PLEASE LOGIN TO KANNADANET.COM FOR REGULAR NEWS-UPDATES


ಈ ಬಾರಿಯ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ಜರುಗಿಸಲಾಗಿದ್ದು, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಪ್ರಕರಣಗಳು ನಡೆದಿಲ್ಲ.  ಸೋಮವಾರ ನಡೆದ ವಿಜ್ಞಾನ ವಿಷಯದ ಪರೀಕ್ಷೆಗೆ ಜಿಲ್ಲೆಯ ೯೯೪ ವಿದ್ಯಾರ್ಥಿಗಳು ಹಾಜರಾಗಿದ್ದು, ೧೦೦ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಹೆಚ್. ವೀರಣ್ಣ ಅವರು ತಿಳಿಸಿದರು.
  ನಗರದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಈ ಬಾರಿ ಪೂರಕ ಪರೀಕ್ಷೆಯನ್ನು ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಜರುಗಿಸಲಾಗಿದೆ. ಪರೀಕ್ಷಾ ಅಕ್ರಮಗಳನ್ನು ತಡೆಯಲು ವಿಚಕ್ಷಣ ದಳವನ್ನು ನೇಮಿಸಿ, ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿತ್ತು.  ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ವಿಜ್ಞಾನ ವಿಷಯಕ್ಕೆ ಬಾಲಕರು- ೬೬೮, ಬಾಲಕಿಯರು- ೪೨೬ ಸೇರಿದಂತೆ ಒಟ್ಟು ೧೦೯೪ ವಿದ್ಯಾರ್ಥಿಗಳು ದಾಖಲಾಗಿದ್ದರು. ಇದರಲ್ಲಿ ಬಾಲಕರು- ೬೦೯, ಬಾಲಕಿಯರು- ೩೮೫ ಸೇರಿದಂತೆ ಒಟ್ಟು ೯೯೪ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದು, ೫೭-ಬಾಲಕರು, ೪೩- ಬಾಲಕಿಯರು ಗೈರು ಹಾಜರಾಗಿದ್ದಾರೆ. 
ಕೊಪ್ಪಳ ತಾಲೂಕಿನಲ್ಲಿ ೫೩೯ ವಿದ್ಯಾರ್ಥಿಗಳ ಪೈಕಿ ೪೯೭ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ ೩೨೯ ವಿದ್ಯಾರ್ಥಿಗಳ ಪೈಕಿ ೨೯೧, ಕುಷ್ಟಗಿ ತಾಲೂಕಿನಲ್ಲಿ ೧೧೧ ವಿದ್ಯಾರ್ಥಿಗಳ ಪೈಕಿ ೧೦೧, ಯಲಬುರ್ಗಾ ತಾಲೂಕಿನಲ್ಲಿ ೧೧೫ ವಿದ್ಯಾರ್ಥಿಗಳ ಪೈಕಿ ೧೦೫ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಕೊಪ್ಪಳ ತಾಲೂಕಿನಲ್ಲಿ ೪೨, ಗಂಗಾವತಿ- ೩೮, ಕುಷ್ಟಗಿ-೧೦ ಮತ್ತು ಯಲಬುರ್ಗಾ ತಾಲೂಕಿನಲ್ಲಿ ೧೦ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್. ವೀರಣ್ಣ ಅವರು ಹೇಳಿದರು.  ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಯ್ಯ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top