PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಸೆ.೩೦ (ಕ ವಾ) ಕೊಪ್ಪಳ ತಾಲೂಕು ಬಂಡಿಹರ್ಲಾಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ೬ ಗ್ರಾಮ ಪಂಚಾಯಿತಿಗಳಲ್ಲಿ ಅ. ೦೨ ರಿಂದ ವಿಶೇಷ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಜನಾರ್ಧನ ಹುಲಿಗಿ ಅವರು ತಿಳಿಸಿದ್ದಾರೆ.
     ಕೊಪ್ಪಳ ತಾಲೂಕಿನ ಹುಲಿಗಿ, ಅಗಳಕೇರಾ, ಬಂಡಿಹರ್ಲಾಪುರ, ಗುಳದಳ್ಳಿ ಹಾಗೂ ಬೂದಗುಂಪಾ ಗ್ರಾಮಗಳಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ ಆಯೋಜಿಸಿದ್ದು, ಇದರ ಉದ್ಘಾಟನಾ ಸಮಾರಂಭ ಅಕ್ಟೋಬರ್ ೦೨ ಗಾಂಧಿ ಜಯಂತಿಯಂದು ಬೆಳಿಗ್ಗೆ ೮ ಗಂಟೆಗೆ ಬಂಡಿಹರ್ಲಾಪುರ ಗ್ರಾಮ ಪಂಚಾಯತ್ ಆವರಣದಲ್ಲಿ ಏರ್ಪಡಿಸಲಾಗಿದೆ.
     ನಿರ್ಮಲ ಭಾರತ ಯೋಜನೆ ಅಡಿಯಲ್ಲಿ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮದಡಿಯಲ್ಲಿ ಬಂಡಿಹರ್ಲಾಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ೬ ಗ್ರಾಮ ಪಂಚಾಯತ್‌ಗಳಿಗೆ ತ್ಯಾಜ್ಯ ವಿಲೇವಾರಿಗಾಗಿ ಟ್ರ್ಯಾಕ್ಟರ್ ಹಾಗೂ ಪುಟ್ಟಿಗಳನ್ನು ಈಗಾಗಲೇ ಪೂರೈಸಲಾಗಿದ್ದು, ಹುಲಿಗಿ ಹೊರತುಪಡಿಸಿ ಉಳಿದ ೫ ಗ್ರಾಮ ಪಂಚಾಯತ್‌ಗಳಲ್ಲಿ ತ್ಯಾಜ್ಯ ಸಂಗ್ರಹಣೆಗಾಗಿ ಎಲ್ಲ ಮನೆಗಳಿಗೂ ಪುಟ್ಟಿಗಳನ್ನು ಹಾಗೂ ಸೂಚನಾ ಫಲಕಗಳನ್ನು ಗಾಂಧಿ ಜಯಂತಿಯಂದು ವಿತರಿಸಲಾಗುವುದು. ಅಭಿಯಾನದಡಿ ಆರೂ ಗ್ರಾಮ ಪಂಚಾಯತ್‌ಗಳಲ್ಲಿ ಸ್ವಚ್ಛತಾ ಅಭಿಯಾನ ಸಮಿತಿಗಳನ್ನು ರಚಿಸಲಾಗುತ್ತಿದ್ದು, ಪ್ರತಿ ಗ್ರಾಮ ಪಂಚಾಯಿತಿಯ ಒಂದು ವಾರ್ಡಿನ ಸ್ವಚ್ಛತಾ ಸಮಿತಿಗೆ ಕನಿಷ್ಠ ೨೫ ರಿಂದ ೩೦ ಸ್ವಚ್ಛತಾ ಸದಸ್ಯರನ್ನು ನೇಮಿಸಲಾಗುವುದು. ಈ ಸದಸ್ಯರೆಲ್ಲರೂ ಆ ವಾರ್ಡಿನ, ಗ್ರಾಮ ಪಂಚಾಯಿತಿ ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಯುವಕ ಯುವತಿ ಸಂಘದ ಸದಸ್ಯರು ಹಾಗೂ ಸ್ವಚ್ಛತೆ ಬಗ್ಗೆ ಆಸಕ್ತಿ ಉಳ್ಳವರೆ ಆಗಿರುತ್ತಾರೆ. ಈ ಸಮಿತಿಗಳಲ್ಲಿ ಒಬ್ಬರನ್ನು ಸಂಚಾಲಕರನ್ನಾಗಿ, ಮತ್ತೊಬ್ಬರನ್ನು ಕಾರ್ಯದರ್ಶಿಯನ್ನಾಗಿ ಹಾಗೂ ಇನ್ನೋರ್ವರನ್ನು ಕೋಶಾಧಿಕಾರಿಯನ್ನಾಗಿ ನೇಮಕ ಮಾಡಲಾಗುವುದು.
     ವಾರ್ಡ್‌ಮಟ್ಟದ ಹಾಗೂ ಗ್ರಾಮ ಪಂಚಾಯತ್ ಮಟ್ಟದ ಸ್ವಚ್ಛತಾ ಅಭಿಯಾನ ಸಮಿತಿಗಳು ಗ್ರಾಮದ ಸ್ವಚ್ಛತೆಯನ್ನು ಕಾಪಾಡಲು ತ್ಯಾಜ್ಯವನ್ನು ವಿಂಗಡಿಸಿಕೊಡಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಹಾಗೂ ಅದನ್ನು ಉಪಯೋಗಿಸುವ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಲಿದ್ದು, ತ್ಯಾಜ್ಯವನ್ನು ರಸ್ತೆ ಮೇಲಾಗಲಿ, ಚರಂಡಿಯಲ್ಲಾಗಲಿ ಹಾಕದಂತೆ ನಿರ್ದಿಷ್ಟಪಡಿಸಿದ ಕಸದ ತೊಟ್ಟಿಗಳಲ್ಲಿ ವಿಂಗಡಿಸಿ ಹಾಕುವುದನ್ನು ಪ್ರೇರೇಪಿಸಲಿವೆ. ಅಲ್ಲದೆ, ವಾರ್ಡುಗಳಲ್ಲಿ ನಡೆಯುವ ಯಾವುದೇ ವೈಯಕ್ತಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಸಮಾರಂಭಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಗ್ರಾಮ ಪಂಚಾಯತ್ ಒದಗಿಸುವ ತಳ್ಳು ಬಂಡಿಯಲ್ಲಿ ಕಸ ಸಂಗ್ರಹಿಸಿ ಕ್ರಮ ಬದ್ಧವಾಗಿ ಸಂಸ್ಕರಣಾ ಘಟಕಕ್ಕೆ ಕಳುಹಿಸುವ ಜವಾಬ್ದಾರಿಯನ್ನು ಈ ಸಮಿತಿಗಳು ನಿರ್ವಹಿಸಲಿವೆ. ಮುಖ್ಯವಾಗಿ ಅಕ್ಟೋಬರ್ ೦೨ ಗಾಂಧೀ ಜಯಂತಿಯಂದು ಎಲ್ಲಾ ಸಮಿತಿಗಳ ಸದಸ್ಯರು ಹಾಗೂ ಶಾಲಾ ವಿದ್ಯಾರ್ಥಿಗಳು ಬಂಡಿಹರ್ಲಾಪುರ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆಯಲಿರುವ ಈ ಸ್ವಚ್ಛತಾ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಸ್ವಚ್ಛ ಭಾರತದ ಕನಸನ್ನು ನನಸು ಮಾಡಲು ಗಾಂಧೀಜಿಯವರ ಹೆಸರಿನಲ್ಲಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಿದ್ದಾರೆ ಮತ್ತು ನಂತರ ತ್ಯಾಜ್ಯ ಸಂಗ್ರಹಣಾ ವಾಹನದೊಂದಿಗೆ ಗ್ರಾಮ ಪಂಚಾಯಿತಿಯ ಪ್ರತಿ ಮನೆಗೂ ತೆರಳಿ ಕುಟುಂಬದ ಎಲ್ಲಾ ಸದಸ್ಯರಿಗೆ ಪ್ರತಿಜ್ಞಾ ವಿಧೀಯನ್ನು ಭೋಧಿಸಲಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಟಿ.ಜನಾರ್ಧನ ಹುಲಿಗಿ ತಿಳಿಸಿದ್ದಾರೆ.
