PLEASE LOGIN TO KANNADANET.COM FOR REGULAR NEWS-UPDATES

 | ಗಣಿ ವರದಿ ಶೈತ್ಯಾಗಾರಕ್ಕೆ : ನೈಸರ್ಗಿಕ ನ್ಯಾಯ ಕೊರತೆಯ ನೆಪವೊಡ್ಡಿದ ಸಂಪುಟ
ಬೆಂಗಳೂರು: ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ತನಿಖಾ ವರದಿಗೆ ಸಂಬಂಧಿಸಿದಂತೆ ಮೂರು ತಾಂತ್ರಿಕ ಅಂಶಗಳ ಬಗ್ಗೆ ಲೋಕಾಯುಕ್ತ ಸಂಸ್ಥೆಯಿಂದಲೇ ಸಲಹೆ ಕೋರಲು ಗುರುವಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ವರದಿಯಲ್ಲಿ ಹೆಸರಿ ಸಿರುವ ಅಧಿಕಾರಿಗಳಿಗೆ ವಿವರಣೆ ನೀಡಲು ಒಂದು ಅವಕಾಶ ಕಲ್ಪಿಸಲೂ ತೀರ್ಮಾನಿಸಲಾಗಿದೆ.
2000ನೇ ಇಸವಿ ಜನವರಿ 1ರಿಂದ 2010ರ ಜುಲೈ 19ರವರೆಗಿನ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿದ್ದ ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ಇದೇ ಜುಲೈ 27 ರಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅಧ್ಯಕ್ಷತೆ ಯಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಮೊದಲ ಬಾರಿಗೆ ಲೋಕಾಯುಕ್ತ ವರದಿ ಕುರಿತು ಚರ್ಚೆ ನಡೆಯಿತು.
ಸಚಿವರ ಪದತ್ಯಾಗಕ್ಕೆ ಶಿಫಾರಸು ಮಾಡಿರುವುದು, ಶಿಫಾರಸಿನಲ್ಲಿ ಉಲ್ಲೇಖಿಸಿರುವ ಕಲಂ ಮತ್ತು ಆರೋಪಿಗಳಿಗೆ ವಿವರಣೆ ನೀಡಲು ಅವಕಾಶ ಕಲ್ಪಿಸದೇ ಶಿಫಾರಸು ಸಲ್ಲಿಸಿರುವುದಕ್ಕೆ ಸಂಬಂಧಿ ಸಿದಂತೆ ಲೋಕಾಯುಕ್ತದಿಂದಲೇ ಸಲಹೆ ಪಡೆಯಲು ನಿರ್ಧರಿಸಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಸ್. ಸುರೇಶ್‌ಕುಮಾರ್, `ಲೋಕಾಯುಕ್ತ ವರದಿಯನ್ನು ಸರ್ಕಾರ ಪ್ರಶ್ನಿಸುತ್ತಿಲ್ಲ. ಆದರೆ, ವರದಿಯಲ್ಲಿ ಪ್ರಸ್ತಾಪಿಸಿರುವ ಹಲವು ವಿಷಯಗಳ ಬಗ್ಗೆ ರಾಜ್ಯದ ಅಡ್ವೊಕೇಟ್ ಜನರಲ್ ಮತ್ತು ಇತರೆ ಕಾನೂನು ತಜ್ಞರಿಂದ ಅಭಿಪ್ರಾಯ ಪಡೆಯಲಾಗಿದೆ.
ಲೋಕಾಯುಕ್ತರು ಸಲ್ಲಿಸಿರುವ ವರದಿಗೆ ಸಂಬಂಧಿಸಿದಂತೆ ಮೂರು ತಾಂತ್ರಿಕ ಅಂಶಗಳ ಬಗ್ಗೆ ಸಲಹೆ ನೀಡುವಂತೆ ಕೋರಿ ಲೋಕಾಯುಕ್ತಕ್ಕೆ ಪತ್ರ ಬರೆಯಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ` ಎಂದು ಪ್ರಕಟಿಸಿದರು.
