ಪೊಲೀಸ್ ಹುತಾತ್ಮರ ದಿನದ ಅಂಗವಾಗಿ, ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸರಿಗೆ ಗುಲಬರ್ಗಾ ವಲಯ ಐಜಿಪಿ ಸುರೇಶ್ ಮಹಮ್ಮದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್, ಜಿಲ್ಲಾಧಿಕಾರಿ ಆರ್.ಆರ್. ಜನ್ನು ಸೇರಿದಂತೆ ಅಧಿಕಾರಿ, ಗಣ್ಯರು, ಮಾಧ್ಯಮದವರು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಮಾತನಾಡಿ, ಪೊಲೀಸರು ನಿತ್ಯ ಕಾನೂನು ಸುವ್ಯವಸ್ಥೆ ಪಾಲನೆ, ನ್ಯಾಯಾಲಯ, ಆಸ್ಪತ್ರೆ ಪ್ರಕರಣಗಳು, ಸಾರ್ವಜನಿಕರ ಹಿತಾಸಕ್ತಿ ಸೇರಿದಂತೆ ಒತ್ತಡದಲ್ಲೇ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಇದೆ. ಅಲ್ಲದೆ ಕುಟುಂಬದ ಹಿತಾಸಕ್ತಿಯನ್ನೂ ಬದಿಗೊತ್ತಿ ಕರ್ತವ್ಯ ನಿರ್ವಹಿಸುವ ಸ್ಥಿತಿ ಇರುತ್ತದೆ. ಆದರೂ ಪೊಲೀಸರು ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವುದು ಅಭಿನಂದನೆಗೆ ಅರ್ಹವಾಗಿದೆ. ಪೊಲೀಸರು ದಕ್ಷತೆ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದೇ, ಹುತಾತ್ಮ ಪೊಲೀಸರಿಗೆ ನಮನ ಸಲ್ಲಿಸಿದಂತೆ ಎಂದರು.
ಈ ವರ್ಷ ಹುತಾತ್ಮರಾದ ದೇಶದ ೬೫೯ ಪೊಲೀಸರ ಹೆಸರುಗಳನ್ನು ಹೇಳುವ ಮೂಲಕ ಸ್ಮರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್ ಅವರು, ಭಾರತ-ಚೀನಾ ಗಡಿಭಾಗದಲ್ಲಿ ೧೯೫೯ ರ ಅಕ್ಟೋಬರ್ ೨೧ ರಂದು ಚೀನಿ ಸೈನಿಕರಿಂದ ಗಡಿಭಾಗದ ಲೆಹ್ ಪ್ರದೇಶದಲ್ಲಿ ಅತಿಕ್ರಮಣ ನಡೆದಿತ್ತು. ಆಗ ದೇಶದ ಹಾರ್ಟ್ಸ್ವಿಂಗ್ನ ಸಿಆರ್ಪಿಎಫ್ ತುಕಡಿಯ ಸೈನಿಕರು ಕೆಚ್ಚೆದೆಯಿಂದ ಹೋರಾಟ ನಡೆಸಿದ ಘಟನೆಯಲ್ಲಿ ೧೦ ಸೈನಿಕರು ಹುತಾತ್ಮರಾದರು. ಹುತಾತ್ಮರ ತ್ಯಾಗ ಬಲಿದಾನದ ಸ್ಮರಣೆಗಾಗಿ ಈಗಲೂ ಈ ಭಾಗದ ೧೮೦೦೦ ಅಡಿ ಎತ್ತರದ ಪ್ರದೇಶದಲ್ಲಿ ಬೃಹತ್ ಸ್ಮಾರಕವನ್ನು ನಿರ್ಮಿಸಲಾಗಿದೆ. ಈ ಹುತಾತ್ಮ ಮಹನೀಯರ ಸ್ಮರಣೆಗಾಗಿ ಪ್ರತಿ ವರ್ಷ ಅಕ್ಟೋಬರ್ ೨೧ ರಂದು ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಆಂತರಿಕ ಭದ್ರತೆ, ಕಾನೂನು ಸುವ್ಯವಸ್ಥೆ ಪಾಲನೆಯ ಪ್ರಾಮಾಣಿಕ ಕರ್ತವ್ಯಕ್ಕೆ ಇಂತಹ ಹುತಾತ್ಮ ಪೊಲೀಸರು ಪ್ರೇರಣೆಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಗಣ್ಯರು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಮಾಧ್ಯಮದವರು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ಗೌರವ ನಮನ ಸಲ್ಲಿಸಿದರು.
0 comments:
Post a Comment