ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಬಹಿರಂಗ ಪ್ರಚಾರ ಮಂಗಳವಾರ ಏ. ೧೫ ರ ಸಂಜೆ ೦೬ ಗಂಟೆಗೆ ಅಂತ್ಯಗೊಳ್ಳಲಿದ್ದು, ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿರುವ ವಿವಿಧ ರಾಜಕೀಯ ಕಾರ್ಯಕರ್ತರು, ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರದಿಂದ ನಿರ್ಗಮಿಸುವಂತೆ ಜಿಲ್ಲಾಧಿಕಾರಿ ಕೆ.ಪಿ. ಮೋಹನ್ರಾಜ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಬಹಿರಂಗ ಪ್ರಚಾರ ಏ. ೧೫ ರಂದು ಮಂಗಳವಾರ ಸಂಜೆ ೦೬ ಗಂಟೆಗೆ ಅಂತ್ಯಗೊಳ್ಳಲಿದೆ. ಈ ಅವಧಿಯ ನಂತರ ವಿವಿಧೆಡೆಗಳಿಂದ ಆಗಮಿಸಿರುವ ರಾಜಕೀಯ ಕಾರ್ಯಕರ್ತರು, ಕ್ಷೇತ್ರದ ಮತದಾರರಲ್ಲದವರು ಕೊಪ್ಪಳ ಕ್ಷೇತ್ರದಲ್ಲಿ ಇರುವಂತಿಲ್ಲ. ಕೂಡಲೆ ಅಂತಹವರು ಮತ ಕ್ಷೇತ್ರದಿಂದ ನಿರ್ಗಮಿಸಬೇಕು. ಬೇರೆ ಬೇರೆ ಕ್ಷೇತ್ರದಿಂದ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ರಾಜಕೀಯ ವ್ಯಕ್ತಿಗಳು, ಇತರರು ಕೊಪ್ಪಳ ಜಿಲ್ಲೆಯ ವಿವಿಧ ಲಾಡ್ಜ್, ಫಾರ್ಮ್ಹೌಸ್, ಹೋಟೆಲ್ ಮತ್ತು ಇತರ ಸ್ಥಳಗಳಲ್ಲಿ ತಂಗಿರುವ ಸಾಧ್ಯತೆಗಳಿದ್ದು, ಅಂತಹವರು ಕೂಡಲೆ ಅಲ್ಲಿಂದ ನಿರ್ಗಮಿಸಬೇಕು. ಜಿಲ್ಲೆಯ ಎಲ್ಲ ಲಾಡ್ಜ್, ಫಾರ್ಮ್ ಹೌಸ್, ಹೋಟೆಲ್ ಇತರೆ ವಸತಿ ಗೃಹಗಳ ಸ್ಥಳಗಳನ್ನು ಪರಿಶೀಲಿಸಿ, ವರದಿ ಸಲ್ಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಪೊಲೀಸ್ ಇಲಾಖೆ ಪರಿಶೀಲನೆ ನಡೆಸಲಿದೆ. ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಚುನಾವಣಾ ಆಯೋಗದ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ, ಚುನಾವಣೆಗಳನ್ನು ಮುಕ್ತ ಹಾಗೂ ಶಾಂತ ರೀತಿಯಿಂದ ಕೈಗೊಳ್ಳಲು ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ.ಪಿ. ಮೋಹನ್ರಾಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment