PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,ಮಾ.೧೨ ಮಹಿಳೆಯರ ಸಬಲೀಕರಣಕ್ಕಾಗಿ ಸರಕಾರ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರ ಸದುಪಯೋಗ ಪಡೆದುಕೊಂಡು ತರಬೇತಿ ಪಡೆಯುವುದರ ಮೂಲಕ ಸ್ವಯಂ ಉದ್ಯೋಗ ಪ್ರಾರಂಭಿಸಿ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ಸಾಗಿಸಬೇಕೆಂದು ನಗರಸಭೆಯ ಅಧ್ಯಕ್ಷ ಮಹೇಂದ್ರ ಛೋಪ್ರಾ ಹೇಳಿದರು.
ಅವರು ಶನಿವಾರ ಸಂಜೆ ನಗರದ ಹೊರ ವಲಯದ ಹೂವಿನಾಳ ರಸ್ತೆಯಲ್ಲಿರುವ ಎಂಎಸ್‌ಕೆ ಗಾರ್ಮೆಂಟ್ಸ್ ತರಬೇತಿ ಸಂಸ್ಥೆಯಲ್ಲಿ ಮಹಿಳೆಯರು ಪಡೆಯುತ್ತಿರುವ ಟೈಲರಿಂಗ್ ತರಬೇತಿ ಶಿಬಿರದ ಶಿಬಿರಾರ್ಥಿ ಮಹಿಳೆಯರಿಗೆ ಸರಕಾರದ ಜಂಟಿ ನಿರ್ದೇಶಕರು, ಕೈಗಾರಿಕಾ ಕೇಂದ್ರ ಇಲಾಖೆ ಹಾಗೂ ಜವಳಿ ಮತ್ತು ಕೈಮಗ್ಗ ಇಲಾಖೆ ವತಿಯಿಂದ ಶಿಷ್ಯವೇತನದ ಚೆಕ್ ಮತ್ತು ಪ್ರಮಾಣ ಪತ್ರ ವಿತರಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೇಸಿಗೆ ಕಾಲದಲ್ಲಿ ಕೊಪ್ಪಳದ ಜನತೆಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕಟ್ಟೆಚ್ಚರವಹಿಸಿ ನಗರಸಭೆ ವತಿಯಿಂದ ಎಲ್ಲಾ ಸದಸ್ಯರ ಸಹಯೋಗದಲ್ಲಿ ನೀರು ಪೂರೈಕೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ಕಾರ್ಯ ಮಾಡುವುದಾಗಿ ತಿಳಿಸಿದ ಅವರು, ನಗರದಲ್ಲಿ ವಾರ್ಡ್ ಸಂಚಾರ ಹಮ್ಮಿಕೊಂಡು ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ನೇರ ಸ್ಪಂದನೆ ನೀಡಿ ಅದರ ಇತ್ಯರ್ಥಕ್ಕಾಗಿ ಮತ್ತು ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಮಹಿಳೆಯರ ಸ್ವಾವಲಂಬಿ ಬದುಕಿಗಾಗಿ ಎಂಎಸ್‌ಕೆ ಗಾರ್ಮೆಂಟ್ಸ್ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ. ಈ ಸಂಸ್ಥೆಗೆ ಸರಕಾರ ನೀಡುವ ಯೋಜನೆ ಕಾರ್ಯಕ್ರಮದಂತೆ ನಗರಸಭೆಯಿಂದ ಸಿಗಬಹುದಾದ ಯೋಜನೆ ತರಬೇತಿ ಕಾರ್ಯಕ್ರಮ ಇತ್ಯಾದಿ ಏನಾದರೂ ಇದ್ದಲ್ಲಿ ಈ ಸಂಸ್ಥೆಗೆ ಕೊಡುವುದರ ಮೂಲಕ ಬಡ ನಿರ್ಗತಿಕ ನಿರುದ್ಯೋಗಿ ಯುವತಿ ಮತ್ತು ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡುವ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ ಭರವಸೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ನಗರಸಭೆ ಸದಸ್ಯ ಅಮ್ಜದ್ ಪಟೇಲ್ ವಹಿಸಿ ಮಾತನಾಡಿ, ನಗರಸಭೆಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಮಹೇಂದ್ರ ಛೋಪ್ರಾರವರ ನೇತೃತ್ವದಲ್ಲಿ ಮತ್ತು ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರ ಮಾರ್ಗದರ್ಶನದಲ್ಲಿ ನಗರದ ಜನತೆಗೆ ಅವರ ಬೇಕು-ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವು ಸಾಮರ್ಥ ನಮ್ಮ ನಗರಸಭೆ ಅಧ್ಯಕ್ಷರಲ್ಲಿದೆ. ಜನರ ಅನಿಸಿಕೆಯಂತೆ ಮತ್ತು ಅವರ ಬೇಡಿಕೆಯಂತೆ ಅಧ್ಯಕ್ಷರು ಕೆಲಸ ಮಾಡುತ್ತಾರೆ. ಅವರಿಗೆ ನಮ್ಮೆಲ್ಲ ಸದಸ್ಯರ ಸಹಕಾರ ಇದೆ ಎಂದು ಅಮ್ಜದ್ ಪಟೇಲ್ ಹೇಳಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಎಂ.ಸಾದಿಕ್ ಅಲಿ, ಸುಬಾನ್‌ಸಾಬ, ಎಂಎಸ್‌ಕೆ ಗಾರ್ಮೆಂಟ್ಸ್‌ನ ಮಾಲಕ ಮೊಹ್ಮದ್ ಶಫೀಕ್‌ರವರು ಸೇರಿದಂತೆ ಬಂಡೆಪ್ಪ ದೊಡ್ಡಮನಿ, ಮೌಲಾಹುಸೇನ್ ಮಿಠಾಯಿ, ಅಜ್ಮತ್ ಉಲ್ಲಾ ಮುದಗಲ್, ಜೀಲಾನ್ ಕಟಗಾರ, ಸಣ್ಣ ರಾಜಪ್ಪ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆರಂಭದಲ್ಲಿ ಸಲೀಂ ಮಂಡಲಗಿರಿಯವರು ಕಾರ್ಯಕ್ರಮ ನಿರೂಪಿಸಿ ಆರಂಭದಲ್ಲಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.


Advertisement

0 comments:

Post a Comment

 
Top