PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಮಾ.೨೧ ಕಷ್ಟ ಪಟ್ಟು ಬೆಳೆ ಬೆಳೆದ ರೈತರಿಗೆ ದೊರೆಯಬೇಕಾದ ಲಾಭಾಂಶ ಅನ್ಯರ ಪಾಲಾಗುವುದನ್ನು ತಪ್ಪಿಸಿ, ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಕೃಷಿ ಉತ್ಪನ್ನಗಳನ್ನು ರೈತರು ಮಾರಾಟ ಮಾಡಿ, ಆರ್ಥಿಕ ಸದೃಢರಾಗಬೇಕು.  ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಇನ್ನಾದರೂ ರೈತರು ಜಾಗೃತರಾಗಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ರೈತರಲ್ಲಿ ಮನವಿ ಮಾಡಿಕೊಂಡರು.
     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕೃಷಿ ಮಾರಾಟ ಇಲಾಖೆಯ ಸಹಯೋಗದಲ್ಲಿ ಕೃಷಿ ಉತ್ಪನ್ನಗಳ ಆನ್‌ಲೈನ್ ಟೆಂಡರ್ ಮತ್ತು ವಹಿವಾಟಿನ ಕುರಿತು ಜಿಲ್ಲೆಯಾದ್ಯಂತ ಆಯೋಜಿಸಲಾಗಿರುವ ರೈತ ಶಿಕ್ಷಣ ಕಾರ್ಯಕ್ರಮ ಮತ್ತು ವಿಶೇಷ ಪ್ರಚಾರಾಂದೋಲನ ಕಾರ್ಯಕ್ರಮಕ್ಕೆ ಸೋಮವಾರದಂದು ಕೊಪ್ಪಳ ಎಪಿಎಂಸಿ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
     ಗ್ರಾಮೀಣ ಪ್ರದೇಶಗಳಲ್ಲಿ ರೈತರು ಕಷ್ಟಪಟ್ಟು ದುಡಿದ ಬೆಳೆಗೆ ಸೂಕ್ತ ದರ ದೊರೆತು, ರೈತರಿಗೇ ಅದರ ಲಾಭ ಸಿಗುವಂತಾಗಬೇಕು.  ರೈತರ ಹತ್ತಿರಕ್ಕೆ ಕೃಷಿ ಉತ್ಪನ್ನಗಳ ಮಾರುಕಟ್ಟೆಯನ್ನು ಕೊಂಡೊಯ್ಯಲು ಹಾಗೂ ಪಾರದರ್ಶಕ ವಯವಸ್ಥೆಯಲ್ಲಿ ಸರಳವಾಗಿ ಉತ್ಪನ್ನಗಳನ್ನು ಮಾರಾಟ ಮಾಡಿ, ರೈತರು ಸ್ಪರ್ಧಾತ್ಮಕ ಬೆಲೆ ಪಡೆಯಲು ಅನುಕೂಲವಾಗುವಂತೆ ಕರ್ನಾಟಕ ಸಕಾರ ದೇಶದಲ್ಲಿಯೇ ಪ್ರಥಮವಾಗಿ ಕರ್ನಾಟಕ ಕೃಷಿ ಮಾರಾಟ ನೀತಿಯನ್ನು ಹೊಸ ಚಿಂತನೆಗಳೊಂದಿಗೆ ಜಾರಿಗೆ ತಂದಿದೆ.  ಇದಕ್ಕಾಗಿ ಆನ್‌ಲೈನ್ ಮಾರಾಟ ವೇದಿಕೆಯ ಮೂಲಕ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯವಸ್ಥೇ ಮಾಡಲಾಗುತ್ತದೆ.  