ಅ.೦೨ ರಂದು ಕಿನ್ನಾಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
ಕೊಪ್ಪಳ, ಸೆ.೩೦ (ಕ ವಾ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಪಳ ಹಾಗೂ   ಕಾಶಿವಿಶ್ವನಾಥ ಕರಡಿ ಮಜಲು ಹಾಗೂ ಸಾಂಸ್ಕೃತಿಕ ಕಲಾ ಸಂಘ, ಕಿನ್ನಾಳ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ವಳೀಯ ಪ್ರಾಯೋಜಿತ ಕಾರ್ಯಕ್ರಮದಡಿ ಮಹಾತ್ಮಾ ಗಾಂಧೀಜಿ ಜಯಂತಿ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅ.೦೨ ರಂದು ಸಂಜೆ ೪.೩೦ ಗಂಟೆಗೆ ಕಿನ್ನಾಳದ ಕಾಶಿವಿಶ್ವನಾಥ ದೇವಸ್ಥಾನದ(ಚೌಕಿ ಗುಡಿ) ಆವರಣದಲ್ಲಿ ಆಯೋಜಿಸಲಾಗಿದೆ.
     ಕಿನ್ನಾಳದ ಷಡಕ್ಷರಯ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು. ಹಿರಿಯ ಶಾಸ್ತ್ರೀಯ ಸಂಗೀತ ಕಲಾವಿದ ಹುಚ್ಚೇಸಾಬ್ ಬಲ್ಲಾಹುಂಚಿ ಕಾರ್ಯಕ್ರಮ ಉದ್ಘಾಟಿಸುವರು. ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಅಧ್ಯಕ್ಷತೆ ವಹಿಸುವರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ಬನ್ನಿಕೊಪ್ಪ, ಸದಸ್ಯ ಸುಭಾನ್‌ಸಾಬ ಹೀರ್‍ಯಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರು, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪಾಲಿಸಿ ಹಣ ನೀಡಲು ತಿರಸ್ಕಾರ ಪರಿಹಾರ ನೀಡಲು ಆದೇಶ
ಕೊಪ್ಪಳ, ಸೆ.೩೦ (ಕ ವಾ) ಪಾಲಿಸಿದಾರನ ಉದ್ಯೋಗ ಮತ್ತು ಆದಾಯ ವಿವರವನ್ನು ಸಮರ್ಪಕವಾಗಿ ನೀಡಿರುವುದಿಲ್ಲ ಎಂಬ ಒಂದೇ ಕಾರಣದಿಂದ ಪಾಲಿಸಿ ಹಣವನ್ನು ನೀಡಲು ತಿರಸ್ಕರಿಸಿದ ಕೋಟಕ್ ಮಹಿಂದ್ರಾ ಓಲ್ಡ್ ಮ್ಯೂಚಲ್ಸ್ ಇನ್ಶೂರೆನ್ಸ್ ಲಿಮಿಟೆಡ್, ಮುಂಬೈ ಎಂಬ ವಿಮಾ ಕಂಪನಿಯ ಸೇವಾ ನ್ಯೂನ್ಯತೆಯನ್ನು ಪರಿಗಣಿಸಿರುವ ಕೊಪ್ಪಳದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ವೇದಿಕೆಯು ಪರಿಹಾರ ಒದಗಿಸಲು ಆದೇಶಿಸಿದೆ.
