ನಾಡೋಜ ಗೌರವಕ್ಕೆ ಪಾತ್ರರಾದ
ಬೆಳಗಲ್ ವೀರಣ್ಣ ಅವರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಸತ್ಕಾರ
ಬಳ್ಳಾರಿ, ಫೆ.೧೪: ಹಂಪಿ ಕನ್ನಡ ವಿವಿಯ ಪ್ರತಿಷ್ಠಿತ ನಾಡೋಜ ಗೌರವಕ್ಕೆ ಪಾತ್ರರಾದ ಹೆಸರಾಂತ ರಂಗಭೂಮಿ-ಜಾನಪದ ಕಲಾವಿದ ಬೆಳಗಲ್ ವೀರಣ್ಣ ಅವರನ್ನು ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕ, ನಗರದ ಹಂದ್ಯಾಳ್ ