PLEASE LOGIN TO KANNADANET.COM FOR REGULAR NEWS-UPDATES

        ಶ್ರೀಕೃಷ್ಣನ ಹೆಸರಲ್ಲಿ ಅನುಪಮ ಆನಂದದ ಅನುಭವವಿದೆ. ಅವನ ವ್ಯಕ್ತಿತ್ವವೇ ಒಂದು ವರ್ಣಮಯ ಹೂರಾಶಿ. ಆತ ನಮ್ಮವನೆಂಬ ವ್ಯಾಮೋಹ ನಮ್ಮನ್ನು ಸಹಜವಾಗಿ ಆವರಿಸುತ್ತದೆ. ಕೃಷ್ಣ ತನ್ನ ತುಂಟಾಟದಿಂದ ಮತ್ತಷ್ಟು ಮದ್ದಾಗಿ ಕಾಣುತ್ತಾನೆ, ದನಗಾಹಿ ಬಾಲಕ ಕೊಳಲನ್ನೂದುತ್ತಾ ಬೃಂದಾವನದಲ್ಲಿ ಗೋವುಗಳ, ಗೋಪಾಲರ, ಗೋಪಿಯರ ಮನಗೆದ್ದ, ತನ್ನ ತುಂಟಾಟದಿಂದ ಸರ್ವರಿಗೂ ಪ್ರಿಯನಾದ ಆದುದರಿಂದ ಕೃಷ್ಣ ಎಂಬುದು ಸಾರ್ವಕಾಲಿಕ ಸರ್ವಮಾನ್ಯ ವ್ಯಕ್ತಿತ್ವ.
















       ಶ್ರೀಕೃಷ್ಣನ ಬಾಲ್ಯ, ತುಂಟಾಟ, ಕೊಳಲುವಾದನ, ನವರಸವು ಭಾರತೀಯ ಕಲೆಗಳಲ್ಲಿ ಅದರದೇ ಆದ ಮಹತ್ವಸ್ಥಾನ ಹೊಂದಿದೆ. ಶಿಲ್ಪಕಲೆ, ಸಾಹಿತ್ಯ, ಸಂಗೀತ, ಚಿತ್ರಕಲೆ, ನಾಟ್ಯಕಲೆಗಳಲ್ಲಿ ಶ್ರೀಕೃಷ್ಣನ ಲೀಲೆಗಳು ಶತ-ಶತಮಾನಗಳಿಂದಲೂ ನಮ್ಮ ಸಂಸ್ಕೃತಿಯ ಭಾಗವಾಗಿದೆ. ಹೀಗಾಗಿಯೇ ಕಲಾವಿದರು ಶ್ರೀಕೃಷ್ಣ ವರ್ಣನೆಯನ್ನು ಅವರದೇ ಆದ ಮಾಧ್ಯಮ ಮತ್ತು ಶೈಲಿಯಲ್ಲಿ ಅಭಿವ್ಯಕ್ತ ಪಡಿಸುತ್ತಾ ಬಂದಿದ್ದಾರೆ. ಅಂತಹ ಕಲೆಗಳಲ್ಲಿ ಸಾಂಝಿ ಕಾಗದ ಕತ್ತರಿ ಕಲೆಯೂ ಒಂದು. ಸಾಂಝಿಕಲೆಯು ಶ್ರೀಕೃಷ್ಣನ ಲೀಲೆಗಳನ್ನು ಆಧರಿಸಿದ ಕಲೆಯಾಗಿದೆ. 
