PLEASE LOGIN TO KANNADANET.COM FOR REGULAR NEWS-UPDATES

ರ್ಕೊಪ್ಪಳ ಡಿ. ೨೯ (ಕರ್ನಾಟಕ ವಾರ್ತೆ) ದೇಶದ ಭವಿಷ್ಯದ ಜನನಾಯಕರು ರೂಪುಗೊಳ್ಳುವುದು ಶಾಲೆಗಳಲ್ಲಿಯೇ ಆಗಿರುವುದರಿಂದ, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಅಗತ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಶ್ಯಾಮಸುಂದರ್ ಅವರು ಹೇಳಿದರು.ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಮಂಗಳವಾರದಂದು ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಹೆಚ್ಚು, ಹೆಚ್ಚು ಯುವಜನರು ರಾಜಕೀಯ ಪ್ರವೇಶ ಮಾಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.   ಭವ್ಯ ಹಾಗೂ ಬಲಿಷ್ಟ ಭಾರತವನ್ನು ಕಟ್ಟಲು, ದಕ್ಷ ಹಾಗೂ ಪ್ರಾಮಾಣಿಕ ಯುವ ಪೀಳಿಗೆ ನಿರ್ಮಾಣವಾಗುವುದು ಸಹ ಶಾಲೆಗಳಲ್ಲಿಯೇ ಆಗಿರುವುದರಿಂದ, ಪ್ರಜಾಪ್ರಭುತ್ವ ವ್ಯವಸ್ಥೆಯ ಆಳ, ಅಗಲದ ಅರಿವು ಮೂಡಿಸುವ ಕಾರ್ಯಕ್ರಮಗಳು ಶಾಲಾ ಮಟ್ಟದಲ್ಲಿಯೇ ಪ್ರಾರಂಭವಾಗಬೇಕು. ಜನರಿಂದ ಶಾಸಕರು ಹೇಗೆ ಆಯ್ಕೆಯಾಗುತ್ತಾರೆ ? ಸಂಸತ್‌ನಲ್ಲಿ ಅವರ ಕಾರ್ಯಗಳೇನು ? ವಿರೋಧ ಪಕ್ಷದ ನಾಯಕರ ಕರ್ತವ್ಯಗಳೇನು ? ಸಿಎಂ ಜವಾಬ್ದಾರಿಗಳೇನು ? ರಾಜ್ಯದ ಸಮಸ್ಯೆಯನ್ನು ಸದನದಲ್ಲಿ ಹೇಗೆ ಚರ್ಚಿಸಬೇಕು? ಎನ್ನುವ ಕುರಿತು ವಿದ್ಯಾರ್ಥಿಗಳಿಗೆ ಪರಿಕಲ್ಪನೆ ಮೂಡಿಸಲು ಶಿಕ್ಷಣ ಇಲಾಖೆಯಿಂದ ಯುವ ಸಂಸತ್ ಸ್ಪರ್ಧೆ ಆಯೋಜನೆ ಮಾಡಲಾಗಿದೆ.  ಇಂತಹ ಸ್ಪರ್ಧೆಗಳು ಮಕ್ಕಳಲ್ಲಿ ನಾಯಕತ್ವ ಅಥವಾ ಮುಂದಾಳತ್ವ ವಹಿಸಿಕೊಳ್ಳುವ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತವೆ.  ವಿದ್ಯಾರ್ಥಿಗಳು ನಿತ್ಯ ಪತ್ರಿಕೆಗಳನ್ನು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು.  ಇದರಿಂದ ಪ್ರಚಲಿತ ವಿದ್ಯಮಾನಗಳನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಶ್ಯಾಮಸುಂದರ್ ಅವರು ಹೇಳಿದರು.ಉದ್ಘಾಟನಾ ಸಮಾರಂಭದಲ್ಲಿ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶಗೌಡ, ಶಿಕ್ಷಣ ಸಂಯೋಜಕ ಎಸ್.ಬಿ. ಕುರಿ, ವಿಷಯ ಶಿಕ್ಷಕರಾದ ಎಂ.ಎಸ್.ಬಡದಾನಿ, ಗುರು ಬಸವರಾಜ, ಆರ್.ಎಸ್. ಪತ್ತಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.  ಪ್ರೌಢಶಾಲಾ ವಿಭಾಗದಲ್ಲಿ ಒಟ್ಟು ೦೪ ತಂಡಗಳು ಯುವ ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಿದವು.  ರೈತರ ಆತ್ಮಹತ್ಯೆ ಪ್ರಕರಣಗಳು,  ಕಳಸಾ-ಬಂಡೂರಿ ಯೋಜನೆ ಜಾರಿಗಾಗಿ ನಡೆದ ಹೋರಾಟ, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಔಷಧಿಗಳ ಕೊರತೆ ಸರ್ಕಾರಿ ಬಸ್ ದರ ಹೆಚ್ಚಳ, ಅಕ್ರಮ ಮದ್ಯ ಮಾರಾಟ ಹಾಗೂ ಸರಗಳ್ಳತನದ ಹಾವಳಿ ಕುರಿತು ವಿದ್ಯಾರ್ಥಿಗಳು ಯುವ ಸಂಸತ್ ಸ್ಪರ್ಧೆಯಲ್ಲಿ ನಡೆಸಿದ ಕಲಾಪ ವೈಖರಿ ಗಮನಸೆಳೆಯಿತು.

Advertisement

0 comments:

Post a Comment

 
Top