ಕತ್ತೆಗೇನು ಗೊತ್ತು ಕಸ್ತೂರಿಯ ವಾಸನೆ, ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬ ಗಾದೆ ಮಾತು ಇಂದಿನ ಆಧುನಿಕ ದಿನಗಳಲ್ಲಿ ಮಾರ್ಪಾಡು ಆದಂತೆ ಕಾಣುತ್ತಿದೆ. ತಾಯಿ ಹಾಲು, ಗೋವಿನ ಅಮೃತಕ್ಕೆ ಸಮಾನ ಎನ್ನಲಾಗುತ್ತಿದೆ ಆದರೆ ಈ ಪಂಕ್ತಿಗೆ ಇದೀಗ ಕತ್ತೆ ಹಾಲೂ ಅಮೃತಕ್ಕೆ ಸಮ ಎಂಬ ಮಾತುಗಳು ಈಗ ಗದಗ ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ.
ಗದಗ ಜಿಲ್ಲೆಯಲ್ಲಿ ಇದೀಗ ಕತ್ತೆ ಹಾಲಿಗೆ ಭಾರೀ ಬೇಡಿಕೆ ಕೇಳಿ ಬರುತ್ತಿದೆ. ಕತ್ತೆ ಹಾಲು ಕುಡಿದರೆ ಸೌಂದರ್ಯ ಹೆಚ್ಚುವದು, ಕತ್ತೆ ಮುಖದಂತಿರುವವರು ಕತ್ತೆ ಹಾಲು ಕುಡಿದರೆ ಅವರ ಸೌಂದರ್ಯ ಹೆಚ್ಚುವದು ಹಾಗೂ ರಾಜ್ಯದಲ್ಲಿ ಕೇಳಿ ಬರುತ್ತಿರುವ ಎಚ್೧ ಎನ್೧, ಡೆಂಘಿ, ಚಿಕೂನ್ ಗುನ್ಯಾದಂತಹ ರೋಗಗಳು ತಗಲದಂತೆ ರೋಗ ಪ್ರತಿನಿರೋಧಕವಾಗಿ ಈ ಹಾಲನ್ನು ಕುಡಿದರೆ ರೋಗ ಬರದು ಎಂಬ ಮಾತು ಪ್ರಬಲಗೊಂಡಿದ್ದೇ ಕತ್ತೆ ಹಾಲಿಗೆ ಬಂದಿದೆ ಭಾರೀ ಬೇಡಿಕೆ.
ಹೊತ್ತು ಬಂದಾಗ ಕತ್ತೆ ಕಾಲು ಹಿಡಿಯಬೇಕೆನ್ನುವಂತೆ ಹೊಸ ಹೊಸ ರೋಗಗಳು ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ಈಗ ಕತ್ತೆ ಕಾಲು ಹಿಡಿದು ನಮಸ್ಕರಿಸಿ, ಕತ್ತೆ ಹಣೆಗೆ ಕುಂಕುಮ ಅರಿಷಿಣ ತಿಲಕವಿಟ್ಟು ಹಾಲು ಕರೆಯಲು ಕ್ಷೀರಪಾನರು ಸಜ್ಜಾಗಿದ್ದಾರೆ.
ತಮಿಳುನಾಡಿನೊಂದಿಗೆ ಕತ್ತೆಯೊಂದಿಗೆ ಬಂದು ಗದಗ ನಗರದ ಹೊರವಲಯದಲ್ಲಿ ಟೆಂಟು ಹಾಕಿಕೊಂಡು ನೆಲೆಸಿರುವ ಈ ತಮಿಳರ ಕತ್ತೆಗಳ ಹಾಲಿಗೆ ಜನತೆ ಸರದಿಯಲ್ಲಿ ನಿಂತಿದ್ದಾರೆ.