        ನಮ್ಮ ಪುರಾತನ ಅಪರೂಪದ ಜನಪದ ಕಲಾಪ್ರಕಾರಗಳಲ್ಲಿ ಸಾಂಝಿ(ಕಾಗದಕತ್ತರಿ) ಕಲೆಯೂ ಒಂದು. ಸಾಂಝಿಕಲಾವಿದ ಎಸ್.ಎಫ್.ಹುಸೇನಿ ಮೈಸೂರು ಇವರು ಶ್ರೀಕೃಷ್ಣ ವಿಭಿನ್ನ, ವಿಶೇಷ ಚಿತ್ರಗಳನ್ನು ಬಹುಕಲಾತ್ಮಕವಾಗಿ ಕಾಗದದಲ್ಲಿ ಕತ್ತರಿ ಹಾಗು ಕಟರ್ ಸಹಾಯದಿಂದ ಸೂಕ್ಷ ವಾಗಿ ರಚಿಸಿದ್ದಾರೆ. ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಸಾಂಝಿ ಕಲೆ ದೇಶ ವಿದೇಶಗಳಿಗೆ ವ್ಯಾಪಿಸಿದ್ದು, ಬೇರೆಬೇರೆ ಹೆಸರುಗಳಲ್ಲಿ ಕರೆಯುತ್ತಾರೆ. 

ಸಾಂಝಿಕಲೆಯು ನಮ್ಮದೇಶದಲ್ಲಿ ಹಲವಾರು ಶತಮಾನಗಳ ಹಿಂದಿನಿಂದಲೂ ನಮ್ಮ ಸಂಪ್ರದಾಯದಲ್ಲಿ ಬಳಕೆಯಲ್ಲಿದೆ. ಉತ್ತರಪ್ರದೇಶದಲ್ಲಿ ರಂಗೋಲಿಯನ್ನು ಸಾಂಝಿ ಎನ್ನುತ್ತಾರೆ. ಸಾಂಝಿ ಎನ್ನುವುದರ ಮೂಲ ಅರ್ಥ ಅಲಂಕಾರ, ಸಿಂಗಾರ. ಮಥುರ ಸಾಂಝಿಕಲೆಯ ತವರು. ಶ್ರೀ ಕೃಷ್ಣನ ಜನ್ಮಸ್ಥಳವೆಂದು ಭಾರತೀಯರು ಪೂಜಿಸುವ ಸ್ಥಳದಲ್ಲಿ ಸಾಂಝಿಕಲೆಯನ್ನು ಕೃಷ್ಣಪರಮಾತ್ಮನ ಲೀಲೆ, ಪವಾಡ, ಗೀತೋಪದೇಶ, ಹೆಚ್ಚಾಗಿ ರಾಧಾಕೃಷ್ಣರ ರಾಸಲೀಲೆ ಮುಂತಾದವುಗಳನ್ನು ತಮ್ಮ ಕಲ್ಪನೆಗೆ ತಕ್ಕಂತೆ ಚಿತ್ರಗಳನ್ನು ರೂಪಿಸಿ ಅವುಗಳನ್ನು ವಿನ್ಯಾಸ ರಚನೆಗೆ, ರಂಗೋಲಿ ವಿನ್ಯಾಸಗಳಿಗಾಗಿ ಒತ್ತುಕಲೆಯಾಗಿ(Sಣeಟಿಛಿiಟ) ಸಾಂಝಿಕಲೆಯನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಕಾಲ ಕ್ರಮೇಣ ಆನೇಕ ಕಲಾ ಪ್ರವೀಣರು ವಿವಿಧ ದೇವಾನುದೇವತೆಗಳು, ಹೂಬಳ್ಳಿ, ಪ್ರಕೃತಿಯಂತಹ ಚಿತ್ರಗಳನ್ನು ರಚಿಸಿ ದೇವಸ್ಥಾನ, ರಥ, ರಥಬೀದಿ, ಪಲ್ಲಕ್ಕಿಅಲಂಕಾರ, ದೇವರಉತ್ಸವಕ್ಕೆ ಬಳಸುತ್ತಿದ್ದರಿಂದ ಇದನ್ನು ದೇವಸ್ಥಾನ ಕಲಾಸಾಂಝಿ ಎಂದು ಕರೆಯಲಾಗುತಿತ್ತು. ಕಾಗದದಲ್ಲಿ ಒಳ್ಳೆಯ ಚಿತ್ರಗಳನ್ನು ಕತ್ತರಿಸಿ ನೆಲದ ಮೇಲೆ ಹರಡಿ ಅವುಗಳ ಮೇಲೆ ರಂಗೋಲಿ ಪುಡಿ, ಹೂಗಳನ್ನು ತುಂಬಿ ಕಾಗದತೆಗೆದಾಗ ಬಗೆಬಗೆಯ ಅಲಂಕಾರಿಕ ಚಿತ್ರಗಳು ಮೂಡುತ್ತಿದ್ದದ್ದು ಗೊತ್ತಾಯಿತು. ನಂತರ ತಮಗೆ ಬೇಕಾದ ಹಾಗೆ ಕಾಗದದ ಅಚ್ಚುಗಳನ್ನು ತಯಾರಿಸಿ ಅದನ್ನು ಒಂದು ಪರಿಪೂರ್ಣವಾದ ಕಲೆಯಾಗಿಸುವಷ್ಟು ಪರಿಣಿತಿಯನ್ನು ನಮ್ಮ ಹಿಂದಿನವರು ಪಡೆದಿದ್ದರು. ಹೀಗಾಗಿ ಇಂದೊದು ಪ್ರತ್ಯೇಕ ಕಲೆಯಾಗಿ ಬೆಳೆಯಿತು.
ಆಧುನಿಕ ಜನರ ಜೀವನಶೈಲಿಬದಲಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಈ ವಿಶೇಷಕಲೆ ಇತ್ತೀಚೆಗೆ ಬಳಕೆಯಾಗದೆ ನಿಧಾನಗತಿಯಲ್ಲಿ ಜನಮಾನಸದಿಂದ ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಅನೇಕ ಕಲಾವಿದರು ಸಾಂಝಿಕಲೆಯನ್ನು ಉಳಿಸುವ, ಜನಪ್ರಿಯಗೊಳಿಸುವ ಕೆಲಸವನ್ನು ದೇಶದಹಲವೆಡೆ ನೆಡೆಸುತ್ತಿದ್ದಾರೆ. ಅಂತಹವರಲ್ಲಿ ಕರ್ನಾಟಕದ ಕಲಾವಿದ ಎಸ್.ಎಫ್.ಹುಸೇನಿ ಮೈಸೂರು ಸಹ ಒಬ್ಬರು.  ಈ ಕಲೆಯ ಪ್ರಚಾರಕ್ಕೆ ರಾಜ್ಯಾದ್ಯಂತ ಸಂಚರಿಸುತ್ತಾ ೧೯ ಜಿಲ್ಲೆಗಳಲ್ಲಿ ಆಸಕ್ತ ಮಕ್ಕಳಿಗೆ, ಮಹಿಳೆಯರಿಗೆ, ಮತ್ತು ಆಸಕ್ತರಿಗೆ ಸಾಂಝಿ ಕಲೆ ಕಾರ್ಯಾಗಾರ ತರಬೇತಿ ಪ್ರದರ್ಶನವನ್ನು ನಡೆಸುತ್ತಿದ್ದಾರೆ. ಈ ಕಲೆಯಲ್ಲಿ ಹುಸೇನಿಯವರ ವಿಶೇಷ ಸರಣಿ ಚಿತ್ರಗಳಾದ ಸಾಂಝಿಗಣಪ, ಸಾಂಝಿರಂಗೋಲಿ, ಸಾಂಝಿಮಾಸ್ಕ್, ಸಾಂಝಿಶಿವ, ಸಂಪ್ರಾದಾಯಕ, ಆಧುನಿಕ, ಜನಪದರೀತಿಯಲ್ಲಿ ಅನೇಕ ಕಲಾಕೃತಿಗಳನ್ನು ರಚಿಸಿ ಆಸಕ್ತರಿಗೆ (೯೮೪೫೧೫೩೨೭೭) ಈ ಕಲೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದಾರೆ. ಸಾಂಝಿ ಎಲ್ಲಾ ಜನಪದಕಲೆಗಳ ಹಾಗೆ ಕಾಲಕ್ಕೆ ತಕ್ಕಂತೆ ಮತ್ತು ತನ್ನ ಆಂತರಿಕ ಸಾಮರ್ಥ್ಯದಿಂದ ವಿವಿಧ ರೂಪ ತಳೆದಿದೆ ಹಾಗೂ ತಳೆಯುತ್ತಿದೆ. 