ರೈತರು ತಮ್ಮ ಉತ್ಪನ್ನಗಳ ಮಾರಾಟಕ್ಕಾಗಿ ಹೆಚ್ಚು ಸಮಯವನ್ನು ಕಳೆಯದೆ, ಮಾರುಕಟ್ಟೆಯಲ್ಲಿ ಸಮಸ್ಯೆಗಳನ್ನು ಎದುರಿಸದೆ, ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಉತ್ಪನ್ನಗಳ ಮಾರಾಟದ ಮೌಲ್ಯ ವರ್ಗಾವಣೆಯಾಗುವಂತೆ ವ್ಯವಸ್ಥೇ ಕಲ್ಪಿಸಲಾಗುತ್ತಿದೆ.  ಈ ನಿಟ್ಟಿನಲ್ಲಿ ರೈತರು ನೂತನ ವ್ಯವಸ್ಥೆ ಬಗ್ಗೆ ಜಾಗೃತರಾಗಿ, ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ತಮ್ಮ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕು.  ರೈತರ ಶ್ರಮದ ಪ್ರತಿಫಲ, ಸಂಬಂಧಿಸಿದ ರೈತರಿಗೇ ಲಭಿಸುವಂತಾಗಬೇಕು.  ರೈತರು ಇನ್ನಾದರೂ ಜಾಗೃತರಾಗಬೇಕು.  ಕೃಷಿ ಮಾರಾಟ ಇಲಾಖೆ ಜಾರಿಗೊಳಿಸಿರುವ ಕೃಷಿ ಉತ್ಪನ್ನಗಳ ಆನ್‌ಲೈನ್ ಟೆಂಡರ್ ಮತ್ತು ವಹಿವಾಟಿನ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲೆಯಾದ್ಯಂತ ವಿಶೇಷ ಪ್ರಚಾರಾಂದೋಲನ ಹಮ್ಮಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಯನ್ನೊಳಗೊಂಡ ವಿಶೇಷ ವಾಹನವನ್ನು ಇಲಾಖೆ ಸಿದ್ಧಪಡಿಸಿ, ಮಾ. ೨೧ ರಿಂದ ಏಪ್ರಿಲ್ ೦೬ ರವರೆಗೆ ಹದಿನೇಳು ದಿನಗಳ ಕಾಲ ಪ್ರತಿ ದಿನ ಮೂರು ಗ್ರಾಮಗಳಲ್ಲಿ ಸಂಚರಿಸಿ, ಸಾರ್ವಜನಿಕರಿಗೆ ಮಾಹಿತಿ ಬಿತ್ತರಿಸಲಿದೆ.  ರೈತರು ಇದರ ಸದುಪಯೋಗ ಪಡೆದುಕೊಂಡು ಜಾಗೃತರಾಗುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಮನವಿ ಮಾಡಿದರು.
ಜಾಗೃತಿ ಅಭಿಯಾನ ಎಲ್ಲೆಲ್ಲಿ : ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಅವರು ಮಾತನಾಡಿ, ರೈತ ಜಾಗೃತಿ ಅಭಿಯಾನದ ವಾಹನವು ಮಾ. ೨೧ ರಿಂದ ಏಪ್ರಿಲ್ ೦೬ ರವರೆಗೆ ಹದಿನೇಳು ದಿನಗಳ ಕಾಲ ಪ್ರತಿ ದಿನ ಮೂರು ಗ್ರಾಮಗಳಲ್ಲಿ ಸಂಚರಿಸಿ, ಸಾರ್ವಜನಿಕರಿಗೆ ಮಾಹಿತಿ ಬಿತ್ತರಿಸಲಿದೆ.  ಕೊಪ್ಪಳ ತಾಲೂಕಿನಲ್ಲಿ ಮಾ. ೨೧ ರಂದು ಗಿಣಿಗೇರಾ, ಇಂದರಗಿ, ಕುಕನಪಳ್ಳಿ.  ಮಾ. ೨೨ ರಂದು ಕಿನ್ನಾಳ, ಲೇಬಗೇರಿ, ಕಾಮನೂರು.  ಮಾ. ೨೩ ರಂದು ಭೀಮನೂರ, ಇರಕಲ್ಲಗಡ, ಹಾಸಗಲ್.  ಮಾ. ೨೪ ರಂದು ಹಲಗೇರಿ, ಮತ್ತೂರು, ಅಳವಂಡಿ.  