ಕೊಪ್ಪಳ : ಕಾವ್ಯ ಯಾವತ್ತೂ ಸಮಕಾಲೀನವಾಗಿರುತ್ತೆ,ವರ್ತಮಾನದ ಜೊತೆಗೆ ಸಾವಯವ ಸಂಬಂಧ ಹೊಂದಿರುತ್ತದೆ. ಕಾವ್ಯ ದರ್ಶನವನ್ನೂ ಕಟ್ಟಿಕೊಡುತ್ತದೆ.ಹಾಗಾಗಿ ಕಾವ್ಯಕ್ಕೆ ವಿಶೇಷ ಶಕ್ತಿ ಇದೆ.ಮಹಾಂತೇಶ ಮಲ್ಲನಗೌಡರು ತಮ್ಮ 'ಕೊಪಣ ಕಿಂಕಲ' ಸಂಕಲನದಲ್ಲಿ ಬಸವಣ್ಣನ ಜೊತೆಗೆ ತಾತ್ವಿಕ ಸಹಮತದೊಂದಿಗೆ ಕಾವ್ಯರಚನೆಯನ್ನು ಮಾಡಿದ್ದಾರೆ.ಕವನಗಳಲ್ಲಿ ತಾತ್ವಿಕತೆಯ ಅನುಸಂಧಾನವಿದೆ. ವಿಷಾದದೊಂದಿಗೆ ಆರಂಭವಾಗಿ ಆಶಾವಾದದಲ್ಲಿ ಕೊನೆಗೊಳ್ಳುವ ಕಾವ್ಯ,ಸದಾಶಯದ ಕವನಗಳ ರಚನೆ ಗಮನ ಸೆಳೆಯುತ್ತವೆ ಎಂದು ಖ್ಯಾತ ಬರಹಗಾರ ಬಿ.ಪೀರ್ಬಾಷಾ ಹೇಳಿದರು. ಅವರು ನಗರದ ಈಶ್ವರ ಗುಡಿಯ ಪ್ರಾಂಗಣದಲ್ಲಿ ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೧೧೧ನೇ ಕವಿಸಮಯದಲ್ಲಿ ಡಾ.ಮಹಾಂತೇಶ ಮಲ್ಲನಗೌಡರ 'ಕೊಪಣ ಕಿಂಕಲ' ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಕೆಲವು ಸಂದರ್ಭಗಳಲ್ಲಿ ಕಾವ್ಯದ ಆಕಾರಕ್ಕಿಂತ ಹೂರಣ ಬಹಳ ಮುಖ್ಯವಾಗುತ್ತೆ. ಇಂತಹ ಸಂದರ್ಭದಲ್ಲಿ ಲಯಕ್ಕೆ ಪ್ರಾಮುಖ್ಯತೆ ನೀಡದೆ ವಿಚಾರಕ್ಕೆ ಹೆಚ್ಚು ಒತ್ತು ನೀಡಬೇಕಾಗುತ್ತದೆ. ಶಬ್ದಗಳ ನಡುವಿನ ಮೌನದೊಳಗೆ ಕಾವ್ಯ ಅಡಗಿರುತ್ತದೆ. ಮಹಾಂತೇಶ ಮಲ್ಲನಗೌಡರು ಸರಳ ಕವಿತೆಗಳಲ್ಲಿ ಗಂಭೀರ ವಿಷಯವನ್ನು ಹೇಳಿದ್ದಾರೆ. ಆಶಾವಾದಿ ಹಾಗೂ ಬಹುತ್ವದ ಕವಿತೆಗಳಿಂದ ಈ ಕವನ ಸಂಕಲನ ಗಮನ ಸೆಳೆಯುತ್ತದೆ ಎಂದು ಹೇಳಿದರು.
ಸ್ವಾಗತವನ್ನು ಎನ್.ಜಡೆಯಪ್ಪ, ಸ್ವಾಗತ ಗೀತೆ ಅನಸೂಯಾ ಜಾಗೀರದಾರ,ವಂದನಾರ್ಪಣೆಯನ್ನು ವಿಜಯಲಕ್ಷ್ಮೀ ಮಠದ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ್ಯಕ್ರಮ ನಡೆಸಿಕೊಟ್ಟರು.
0 comments:
Post a Comment