ಕಲಾವಿದ ಎಸ್.ಎಫ್. ಹುಸೇನಿ ಅವರು ಕಲಾವಲಯದಲ್ಲಿ ಮೈಸೂರು ಹುಸೇನಿ ಎಂದೇ ಚಿರಪರಿಚಿತರು. ತಂದೆ ಸಯ್ಯದ್ ಫೀರ್, ತಾಯಿ ಜೀನಾತ್‌ವುನ್ನಿಸಾ ಬೀ ರವರ ಮಗನಾಗಿ ಮಂಡ್ಯಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರಂ (ಬ್ಲಫ್) ನಲ್ಲಿ ಜನಿಸಿದ ಇವರು ಬಾಲ್ಯದ ದಿನಗಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತರಾಗಿ ಕಲೆಯಲ್ಲಿಯೇ ಜೀವನ ರೂಪಿಸುವಂತಾಯಿತು. 
     ಇವರು ಮೈಸೂರಿನ ವೈಜಯಂತಿ ಚಿತ್ರಕಲಾ ಶಾಲೆಯಲ್ಲಿ ಪೈನ್ ಆರ್ಟ್ ಡಿಪ್ಲೊಮ ಮತ್ತು ಆರ್ಟ್‌ಮಾಸ್ಟರ್ ಶಿಕ್ಷಣ ಪಡೆದು ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಚಿತ್ರಕಲೆಯಲ್ಲಿ ಬಿ.ಎಫ್.ಎ. ಪದವಿಯನ್ನು ಪಡೆದಿದ್ದಾರೆ.
ಹುಸೇನಿಯವರು ಸದಾ ಪ್ರಯೋಗಶೀಲ ಪ್ರಯತ್ನಗಳಿಗೆ, ನಿರಂತರ ಹೊಸತನಕ್ಕೆ ಆದ್ಯತೆ ನೀಡುತ್ತಾ ಬಂದಿದ್ದಾರೆ. ಅವರು ರಚಿಸಿರುವ ಕಲಾಕೃತಿಗಳನ್ನು ಗಮನಿಸುತ್ತಾ ಬಂದಲ್ಲಿ ತಿಳಿಯುತ್ತದೆ. ಒಂದೇ ಬಗೆಯ ಕಲಾಕೃತಿಗಳಿಗೆ ಸೀಮಿತವಾಗದೆ ಹಲವಾರು ಪ್ರಯೋಗಾತ್ಮಕ ಕೆಲಸಗಳಲ್ಲಿ ತೊಡಗಿದ್ದಾರೆ. ಅವರ ವಿಶಿಷ್ಟ ಬಗೆಯ ಕಾಗದ ಭಿತ್ತಿಶಿಲ್ಪಗಳು, ಏಕರೇಖಾಚಿತ್ರಗಳು ಪ್ರಯೋಗಾತ್ಮಕ ಅಮೂರ್ತ ಛಾಯಾಚಿತ್ರಗಳು ಮತ್ತು ಸಾಂಝಿಜನಪದ ಕಾಗದಕತ್ತರಿಕಲೆ ಕಲಾಕೃತಿಗಳು ಇವರಕಲಾಪ್ರತಿಭೆಗೆ ಸಾಕ್ಷಿಯಾಗಿವೆ. ಸಿಡಿಯನ್ನು ಬಳಸಿ ತೆಗೆದಿರುವ ಅಮೂರ್ತಛಾಯಾಚಿತ್ರಗಳು ಸುಮಾರು ಐದುಸಾವಿರಕ್ಕೂ ಹೆಚ್ಚು. ಇದು ಅವರ ಸೃಜನಶೀಲತೆ ಮತ್ತು ಕಲಾತ್ಮಕ ಪ್ರಯೋಗಗಳಿಗೆ ಒಂದುಉದಾಹರಣೆ.
