PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ : ಕಾವ್ಯ ಸರಳವಾಗಿದ್ದು ಮಹತ್ತರವಾದದ್ದನ್ನು ಕಾವ್ಯ ಹೇಳಬೇಕು ,ಅನುಭವ- ಅರಿವಿನೊಡನೆ ಸೇರಿದಾಗ ಮಾತ್ರ ಸಕಾಲಿಕವಾಗಿ ಸಾರ್ವಕಾಲಿಕವಾಗಿರುತ್ತದೆ ಎಂದು ಯುವ ಕವಿ ಬಿ.ಪೀರ್ ಬಾಷಾ ಹೇಳಿದರು. ಅವರು ನಗರದ ಎನ್‌ಜಿಒ ಭವನದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೩೩ನೇ ಕವಿಸಮಯದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಪದ ಜೋಡಣೆಯೇ ಕಾವ್ಯವಲ್ಲ. ಪದವಿನ್ಯಾಸ ಕಾವ್ಯವಾಗಬಲ್ಲದು. ಅಂತರ್ಗತ ಲಯ, ಆಳದಲ್ಲಿ ತಾತ್ವಿಕತೆಯನ್ನು ಕಾವ್ಯ ಹೊಂದಬೇಕು. ಸ್ವಂತ ರಚನೆಗಳೊಂದಿಗೆ ವಿಮರ್ಶಾತ್ಮಕ ದೃಷ್ಟಿಯನ್ನಿಟ್ಟುಕೊಂಡಾಗ ಬೆಳೆಯಬಹುದು. ಸಕಾಲಿಕ,ದಕ್ಕಿದ ಅನುಭವಗಳನ್ನು ಬಳಸಿಕೊಂಡು ಬರೆಯಬೇಕು ಎಂದು ಹೇಳಿದರು. ಕಾವ್ಯದ ಬಗ್ಗೆ ನಡೆದಷ್ಟು ಚರ್ಚೆ ಬೇರೆಯಾವುದೇ ಸಾಹಿತ್ಯ ಪ್ರಕಾರದ ಬಗ್ಗೆ ನಡೆದಿಲ್ಲ.ಕವಿ ತನ್ನ ಸಮಾಜಿಕ ಜವಾಬ್ದಾರಿಗಳನ್ನು ಅರಿತು ಬರೆಯಬೇಕು ಎಂದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಡಾ.ಮಹಾಂತೇಶ ಮಲ್ಲನಗೌಡರ- ರೂಪಾ ಕನ್ವರ್, ಶ್ರೀನಿವಾಸ ಚಿತ್ರಗಾರ- ಜಾದೂ, ಜಾನಪದ ಗೀತೆ, ಎನ್.ಜಡೆಯಪ್ಪ- ಧ್ವನಿ, ಮಗನ ಮಡದಿ, ರುಬಾಯಿಗಳು, ಪುಷ್ಪಾ ರಾಜಶೇಖರ ಏಳುಬಾವಿ- ಪರಿವರ್ತನೆ, ಪ್ರೀತಿ, ಬಸವರಾಜ ಸೂಳಿಬಾವಿ- ಆಯ್ದ ಕವನಗಳು, ಸುಮತಿ ಹಿರೇಮಠ- ಚರಿತ್ರೆಯಲ್ಲಿ ನಾವು, ಬೆನ್ನ ಹಿಂದಿನ ಹೆರಳು, ಸಿರಾಜ್ ಬಿಸರಳ್ಳಿ- ಬೆಂಕಿ ಹಚ್ಚಿ, ಮತ್ತೊಮ್ಮೆ ತೇರು ಎಳೆಯೋಣ ಕವನಗಳನ್ನು ವಾಚನ ಮಾಡಿದರು.
ಕವಿಗೋಷ್ಠಿಯಲ್ಲಿ ವೀರಣ್ಣ ವಾಲಿ, ವಿನಯ ಮದರಿ, ಎ.ಎಂ.ಮದರಿ, ಶಿವಪ್ರಸಾದ ಹಾದಿಮನಿ, ನಟರಾಜ ಸವಡಿ ಭಾಗವಹಿಸಿದ್ದರು. ಜಡೆಯಪ್ಪ ವಂದಿಸಿದರೆ, ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Advertisement

0 comments:

Post a Comment

 
Top