PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಆ. ೯ (ಕ.ವಾ): ಕೃಷಿ ಉದ್ದೇಶಕ್ಕೆಂದು ವಾಹನವನ್ನು ನೋಂದಣಿ ಮಾಡಿಸಿ, ನಂತರ ಇಂತಹ ವಾಹನಗಳಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರಹದಾರಿ ಅನುಮತಿಯೊಂದಿಗೆ ಮರಳು ಸಾಗಾಣಿಕೆ ಮಾಡುವ ವಾಹನಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವರಾಜ್ ಪಾಟೀಲ್ ಅವರು ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ಮರಳು ಮಾನಿಟರಿಂಗ್ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿದ ಸಭೆಯ ನಿರ್ಣಯದಂತೆ, ಕೊಪ್ಪಳ ಜಿಲ್ಲೆಯಾದ್ಯಂತ ಕೃಷಿ ಉದ್ದೇಶಕ್ಕೆಂದು ಅಥವಾ ಇತರೆ ಉದ್ದೇಶಕ್ಕೆಂದು ನೊಂದಣಿಯಾಗಿರುವ ವಾಹನಗಳು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ರಹದಾರಿ ಅನುಮತಿ ಹೊಂದಿದ್ದರೂ ಸಹ ಇಂತಹ ವಾಹನಗಳಲ್ಲಿ ಮರಳು ಸಾಗಾಣಿಕೆ ಮಾಡುವುದಕ್ಕೆ ಅವಕಾಶವಿಲ್ಲ. ಇಂತಹ ಕಡ್ಡಾಯವಾಗಿ ವಾಣಿಜ್ಯೋದ್ಯಮ ಉದ್ದೇಶಕ್ಕಾಗಿ ಮಾತ್ರ ನೋಂದಣಿಯಾಗಿರಬೇಕು. ಒಂದು ವೇಳೆ ಕೃಷಿ ಮತ್ತು ಇತರೆ ಉದ್ದೇಶಗಳಿಗಾಗಿ ನೋಂದಣಿಯಾದ ವಾಹನಗಳು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ರಹದಾರಿ ಅನುಮತಿಯೊಂದಿಗೆ ಮರಳು ಸಾಗಾಣಿಕೆ ಮಾಡಬೇಕಾದಲ್ಲಿ, ಅಂತಹ ವಾಹನಗಳು ಕಡ್ಡಾಯವಾಗಿ ವಾಣಿಜ್ಯೋದ್ಯಮ ಉದ್ದೇಶಕ್ಕಾಗಿ ಪರಿವರ್ತನೆ ಮಾಡಿಕೊಳ್ಳಬೇಕು. ಅಲ್ಲದೆ ವಾಹನಕ್ಕೆ ಸಂಬಂಧಿಸಿದ ಚಾಲ್ತಿ ಸಿಂಧುತ್ವವಿರುವ ಎಲ್ಲಾ ಮೂಲ ದಾಖಲೆಗಳನ್ನು ಇಟ್ಟುಕೊಂಡಿರಬೇಕು. ಮರಳು ಸಾಗಾಣಿಕೆ ಮಾಡುವ ವಾಹನಗಳು ಕಡ್ಡಾಯವಾಗಿ ಜಿಪಿಎಸ್/ಆರ್‌ಎಫ್‌ಐಆರ್/ಹೆಚ್‌ಟಿವಿ ಅಳವಡಿಸಿಕೊಂಡಿರಬೇಕು. ತಪ್ಪಿದಲ್ಲಿ ಮೋಟಾರು ವಾಹನ ಕಾಯ್ದೆ ಹಾಗೂ ನಿಯಮಗಳನುಸಾರವಾಗಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವರಾಜ್ ಪಾಟೀಲ್ ಅವರು ಎಚ್ಚರಿಕೆ ನೀಡಿದ್ದಾರೆ.

Advertisement

0 comments:

Post a Comment

 
Top