ಹುಸೇನಿ ಚಿತ್ರಕಲೆಯನ್ನು ಮೈಸೂರು, ಬೆಂಗಳೂರು, ಧಾರವಾಡ, ಗುಲ್ಬರ್ಗ, ಉಡುಪಿ ಹೀಗೆ ಅನೇಕ ಕಡೆಗಳಲ್ಲಿ ೯ ಏಕವ್ಯಕ್ತಿ ಚಿತ್ರಕಲಾಪ್ರದರ್ಶನಗಳು, ಸುಮಾರು ೭೦ಕ್ಕೂ ಹೆಚ್ಚು ಸಮೂಹಕಲಾಪ್ರದರ್ಶನ ಕಾರ್ಯಗಾರಗಳಲ್ಲಿ ಭಾಗವಹಿಸಿ ಕರ್ನಾಟಕ ಮಾತ್ರವಲ್ಲದೆ ಹೊರರಾಜ್ಯಗಳಾದ ಮುಂಬೈ, ದೆಹಲಿ, ಚೆನ್ನೈ ನಗರಗಳಲ್ಲಿ ಚಿತ್ರಕಲಾ ಪ್ರದರ್ಶನಗಳನ್ನು ನೀಡಿದ್ದಾರೆ. ಹುಸೇನಿಯವರ ವಿಶೇಷತೆ ಎಂದರೆ ಗ್ರಾಮೀಣ ಭಾಗದ ಜನರಿಗೆ ಕಲೆ ತಲುಪುವ ಉದ್ದೇಶದಿಂದ ತಮ್ಮದೇ ಸಾಂಝಿ ಕಲಾಲೋಕ ಸಂಸ್ಥೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಹತ್ತುವರ್ಷಗಳಿಂದ ಚಿತ್ರಕಲಾಪ್ರದರ್ಶನ, ಕಾರ್ಯಗಾರಗಳನ್ನು ನಡೆಸುತ್ತಾ ಬಂದಿದ್ದಾರೆ. ಇವರ ಅನೇಕ ಕಲಾಕೃತಿಗಳು ದೇಶ ಮತ್ತು ವಿದೇಶಗಳ (ಆಸ್ಟ್ರೇಲಿಯ, ಫಿನ್‌ಲ್ಯಾಂಡ್, ಜರ್ಮನ್, ಸೌತ್ ಆಫ್ರಿಕ, ದೋಹ) ಖಾಸಗಿ ಸಂಗ್ರಹಕಾರರಲ್ಲಿ ಸಂಗ್ರಹಗೊಂಡಿವೆ.
