PLEASE LOGIN TO KANNADANET.COM FOR REGULAR NEWS-UPDATES


  ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಪೀಠೋಪಕರಣ ಖರೀದಿಯಲ್ಲಿ ಅಕ್ರಮವೆಸಗಲು ಪ್ರಯತ್ನಿಸಲಾಗಿತ್ತೆಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ವಿಶ್ವವಿದ್ಯಾಲಯದ ಕುಲಸಚಿವರು ಸ್ಪಷ್ಟನೆ ನೀಡಿದ್ದಾರೆ.
ಪೀಠೋಪಕರಣ ಖರೀದಿಯಲ್ಲಿ ಹೆಚ್ಚಿನ ದರ ನಮೂದಿಸಿ ಅಕ್ರಮ ಎಸಗಲು ಪ್ರಯತ್ನಿಸಲಾಗಿತ್ತು ಎಂದು ಸಿಂಡಿಕೇಟ್ ಸದಸ್ಯರೊಬ್ಬರು ಹೇಳಿರುವುದಾಗಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ.  ಆದರೆ ವಿಶ್ವವಿದ್ಯಾಲಯದ ಎಲ್ಲ ಪ್ರಮುಖ ಖರೀದಿಗಳು ಮತ್ತು ಕಟ್ಟಡ ಕಾಮಗಾರಿಗಳು ಇ-ಟೆಂಡರ್ ಮೂಲಕ ನಡೆಯುತ್ತಿದ್ದು, ಇದನ್ನು ಸಿಂಡಿಕೇಟ್ ಪ್ರತಿನಿಧಿಗಳೂ ಸದಸ್ಯರಾಗಿರುವ ಕೇಂದ್ರೀಯ ಖರೀದಿ ಸಮಿತಿಯ ಮತ್ತು ಕಟ್ಟಡ ಸಮಿತಿಯ ಅನುಮೋದನೆ ಪಡೆದು ನಡೆಸಲಾಗುತ್ತದೆ.  ಕೇಂದ್ರೀಯ ಖರೀದಿ ಸಮಿತಿಯ ಸಭೆಯಲ್ಲಿ ಕುಲಪತಿಗಳು ಭಾಗವಹಿಸಿರುವುದಿಲ್ಲ.  ಬದಲಿಗೆ ಸಭೆಯ ನಿರ್ಧಾರಕ್ಕೆ ಅನುಮೋದನೆ ಮಾತ್ರ ನೀಡಿರುತ್ತಾರೆ.  ಆದ್ದರಿಂದ ಪೀಠೋಪಕರಣಗಳ ಖರೀದಿಯಲ್ಲಿ ಅಕ್ರಮ ನಡೆಸಲು ಪ್ರಯತ್ನಿಸಲಾಗಿತ್ತೆಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿರುವುದಿಲ್ಲ.
  ಬೋಧಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕ್ರಮಬದ್ಧವಾಗಿಲ್ಲದಿರುವುದರಿಂದ ಸಿಂಡಿಕೇಟ್ ಸಭೆ ಅದನ್ನು ಅನುಮೋದಿಸಿಲ್ಲವೆಂದು ಮಾಧ್ಯಮದಲ್ಲಿ ಪ್ರಕಟವಾಗಿದ್ದು, ಆದರೆ ಇಂತಹ ಯಾವುದೇ ನಿರ್ಧಾರವಾಗಿಲ್ಲ.  ಬದಲಿಗೆ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಿ, ಎಲ್ಲಾ ಹುದ್ದೆಗಳಿಗೆ ಸಂಬಂಧಿಸಿದಂತೆ ಆಯ್ಕೆ ಸಮಿತಿ ಸಭೆಗಳನ್ನು ಮುಗಿಸಿದ ನಂತರ ಒಟ್ಟಾಗಿ ಅದನ್ನು ಸಿಂಡಿಕೇಟ್‌ನ ಅನುಮೋದನೆಗೆ ಇರಿಸಬೇಕೆಂದು ನಿರ್ಧರಿಸಲಾಗಿದೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವರು ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.

Advertisement

0 comments:

Post a Comment

 
Top