ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ನಮ್ಮ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ಹೊಣೆಗಾರಿಕೆಯನ್ನು ನಮ್ಮ ಸಂವಿಧಾನ ನಿಗದಿಪಡಿಸಿದೆ. ಪ್ರತಿಯೊಬ್ಬ ಮತದಾರ, ತನ್ನ ಹಕ್ಕು ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ದೊರಕಿದಂತೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಅವರು ಹೇಳಿದರು.
ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಪ್ರಜೆಗಳೇ ಪ್ರಭುಗಳು, ಪ್ರಜೆಗಳ ಪ್ರತಿನಿಧಿಗಳನ್ನು ವಿಧಾನಸಭೆಗೆ ಆರಿಸಿ ಕಳುಹಿಸುವ ಮಹತ್ತರ ಜವಾಬ್ದಾರಿ ಈ ನಾಡಿನ ಪ್ರತಿಯೊಬ್ಬ ಮತದಾರನ ಮೇಲಿದ್ದು, ಈ ಜವಾಬ್ದಾರಿಯ ಮಹತ್ವವನ್ನು ಅರಿತು, ಎಲ್ಲ ಮತದಾರರು ತಪ್ಪದೆ ತಮ್ಮ ಮತ ಚಲಾಯಿಸಬೇಕು. ಮತದಾರ ಎನಿಸಿಕೊಂಡವರು ತಮ್ಮ ಹೊಣೆಗಾರಿಕೆಯನ್ನು ಮರೆತಲ್ಲಿ, ಅಂತಹ ವ್ಯಕ್ತಿ ಯಾವುದೇ ಸೌಲಭ್ಯ ಕೇಳುವುದು ಅಥವಾ ಆರೋಪಿಸುವ ನೈತಿಕತೆಯನ್ನು ಕಳೆದುಕೊಂಡಂತಾಗುತ್ತದೆ. ಪ್ರತಿಯೊಂದು ಮತವೂ, ಚುನಾವಣೆಯ ಫಲಿತಾಂಶದ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿದ್ದು, ಅಂತಹ ಅಮೂಲ್ಯವಾದ ಮತವನ್ನು ಹಣದ ಆಸೆಗೆ ಅಥವಾ ಹೆಂಡ, ಮದ್ಯದ ಚಟಕ್ಕೆ ಮಾರಾಟ ಮಾಡಿಕೊಂಡಲ್ಲಿ, ಪ್ರಜಾಪ್ರಭುತ್ವದ ಸಿದ್ಧಾಂತಕ್ಕೆ ಮಾರಕವಾಗಲಿದೆ ಎಂದರು.
ಶಿಕ್ಷಣ ಪ್ರೇಮಿ ರಾಯನಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕರುಗಳಾದ ಶರಣಪ್ಪ ಮುಂಡರಗಿ, ವೀರನಗೌಡ ಮಾಲಿಪಾಟೀಲ್, ಎನ್.ಎಸ್.ಎಸ್. ಅಧಿಕಾರಿ ಬಸವರಾಜ ಎಸ್.ಎಂ., ಕಲಾವಿದ ಹನುಮಂತಪ್ಪ ಈಳಿಗೇರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಿಬಿರಾರ್ಥಿ ರಮೇಶ್ರಾವ್ ಗಾಯಕವಾಡ್ ಸ್ವಾಗತಿಸಿದರು, ಸಿದ್ದೇಶ್ ಪಾಟೀಲ್ ವಂದಿಸಿದರು, ಮುರಳಿರಾವ್, ರಾಕೇಶ್ ನಿರೂಪಿಸಿದರು. ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಎಲ್ಲ ಮತದಾರರು ಕಡ್ಡಾಯ ಮತದಾನ ಮಾಡುವ ಕುರಿತು ಶಿಬಿರಾರ್ಥಿಗಳು ಹಾಗೂ ಹಲಗೇರಿ ಗ್ರಾಮದ ಸಾರ್ವಜನಿಕರು ಇದೇ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
0 comments:
Post a Comment