`ಸಂವಿಧಾನದ 164ನೇ ವಿಧಿಯ ಪ್ರಕಾರ ರಾಜ್ಯಪಾಲರು ಮುಖ್ಯಮಂತ್ರಿಯನ್ನು ನೇಮಕ ಮಾಡುತ್ತಾರೆ. ಮುಖ್ಯಮಂತ್ರಿಯ ಶಿಫಾರಸಿನಂತೆ ಮಂತ್ರಿಗಳನ್ನು ನೇಮಕ ಮಾಡುತ್ತಾರೆ. ಸಂವಿಧಾನದ 191ನೇ ವಿಧಿಯು ಒಬ್ಬ ವ್ಯಕ್ತಿ ವಿಧಾನಸಭೆ ಅಥವಾ ವಿಧಾನ ಪರಿಷತ್‌ನ ಸದಸ್ಯನಾಗಲು ಇರಬೇಕಾದ ಅರ್ಹತೆಗಳು ಮತ್ತು ಅನರ್ಹತೆಗೆ ಕಾರಣವಾಗುವ ಅಂಶಗಳ ಬಗ್ಗೆ ವಿವರಿಸಿದೆ. ಆದರೆ, ಲೋಕಾಯುಕ್ತರು ತಮ್ಮ ವರದಿಯಲ್ಲಿ ಸಚಿವರನ್ನು `ಸಾರ್ವಜನಿಕ ನೌಕರ` ಎಂದು ಪರಿಗಣಿಸಿದ್ದಾರೆ. ಇದು ಸಮಂಜಸವೇ ಎಂಬ ಅಂಶದ ಬಗ್ಗೆ ಸಲಹೆ ಕೋರಲಾಗುವುದು` ಎಂದರು.
`ಸರ್ಕಾರಿ ನೌಕರರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಇರುವ ನಿಯಮಗಳ ಅಡಿಯಲ್ಲಿ ಸಚಿವ ಸಂಪುಟದ ಸದಸ್ಯರ ವಿರುದ್ಧವೂ ಕ್ರಮ ಜರುಗಿಸಬಹುದೇ? ಎಂಬ ಪ್ರಶ್ನೆ ಉದ್ಭವಿಸಿದೆ. ಅಲ್ಲದೇ ಲೋಕಾಯುಕ್ತರು ತಮ್ಮ ವರದಿಯಲ್ಲಿ ಸಚಿವರ ಪದಚ್ಯುತಿಗೆ ಶಿಫಾರಸು ಮಾಡಿದ್ದಾರೆ. ಅವರು ಶಾಸಕರಾಗಿ ಉಳಿಯಬಹುದೇ? ಇಲ್ಲವೇ? ಎಂಬುದರ ಬಗ್ಗೆ ಏನನ್ನೂ ಪ್ರಸ್ತಾಪಿಸಿಲ್ಲ.
ಸಂವಿಧಾನದ 164 ಮತ್ತು 191ನೇ ವಿಧಿಗಳಿಗೆ ವಿರುದ್ಧವಾಗಿ ಶಿಫಾರಸು ಮಾಡಲು ಲೋಕಾ ಯುಕ್ತರಿಗೆ ಅವಕಾಶ ಇದೆಯೇ? ಈ ವಿಷಯಗಳಲ್ಲಿ ತಮ್ಮ ವ್ಯಾಪ್ತಿ ಮೀರಿದ್ದಾರೆಯೇ ಎಂಬುದರ ಬಗ್ಗೆಯೂ ಸಲಹೆ ನೀಡುವಂತೆ ಪತ್ರದಲ್ಲಿ ಮನವಿ ಮಾಡಲಾಗುವುದು` ಎಂದು ವಿವರಿಸಿದರು.
ಕಾಯ್ದೆ ಬಗ್ಗೆಯೂ ಸಂದೇಹ: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ತನಿಖಾ ವರದಿಯಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆ-1984ರ ಕಲಂ 13ರ ಅಡಿಯಲ್ಲಿ ಸಚಿವರ ವಿರುದ್ಧ ಶಿಫಾರಸು ಮಾಡಿರುವ ಬಗ್ಗೆಯೂ ಲೋಕಾಯುಕ್ತದಿಂದಲೇ ಸಲಹೆ ಪಡೆಯಲು ನಿರ್ಧರಿಸಲಾಗಿದೆ.