ಮಗುವಿಗೆ ಎದೆ ಹಾಲು ಕೊಟ್ಟರೆ ಸೌಂದರ್ಯ ಕಡಿಮೆ ಆಗುವದು ಎನ್ನುವ ಮಹಿಳಾ ಮಣಿಗಳು, ಮಕ್ಕಳಿಗೆ ಅಮೃತಕ್ಕೆ ಸಮಾನವಾದ ಗೋವಿನ ಹಾಲು ಕುಡಿಸಲಾರದವರು ಈಗ ಕತ್ತೆ ಹಾಲಿಗಾಗಿ ಕಪ್, ಗ್ಲಾಸ್ ಹಿಡಿದು ನಿಂತಿದ್ದಾರೆ.
ಒಂದು ಕಪ್ ಕತ್ತೆ ಹಾಲಿಗೆ ಸುಮಾರು ೫೦ ರಿಂದ ೭೫ ರೂ.ಗಳವರೆಗೆ ಮಾರಾಟ ಮಾಡಲಾಗುತ್ತಿದೆ. ಕಳೆದ ಒಂದು ವಾರದಿಂದ ಗದುಗಿನ ಹೊರವಲಯದಲ್ಲಿ ಕತ್ತೆಗಳೊಂದಿಗೆ ನೆಲೆಸಿರುವ ಈ ತಮಿಳುನಾಡಿನ ಮೂಲದ ಕುಟುಂಬ ಅಲೆಮಾರಿ ಜನಾಂಗವಾಗಿದ್ದು ಊರಿಂದ ಊರಿಗೆ ಕತ್ತೆಗಳೊಂದಿಗೆ ಹಾಲು ಮಾರುತ್ತ ಸಾಗುತ್ತಿದ್ದಾರೆ. ಗದಗದಿಂದ ಕೊಪ್ಪಳ ಮಾರ್ಗವಾಗಿ ಈ ಜನಾಂಗ ಹೊರಟಿದೆ.
ನಾವು ಎಲ್ಲೆಲ್ಲಿ ಹೋಗಿದ್ದೇವೆಯೋ ಅಲ್ಲೆಲ್ಲ ಜನರು ಹಣ ಕೊಟ್ಟು ಹಾಲು ಪಡೆಯುತ್ತಾರೆ. ಬೆಳಗಿನ ಹಾಲಿಗಾಗಿ ಹಿಂದಿನ ದಿನ ರಾತ್ರಿಯೇ ಹಣ ಕೊಟ್ಟು ಹಾಲನ್ನು ಮುಂಗಡವಾಗಿ ಬುಕ್ಕಿಂಗ್ ಮಾಡಲಾಗುತ್ತಿದೆ ಎಂದೆನ್ನುತ್ತಾರೆ ಕತ್ತೆ ಮಾಲೀಕರು.
ಕತ್ತೆ ಹಾಲು ಕುಡಿಯುವದರಿಂದ ಆರೋಗ್ಯ ಸುಧಾರಣೆ, ಸೌಂದರ್ಯ ವರ್ಧಕ, ರೋಗ ನಿರೋಧಕ ಎಂದು ಜನತೆ ಮೋಸ ಹೋಗುತ್ತಿದ್ದಾರೆ. ಆದರೆ ಇದಕ್ಕೆ ವೈದ್ಯಕೀಯವಾಗಿ ಸಾಬೀತುಪಡಿಸಲಾಗಿಲ್ಲ ವೈಜ್ಞಾನಿಕ ಇಂದಿನ ದಿನಗಳಲ್ಲಿ ಜನತೆ ಮೂಢರಾಗಬಾರದು ಎಂದೆನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.
ಕತ್ತೆ ಹಾಲು ಗದುಗಿನ ಪರಿಸರದಲ್ಲಿ ಗಡಗಡಿಸಿ ಇದೀಗ ಕೊಪ್ಪಳದಲ್ಲಿ ಸಪ್ಪಳ ಮಾಡಲು ಹೋರಟಿದೆ ಅಲ್ಲೇನಾಗುತ್ತೋ ಕಾದು ನೋಡಬೇಕಿದೆ.
* ಬಸವರಾಜ ದಂಡಿನ
0 comments:
Post a Comment