ಹೊಸಪೇಟೆ: -ವೀರಶೈವ ಧರ್ಮವನ್ನು ಒಡೆಯುವ ಹುನ್ನಾರವು ನಡೆಯುತ್ತಿದ್ದು ಇದು ಖಂಡನೀಯವೆಂದು ಮರಿಯಮ್ಮನಹಳ್ಳಿಯ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ನಗರದ ತಾಲೂಕು ಬೇಡ ಜಂಗಮ ಸಮಾಜದ ವತಿಯಿಂದ ರಾಣಿ ಪೇಟೆಯ ಬಯಲು ಆಂಜನೇಯ ದೇವಸ್ಥಾನದಲ್ಲಿ ಆಯೋಜಿಸಿದ್ದ ತತ್ವನಿಧಿ ಶ್ರೀರೇಣುಕಾಚಾರ್ಯರ ಜಯಂತಿಯಲ್ಲಿ ಆಶೀರ್ವಚನ ನೀಡುತ್ತಾ ಪ್ರತಿಯೊಬ್ಬ ಮಾತೆಯರು ಮಕ್ಕಳಿಗೆ ಉನ್ನತವಾದ ಸಂಸ್ಕಾರ ನೀಡಿದಲ್ಲಿ ಮಾತ್ರ ಧರ್ಮವು ಉಳಿದು ಬೆಳೆಯಲು ಸಾಧ್ಯ, ಲಿಂಗಾಯಿತರು ವೀರಶೈವರಲ್ಲ ಎನ್ನುವ ತಪ್ಪು ಸಂದೇಶವನ್ನು ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ಮಾಡುತ್ತಿದ್ದು ಇದು ಅಕ್ಷಮ್ಯ ಅಪರಾಧ, ಪ್ರತಿಯೊಂದು ಧರ್ಮ ದಲ್ಲಿಯೇ ಅವರವರ ಗುರು ಗಳನ್ನು ನೇಮಿಸಿಕೊಂಡಿರು ವುದು ಸಂತಸದ ಸಂಗತಿ ಯಾಗಿದ್ದು ಗುರುಮಾರ್ಗದಂತೆ ನಡೆಯಲು ಸೂಚಿಸಿದರು.
ಶ್ರೀರೇಣುಕಾಚಾರ್ಯರು ಲಿಂಗದಿಂದ ಉದ್ಭವಿಸಿ ದವರು, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ, ಸರ್ವ ಧರ್ಮವನ್ನು ಸಮಾನ ದೃಷ್ಟಿಯಲ್ಲಿ ಕಂಡವರು, ಉನ್ನತವಾದ ತತ್ವಾದರ್ಶಗಳು ಜೀವನದಲ್ಲಿ ಅಳವಡಿಸಿ ಕೊಂಡು ಲಿಂಗಬೇಧವನ್ನು ತೊಡೆದು ಸರ್ವರಿಗೂ ಸಮ ಬಾಳು ಎನ್ನುವ ಸಿದ್ದಾಂತದ ಆಧಾರದ ಮೇಲೆ ಪಂಚ ಪೀಠಗಳ ಧರ್ಮವು ನಿಂತಿದೆ ಎಂದು ವಿಶೇಷ ಉಪನ್ಯಾಸ ನೀಡಿದ ಡಾ|| ಅಕ್ಕಮಾಹದೇವಿ ತಿಳಿಸಿದರು.
ತೀವ್ರತರವಾದ ರೋಗಗಳು ಬಂದರೆ ಬಳ್ಳಾರಿ ಅಥವಾ ಹುಬ್ಬಳ್ಳಿಗೆ ಹೋಗ ಬೇಕಾದಂತಹ ಅನಿವಾರ್ಯತೆ ಇದ್ದು ನಗರದಲ್ಲೊಂದು ಸುಸಜ್ಜಿತವಾದ ಆಸ್ಪತ್ರೆ ಹಾಗೂ ವೀರಶೈವ ಭವನದ ನಿರ್ಮಾಣವಾಗಬೇಕು ಎನ್ನುವ ಆಭಿಲಾಷೆಯನ್ನು ಉದ್ಯಮಿ ಹಾಗೂ ಹಂಪಿ ಕನ್ನಡ ವಿವಿಯ ಸಿಂಡಿಕೇಟ್ ಸದಸ್ಯ ಶ್ರೀನಿವಾಸ ರೆಡ್ಡಿ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನ ತಾಲೂಕು ಬೇಡಜಂಗಮ ಘಟಕದ ಅಧ್ಯಕ್ಷ ಎಸ್.ಎಂ. ಕಾಶಿನಾಥಯ್ಯ ವಹಿಸಿದ್ದರು, ರಾಜ್ಯ ಘಟಕದ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ರಾಣಿ ಸಂಯುಕ್ತ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಮಹಿಳಾ ಘಟಕದ ಅಧ್ಯಕ್ಷೆ ಟಿ.ಹೆಚ್.ಎಂ. ಶೀಲಾ ಕುಮಾರಸ್ವಾಮಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಬೇಡ ಜಂಗಮ ಮಹಿಳಾ ಘಟಕದಿಂದ ಶ್ರೀರೇಣುಕಾಚಾರ್ಯರ ಜಯಂತಿ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂಗವಾಗಿ ಸುಮಾರು ೧೫೦ ಮುತೈದೆಯರಿಗೆ ಉಡಿ ತುಂಬಿದರು. ಸಂಗೀತಾ ಹಿರೇಮಠ ಸ್ವಾಗತಿಸಿದರು, ರೇಣುಕಾ ಪ್ರಾರ್ಥಿಸಿದರು, ನಿವೇದಿತಾ ನಿರೂಪಿಸಿದರು, ಶಾರದಾ ನಿಂಬಗಲ್ ವಂದಿಸಿದರು.
0 comments:
Post a Comment