ದೂರುಗಳನ್ನು ಆಧರಿಸಿ ನಡೆಯುವ ತನಿಖೆಯಲ್ಲಿ `ಸಾರ್ವಜನಿಕ ನೌಕರ`ನ ಪದಚ್ಯುತಿಗೆ ಶಿಫಾರ ಸು ಮಾಡಬಹುದು ಎಂದು ಈ ಕಲಂ ಹೇಳುತ್ತದೆ. ಆದರೆ, ಕಲಂ 7(2)(ಎ) ಅಡಿಯಲ್ಲಿ ಸರ್ಕಾರ ವೇ ಒಪ್ಪಿಸಿದ್ದ ತನಿಖೆಯಲ್ಲಿ ಕಲಂ 13ರ ಅಡಿಯಲ್ಲಿ ಶಿಫಾರಸು ಮಾಡಲು ಲೋಕಾಯುಕ್ತರಿಗೆ ಅಧಿಕಾರವಿದೆಯೇ? ಎಂಬ ಪ್ರಶ್ನೆಯನ್ನೂ ಲೋಕಾಯುಕ್ತದ ಮುಂದಿಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
`ದೂರನ್ನು ಆಧರಿಸಿ ನಡೆಯುವ ತನಿಖೆಯಲ್ಲಿ ಆರೋಪಿತ ಸಾರ್ವಜನಿಕ ನೌಕರನ ವಿರುದ್ಧದ ಆರೋಪಗಳಲ್ಲಿ ಹುರುಳಿದೆ ಎಂಬ ನಿರ್ಧಾರಕ್ಕೆ ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರು ಬಂದಲ್ಲಿ, ಆತನನ್ನು ಹುದ್ದೆಯಿಂದ ತೆಗೆದುಹಾಕಲು ಶಿಫಾರಸು ಮಾಡಬಹುದು ಎಂದು ಕಲಂ 13 ಹೇಳುತ್ತದೆ.
ಆದರೆ, ಈ ಪ್ರಕರಣದಲ್ಲಿ ಕಲಂ 7(2)ರ ಅಡಿಯಲ್ಲಿ ಸರ್ಕಾರವೇ ಒಪ್ಪಿಸಿದ್ದ ತನಿಖೆಯ ನಂತರ ಇಂತಹ ಶಿಫಾರಸು ಮಾಡಲಾಗಿದೆ. ಇದು ಸಮಂಜಸವೇ ಎಂಬ ಪ್ರಶ್ನೆಗೆ ಸಲಹೆ ನೀಡುವಂತೆ ಲೋಕಾಯುಕ್ತವನ್ನು ಕೋರಲಾಗುವುದು` ಎಂದು ಸುರೇಶ್‌ಕುಮಾರ್ ಹೇಳಿದರು.
ಸಹಜ ನ್ಯಾಯದ ಬಗ್ಗೆಯೂ ಪ್ರಶ್ನೆ: ಯಾವುದೇ ತನಿಖೆ ಅಥವಾ ವಿಚಾರಣೆಯ ವೇಳೆ ಆರೋಪಿ ಗಳಿಂದ ವಿವರಣೆ ಪಡೆದ ನಂತರ ನಿರ್ಧಾರಕ್ಕೆ ಬರುವ `ಸಹಜ ನ್ಯಾಯ` ಪದ್ಧತಿ ಜಗತ್ತಿನಾದ್ಯಂತ ಜಾರಿಯಲ್ಲಿದೆ. ಆದರೆ, ಅಕ್ರಮ ಗಣಿಗಾರಿಕೆ ಕುರಿತ ತನಿಖಾ ವರದಿಯಲ್ಲಿ 700ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ರಾಜಕಾರಣಿಗಳ ಹೆಸರನ್ನು ಉಲ್ಲೇಖಿಸಲಾಗಿದೆ.
ಈ ಪ್ರಕ್ರಿಯೆಯಲ್ಲಿ ಆರೋಪ ಎದುರಿಸುತ್ತಿರುವವರ ಪ್ರತಿಕ್ರಿಯೆ, ವಿವರಣೆಯನ್ನೇ ಪಡೆಯದೇ ಅಂತಿಮ ತೀರ್ಮಾನಕ್ಕೆ ಬರಲಾಗಿದೆ. ಇಂತಹ ಕ್ರಮ ಸರಿಯೇ ಎಂಬ ಪ್ರಶ್ನೆಯನ್ನೂ ಲೋಕಾಯು ಕ್ತಕ್ಕೆ ರವಾನಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
`ಸಚಿವರು ಮತ್ತು ಶಾಸಕರ ವಿಷಯದಲ್ಲಿ ಅಧಿಕಾರದಿಂದ ತೆಗೆದುಹಾಕಬೇಕೆಂಬ ಶಿಫಾರಸು ಅವರ ಪಾಲಿಗೆ `ಲೌಕಿಕ ಸಾವು` (ಸಿವಿಲ್ ಡೆತ್) ಇದ್ದಂತೆ. ಈ ವಿಷಯ ರಾಜಕಾರಣಿಯ ಗೌರವ, ಮುಂದುವರಿಕೆ ಎಲ್ಲವನ್ನೂ ಒಳಗೊಂಡಿರುತ್ತದೆ. ಸಹಜ ನ್ಯಾಯ ಪಾಲಿಸದೇ ಇಂತಹ ಶಿಫಾರಸು ಗಳನ್ನು ಮಾಡಬಹುದೇ ಎಂದು ಕಾನೂನು ತಜ್ಞರು ಪ್ರಶ್ನಿಸಿದ್ದಾರೆ. ಈ ಕಾರಣದಿಂದಾಗಿಯೇ ಸರ್ಕಾರ ಸಲಹೆ ಪಡೆಯುವ ನಿರ್ಧಾರ ಕೈಗೊಂಡಿದೆ` ಎಂದು ವಿವರಣೆ ನೀಡಿದರು.
`ಇದು ಒಂದು ಪ್ರಮುಖ ಪ್ರಕರಣ. ಲೋಕಾಯುಕ್ತ ಕಾಯ್ದೆ ಜಾರಿಯಾದ 26 ವರ್ಷಗಳ ಬಳಿಕ ಇಂತಹ ಪರಿಸ್ಥಿತಿ ಉದ್ಭವಿಸಿದೆ. ಈ ಸಂದರ್ಭದಲ್ಲಿ ಸರ್ಕಾರ ಕೈಗೊಳ್ಳುವ ನಿರ್ಣಯಗಳು `ಪರಂಪರೆ` ಆಗಲಿವೆ. ಆದ್ದರಿಂದ ಸರ್ಕಾರಕ್ಕೆ ಇರುವ ಸಂದೇಹಗಳಿಗೆ ಲೋಕಾಯುಕ್ತದಿಂದಲೇ ಸಲಹೆ ಪಡೆದು, ಬಳಿಕ ತೀರ್ಮಾನ ಕೈಗೊಳ್ಳುವ ನಿರ್ಧಾರಕ್ಕೆ ಸಚಿವ ಸಂಪುಟ ಬಂದಿದೆ. ಈ ನೆಪದಲ್ಲಿ ರಕ್ಷಣೆ ಪಡೆಯುವ ಯಾವುದೇ ದುರುದ್ದೇಶ ಸರ್ಕಾರಕ್ಕೆ ಇಲ್ಲ` ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಧಿಕಾರಿಗಳಿಗೆ ಅವಕಾಶ: ಲೋಕಾಯುಕ್ತ ವರದಿಯಲ್ಲಿ 700ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿ ಗಳ ವಿರುದ್ಧ ಇರುವ ಆಪಾದನೆಗಳ ಬಗ್ಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಸಮಿತಿ ಪರಿಶೀಲನೆ ನಡೆಸುತ್ತಿದೆ. ಕೆಲವೇ ದಿನಗಳಲ್ಲಿ ಈ ಸಮಿತಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಸಮಿತಿಯ ವರದಿ ಕೈಸೇರಿದ ಬಳಿಕ, ಆಪಾದನೆ ಎದುರಿಸುತ್ತಿರುವ ಎಲ್ಲ ಅಧಿಕಾರಿ ಗಳು ಮತ್ತು ನೌಕರರಿಗೆ ವಿವರಣೆ ನೀಡಲು ಒಂದು ಅವಕಾಶ ನೀಡುವ ಬಗ್ಗೆಯೂ ಸಂಪುಟ ನಿರ್ಧರಿಸಿದೆ ಎಂದರು.
