PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಡಿ.೦೩ (ಕ ವಾ) ಗ್ರಾಹಕರಿಗೆ ಪಾಲಿಸಿ ಹಣ ಹಿಂತಿರುಗಿಸುವಲ್ಲಿ ಸೇವಾ ನ್ಯೂನ್ಯತೆ ಎಸಗಿರುವ ಚಿತ್ರದುರ್ಗದ ಹೆಚ್.ಡಿ.ಎಫ್.ಸಿ. ಲೈಫ್ ಇನ್ಸೂರೆನ್ಸ್ ಕಂ.ಲಿಮಿಟೆಡ್ ಇವರು ಪಾಲಿಸಿ ಹಣವನ್ನು, ಬೋನಸ್, ಲಾಭಾಂಶ ಹಾಗೂ ಸೇವಾ ನ್ಯೂನ್ಯತೆ ಪರಿಹಾರದೊಂದಿಗೆ ಹಿಂತಿರುಗಿಸುವಂತೆ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ವೇದಿಕೆಯು ನ.೩೦ ರಂದು ಆದೇಶಿಸಿದೆ.
ಪ್ರಕರಣದ ವಿವರ : ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ಲ ಗ್ರಾಮದ ಚನ್ನಮ್ಮ ರಮೇಶ ಅವರು ಚಿತ್ರದುರ್ಗದ ಹೆಚ್.ಡಿ.ಎಫ್.ಸಿ. ಲೈಫ್ ಇನ್ಸೂರೆನ್ಸ್ ಕಂ.ಲಿ.,  ಶಾಖೆಯಲ್ಲಿ ಎರಡು ಪಾಲಿಸಿಗಳನ್ನು ಮಾಡಿಸಿದ್ದರು. ((೧) ೧೬೩೪೭೬೮೧-ಪಾಲಿಸಿಯ ಮೊತ್ತ ರೂ.೬,೬೯,೩೪೬, ಕಂತು ಪ್ರತಿ ವರ್ಷಕ್ಕೊಮ್ಮೆ ರೂ.೨೪,೩೦೦ ಹಾಗೂ (೨) ೧೬೩೪೮೪೯೮-ಪಾಲಿಸಿಯ ಮೊತ್ತ ರೂ೪,೬೩,೩೪೧, ಕಂತು ಪ್ರತಿ ವರ್ಷಕ್ಕೊಮ್ಮೆ ರೂ.೨೩,೨೮೦) ಈ ಪಾಲಿಸಿಗಳನ್ನು ೨೦೧೩ ರ ಅಕ್ಟೋಬರ್.೦೫ ರಂದು ತೆಗೆದುಕೊಂಡಿದ್ದರು. ಆದರೆ ಅದೇ ತಿಂಗಳ ಅಕ್ಟೋಬರ್.೨೯ ರಂದು ಚನ್ನಮ್ಮ ಅವರು ಆಕಸ್ಮಿಕವಾಗಿ ಮರಣ ಹೊಂದಿದರು. ಈ ಪಾಲಿಸಿಯಡಿ ನಾಮಿನಿಯಾಗಿದ್ದ ಚನ್ನಮ್ಮ ಅವರ ಪತಿ ರಮೇಶ್ ಅವರು ಪಾಲಿಸಿಯ ವಿಷಯವನ್ನು ಇನ್ಸೂರೆನ್ಸ್ ಕಂಪನಿಗೆ ತಿಳಿಸಿ, ಪಾಲಿಸಿಗಳ ಕ್ಲೇಮ್ ಫಾರ್ಮ್‌ಗಳನ್ನು ತುಂಬಿ, ಶಾಖೆಗೆ ಸಲ್ಲಿಸಿದರು.