ಮಾ. ೨೫ ಂದು ಕುಣಿಕೇರಿ, ಲಾಚನಕೇರಿ, ಹೊಸಳ್ಳಿ.  ಮಾ. ೨೬ ರಂದು ಮುದ್ದಾಬಳ್ಳಿ, ಗೊಂಡಬಾಳ, ಹಿರೇಸಿಂದೋಗಿ.  ಮಾ. ೨೭ ರಂದು ಅಗಳಕೇರಾ, ಶಿವಪುರ, ಹುಲಿಗಿ.  ಗಂಗಾವತಿ ತಾಲೂಕಿನಲ್ಲಿ ಮಾ. ೨೮ ರಂದು ಗಂಗಾವತಿ, ವೆಂಕಟಗಿರಿ, ಮರಳಿ.  ಮಾ. ೨೯ ರಂದು ಶ್ರೀರಾಮನಗರ, ಸಿದ್ದಾಪುರ, ಕಾರಟಗಿ.  ಮಾ. ೩೦ ರಂದು ನವಲಿ, ಹುಲಿಹೈದರ್, ಕನಕಗಿರಿ.  ಕುಷ್ಟಗಿ ತಾಲೂಕಿನಲ್ಲಿ ಮಾ. ೩೧ ರಂದು ಹಿರೇವಂಕಲಕುಂಟಾ, ಗುನ್ನಾಳ, ಬೇವೂರು.  ಏ. ೦೧ ರಂದು ಕುಷ್ಟಗಿ, ತಳುವಗೇರಾ, ಅಡವಿಭಾವಿ.  ಏ. ೦೨ ರಂದು ಹನುಮಸಾಗರ, ಯರಗೇರಾ, ಬೆನಕನಾಳ.  ಯಲಬುರ್ಗಾ ತಾಲೂಕಿನಲ್ಲಿ ಏ. ೦೩ ರಂದು ಬಂಡಿ, ಹಿರೇಮ್ಯಾಗೇರಿ, ಮುಧೋಳ.  ಏ. ೦೪ ರಂದು ಯಲಬುರ್ಗಾ, ವಜ್ರಬಂಡಿ, ಮಂಗಳೂರು.  ಏ. ೦೫ ರಂದು ಶಿರೂರು, ಬಳಗೇರಿ, ಕುಕನೂರು.  ಏ. ೦೬ ರಂದು ಇಟಗಿ, ಬನ್ನಿಕೊಪ್ಪ, ತಳಕಲ್ ಗ್ರಾಮಗಳಲ್ಲಿ ಜಾಗೃತಿ ವಾಹನ ಸಂಚರಿಸಿ, ಮಾಹಿತಿ ಬಿತ್ತರಿಸಲಿದೆ ಎಂದರು.
     ಕೊಪ್ಪಳ ಎಪಿಎಂಸಿ ಕಾರ್ಯದರ್ಶಿ ಮರಿಬಸಪ್ಪ ಸಜ್ಜನ್ ಕೃಷಿ ಉತ್ಪನ್ನಗಳ ಆನ್‌ಲೈನ್ ಟೆಂಡರ್ ಮತ್ತು ವಹಿವಾಟಿನ ಕುರಿತು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.  ಎಪಿಎಂಸಿ ಅಧ್ಯಕ್ಷ ಹನುಮರಡ್ಡಿ ತಿಮ್ಮರಡ್ಡಿ ಹಂಗನಕಟ್ಟಿ ವಂದಿಸಿ, ರೈತ ಜಾಗೃತಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
     ಕೊಪ್ಪಳ ಎಪಿಎಂಸಿ ಉಪಾಧ್ಯಕ್ಷ ಮಾಯಪ್ಪ ಶಿವಪ್ಪ ಗುಗ್ರಿ, ಸಮಿತಿ ಸದಸ್ಯರುಗಳಾದ ಗವಿಸಿದ್ದಪ್ಪ ಮುದಗಲ್, ಶಿವಲಿಂಗಪ್ಪ ತಿಪ್ಪವ್ವನವರ, ಗಂಗಮ್ಮ ಕಲಾದಗಿ, ಶರಣಪ್ಪ ಸಜ್ಜನ, ಫಕೀರಯ್ಯ ಹಿರೇಮಠ, ನೀಲಪ್ಪ ಮೇಟಿ, ಮಲ್ಲಿಕಾರ್ಜುನಗೌಡ ಪಾಟೀಲ, ಜಯಪ್ಪ ಕಂಚಿ, ಕಮಲಚಂದ ಜಾಂಗಡಾ, ಶೇಖರಪ್ಪ ನಾಗರಳ್ಳಿ, ಡಿ. ಮಲ್ಲಪ್ಪ ಯಲ್ಲಪ್ಪ ಸೇರಿದಂತೆ ವಿವಿಧ ಎಪಿಎಂಸಿ ಗಳ ಪ್ರತಿನಿಧಿಗಳು, ಕಾರ್ಯದರ್ಶಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top