`ಅಧಿಕಾರಿಗಳ ವಿರುದ್ಧ ಇನ್ನೂ ಕ್ರಮ ಜರುಗಿಸಿಲ್ಲ. ಕೆಲವರನ್ನು ಇಲಾಖಾವಾರು ವಿಚಾರಣೆ ವೇಳೆ ಅಮಾನತು ಮಾಡಿರಬಹುದು. ಆದರೆ, ಅಮಾನತು ಶಿಕ್ಷೆಯಲ್ಲ. ಪ್ರತಿಯೊಬ್ಬರಿಗೂ ತಮ್ಮ ವಿರುದ್ಧದ ಆರೋಪಗಳ ಬಗ್ಗೆ ವಿವರಣೆ ನೀಡುವ ಅವಕಾಶ ಕಲ್ಪಿಸಿದ ಬಳಿಕವೇ ಕ್ರಮ ಜರುಗಿಸುವ ಸಂಬಂಧ ಸರ್ಕಾರ ನಿರ್ಧಾರಕ್ಕೆ ಬರುತ್ತದೆ` ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
`ಲೋಕಾಯುಕ್ತರೇ ಇಲ್ಲದಿರುವಾಗ ಯಾರಿಂದ ಸಲಹೆ ಪಡೆಯುತ್ತೀರಿ` ಎಂಬ ಪ್ರಶ್ನೆಗೆ, `ಲೋಕಾ ಯುಕ್ತ ಸಂಸ್ಥೆ ಇದೆ. ಸಂಸ್ಥೆಯ ಕಡೆಯಿಂದಲೇ ಸಲಹೆ ಪಡೆಯುತ್ತೇವೆ` ಎಂದರು.
ಗಣಿ ವರದಿ ಶೈತ್ಯಾಗಾರಕ್ಕೆ : ನೈಸರ್ಗಿಕ ನ್ಯಾಯ ಕೊರತೆಯ ನೆಪವೊಡ್ಡಿದ ಸಂಪುಟ
ಬೆಂಗಳೂರು ಅ.೧೩ : ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತರು ನೀಡಿರುವ ತನಿಖಾ ವರದಿಯನ್ನು ರಾಜ್ಯ ಸರ್ಕಾರ ನಿರೀಕ್ಷೆಯಂತೆ ಶೈತ್ಯಾಗಾರಕ್ಕೆ ಕಳುಹಿಸಲು ಸಿದ್ಧತೆ ನಡೆಸಿದೆ.
ಇದರ ಮೊದಲ ಹೆಜ್ಜೆಯಾಗಿ ವರದಿಯಲ್ಲಿನ ಶಿಫಾರಸುಗಳ ಪೈಕಿ ಮೂರು ಅಂಶಗಳ ಬಗ್ಗೆ ಉಂಟಾಗಿರುವ ಗೊಂದಲಗಳ ಪರಿಹಾರಕ್ಕೆ ಸಲಹೆ ನೀಡುವಂತೆ ಲೋಕಾಯುಕ್ತ ಸಂಸ್ಥೆಯನ್ನು ಕೋರುವ ನಿರ್ಣಯವನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಈ ಮೂಲಕ ವರದಿಯಲ್ಲಿ ಹೆಸರಿಸಲಾಗಿರುವ ಬಳ್ಳಾರಿಯ ರೆಡ್ಡಿಗಳ ಬಳಗ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಇತರೆ ಜನಪ್ರತಿನಿಧಿಗಳ ಬೆಂಬಲಕ್ಕೆ ನಿಲ್ಲುವ ಪ್ರಯತ್ನ ಮಾಡಿದೆ.
