PLEASE LOGIN TO KANNADANET.COM FOR REGULAR NEWS-UPDATES



 ಕೊಪ್ಪಳ : ಆಧುನಿಕತೆ ಅಬ್ಬರದಿಂದ ಜಾನಪದ ಕ್ಷೀಣಿಸುತ್ತಿರುವ ಜನಪದ ಕಲೆಗಳನ್ನು ಮೂಲ ಸ್ವರೂಪದಲ್ಲಿ ರಕ್ಷಿಸಿಡುವಂತಾಗಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಸವರಾಜ ಆಕಳವಾಡಿ ಹೇಳಿದರು. 
ಅವರು ಸೋಮವಾರ ಕೊಪ್ಪಳ ತಾಲೂಕಿನ ಹಟ್ಟಿ (ಅ) ಯಲ್ಲಿ ಶ್ರೀ ಬೀರಲಿಂಗೇಶ್ವರ ನವ ಯುವಕ ಸಂಘ ಉದ್ಘಾಟನೆ ಹಾಗೂ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡ ೧೫ ನೇ ಜಾನಪದ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಹಾಸುಹೊಕ್ಕಾಗಿರುವ ಬೀಸುವ ಪದ, ಹಂತಿಪದ, ಮೋಹರಂ ಪದಗಳು ವಿನಾಶದ ಹಂಚಿನಲ್ಲಿವೆ. ಇಂದಿನ ಯುವಕರು ಹಾಗೂ ಜನಸಮುದಾಯ ಅವುಗಳ ರಕ್ಷಣೆಗೆ ಮುಂದಾಗಬೇಕೆಂದು ಹೇಳಿದರು. 
ಜಿಲ್ಲಾ ಕನಕದಳ ಸೇವಾ ಸಮಿತಿಯ ಅಧ್ಯಕ್ಷರಾದ ಕರಿಯಣ್ಣ ಬೇವಿನಹಳ್ಳಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಸಂಘದ ಉದ್ದೇಶ ಯಾವಾಗಲೂ ನಿರಪೇಕ್ಷಿತವಾಗಿರಬೇಕು ಮಾನವ ಜನಾಂಗದ ಕಲ್ಯಾಣದ ಪರವಾಗಿ ಸೇವೆ ಮಾಡಲು ಸಿದ್ದರಾಗಿರಬೇಕು. ಊರಿನ ಸಮಗ್ರ ಅಭಿವೃದ್ದಿಗೆ ಶ್ರಮಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಹೇಳಿದರಲ್ಲದೇ ಗ್ರಾಮದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಾಗಿ ೧೦೦೦ ರೂಪಾಯಿಗಳ ಠೆವಣಿಯನ್ನು ನಿಗದಿಪಡಿಸಿ  ಅದರಿಂದ ಬರುವ ಬಡ್ಡಿ ಹಣದಿಂದ ಅವರಿಗೆ ಪ್ರತಿ ವರ್ಷ ಬಹುಮಾನ ನೀಡಿ ಪ್ರತಿಭೆಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು. 
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ ಪುರಸ್ಕೃತರಾದ ಶರಣಪ್ಪ ವಡಗೇರಿ, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಜಾನಪದ ಗೀತೆಗಳನ್ನು ಹಾಡಿ ಎಲ್ಲರನ್ನು ರಂಜಿಸಿದರು. 
ಗ್ರಾಮ ಪಂಚಾಯತ ಅಧ್ಯಕ್ಷರಾದ ತೋಟಪ್ಪ ಸಿಂಟ್ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. 

Advertisement

0 comments:

Post a Comment

 
Top