PLEASE LOGIN TO KANNADANET.COM FOR REGULAR NEWS-UPDATES


 ವಧು-ವರರ ಸಮಾವೇಶದಲ್ಲಿ ಒಕ್ಕೂರಿಲಿನ ಒತ್ತಾಯ

ಕೊಪ್ಪಳ: ಲಿಂಗಾಯತ ಒಳ ಪಂಗಡದಲ್ಲಿಯೇ ತೀರಾ ಹಿಂದುಳಿದಿರುವ ಆದಿಬಣಜಿಗ ಸಮುದಾಯದ ಸಮಗ್ರ ಅಭಿವೃದ್ಧಿಗೆ ಒಬಿಸಿ ೨ಎಗೆ ಸೇರಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲು ನಮ್ಮದೇ ಪೀಠ ಮಾಡಿಕೊಂಡು ಹೋರಾಟ ಮಾಡುವ ಕುರಿತು ಚಿಂತನೆ ನಡೆದಿದೆ ಮತ್ತು ಆರ್ಥಿಕವಾಗಿ ಶೈಕ್ಷಣಿಕವಾಗಿ ತೀರ ಹಿಂದುಳಿದಿರುವ ಈ ಸಮಾಜವನ್ನು ಸರ್ಕಾರ ೨ಎ ಗೆ ಸೇರಿಸಿ ಅಗತ್ಯ ಮೂಲಭೂತ ಸೌಭ್ಯಗಳನ್ನು ಒದಗಿಸಿಕೊಡಬೇಕು ಎಂದು ಸಮಾಜದ ಮುಖಂಡ ಬಿ.ಎಂ.ಜಾಬಣ್ಣನವರ ನರಗುಂದ ಹೇಳಿದರು.
ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ  ವಧು-ವರರ ಮತ್ತು ಪಾಲಕರ ಸಮಾವೇಶದಲ್ಲಿ ಮಾತನಾಡಿದರು.
ಲಿಂಗಾಯತ ಸಮುದಾಯದ ವಿವಿಧ ಒಳ ಪಂಗಡಗಳು ನಮ್ಮನ್ನು ಉಪಯೋಗಿಸಿಕೊಂಡು ಬಿಸಾಡಿವೆ. ನಮಗೆ ದೀಕ್ಷೆ ನೀಡಿದ್ದ ಗುರುಗಳು ಮಾಡಿದ ತಪ್ಪಿನಿಂದ ಸಮಾಜ ಇಂಥ ಹೀನ ಸ್ಥಿತಿ ಅನುಭವಿಸುವಂತಾಗಿದೆ. ಸಮಾಜದ ಕೆಟ್ಟ ಸ್ಥಿತಿಯಿಂದ ನಮ್ಮವರಲ್ಲಿನ ಕೆಲವರು ಮದುವೆಯಾಗಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಎಂದು ವಿವರಿಸಿದರು.
ತನ್ನದೇ ಸಾಂಸ್ಕೃತಿಕ ಹಿನ್ನೆಲೆಹೊಂದಿರುವ ಈ ಸಮುದಾಯ ಸಂಪರ್ಕದ ಕೊರತೆಯಿಂದ ಸಮಾಜದಲ್ಲಿ ತೀರಾ ಶೋಚನೀಯವಾಗಿ ಬದುಕುತ್ತಿದೆ. ಬಸವಣ್ಣನವರಿಗಿಂತಲೂ ಹಿಂದೇಯೇ ಸಮುದಾಯದ ಶರಣರೊಬ್ಬರು ೩೯೭ ವಚನ ರಚಿಸಿದ್ದಾರೆ. ಆದಾಗ್ಯೂ, ಕೆಲ ಪಂಗಡಗಳ ಕುತಂತ್ರದಿಂದ ನಾವು ಶೋಚನೀಯ ಸ್ಥಿತಿಯಲ್ಲಿಯೇ ಬದುಕುವಂತಾಗಿದೆ. ಈ ನಿಟ್ಟಿನಲ್ಲಿ ನಾವು ಸಂಘಟಿತರಾಗಬೇಕಿದೆ ಎಂದರು.
ಸಮಾಜದ ಬಹುತೇಕರು ಕೃಷಿಕರು ಮತ್ತು ಬಡವರಾಗಿದ್ದಾರೆ. ಆದರೆ, ನಮ್ಮ ಸಮುದಾಯದಲ್ಲಿಯೂ ಸಾಕಷ್ಟು ಪ್ರತಿಭಾವಂತರಿದ್ದರೂ ಸಂಪರ್ಕದ ಕೊರತೆಯಿಂದ ಸಂಬಂಧ ಬೆಳೆಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸಮುದಾಯದ ಶಿಕ್ಷಣ ಸಂಸ್ಥೆಗಳು ಬೆಳೆಯಬೇಕಿವೆ ಎಂದು ಅಭಿಪ್ರಾಯಪಟ್ಟರು.
ಸಮಾಜದ ಹಿರಿಯ ಮುಖಂಡ  ಡಾ.ಬಸಲಿಂಗಪ್ಪ ಮಸ್ಕಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾಧ್ಯಕ್ಷ ವೈಜನಾಥ ದಿವಟರ್ ಅಧ್ಯಕ್ಷತೆ ವಹಿಸಿದ್ದರು.ರಾಜ್ಯ ಆದಿಬಣಜಿಗ ಸಮಾಜದ ಅಧ್ಯಕ್ಷ ಸದಾಶೀವ ಕಾರಡಗಿ  ಮುಖಂಡರಾದ ಯಲ್ಲಪ್ಪ ಉಮಚಗಿ, ಗುರುಸಿದ್ಧಪ್ಪ ಹವಾಲ್ದಾರ, ಮಲ್ಲಿಕಾರ್ಜುನ ಗುನ್ನಳ್ಳಿ, ಯಲಬುರ್ಗಾ ತಾಲೂಕಾಧ್ಯಕ್ಷ ಬಸಪ್ಪ ದಿವಟರ ಕುಕನೂರ ಇದ್ದರು. ಪರಮಾನಂದ ಯಾಳಗಿ,ಯಲ್ಲಪ್ಪ ಕಾಟ್ರಳ್ಳಿ ರಮೇಶ ಉಮಚಗಿ, ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಮೊದಲು ಸಮಾಜದ ಸಂಸ್ಥಾಪಕ ಅಧ್ಯಕ್ಷ ಮಾಜಿ ಶಾಸಕ  ಮಲ್ಲಿಕಾರ್ಜುನ ದಿವಟರ್, ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
 

Advertisement

0 comments:

Post a Comment

 
Top