ಎಸ್.ಎಫ್.ಹುಸೇನಿಯವರ ಕಲಾಪ್ರತಿಭೆಗೆ ಅನೇಕ ಪ್ರಶಸ್ತಿ ಸನ್ಮಾನಗಳು ಸಂದಿವೆ ಅವುಗಳಲ್ಲಿ ಮುಖ್ಯವಾಗಿ ೧೯೯೯ ರಲ್ಲಿ ಮೈಸೂರು ದಸರಕಲಾಪ್ರದರ್ಶನಪ್ರಶಸ್ತಿ, ೨೦೦೧-ರಲ್ಲಿ ಮೈಸೂರಿನ ಕನ್ನಡಸಂಸ್ಕೃತಿ ಇಲಾಖೆಯಿಂದ ಯುವಸಂಭ್ರಮ ಪ್ರಶಸ್ತಿ, ಧಮಸ್ಥಳದ ಶಾಂತಿವನಟ್ರಸ್ಟ್ ವತಿಯಿಂದ ನಡೆಯುವ ರಾಜ್ಯ ಮಟ್ಟದ ಅಂಚೆಕುಂಚ ಸ್ಪರ್ಧೆಯಲ್ಲಿ ೨೦೦೧ರಿಂದ ಸತತ ನಾಲ್ಕು ಹಾಗು ೨೦೦೭ರಲ್ಲಿ ಪ್ರಶಸ್ತಿ ಒಟ್ಟು ಐದು ಬಾರಿ ಪ್ರಶಸ್ತಿ, ಬೆಂಗಳೂರಿನಲ್ಲಿ ನಡೆಯುವ ಅಂತರಾಷ್ಟ್ರೀಯ ಜಪಾನ್‌ಹಬ್ಬದಲ್ಲಿ ೨೦೦೯ ರಿಂದ ನಾಲ್ಕು ಬಾರಿ, ಕಿರಿಗಾಮಿ ಪೇಪರ್ ಕಟ್ಟಿಂಗ್ಸ್ ಕಾಗದ ಕಲೆಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ, ೧೯೯೯ರಲ್ಲಿ ಮೈಸೂರಿನ ರಾಮನ್ಸ್ ಕಂಪ್ಯೂಟರ್‍ಸ್‌ರವರ ರಾಕೊಫೇಸ್ಟ್ ಪ್ರಶಸ್ತಿ, ಕರ್ನಾಟಕಲಲಿತ ಕಲಾ ಅಕಾಡೆಮಿಯಿಂದ ಎರಡು ಬಾರಿ ಸ್ಕಾಲರ್‌ಶಿಪ್ ೧೯೯೯ ಮತ್ತು ೨೦೦೦. ವೈಜಯಂತಿಚಿತ್ರಕಲಾಶಾಲೆಯಿಂದ ಬೆಸ್ಟ್ ಮ್ಯೂರಲ್ ಪ್ರಶಸ್ತಿ, ೨೦೦೧-ರಲ್ಲಿ ಮೈಸೂರಿನ ಮಾನಸಗಂಗ್ರೋತಿಯ ಮಹಿಳಾಅಧ್ಯಯನಕೇಂದ್ರದಿಂದ ಪೋಸ್ಟರ್‌ರಚನಗೆಪ್ರಶಸ್ತಿ, ಇವುಗಳ ಜೊತೆಗೆ ಅನೇಕ ಸಂಘಸಂಸ್ಥೆಗಳಿಂದ ಸನ್ಮಾನಗಳು ಸಾಂಝಿಕಲಾಸಾಮ್ರಾಟ್, ಚಿತ್ರರತ್ನ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಇವರ ಕಲಾಯಾತ್ರೆ ಹೀಗೆ ನಿರಂತರವಾಗಿ ಸಾಗಲಿ ಎಂದು ಹಾರೈಸೋಣ.  
ಒತ್ತಡವೇ ತುಂಬಿರುವ ಈ ಜಗತ್ತಿನಲ್ಲಿ ಕಲೆಯೇ ಒತ್ತಡವನ್ನು ಕಳೆಯುವ ಸಾಧನ ಎಂದೇ ನಂಬಿರುವ ಹುಸೇನಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯ ಬೇಕಾಗಿದ್ದಲ್ಲಿ ೯೮೪೫೧೫೩೨೭೭ಕ್ಕೆ ಕರೆ ಮಾಡಬಹುದು ಇಲ್ಲವೆ ಇವರ ಬ್ಲಾಗ್: mysorehuseni.blogspot.in   ನಲ್ಲಿ ಸಾಂಝಿ ಕಾಗದ ಕಲೆಯ ಚಿತ್ರಗಳನ್ನು ನೋಡಬಹುದಾಗಿದೆ.......

Advertisement

0 comments:

Post a Comment

 
Top