     ಪ್ರಕರಣದ ವಿವರ ಇಂತಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಶ್ರೀರಾಮನಗರದ ಭೀಮಪ್ಪ ಭೀಮಯ್ಯ ಗುಂಜಳ್ಳಿ ಎಂಬುವವರ ಮಗನು, ಕೋಟಕ್ ಮಹೀಂದ್ರಾ ಓಲ್ಡ್ ಮ್ಯೂಚಲ್ ಇನ್ಶೂರೆನ್ಸ್ ಲಿಮಿಟೆಡ್. ಮುಂಬೈ ಎಂಬ ವಿಮಾ ಕಂಪನಿಯಲ್ಲಿ ೨೦೧೩ ರ ಮೇ.೩೦ ರಂದು ರೂ.೧೪. ೮೦ ಲಕ್ಷ ರೂ. ಮೊತ್ತದ ಪಾಲಿಸಿ ಮಾಡಿಸಿ, ರೂ.೧೯,೧೩೨ ಗಳ ವಿಮಾ ಕಂತು ಪಾವತಿಸಿದ್ದರು.  ಪಾಲಿಸಿದಾರರ ತಂದೆ ಭೀಮಪ್ಪ ಗುಂಜಳ್ಳಿ ನಾಮಿನಿ ಆಗಿದ್ದರು.   ಭೀಮಪ್ಪ ಅವರ ಮಗ ಅದೇ ೨೦೧೩ರ ಜುಲೈ.೧೦ ರಂದು ಹೃದಯಾಘಾತದಿಂದ ಗಂಗಾವತಿಯಲ್ಲಿ ಮರಣ ಹೊಂದಿದರು. ಇದಾದ ಬಳಿಕ ಭೀಮಪ್ಪ, ತನ್ನ ಮಗನ ಪಾಲಿಸಿಯ ವಿಷಯ ತಿಳಿದು,  ವಿಮಾ ಕಂಪನಿಗೆ ವಿಷಯ ತಿಳಿಸಿ, ಅವರು ಕಳುಹಿಸಿದ ಕ್ಲೇಂ ಫಾರ್ಮನ್ನು ತುಂಬಿ ಸಲ್ಲಿಸಿದರು. ವಿಮಾ ಕಂಪನಿಯು ೨೦೧೪ ರ ಮಾರ್ಚ್ ೧೩ ರಂದು ಭೀಮಪ್ಪ ಅವರಿಗೆ ಪತ್ರ ಬರೆದು ತಮ್ಮ ಮಗನು ಪಾಲಿಸಿ ಮಾಡಿಸುವ ಸಮಯದಲ್ಲಿ ಉದ್ಯೋಗ ಮತ್ತು ಆದಾಯದ ನಿಜ ಸ್ವರೂಪವನ್ನು ತಿಳಿಸದೇ ಇರುವುದರಿಂದ ಪಾಲಿಸಿಯ ಹಣವನ್ನು ನೀಡಲಾಗುವುದಿಲ್ಲ ಎಂದು ತಿಳಿಸಿ, ಕ್ಲೇಂ ಅರ್ಜಿಯನ್ನು ತಿರಸ್ಕರಿಸಿದರು.  ವಿಮಾ ಪಾಲಿಸಿಯ ಮೊತ್ತ ದೊರಕಿಸಿಕೊಡುವಂತೆ ಭೀಮಪ್ಪ ಅವರು ಕೊಪ್ಪಳದ ಗ್ರಾಹಕರ ವೇದಿಕೆ ಮೊರೆ ಹೋಗಿದ್ದರು.
      ಗ್ರಾಹಕರ ವೇದಿಕೆ ನೀಡಿದ ಸಮನ್ಸ್‌ಗೆ ಕಂಪನಿಯು ತಮ್ಮ ವಕೀಲರ ಮೂಲಕ ಹಾಜರಾಗಿ, ಭೀಮಪ್ಪ ಅವರ ಮಗನು ಪಾಲಿಸಿ ಪಡೆಯುವ ಸಮಯದಲ್ಲಿ ನೀಡಿದ ಮಾಹಿತಿಯು ಸರಿಯಾಗಿದೆಯೆಂದು ನಂಬಿ ಪಾಲಿಸಿ ವಿತರಿಸಲಾಗಿತ್ತು. ಆದರೆ ಡೆತ್ ಕ್ಲೇಮ್ ಅರ್ಜಿಯನ್ನು ಪರಿಶೀಲಿಸುವ ಸಮಯದಲ್ಲಿ ಮಾತ್ರವೇ ಅವರು, ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರೂ ಸಹ ಪ್ರಪೋಸಲ್ ಫಾರ್ಮ್‌ನಲ್ಲಿ ವಾರ್ಷಿಕ ಆದಾಯ ರೂ.೩.೦೦ ಲಕ್ಷ ಎಂದು ನಮೂದಿಸಿ ಪಾಲಿಸಿ ಪಡೆದಿರುತ್ತಾರೆ. ಅಲ್ಲದೇ ಮಗನು ವಿದ್ಯಾರ್ಥಿಯಾಗಿದ್ದು, ಸುಳ್ಳು ಮಾಹಿತಿಯನ್ನು ನೀಡಿ ಫ್ರಪೋಸಲ್‌ನಲ್ಲಿ ನಮೂದಿಸಿದ್ದಾರೆ. ಈ ಕಾರಣದಿಂದಾಗಿಯೇ ಕ್ಲೇಮ್ ಅರ್ಜಿಯನ್ನು ತಿರಸ್ಕರಿಸಲಾಗಿದ್ದು, ತಮ್ಮಿಂದ ಯಾವುದೇ ಸೇವಾ ನ್ಯೂನ್ಯತೆಯಾಗಿಲ್ಲ ಎಂದು ಕಂಪನಿಯು ವಾದ ಸಲ್ಲಿಸಿತು.
