩೧೭೦ ರೂ. ಗಳನ್ನು ಮರು ಪಾವತಿಸುವಂತೆ ಕಂಪನಿಗೆ ಕ್ಲೇಮ್ ಮಾಡಿದರೂ, ಕಂಪನಿಯು ಮೊತ್ತ ಪಾವತಿಸದೇ ಇದ್ದುರಿಂದ, ದುರಸ್ತಿ ಮೊತ್ತವನ್ನು ಶೇ. ೧೮ರ ಬಡ್ಡಿಯೊಂದಿಗೆ ಹಾಗೂ ಮಾನಸಿಕ ಯಾತನೆಗೆ ಪರಿಹಾರ ರೂ. ೧೦೦೦೦, ಆದಾಯ ನಷ್ಟಕ್ಕೆ ರೂ. ೨೦೦೦೦ ಸೇರಿದಂತೆ ಒಟ್ಟು ೪೩೧೭೦ ಗಳನ್ನು ಕೊಡಿಸುವಂತೆ ಸೈಯದ್ ಮೆಹಮೂದ್ ಹುಸೇನಿ ಗ್ರಾಹಕರ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆಯ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ, ಹಾಗೂ ಪ್ರಭಾರಿ ಸದಸ್ಯ ಆರ್. ಬಂಡಾಚಾರ್ ಅವರು, ಕಂಪನಿಯ ಸರ್ವೇಯರ್ ತಮ್ಮ ವರದಿ ನೀಡಿದ ನಂತರವೂ, ಕ್ಲೇಮ್ ಮೊತ್ತವನ್ನು ವಿಮಾ ಕಂಪನಿಯು ಪಾವತಿಸದೇ ಇರುವುದು ಸೇವಾ ನೂನತೆ ಎಂದು ಪರಿಗಣಿಸಿದೆ. ಸರ್ವೇಯರ್ ವರದಿಯಂತೆ ವಾಹನದ ಆಯ್ದ ಬಿಡಿಭಾಗಗಳ ದರದ ಮೊತ್ತ ರೂ. ೧೧೯೩೯ ಗಳಲ್ಲಿ, ಪಾಲಿಸಿ ನಿಬಂಧನೆಯನ್ವಯ ರೂ. ೮೭೯೦ ಗಳನ್ನು ಕಡಿತಗೊಳಿಸಿ, ಉಳಿದ ರೂ. ೩೧೪೯ ಹಾಗೂ ಸೇವಾ ನ್ಯೂನತೆಗೆ ಪರಿಹಾರ ರೂ. ೫೦೦೦ ಸೇರಿದಂತೆ ಒಟ್ಟು ೮೧೪೯ ಗಳನ್ನು ವಾರ್ಷಿಕ ಶೇ. ೧೦ ರ ಬಡ್ಡಿಯೊಂದಿಗೆ ಪೂರ್ಣ ಹಣ ಪಾವತಿಸುವವರೆಗೆ, ಅಲ್ಲದೆ ಪ್ರಕರಣದ ಖರ್ಚು ರೂ. ೩೦೦೦ ಗಳನ್ನು ಪಾವತಿಸಬೇಕು. ವಿಮಾ ಕಂಪನಿಯು ಈ ಆದೇಶವನ್ನು ಮೂರು ತಿಂಗಳ ಒಳಗಾಗಿ ಪಾಲಿಸುವಂತೆ ಗ್ರಾಹಕರ ವೇದಿಕೆ ತೀರ್ಪು ನೀಡಿದೆ.
0 comments:
Post a Comment