ಕೊಪ್ಪಳದಲ್ಲಿ ಜ. ೧೮ ರಿಂದ ಜರುಗಲಿರುವ ಶ್ರೀ ಗವಿಸಿದ್ದೇಶ್ವರ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ಹಾಗೂ ಸುಗಮವಾಗಿ ನಡೆಸಲು ಜಿಲ್ಲಾಡಳಿತದಿಂದ ಸಕಲ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್ ರಾಜ್ ಅವರು ಹೇಳಿದರು.
ಗವಿಸಿದ್ದೇಶ್ವರ ಜಾತ್ರೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೊಲೀಸ್ ಬಂದೋಬಸ್ತ್ : ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಅವರು ಮಾತನಾಡಿ, ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಜಾತ್ರೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು. ಇದಕ್ಕಾಗಿ ಹೊರ ಜಿಲ್ಲೆಯಿಂದ ೦೨-ಡಿವೈಎಸ್ಪಿ, ೧೪- ಸಿಪಿಐ, ೩೩- ಪಿಎಸ್ಐ, ೫೭- ಎಎಸ್ಐ, ೬೦೦- ಪಿ.ಸಿ., ೧೫೦- ಹೋಂಗಾರ್ಡ್ಸ್ ಗಳನ್ನು ನಿಯೋಜಿಸಲಾಗುವುದು. ಜಿಲ್ಲೆಯಿಂದ ಸುಮಾರು ೧೫೦ ಪೊಲೀಸ್ ಕಾನ್ಸ್ಟೇಬಲ್, ೨೦೦- ಹೋಂಗಾರ್ಡ್ಸ ಸೇರಿದಂತೆ ವಿವಿಧ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಜಾತ್ರೆಯ ಹತ್ತು ದಿನಗಳಿಗೂ ಮುನ್ನ ಗವಿಮಠದ ಬಳಿ ತಾತ್ಕಾಲಿಕವಾಗಿ ಪೊಲೀಸ್ ಹೊರ ಠಾಣೆ ಸ್ಥಾಪಿಸಲಾಗುವುದು. ನಗರದ ಬಸವೇಶ್ವರ ವೃತ್ತ (ಗಂಜ್ ಸರ್ಕಲ್) ನಲ್ಲಿ ಹತ್ತು ದಿನಗಳ ಒಳಗಾಗಿ ಸಿಗ್ನಲ್ ಲೈಟ್ ಅಳವಡಿಸಲಾಗುವುದು ಎಂದರು.
ಸಿಸಿ ಕ್ಯಾಮೆರಾ : ಕೊಪ್ಪಳ ನಗರಠಾಣೆ ಪಿಐ ವಿಜಯ್ ಬಿರಾದಾರ್ ಅವರು ಮಾತನಾಡಿ, ದ್ವಿಚಕ್ರ ವಾಹನ, ಟ್ರ್ಯಾಕ್ಟರ್, ಲಾರಿ, ಜೀಪ್, ಕಾರು ಮುಂತಾದ ವಾಹನಗಳ ಪಾರ್ಕಿಂಗ್ ಮಾಡಲು ಈಗಾಗಲೆ ಸ್ಥಳಗಳನ್ನು ಗುರುತಿಸಲಾಗಿದೆ. ಜಾತ್ರೆ ಸಂದರ್ಭದಲ್ಲಿ ಜೇಬುಗಳ್ಳತನ ತಡೆಗಟ್ಟಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು. ಕಳೆದ ವರ್ಷ ಇಂತಹ ಸುಮಾರು ೨೩ ಜೇಬುಗಳ್ಳರನ್ನು ಬಂಧಿಸಲಾಗಿತ್ತು. ಜಾತ್ರೆ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಇದೇ ಪ್ರಥಮ ಬಾರಿಗೆ ಈ ಬಾರಿ ಸುಮಾರು ೦೬ ಕಡೆಗಳಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ. ಟ್ರಾಫಿಕ್ ಜಾಮ್ ತಡೆಗಟ್ಟಲು ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿನ ವಾಹನಗಳ ಸಂಚಾರ ನಿಯಂತ್ರಣಕ್ಕಾಗಿ ಮಾರ್ಗಗಳ ಬದಲಾವಣೆ ಮಾಡಲಾಗುವುದು.
ಸಭೆಯಲ್ಲಿ ಡಿವೈಎಸ್ಪಿ ರಾಜೀವ್ ಎಂ., ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಸಹಾಯಕ ಆಯುಕ್ತ ಮಂಜುನಾಥ್, ನಗರಸಭೆ ಪೌರಾಯುಕ್ತ ರುದ್ರಮುನಿ, ಸಹಾಯಕ ಅಭಿಯಂತರ ಮಂಜುನಾಥ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ, ಡಾ. ದಾನರೆಡ್ಡಿ, ಡಾ. ಕಟ್ಟಿಮನಿ ಸೇರಿದಂತೆ ಗಣ್ಯರಾದ ನವಲಿ ಹಿರೇಮಠ, ಮಲ್ಲಿಕಾರ್ಜುನ ಸೋಮಲಾಪುರ, ಗವಿಮಠದ ಶರಣು, ಕೊಪ್ಪಳ ತಹಸಿಲ್ದಾರ್ ಚಂದ್ರಕಾಂತ್ ಮುಂತಾದವರು ಭಾಗವಹಿಸಿದ್ದರು.
0 comments:
Post a Comment