PLEASE LOGIN TO KANNADANET.COM FOR REGULAR NEWS-UPDATES








ಕೊಪ್ಪಳ : ಕಾವ್ಯದಲ್ಲಿ ಭಾಷೆ ಮತ್ತು ಶಬ್ದಗಳನ್ನು ತಂತ್ರಗಾರಿಕೆಯಿಂದ ಬಳಸುವ ಅವಶ್ಯಕತೆಯಿದೆ.ಹೊಸ ಹೊಸ ತಂತ್ರದಿಂದ ಭಾಷೆ, ಶಬ್ದ ನಾವಿನ್ಯತೆ ಪಡೆಯುತ್ತವೆ. ಭಾವನೆಗಳಿಗೆ ಕಾವ್ಯದ ರೂಪ ಕೊಡುವಲ್ಲ್ಲಿ ಕೆಲವೊಮ್ಮೆ ಶಬ್ದಗಳೂ ಸೋಲುತ್ತವೆ. ಕಾವ್ಯದಲ್ಲಿ ಬದುಕಿನ ತುಡಿತ ಮುಖ್ಯವಾಗಿರಬೇಕು ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ಅವರು ೫೦ನೇ ಕವಿಸಮಯದಲ್ಲಿ ಭಾಗವಹಿಸಿ ಭಾನುಮತಿಯನ್ನು ಪಂಪ ಚಿತ್ರಿಸಿದ ಬಗೆ ಮತ್ತು ಇತರ ಕವಿಗಳು,ಲೇಖಕರು ನೋಡುವ ಬಗೆಯ ಕುರಿತು ಮಾತನಾಡಿದರು. ಪಂಪನು ಕರ್ಣ ಮತ್ತು ಭಾನುಮತಿಯರ ನಡುವಿನ ಪಗಡೆಯಾಟವನ್ನು ವರ್ಣಿಸುವ ರೀತಿ ಮತ್ತು ವೀಣಾ ಬನ್ನಂಜೆ ಅದನ್ನು ತಮ್ಮದೇ ರೀತಿಯಲ್ಲಿ ಅರ್ಥೈಸಿರುವ ವ್ಯತ್ಯಾಸ ಕುರಿತು ಮಾತನಾಡಿದರು. ಕವಿಸಮಯವು ಹೊಸ ಕವಿಗಳಿಗೆ ವೇದಿಕೆಯಾಗಿರುವುದು ಮತ್ತು ಎಲ್ಲ ಸಮಾನಮನಸ್ಕರು ಒಂದೆಡೆ ಕುಳಿತು ನಡೆಸುತ್ತಿರುವ ಈ ಕಾರ್‍ಯಕ್ರಮ ೫೦ನೇ ವಾರವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರು ಎಲ್ಲರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಅಲ್ಲಮಪ್ರಭು ಬೆಟ್ಟದೂರು-ಬಿಟ್ಟು ಬಿಡು,ಘೋಷಣೆಗಳು, ಅರುಣಾ ನರೇಂದ್ರ- ಆಧುನಿಕ ವಚನಗಳು, ಪುಷ್ಪಲತಾ ಏಳುಬಾವಿ- ಪಂಚೆ, ರಮೇಶ ಬನ್ನಿಕೊಪ್ಪ- ಭಾನುಮತಿ, ಯಶೋಧರೆಯ ಅಳಲು, ಶಿವಪ್ರಸಾದ ಹಾದಿಮನಿ- ಎರಡು ಹನಿಗವನಗಳು, ಗುರುರಾಜ ದೇಸಾಯಿ- ಮಹಿಮೆ, ಪರ್‍ಮಿಷನ್, ವಾಸುದೇವ ಕುಲಕರ್ಣಿ- ಜನ ಲೋಕಪಾಲ ಮಸೂದೆ, ಕನಕಪ್ಪ ತಳವಾರ- ಕಾಮಸ್ಪರ್ಶ, ಗಾದಿ, ಸಿರಾಜ್ ಬಿಸರಳ್ಳಿ -ಬಿಕ್ಕಳಿಕಜೆ, ಭೋಜರಾಜ ಸೊಪ್ಪಿಮಠ- ಭಂಗಿಗಳ ಸ್ವಗತ, ಮಹೇಶ ಬಳ್ಳಾರಿ- ಸಂದೇಶ, ಕರ್ತೃ, ಜಡೆಯಪ್ಪ ಎನ್- ಸೀಮಂತ, ಡಾ.ಮಹಾಂತೇಶ ಮಲ್ಲನಗೌಡರ- ಕರ್ನಾಟಕ ರತ್ನ, ವಿಠ್ಠಪ್ಪ ಗೋರಂಟ್ಲಿ- ಸುವರ್ಣ ಪ್ರಭೆ, ಎ.ಪಿ.ಅಂಗಡಿ-ತಾಯ ಮೊಗವ ಕುರಿತು, ಸುಮತಿ ಹಿರೇಮಠ -ಬಾವ ಬಿಂಗ, ಶಾಂತಾದೇವಿ ಹಿರೇಮಠ- ಜೀವನದ ನಾವೆ, ಗಾಯತ್ರಿ ಭಾವಿಕಟ್ಟಿ- ಹರಕೆ ತೀರಿಸುವ ಪರಿ, ದಯಾನಂದ ಸಾಳುಂಕೆ- ಗಣತಂತ್ರ ಕವನಗಳನ್ನು ವಾಚನ ಮಾಡಿದರು.
ಕನ್ನಡನೆಟ್.ಕಾಂ ಕವಿಸಮೂಹದ ೫೦ನೇ ಕವಿಸಮಯವನ್ನು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮೊದಲಿಗೆ ಈ ಸಲದ ಕಸಾಪದ ದತ್ತಿನಿದಿ ಬಹುಮಾನಗಳನ್ನು ಪಡೆದ ಬಸವರಾಜ ಆಕಳವಾಡಿ ಮತ್ತು ಡಾ.ವಿ.ಬಿ.ರಡ್ಡೇರ್ ಇವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಕವಿಸಮಯದ ಸುವರ್ಣ ಸಂಭ್ರಮದ ಹಿನ್ನೆಲಯಲ್ಲಿ ಸಿಹಿ ಹಂಚಲಾಯಿತು. ಕವಿಸಮಯ ತನ್ನ ೫೦ನೇ ವಾರವನ್ನು ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಅದರ ಯಶಸ್ಸಿಗೆ ಕಾರಣರಾದ ಎಲ್ಲರನ್ನೂ ಸ್ಮರಿಸಿ ವಂದನೆಗಳನ್ನು ಸಲ್ಲಿಸಲಾಯಿತು. ಕಾರ್‍ಯಕ್ರಮದಲ್ಲಿ ಶಿವಾನಂದ ಹೊದ್ಲೂರ, ಬಸಪ್ಪ ಬಾರಕೇರ, ಈಶ್ವರ ಹತ್ತಿ, ಬಸವರಾಜ ಶೀಲವಂತರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮಹೇಶ ಬಳ್ಳಾರಿ ವಂದಿಸಿದರೆ, ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಿರೂಪಿಸಿದರು.

Advertisement

0 comments:

Post a Comment

 
Top