PLEASE LOGIN TO KANNADANET.COM FOR REGULAR NEWS-UPDATES

: ಕಳ್ಳಭಟ್ಟಿ ಸರಾಯಿ ಮಾರಾಟ ಮಾಡಿದ್ದಕ್ಕಾಗಿ ಗಜೇಂದ್ರಗಡದ ಆರೋಪಿ ಮಂಗಲಪ್ಪ ತಂದೆ ಯಮನಪ್ಪ ರಾಠೋಡ  ಎಂಬಾತನಿಗೆ  ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 
ಮಾನವ ಜೀವಕ್ಕೆ ಹಾನಿಕರವಾಗುವ ಹಾಗೂ ಉಪಯುಕ್ತ ಸ್ಥಿತಿಯಲ್ಲಿರದ ವಿಷಪೂರಿತ ರಸಾಯನಿಕ ವಸ್ತುಗಳನ್ನು ಅವೈಜ್ಞಾನಿಕವಾಗಿ ಮಿಶ್ರಣ ಮಾಡಿ ತಯಾರಿಸಿದ ಕಳ್ಳಭಟ್ಟಿ ಸರಾಯಿಯನ್ನು ಹಿರೇಮ್ಯಾಗೇರಿ ಗ್ರಾಮದ ಬಸ್ ನಿಲ್ದಾಣ ಹತ್ತಿರ ಈ ಆರೋಪಿಯು ಒಂದು ಬಿಳಿ ಪ್ಲಾಸ್ಟಿಕ್ ಗೊಬ್ಬರದ ಚೀಲದಲ್ಲಿ, ೫ ಲೀಟರ್ ಅಳತೆಯ ಎರಡು ಪ್ಲಾಸ್ಟಿಕ್ ಕ್ಯಾನ್‌ಗಳಲ್ಲಿ ಒಟ್ಟು ೧೦ ಲೀಟರಿನಷ್ಟು ಕಳ್ಳಭಟ್ಟಿ ಸರಾಯಿಯನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದಾಗ  ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಶೈಲ ಬಿ.ಮಠಪತಿ ಅವರು ದಾಳಿ ನಡೆಸಿ ವಶಕ್ಕೆ ಪಡೆದಿದ್ದರು. 
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರಸಪ್ಪ ಭಜಂತ್ರಿ ಅವರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.  ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಕಾಂತ ಡಿ.ಬಬಲಾದಿ ಅವರು, ಆರೋಪಿ ಮಂಗಲಪ್ಪ ತಂದೆ ಯಮನಪ್ಪ ರಾಠೋಡ ಎಂಬಾತನು ತಪ್ಪಿತಸ್ಥ ಎಂದು ತೀರ್ಮಾನಿಸಿ, ಆರೋಪಿಗೆ ಭಾ.ದ.ಸ. ಕಲಂ: ೨೭೩ ರ ಅಪರಾಧಕ್ಕಾಗಿ ೬ ತಿಂಗಳ ಸಾಧಾ ಶಿಕ್ಷೆ ಹಾಗೂ ರೂ.೧೦೦೦/- ದಂಡ,  ಕಲಂ: ೨೮೪ ರ ಅಪರಾಧಕ್ಕಾಗಿ ೬ ತಿಂಗಳ ಸಾದಾ ಕಾರಾಗೃಹ ಶಿಕ್ಷೆ  ಮತ್ತು ೧೦೦೦/- ದಂಡ, ಕಲಂ: ೩೪ ಅಬಕಾರಿ ಕಾಯ್ದೆ ಅಪರಾಧಕ್ಕಾಗಿ ೧ ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು ೧೦೦೦/- ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಂ.ಎ.ಪಾಟೀಲ್ ಅವರು ವಾದ ಮಂಡಿಸಿದ್ದರು. 

Advertisement

0 comments:

Post a Comment

 
Top