PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,ಏ.೨೯:  ಕೊಪ್ಪಳ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್‌ರವರ ಪರ ಏರ್ಪಡಿಸಿದ ಬಹಿರಂಗ ಮತಯಾಚನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪಕ್ಷ ಈ ರಾಜ್ಯದಲ್ಲಿ ಅಧಿಕಾರಕ್ಕೆ ತಂದು ನಾಡಿನ ಸರ್ವತೊಮುಖ ಅಭಿವೃದ್ದಿಗೆ ತಮಗೆ ಬೆಂಬಲಿಸುವಂತೆ ಅಭ್ಯರ್ಥಿ ಕೆ.ಎಂ.ಸಯ್ಯದ್ ಮನವಿ ಮಾಡಿಕೊಂಡರು.
ಅವರು ನಗರದ ಪಲ್ಟನ್ ಓಣಿ, ಹಮಾಲರ ಕಾಲೋನಿ, ದೇವರಾಜ ಅರಸ್ ಕಾಲೋನಿ, ನಿರ್ಮಿತಿ ಕೇಂದ್ರ ಇತ್ಯಾದಿ ವಾರ್ಡ್‌ಗಳಲ್ಲಿ ಮಿಂಚಿನ ಸಂಚಾರ ಕೈಗೊಂಡು ಮತಯಾಚನೆ ಮಾಡಿ ಏರ್ಪಡಿಸಿದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ತಮಗೆ ಬೆಂಬಲಿಸುವಂತೆ ಮನವಿ ಮಾಡಿದ ಅವರು, ನಂತರ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಈಗ ಕೊಪ್ಪಳದಲ್ಲಿ ಬದಲಾವಣೆಯ ಕಾಲ ಸನ್ನಿಹಿತವಾಗಿದೆ. ಈ ಹೊಸ ಮುಖಗಳಿಗೆ ಆದ್ಯತೆ ಈ ಭಾಗದ ಜನರು ನೀಡಲಿದ್ದಾರೆ ಎಂಬ ದೃಢವಿಶ್ವಾಸವನ್ನು ವ್ಯಕ್ತಪಡಿಸಿದ ಅವರು, ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಮುಂದುವರೆದು ಮಾತನಾಡಿದ ಅವರು, ಅಧಿಕಾರವಿಲ್ಲದೇ ಜನರ ಸೇವೆ ಮಾಡುತ್ತ ಬಂದಿರುವ ಕೆ.ಎಂ.ಸಯ್ಯದ್‌ರವರಿಗೆ ಈ ಚುನಾವಣೆಯಲ್ಲಿ ಆಯ್ಕೆ ಮಾಡಿದರೆ ಇನ್ನು ಹೆಚ್ಚಿನ ರೀತಿಯಲ್ಲಿ ಜನರ ಸೇವೆ ಮಾಡಲು ಅನುಕೂಲವಾಗುತ್ತದೆ ಎಂದರು.
ಪಕ್ಷದ ಮುಖಂಡರಾದ ನೇಮಿರಾಜ ಪಾಟೀಲ್ ಮಾತನಾಡಿ, ವಿಶ್ವ ಮಾನವ ಮಹಾ ಮಾನವತಾವಾದಿ ಬಸವಣ್ಣನವರ ಕನಸು ನನಸಾಗಿಸಲು ಯಡಿಯೂರಪ್ಪನವರಿಗೆ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಮತ್ತು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕೆ.ಎಂ.ಸಯ್ಯದ್‌ರವರನ್ನು ಕೊಪ್ಪಳ ಕ್ಷೇತ್ರದಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿಕೊಂಡರು. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಸಾಮಾಜಿಕ ನ್ಯಾಯ ಡಾ.ಬಿ.ಆರ್.ಅಂಬೇಡ್ಕರರವರ ತತ್ವ ಪಾಲಿಸುವುದರ ಜೊತೆಗೆ ಶ್ರಮಿಸಲು  ಯುವ ಶಕ್ತಿಗೆ ಅಧಿಕಾರ ನೀಡಬೇಕು ಎಂದರು. ನಮ್ಮ ಕೆಜೆಪಿ ಪಕ್ಷದ ಗುರುತು ತೆಂಗಿನಕಾಯಿ ಪೂಜೆಗೆ ಬಹಳ ಶ್ರೇಷ್ಠವಾಗಿದೆ ಮತದಾನವೆಂದರೆ ಅತ್ಯಂತ ಪವಿತ್ರವಾಗಿದ್ದು, ಅದು ಕನ್ಯಾದಾನಕ್ಕೆ ಸಮಾನ ಅದಕ್ಕಾಗಿ ಯೋಚಿಸಿ ಅರ್ಹ ವ್ಯಕ್ತಿಗೆ ಮತ ನೀಡಬೇಕು ಮತದಾನ ಮಾರಾಟಕಲ್ಲ. ಅದನ್ನು ಅರಿತುಕೊಂಡು ಮತದಾನ ಮಾಡಬೇಕು. ಕೊಪ್ಪಳದ ಜನರು ಬುದ್ದಿ ಜೀವಿಗಳು, ಚಾಣಾಕ್ಷತದಿಂದ ಈ ಬಾರಿ ಮತ ನೀಡಿ ಅರ್ಹ ವ್ಯಕ್ತಿಗೆ ಆಯ್ಕೆ ಮಾಡಲು ಮುಂದಾಗಬೇಕೆಂದರು.
ಮೆಹಬೂಬ ಮುಲ್ಲಾ ಹನುಮಸಾಗರರವರು ಮಾತನಾಡಿ, ಅಭ್ಯರ್ಥಿ ಕೆ.ಎಂ.ಸಯ್ಯದ್‌ರವರಿಗೆ ಬೆಂಬಲಿಸುವುದರ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ಸಹಕಾರ ನೀಡಬೇಕು. ಈ ಚುನಾವಣೆಯಲ್ಲಿ ಅವರಿಗೆ ಆಯ್ಕೆ ಮಾಡುವುದರ ಮೂಲಕ ಕೊಪ್ಪಳದಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಲು ಮುಂದಾಗಬೇಕೆಂದರು.
ಪಕ್ಷದ ತಾಲೂಕ ಅಧ್ಯಕ್ಷ ಪ್ರಫುಲ್ ಗೌಡ ಹುರಕಡ್ಲಿ, ಮುಖಂಡರಾದ ಈಶ್ವರ ಎನ್., ಶ್ಯಾಮೀದ್‌ಸಾಬ ಕಿಲ್ಲೇದಾರ, ಸಿ.ಎಸ್.ಡಂಬಳ, ಮಾರುತಿ ಮಾಗಳದ, ಮೆಹಬೂಬ ಬಹದ್ದೂರಬಂಡಿ, ಮಲ್ಲಿಕಾರ್ಜುನ ವದಗನಾಳ, ಬಸವರಾಜ ಬಳ್ಳಾರಿ ಅಳವಂಡಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.


Advertisement

0 comments:

Post a Comment

 
Top