PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು, ಅ.28: ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆಯೇ ರಾಜ್ಯದ ಜನತೆಗೆ ಸರಕಾರ ವಿದ್ಯುತ್ ಶಾಕ್ ನೀಡಿದ್ದು, ಪ್ರತಿ ಯುನಿಟ್‌ಗೆ 27 ಪೈಸೆ ಏರಿಸಿದೆ. ಕೈಗಾರಿಕೆ ಹಾಗೂ ವಾಣಿಜ್ಯ ಬಳಕೆದಾರರಿಗೆ ಯಾನಿಟ್‌ಗೆ 40ರಿಂದ 50 ಪೈಸೆ ಹೆಚ್ಚಿಸಲಾಗಿದೆ. ಅಡುಗೆ ಅನಿಲ, ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ವಿದ್ಯುತ್ ದರ ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ದೀಪಾವಳಿಯ ಸಡಗರದಲ್ಲಿದ್ದ ಜನರಿಗೆ ವಿದ್ಯುತ್ ದರ ಏರಿಕೆ ಇನ್ನಷ್ಟು ಕತ್ತಲನ್ನು ಮೂಡಿಸಿದ್ದು, ಜನ ಆಕ್ರೋಶಗೊಂಡಿದ್ದಾರೆ.
ವಿವಿಧ ವರ್ಗಗಳ ವಿದ್ಯುತ್ ಬಳಕೆಯ ದರ ಪರಿಷ್ಕರಣೆ ಮಾಡಿರುವ ಸರಕಾರ, ಯೂನಿಟ್‌ಗೆ 27ರಿಂದ 35 ಪೈಸೆ ಹೆಚ್ಚುವರಿಯಾಗಿ ವಿಧಿಸಿದೆ. ಎಲ್ಲ ವಿದ್ಯುತ್ ಕಂಪೆನಿಗಳು ಗ್ರಾಹಕರಿಗೆ ಸರಾಸರಿ 27 ಪೈಸೆ ದರ ಹೆಚ್ಚಿಸಿದ್ದು, ಇಂದಿನಿಂದಲೇ ವಿದ್ಯುತ್ ದರ ಹೆಚ್ಚಳ ಜಾರಿಗೆ ಬರಲಿದೆ ಎಂದು ಕೆಇಆರ್‌ಸಿ ಅಧ್ಯಕ್ಷ ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ. ನೀರಾವರಿ ಪಂಪ್‌ಸೆಟ್, ಭಾಗ್ಯಲಕ್ಷ್ಮಿ, ಕುಟೀರಜ್ಯೋತಿ ಹೊರತಾಗಿ ಉಳಿದ ಎಲ್ಲ ಗ್ರಾಹಕರಿಗೂ ಬೆಸ್ಕಾಂ ಸೇರಿದಂತೆ ರಾಜ್ಯದ ಐದು ವಿದ್ಯುತ್ ಕಂಪೆನಿಗಳು 88 ಪೈಸೆ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದವು ಎಂದವರು ಹೇಳಿದ್ದಾರೆ.
ನಗರ ಪ್ರದೇಶಗಳಲ್ಲಿ ಗೃಹ ಬಳಕೆದಾರರು 30ಯೂನಿಟ್ ವಿದ್ಯುತ್ ಬಳಸಿದರೆ ಪ್ರತಿಯೂನಿಟ್‌ಗೆ 10 ಪೈಸೆ ಹೆಚ್ಚಿನ ದರ ನೀಡಬೇಕಾಗಿದೆ. ಅದೇ ರೀತಿ 30ರಿಂದ 100 ಯೂನಿಟ್ ವಿದ್ಯುತ್ ಬಳಸಿದರೆ 20 ಪೈಸೆ ನೀಡಬೇಕು. 100ರಿಂದ 200 ಯೂನಿಟ್ ವಿದ್ಯುತ್ ಬಳಸಿದರೆ 30 ಪೈಸೆ ನೀಡಬೇಕು.
100ರಿಂದ 200 ಯೂನಿಟ್ ವಿದ್ಯುತ್ ಬಳಸಿದರೆ 30 ಪೈಸೆ ನೀಡಬೇಕು. 200ರಿಂದ 300 ಯೂನಿಟ್ ಬಳಸಿದರೆ ರೂ. 1.50 ನೀಡಬೇಕು ಹಾಗೂ 300ಕ್ಕೂ ಹೆಚ್ಚು ಯೂನಿಟ್ ವಿದ್ಯುತ್ ಬಳಸಿದರೆ ಯೂನಿಟ್‌ಗೆ 1 ರೂ. ಹೆಚ್ಚುವರಿ ದರ ನೀಡಬೇಕಾಗುತ್ತದೆ ಎಂದು ಶ್ರೀನಿವಾಸ ಮೂರ್ತಿ ವಿವರಿಸಿದರು. ಅದೇ ರೀತಿ ಗ್ರಾಮೀಣ ಪ್ರದೇಶಗಳಲ್ಲಿ 100 ಯೂನಿಟ್‌ವರೆಗೆ ಪ್ರತಿ ಯೂನಿಟ್‌ಗೆ 10 ಪೈಸೆ ಹಾಗೂ ಪಂಪ್‌ಸೆಟ್ ಬಳಕೆದಾರರಿಗೆ 15 ಪೈಸೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು. ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರು ಯೂನಿಟ್‌ಗೆ 40ರಿಂದ 150 ಹೆಚ್ಚು ತೆರಬೇಕಾಗುತ್ತದೆ.

Advertisement

0 comments:

Post a Comment

 
Top