ಸಲಹೆ ಕೋರುವ ನೆಪದಲ್ಲಿ ಸಂವಿಧಾನ ಮತ್ತು ಲೋಕಾಯುಕ್ತ ಕಾಯ್ದೆಗಳನ್ನು ಉಲ್ಲೇಖಿಸಲಿರುವ ಸರ್ಕಾರ, ಲೋಕಾಯುಕ್ತರು ಏಕಪಕ್ಷೀಯವಾದ ಶಿಫಾರಸುಗಳನ್ನು ಮಾಡಿದ್ದಾರೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಲು ನಿರ್ಧರಿಸಿದೆ.
ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್‌ಕುಮಾರ್, ಲೋಕಾಯುಕ್ತರ ವರದಿಯಲ್ಲಿ ಹೆಸರಿಸಲಾಗಿರುವ ೭೦೦ ಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂಬುದರ ಬಗ್ಗೆ ಅಧ್ಯಯನ ನಡೆಸಲು ರಚಿಸಿರುವ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿ ಒಂದೆರಡು ದಿನಗಳಲ್ಲಿ ವರದಿ ನೀಡಲಿದೆ ಎಂದರು.
ಮತ್ತೊಂದೆಡೆ ಅಧಿಕಾರೇತರ ಅಂದರೆ, ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳ ಹೆಸರು ಪ್ರಸ್ತಾಪವಾಗಿರುವ ವಿಚಾರದಲ್ಲಿ ಮೂರು ಅಂಶಗಳ ಬಗ್ಗೆ ಸಲಹೆ ನೀಡುವಂತೆ ಲೋಕಾಯುಕ್ತ ರನ್ನು ಕೋರಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ತಿಳಿಸಿದರು.
ಸಲಹೆ ೧: ವರದಿಯಲ್ಲಿ ಹೆಸರು ಪ್ರಸ್ತಾಪವಾದ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಳೆದ ಜುಲೈ ೩೧ ರಂದು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಆ ಕ್ಷಣದಿಂದಲೇ ಅವರ ಸಂಪುಟ ಸದಸ್ಯರೂ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ.
ಸಂವಿಧಾನದ ಪರಿಚ್ಛೇದ ೧೬೪ ರ ಪ್ರಕಾರ ಮುಖ್ಯಮಂತ್ರಿಯನ್ನು ರಾಜ್ಯಪಾಲರು ನೇಮಕ ಮಾಡುತ್ತಾರೆ. ಮಂತ್ರಿಗಳನ್ನು ಮುಖ್ಯಮಂತ್ರಿಗಳ ಸಲಹೆ ಮೇರೆಗೆ ನೇಮಕ ಮಾಡಲಾಗುತ್ತದೆ. ಸಂವಿಧಾನದ ಪರಿಚ್ಛೇದ ೧೯೧ರ ಪ್ರಕಾರ ವಿಧಾನಸಭೆ ಅಥವಾ ವಿಧಾನಪರಿಷತ್ತಿನ ಸದಸ್ಯ ಹೇಗೆ ಅರ್ಹ ಮತ್ತು ಅನರ್ಹನಾಗುತ್ತಾನೆ ಎಂಬುದನ್ನು ಸ್ಪಷ್ಟವಾಗಿ ಹೇಳಿದೆ.
ಈ ಜನಪ್ರತಿನಿಧಿಗಳು ಸಾರ್ವಜನಿಕರ ಸೇವಕರು. ಇವರನ್ನು ತೆಗೆಯುವ ಮೊದಲು ನೊಟೀಸ್ ನೀಡಿ ಅವರ ಅಭಿಪ್ರಾಯ ಕೇಳಬೇಕಾಗುತ್ತದೆ. ಇದು ಸಹಜ ಕ್ರಿಯೆ. ಆದರೆ, ಇಂತಹ ಯಾವುದೇ ನೊಟೀಸ್ ನೀಡದೇ ಸಂಪುಟದಲ್ಲಿ ಸಚಿವರಾಗಿದ್ದವರನ್ನು ತೆಗೆಯಬೇಕೆಂದು ಶಿಫಾರಸು ಮಾಡಿ ರುವುದು ಎಷ್ಟರ ಮಟ್ಟಿಗೆ ಸರಿ? ಎಂಬ ಪ್ರಶ್ನೆಯೊಂದಿಗೆ ಈ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಬೇ ಕೆಂದು ಮನವಿ ಮಾಡಲಾಗುತ್ತದೆ.