     ಪ್ರಕರಣದ ವಿಚಾರಣೆ ನಡೆಸಿದ ವೇದಿಕೆಯ ಅಧ್ಯಕ್ಷೆ ಏಕತಾ ಹೆಚ್.ಡಿ ಹಾಗೂ ಸದಸ್ಯರಾದ ಸುಜಾತಾ ಅಕ್ಕಸಾಲಿ ಅವರು, ಕಂಪನಿಯ ಏಜೆಂಟರು ಪಾಲಿಸಿಯನ್ನು ಮಾಡಿಸುವ ಸಂದರ್ಭದಲ್ಲಿ ಉದ್ಯೋಗ ಮತ್ತು ಆದಾಯದ ಮೂಲವನ್ನು ಪರಿಶೀಲಿಸದೇ ಪಾಲಿಸಿಯನ್ನು ವಿತರಿಸಿರುವುದು ಕಂಪನಿಯ ತಪ್ಪಾಗಿದೆ. ಹಾಗೂ ಕೇವಲ ಬಿ.ಪಿ.ಎಲ್ ಕಾರ್ಡ್ ಹೊಂದಿದ್ದರು ಎಂಬುವುದರ ಆಧಾರದ ಮೇಲೆ ಪಾಲಿಸಿಯ ಹಣವನ್ನು ನೀಡಲು ನಿರಾಕರಿಸಿರುವುದು ಕೂಡಾ ಕಂಪನಿಯ ಸೇವಾ ನ್ಯೂನ್ಯತೆಯಾಗಿದೆ ಎಂದು ಪರಿಗಣಿಸಿ, ಕಂಪನಿಯು ಭೀಮಪ್ಪ ಅವರಿಗೆ ಪಾಲಿಸಿಯ ಹಣ ರೂ.೧೪,೮೦,೦೦೦ ಗಳನ್ನು ಬೋನಸ್ ಮತ್ತು ಲಾಭಾಂಶದೊಂದಿಗೆ ಹಾಗೂ ಸೇವಾ ನ್ಯೂನ್ಯತೆಗೆ ಪರಿಹಾರವಾಗಿ ರೂ.೫,೦೦೦ ಗಳನ್ನು, ಪ್ರಕರಣ ಖರ್ಚು ರೂ.೧,೫೦೦ ಗಳನ್ನು ಆದೇಶವಾದ ಒಂದು ತಿಂಗಳೊಳಗಾಗಿ ಪಾವತಿಸುವಂತೆ ಆದೇಶಿಸಿದೆ. ಅಲ್ಲದೆ, ಇದಕ್ಕೆ ತಪ್ಪಿದಲ್ಲಿ ಈ ಮೊತ್ತದ ಮೇಲೆ ವಾರ್ಷಿಕ ಶೇಕಡಾ ೧೨ ರಷ್ಟು ಬಡ್ಡಿಯನ್ನು ಪ್ರಕರಣ ದಾಖಲಾದ ದಿನಾಂಕದಿಂದ ಪೂರ್ತಿ ಹಣ ಸಂದಾಯವಾಗುವವರೆಗೂ ಪಾವತಿಸುವಂತೆ ಆದೇಶಿಸಿದೆ.

Advertisement

0 comments:

Post a Comment

 
Top