PLEASE LOGIN TO KANNADANET.COM FOR REGULAR NEWS-UPDATES



 ಮಹಾತ್ಮ ಗಾಂಧಿಜೀಯವರ ಜನ್ಮದಿನಾಚರಣೆಯನ್ನು ಅ.೦೨ ರಂದು ಆಚರಿಸುವ ಹಿನ್ನೆಲೆಯಲ್ಲಿ ಅವರ ತತ್ವಗಳನ್ನು ಪಾಲಿಸುವ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಪ್ರಾಣಿಬಲಿ ಹಾಗೂ ಮದ್ಯಪಾನ ಮತ್ತು ಮದ್ಯ ಮಾರಾಟ ನಿಷೇಧಿಸಿ ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ಆದೇಶ ಹೊರಡಿಸಿದ್ದಾರೆ.
ನಿಷೇದಾಜ್ಞೆಯನ್ವಯ ಅ.೦೨ ರ ಬೆಳಿಗ್ಗೆ ೬ ಗಂಟೆಯಿಂದ ಅ.೦೩ ರ ಬೆಳಿಗ್ಗೆ ೬ ರವರೆಗೆ ಜಿಲ್ಲೆಯ ಎಲ್ಲಾ ವಧಾಗಾರಗಳಲ್ಲಿ (ಕಸಾಯಿಖಾನೆ) ಮತ್ತು ಮಾಂಸ ಮಾರಾಟ ಸ್ಥಳಗಳಲ್ಲಿ ಕರ್ನಾಟಕ ಪ್ರಿವೆನ್ಷೆನ್ ಆಪ್ ಆನಿಮಲ್ ಆಂಡ್ ಬರ್ಡ್ ಸ್ಯಾಕ್ರಿಫೈಸ್ ಆಕ್ಟ್ ಪ್ರಕಾರ ಪ್ರಾಣಿವಧೆಯನ್ನು ನಿಷೇಧಿಸಲಾಗಿದೆ.  ಅಲ್ಲದೆ  ಕರ್ನಾಟಕ ಅಬಕಾರಿ ಕಾಯ್ದೆ ೧೯೬೫ ರ ಕಲಂ ೨೧ ರ ಪ್ರಕಾರ ಜಿಲ್ಲೆಯ ಎಲ್ಲಾ ವೈನ್‌ಶಾಪ್, ಬಾರ್‌ಗಳು ಹಾಗೂ ಸಗಟು ಮದ್ಯಮಾರಾಟ ಹಾಗೂ ಎಲ್ಲಾ ತರಹದ ಮದ್ಯದಂಗಡಿಗಳನ್ನು ಮುಚ್ಚಲು ಆದೇಶಿಸಿದೆ.
ಈ ಸಂಬಂಧವಾಗಿ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಹಾಗೂ ಅಬಕಾರಿ ಉಪ ಆಯುಕ್ತರಿಗೆ ಆದೇಶಿಸಲಾಗಿದ್ದು, ಆದೇಶವನ್ನು ಜಾರಿಗೆ ತರುವಲ್ಲಿ ವಿಫಲರಾದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಅಳವಂಡಿಯಲ್ಲಿ ವಿಚಾರಸಂಕಿರಣ
 ಮಹಾತ್ಮಾಗಾಂಧೀಜಿಯವರ ಜಯಂತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಅ. ೦೨ ರಂದು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ವಿಚಾರಸಂಕಿರಣ, ಶ್ರಮದಾನ, ಸ್ವಚ್ಛತಾ ಜಾಗೃತಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
  ಅಂದು ಬೆಳಿಗ್ಗೆ ೮-೩೦ ಗಂಟೆಗೆ ತಾಲೂಕಿನ ಅಳವಂಡಿಯಲ್ಲಿ ಗಾಂಧೀಜಿ ಜಯಂತಿ ಹಾಗೂ ರಾಷ್ಟ್ರೀಯ ಸ್ವಚ್ಚತಾ ಜಾಗೃತಿ ಸಪ್ತಾಹದ ಅಂಗವಾಗಿ ಶ್ರೀ ಸಿದ್ದೇಶ್ವರ ಸಂಯುಕ್ತ ಪ.ಪೂ. ಕಾಲೇಜು ಹಾಗೂ ಗ್ರಾಮ ಪಂಚಾಯತಿಯ ಸಹಯೋಗದೊಂದಿಗೆ ಶ್ರಮದಾನ ಕಾರ್ಯಕ್ರಮ ಹಾಗೂ ಸ್ವಚ್ಛತಾ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ೧೦ ಗಂಟೆಗೆ ಕಾಲೇಜು ಆವರಣದಲ್ಲಿ ಮಹಾತ್ಮಾ ಗಾಂಧೀಜಿಯವರ ವಿಚಾರಧಾರೆಗಳು ವಿಷಯ ಕುರಿತಂತೆ ವಿಚಾರಸಂಕಿರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕೊಪ್ಪಳದ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರು ಮಹಾತ್ಮಾಗಾಂಧೀಜಿಯವರ ವಿಚಾರಧಾರೆಗಳ ಕುರಿತು ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡುವರು.   ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಗ್ರಾಮ ಪಂಚಾಯತಿ ಅಧ್ಯಕ್ಷ ರಮೇಶ್ ಕರಡಿ, ತಾ.ಪಂ. ಉಪಾಧ್ಯಕ್ಷೆ ಮುದ್ದಮ್ಮ ರಂಗಪ್ಪ ಕರಡಿ, ಜಿ.ಪಂ. ಸದಸ್ಯ ನಾಗನಗೌಡ ಪಾಟೀಲ್, ರೇವಣಸಿದ್ದೇಶ್ವರ ಸ್ವಾಮಿಗಳು ಕಟ್ಟಿಮನಿ ಹಿರೇಮಠ, ಕರ್ನಾಟಕ ವಿದ್ಯಾವರ್ಧಕ ಸಮಿತಿಯ ಅಧ್ಯಕ್ಷ ಭುಜಂಗಸ್ವಾಮಿಗಳು ಇನಾಂದಾರ್, ಗ್ರಾ.ಪಂ. ಉಪಾಧ್ಯಕ್ಷೆ ಹನುಮವ್ವ ವಡ್ಡರ್ ಸೇರಿದಂತೆ ಗ್ರಾ.ಪಂ. ಸದಸ್ಯರುಗಳು, ಗಣ್ಯರು ಪಾಲ್ಗೊಳ್ಳುವರು.  ಮಹಾತ್ಮಾಗಾಂಧೀಜಿಯವರ ಜೀವನ ಚರಿತ್ರೆ ಕುರಿತಂತೆ ಇದೇ ಸಂದರ್ಭದಲ್ಲಿ ವಿಡಿಯೋ ಚಿತ್ರ ಪ್ರದರ್ಶಿಸಲಾಗುವುದು .

ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸೂಚನೆ
 ಮಹಾತ್ಮಾ ಗಾಂಧೀಜಿಯವರ ಜಯಂತಿ ಕಾರ್ಯಕ್ರಮವನ್ನು ಅ. ೦೨ ರಂದು ಬೆಳಿಗ್ಗೆ ೧೦ ಗಂಟೆಗೆ ಕೊಪ್ಪಳ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಿರುವಂತೆ ಅಪರ ಜಿಲ್ಲಾಧಿಕಾರಿ ಡಾ|| ಸುರೇಶ ಬಿ.ಇಟ್ನಾಳ  ತಿಳಿಸಿದ್ದಾರೆ.

Advertisement

0 comments:

Post a Comment

 
Top