ಸಲಹೆ ೨: ಲೋಕಾಯುಕ್ತ ಸಂಸ್ಥೆ ತನಗೆ ಬಂದ ದೂರು ಅಥವಾ ಶಿಫಾರಸು ಮಾಡಿದ ಆಧಾರದಲ್ಲಿ ಪ್ರಕರಣಗಳ ತನಿಖೆ ನಡೆಸಲು ಅವಕಾಶವಿದೆ. ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಲೋಕಾಯುಕ್ತ ಕಾಯ್ದೆ ೭(೨)(ಎ) ಅಡಿ ತನಿಖೆ ನಡೆಸುವಂತೆ ಶಿಫಾರಸು ಮಾಡಿತ್ತು. ಇಂತಹ ಸಂದರ್ಭದಲ್ಲಿ ಅಧಿಕಾರದಲ್ಲಿರುವವರನ್ನು ಮುಂದುವರಿಸಬಾರದು ಎಂದು ಶಿಫಾರಸು ಮಾಡಲು ಅವಕಾಶವಿಲ್ಲ. ಹೀಗಾಗಿ ಈ ಅಂಶದ ಬಗ್ಗೆಯೂ ಸ್ಪಷ್ಟನೆ ನೀಡಬೇಕೆಂದು ಸರ್ಕಾರ ಕೋರಲಿದೆ.
ಸಲಹೆ ೩: ಲೋಕಾಯುಕ್ತರು ತಮ್ಮ ವರದಿ ನೀಡುವ ಮುನ್ನ ನೈಸರ್ಗಿಕ ನ್ಯಾಯ ಪಾಲಿಸಿಲ್ಲ ಎಂಬುದು ಸರ್ಕಾರದ ಮತ್ತೊಂದು ದೂರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸುವಾಗ ಯಾವುದೇ ವ್ಯಕ್ತಿ ವಿರುದ್ಧ ಆರೋಪಗಳು ಬಂದಾಗ ಆ ವ್ಯಕ್ತಿಯ ಅಭಿಪ್ರಾಯಗಳನ್ನು ಪಡೆಯುವುದು ಜಗದ ನಿಯಮ. ಆದರೆ, ಲೋಕಾಯುಕ್ತರು ಅಭಿಪ್ರಾಯ ವ್ಯಕ್ತಪಡಿಸಲು ಅವರಿಗೆ ಅವಕಾಶವನ್ನೇ ನೀಡಿಲ್ಲ. ಹೀಗಾಗಿ ಈ ಅಂಶದ ಬಗ್ಗೆ ಸೂಕ್ತ ಸ್ಪಷ್ಟೀಕರಣ ನೀಡಬೇಕೆಂದು ಸರ್ಕಾರ ಮನವಿ ಮಾಡಲಿದೆ.
ಒಳ್ಳೆಯ ಸಂಪ್ರದಾಯ ಆಗಲಿ: ಲೋಕಾಯುಕ್ತರು ನೀಡುವ ವರದಿಗಳು ಮತ್ತು ಶಿಫಾರಸುಗಳು ಮುಂದಿನ ದಿನಗಳಲ್ಲಿ ಒಳ್ಳೆಯ ಸಂಪ್ರದಾಯಕ್ಕೆ ಮುನ್ನುಡಿ ಬರೆಯಲಿ ಎಂಬ ಕಾರಣಕ್ಕೆ ಸಲಹೆ ಗಳನ್ನು ನೀಡುವಂತೆ ಲೋಕಾಯುಕ್ತ ಸಂಸ್ಥೆಯನ್ನು ಸರ್ಕಾರ ಕೋರಲಿದೆ ಎಂದೂ ಸುರೇಶ್‌ ಕುಮಾರ್ ತಿಳಿಸಿದರು.
ಅಧಿಕಾರಿಗಳ ವಿರುದ್ಧವೂ ಕ್ರಮ: ೭೦೦ ಕ್ಕೂ ಹೆಚ್ಚು ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾ ಗಿದ್ದಾರೆ ಎಂದು ಲೋಕಾಯುಕ್ತರು ತಮ್ಮ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೇ? ಅಥವಾ ಬೇಡವೇ? ಎಂಬುದರ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಸಮಿತಿ ರಚಿಸಲಾಗಿತ್ತು. ಈ ಸಮಿತಿಯ ವರದಿ ಆಧಾರದಲ್ಲಿ ತಪ್ಪಿತಸ್ಥ ಅಧಿಕಾರಿಗಳಿಗೆ ನೊಟೀಸ್ ನೀಡಿ ಕ್ರಮ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದೂ ಸುರೇಶ್‌ಕುಮಾರ್ ಹೇಳಿದರು.
ಸಂಪುಟ ಸಭೆಯ ಮುಖ್ಯಾಂಶಗಳು
ಮೈಸೂರಿನಲ್ಲಿರುವ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಯ ಶಾಖೆ ಗಳನ್ನು ಬೆಂಗಳೂರು ಮತ್ತು ಧಾರವಾಡದಲ್ಲಿ ಸ್ಥಾಪಿಸಲು ನಿರ್ಧಾರ. ವೆಚ್ಚ ರು. ೭೬ ಕೋಟಿ
ಪುಷ್ಪ ಉದ್ಯಮಕ್ಕೆ ಪ್ರೋತ್ಸಾಹ ನೀಡಲೆಂದು ರು. ೬ ಕೋಟಿ ಮಂಜೂರು
ರು. ೨೫ ಕೋಟಿ ಸಾಲ ಪಡೆಯಲು ರೇಷ್ಮೆ ಮಾರಾಟ ಮಂಡಳಿಗೆ ಗ್ಯಾರಂಟಿ ನೀಡಲು ನಿರ್ಧಾರ
ಬೆಂಗಳೂರಿನ ಬನಶಂಕರಿಯಲ್ಲಿ ರು. ೬.೯೫ ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಸಮ್ಮತಿ
ಬೆಳಗಾವಿಯ ಖಾನಾಪುರದಲ್ಲಿ ಸೇನಾ ತರಬೇತಿ ಶಾಲೆ ಸ್ಥಾಪಿಸಲು ೪೦೮ ಎಕರೆ ಭೂಮಿ ನೀಡಲು ನಿರ್ಧಾರ. ಇದೇ ಜಾಗದಲ್ಲಿ ಭಯೋತ್ಪಾದನಾ ನಿಗ್ರಹ ಶಾಲೆ ಆರಂಭಕ್ಕೂ ತೀರ್ಮಾನ
ಧಾರವಾಡದಲ್ಲಿನ ಬಾಲವಿಕಾಸ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕೆಂದು ರು. ೫.೩೩ ಲಕ್ಷ ಮಂಜೂರು
ಕೃಷಿ ವಿಶ್ವವಿದ್ಯಾಲಯಗಳಲ್ಲಿ ೨ ವರ್ಷದ ಡಿಪ್ಲೊಮಾ ಮತ್ತು ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಆರಂಭ.
ಅಕ್ರಮ ಗಣಿಗಾರಿಕೆ ಕುರಿತ ನನ್ನ ವರದಿಗೆ ಸರ್ಕಾರ ಆಕ್ಷೇಪ ತೆಗೆಯುತ್ತದೆ ಎಂಬುದು ನಿರೀಕ್ಷಿತ. ಹಾಗೆಯೇ ಆಗಿದೆ. ಶುಕ್ರವಾರ ಮಧ್ಯಾಹ್ನ ೩ ಗಂಟೆಗೆ ಈ ಬಗ್ಗೆ ಪತ್ರಿಕಾಗೋಷ್ಠಿ ಕರೆದು ವಿಸ್ತಾರ ವಾಗಿ ಮಾತನಾಡುತ್ತೇನೆ-ನ್ಯಾ.ಸಂತೋಷ್‌ಹೆಗ್ಡೆ ಮಾಜಿ ಲೋಕಾಯುಕ್ತ

Advertisement

0 comments:

Post a Comment

 
Top