PLEASE LOGIN TO KANNADANET.COM FOR REGULAR NEWS-UPDATES

  ಗ್ರಾಮೀಣ ಪ್ರದೇಶಗಳಲ್ಲಿ ಅನುಪಯುಕ್ತ ಕೊಳವೆ ಬಾವಿಗಳನ್ನು ಅಥವಾ ತೆರೆದ ಕೊಳವೆ ಬಾವಿಗಳನ್ನು ಕೂಡಲೆ ಮುಚ್ಚಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಹಾಗೂ ಒಂದು ವೇಳೆ ಅಂತಹ ಯಾವುದೇ ಅನುಪಯುಕ್ತ ಕೊಳವೆ ಬಾವಿ ಅಥವಾ ತೆರೆದ ಕೊಳವೆ ಬಾವಿಗಳು ಕಂಡು ಬಂದಲ್ಲಿ ಸಾರ್ವಜನಿಕರು ಮಾಹಿತಿ ಒದಗಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಸೂಚನೆ ನೀಡಿದ್ದಾರೆ.
  ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ರೀತಿಯ ನೀರು ಸರಬರಾಜು ಯೋಜನೆಗಳಿಗಾಗಿ ಕೊರೆಯಲಾಗಿರುವ ಕೊಳವೆ ಭಾವಿಗಳಲ್ಲಿ ಕೆಲವೊಂದು ಕೊಳವೆ ಬಾವಿಗಳು ನೀರಿನ ಜಲ ಇಲ್ಲದಿರುವುದರಿಂದ ಅಥವಾ ನೀರಿನ ಜಲ ಬತ್ತುವಿಕೆಯಿಂದಾಗಿ ಅನುಪಯುಕ್ತಗೊಂಡಿರುವ ಸಾಧ್ಯತೆಗಳಿದ್ದು, ಅಂತಹ ಕೊಳವೆ ಭಾವಿಗಳನ್ನು ಮುಚ್ಚುವಂತೆ ಎಲ್ಲ ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕಾ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.    
ತೆರೆದ ಕೊಳವೆ ಬಾವಿಗಳನ್ನು ಜಾಗೃತಿಯಿಂದ ಮುಚ್ಚುವ ಕಾರ್ಯ ಕೈಗೊಳ್ಳದೇ ಇರುವುದರಿಂದ ಇವುಗಳಿಂದಾಗಿ ಪ್ರಾಣಹಾನಿ ಅಥವಾ ಅನಾಹುತ ಸಂಭವಿಸುವ ಸಾಧ್ಯತೆಗಳಿರುತ್ತವೆ.  ಅಲ್ಲದೇ ಸಾರ್ವಜನಿಕ ವಲಯದಲ್ಲಿ ವೈಯಕ್ತಿಕ ಮನೆಗಳಿಗಾಗಿ ಮತ್ತು ಹೊಲ ಗದ್ದೆಗಳಿಗಾಗಿ ಸಾರ್ವಜನಿಕರು ಕೊರೆಯಿಸಿಕೊಳ್ಳುವ ಕೊಳವೆ ಬಾವಿಗಳು ಒಂದು ವೇಳೆ ವಿಫಲಗೊಂಡಲ್ಲಿ ಅಥವಾ ಅನುಪಯುಕ್ತಗೊಂಡಲ್ಲಿ ಸಾರ್ವಜನಿಕರು ಅದನ್ನು ಮುಚ್ಚುವ ಬಗ್ಗೆ ನಿರ್ಲಕ್ಷ್ಯತೆ ತೋರುವುದರಿಂದ ಇಂತಹ ಕೊಳವೆ ಬಾವಿಗಳಲ್ಲಿಯೂ ಸಹ ಚಿಕ್ಕ ಮಕ್ಕಳು ಬೀಳುವ ಮೂಲಕ ಪ್ರಾಣಹಾನಿ ಉಂಟಾಗುವ ಸಂಭವ ಇರುತ್ತದೆ.  ಈ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡುವುದು ಅತ್ಯಂತ ಅಗತ್ಯವಾಗಿದ್ದು, ಇಂತಹ ಅನಾಹುತಗಳಿಗೆ ಅವಕಾಶ ಮಾಡಿಕೊಡದೆ, ಮುನ್ನೆಚ್ಚರಿಕೆ ವಹಿಸುವಲ್ಲಿ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಬೇಕು.  ಒಂದು ವೇಳೆ ಯಾವುದೇ ಪ್ರದೇಶದಲ್ಲಿ ಅನುಪಯುಕ್ತ ತೆರೆದ ಕೊಳವೆ ಬಾವಿ ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೆ ಆಯಾ ಗ್ರಾಮ ಪಂಚಾಯತಿಯ ಕಚೇರಿ ಅಥವಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿಯನ್ನು ಸಲ್ಲಿಸಬೇಕು.  ಅಥವಾ ಆಯಾ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ, ಕೊಪ್ಪಳ- ೦೮೫೩೯-೨೨೦೩೯೯, ಯಲಬುರ್ಗಾ- ೦೮೫೩೪-೨೨೦೧೩೬, ಗಂಗಾವತಿ- ೦೮೫೩೩-೨೩೦೨೩೦.  ಕುಷ್ಟಗಿ- ೦೮೫೩೬-೨೬೭೦೨೮ ಅಥವಾ ಜಿಲ್ಲಾ ಪಂಚಾಯತ್, ಕೊಪ್ಪಳ- ೨೨೦೦೦೨, ದೂರವಾಣಿಗಳಿಗೆ ಮಾಹಿತಿ ನೀಡಬಹುದಾಗಿದೆ ಎಂದು ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ   ಮನವಿ ಮಾಡಿಕೊಂಡಿದ್ದಾರೆ.

Advertisement

0 comments:

Post a Comment

 
Top