      ಆದರೆ ಇನ್ಸೂರೆನ್ಸ್ ಕಂಪನಿಯು, ಚನ್ನಮ್ಮ ಅವರು ಪಾಲಿಸಿ ಮಾಡಿಸುವ ಪೂರ್ವದಲ್ಲಿ ಉದ್ಯೋಗ ಮತ್ತು ಆದಾಯದ ನಿಜ ಸ್ವರೂಪವನ್ನು ತಪ್ಪಾಗಿ ತಿಳಿಸಿರುವುದರಿಂದ ಪಾಲಿಸಿಯ ಹಣವನ್ನು ನೀಡಲು ಬರುವುದಿಲ್ಲವೆಂದು ತಿರಸ್ಕರಿಸಿದರು.  ಪಾಲಿಸಿಯ ಪ್ರಪೋಸಲ್ ಫಾರ್ಮ್‌ಗಳು ಇಂಗ್ಲೀಷಿನಲ್ಲಿದ್ದು, ಅವುಗಳನ್ನು ವಿಮಾ ಕಂಪನಿಯ ಪ್ರತಿನಿಧಿ ತುಂಬಿದ್ದು, ಅದರಲ್ಲಿರುವ ವಿಷಯಗಳನ್ನು ಪಾಲಿಸಿದಾರರಿಗೆ ತಿಳಿಸಿಲ್ಲ. ಅಲ್ಲದೇ ಪ್ರಪೋಸಲ್ ಫಾರ್ಮ್ ತುಂಬಿದ ನಂತರ   ಕಂಪನಿಯು ವಿಮಾದಾರರ ಉದ್ಯೋಗ ಮತ್ತು ಆದಾಯ ಪರಿಶೀಲನೆ ಮಾಡಿದ ನಂತರವೇ ಪಾಲಿಸಿಯನ್ನು ನೀಡಬಹುದಿತ್ತು. ಆದರೆ ವಿಮಾ ಕಂಪನಿಯು ವಿನಾಕಾರಣ ಪಾಲಿಸಿಯನ್ನು ತಿರಸ್ಕರಿಸಿರುವುದು ಸಮಂಜಸವಾಗಿಲ್ಲ.  ಇದು ಸೇವಾ ನ್ಯೂನ್ಯತೆಯಾಗಿದ್ದು, ಎರಡೂ ಪಾಲಿಗಳ ಮೊತ್ತ ಹಾಗೂ ಸೇವಾ ನ್ಯೂನತೆಗೆ ಪರಿಹಾರವನ್ನು ವಿಮಾ ಕಂಪನಿಯಿಂದ ದೊರಕಿಸಿಕೊಡುವಂತೆ ರಮೇಶ ಅವರು ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು.  
     ಗ್ರಾಹಕರ ವೇದಿಕೆಯು ಇನ್ಸೂರೆನ್ಸ್ ಕಂಪನಿಗೆ ಸಮನ್ಸ್ ಜಾರಿಗೊಳಿಸಿದರೂ, ವೇದಿಕೆ ಮುಂದೆ ಹಾಜರಾಗದ ಕಾರಣ, ವೇದಿಕೆಯು ಇನ್ಸೂರೆನ್ಸ್ ಕಂಪನಿ ವಿರುದ್ಧ 'ಏಕ-ಪಕ್ಷೀಯ' ಪ್ರಕರಣವೆಂದು ಪರಿಗಣಿಸಿ ತೀರ್ಪು ನೀಡಿದೆ.  ವೇದಿಕೆಯ ಅಧ್ಯಕ್ಷೆ ಏಕತಾ ಹೆಚ್.ಡಿ., ಹಾಗೂ ಮಹಿಳಾ ಸದಸ್ಯೆ ಸುಜಾತ ಅಕ್ಕಸಾಲಿ ಅವರು  ದಾಖಲೆಗಳನ್ನು ಪರಿಶೀಲಿಸಿ,  ಪಾಲಿಸಿಯನ್ನು ವಿತರಿಸುವ ಪೂರ್ವದಲ್ಲಿಯೇ ವಿಮಾ ಕಂಪನಿಯ ಪ್ರತಿನಿಧಿಯು ಆದಾಯ ಮತ್ತು ಉದ್ಯೋಗಕ್ಕೆ ಸಂಬಂಧಿತ ವಿವರಗಳನ್ನು ಪರಿಶೀಲಿಸಿ ಪಾಲಿಸಿ ವಿತರಿಸಬೇಕು. ಕೇವಲ ತಮ್ಮ ಗುರಿಯನ್ನು ತಲುಪುವ ದೃಷ್ಟಿಯಿಂದ ಪಾಲಿಸಿಯನ್ನು ವಿತರಿಸಬಾರದು ಹಾಗೂ ಸದರಿ ಕ್ಲೇಮ್ ನಿರಾಕರಣೆ ಪತ್ರದಲ್ಲಿ ಕೃಷಿಯನ್ನು ಉದ್ಯೋಗವನ್ನಾಗಿಸಿಕೊಂಡವರು ಪಾಲಿಸಿಯನ್ನು ಮಾಡಿಸಬೇಕಾದಲ್ಲಿ ತಮ್ಮ ಹೆಸರಿನಲ್ಲಿ ಭೂಮಿಯನ್ನು ಹೊಂದಿರುಬೇಕು ಎಂಬುವುದರ ಕುರಿತು ಎಲ್ಲಿಯೂ ಯಾವ ಷರತ್ತುಗಳು ಇರುವುದಿಲ್ಲ. ಪಾಲಿಸಿಯನ್ನು ವಿತರಿಸುವ ಪೂರ್ವದಲ್ಲಿಯೇ ಪಾಲಿಸಿದಾರರ ಉದ್ಯೋಗ ಮತ್ತು ವಾರ್ಷಿಕ ಆದಾಯವನ್ನು ಪರಿಶೀಲಿಸಿ ಪಾಲಿಸಿಯನ್ನು ವಿತರಿಸುವುದು ವಿಮಾ ಕಂಪನಿಯವರ ಹಾಗೂ ಪ್ರತಿನಿಧಿಗಳ ಕರ್ತವ್ಯವಾಗಿರುತ್ತದೆಯೇ ಹೊರತು ಪಾಲಿಸಿಯಡಿ ಕ್ಲೇಮ್ ಅರ್ಜಿಯನ್ನು ಸಲ್ಲಿಸಿದಾಗ ಉದ್ಯೋಗ ಮತ್ತು ವಾರ್ಷಿಕ ಆದಾಯದ ವಿವರಗಳಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಯನ್ನು ನೀಡಲಾಗಿದೆ ಎಂಬ ಹಿಂಬರಹದೊಂದಿಗೆ ಫಿರ್ಯಾದುದಾರರ ಕ್ಲೇಮ್ ಅರ್ಜಿಯನ್ನು ತಿರಸ್ಕರಿಸುವುದು ಎದುರುದಾರರ ಸೇವಾ ನ್ಯೂನತೆಯೆಂದು ಪರಿಗಣಿಸಿದೆ. ಕಂಪನಿಯು ಪಾಲಿಸಿದಾರರ ನಾಮಿನಿಯಾಗಿರುವ ರಮೇಶ ಅವರಿಗೆ ಮೊದಲನೇ ಪಾಲಿಸಿಯ ಹಣ ರೂ.೬,೬೯,೩೪೬ ಮತ್ತು ಎರಡನೇ ಪಾಲಿಸಿಯ ಹಣ ರೂ.೪,೬೩,೩೪೧ ಗಳನ್ನು ಪಾಲಿಸಿಯ ಬೋನಸ್ ಮತ್ತು ಲಾಭಾಂಶದೊಂದಿಗೆ ಹಾಗೂ ರೂ.೫,೦೦೦ ಸೇವಾ ನ್ಯೂನತೆಗೆ ಪರಿಹಾರ ಮತ್ತು ರೂ.೧,೫೦೦ ಗಳನ್ನು ಆದೇಶವಾದ ಒಂದು ತಿಂಗಳೊಳಗಾಗಿ ಪಾವತಿಸುವಂತೆ ಆದೇಶ ನೀಡಿದ್ದಾರೆ. ಇದಕ್ಕೆ ತಪ್ಪಿದಲ್ಲಿ ಮೊತ್ತದ ಮೇಲೆ ವಾರ್ಷಿಕ ಶೇಕಡಾ ೧೨ ರಷ್ಟು ಬಡ್ಡಿಯನ್ನು ಪ್ರಕರಣ ದಾಖಲಾದ ದಿನಾಂಕದಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಪಾವತಿಸುವಂತೆಯೂ ಸಹ ಆದೇಶದಲ್ಲಿ ತಿಳಿಸಲಾಗಿದೆ.

Advertisement

0 comments:

Post a Comment

 
Top