PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಜು. : ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಎರಡನೆ ಟಿಕೆಟ್ ವಿತರಣಾ ಕೌಂಟರನ್ನು ಸಂಸದ ಶಿವರಾಮಗೌಡ ಗುರುವಾರ ಉದ್ಘಾಟಿಸಿದರು.
ಎರಡನೆ ಟಿಕೆಟ್ ವಿತರಣಾ ಕೌಂಟರ್ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಶಿವರಾಮಗೌಡ ಅವರು, ಕೊಪ್ಪಳದ ರೈಲ್ವೆ ನಿಲ್ದಾಣದಲ್ಲಿ ಇದುವರೆಗೂ ಒಂದು ಟಿಕೆಟ್ ವಿತರಣಾ ಕೌಂಟರ್ ಇದ್ದು, ಇದರಿಂದಾಗಿ ಟಿಕೆಟ್ ಕೌಂಟರಿನಲ್ಲಿ ಉದ್ದನೆ ಸಾಲು ಕಂಡುಬರುತ್ತಿದ್ದು ಸಾಮಾನ್ಯವಾಗಿತ್ತು. ಟಿಕೆಟ್ ಸಿಗದೆ ಎಷ್ಟೋ ಪ್ರಯಾಣಿಕರು ಟಿಕೆಟ್ ರಹಿತ ಪ್ರಯಾಣ ಮಾಡಿ ದಂಡ ಪಾವತಿಸುವಂತಾಗಿತ್ತು. ಅಲ್ಲದೆ ಜನಜಂಗುಳಿಯಿಂದ ಹಲವರು ಟಿಕೆಟ್ ಪಡೆಯಲು ಸಾಧ್ಯವಾಗದೆ ರೈಲು ಪ್ರಯಾಣ ತಪ್ಪಿಸಿಕೊಳ್ಳುತ್ತಿದ್ದರು. ಈ ತೊಂದರೆ ನಿವಾರಿಸುವ ಸಲುವಾಗಿ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಎರಡನೆ ಟಿಕೆಟ್ ವಿತರಣಾ ಕೌಂಟರ್ ಪ್ರಾರಂಭವಾಗಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ಇದೀಗ ರೈಲ್ವೆ ಇಲಾಖೆಯು ಈ ಬೇಡಿಕೆ ಈಡೇರಿಸಿದೆ. ಅದೇ ರೀತಿ ಹೌರಾ ಎಕ್ಸ್‌ಪ್ರೆಸ್ ರೈಲು ಕೊಪ್ಪಳ ನಿಲ್ದಾಣದಲ್ಲಿ ನಿಲುಗಡೆಯಾಗಬೇಕು, ಕೊಪ್ಪಳ ರೈಲ್ವೆ ನಿಲ್ದಾಣ ಅಭಿವೃದ್ಧಿಯಾಗಬೇಕು ಎನ್ನುವ ಬೇಡಿಕೆಗೆ ರೈಲ್ವೆ ಇಲಾಖೆ ಶೀಘ್ರದಲ್ಲೇ ಸ್ಪಂದಿಸಿ, ಬೇಡಿಕೆ ಈಡೇರಿಸಲಿದೆ ಎನ್ನುವ ವಿಶ್ವಾಸವಿದೆ ಎಂದು ಸಂಸದ ಶಿವರಾಮಗೌಡ ಅವರು ಹೇಳಿದರು.
ರೈಲ್ವೆ ಸಲಹಾ ಮಂಡಳಿಯ ಸದಸ್ಯ ಕೊಪ್ಪಳದ ಭವರಲಾಲ್, ಕೊಪ್ಪಳ ನಗರಸಭೆ ಸದಸ್ಯ ವಿರುಪಾಕ್ಷಪ್ಪ ಮೋರನಾಳ, ಗಣ್ಯರಾದ ಚಂದ್ರಶೇಖರ ಪಾಟೀಲ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top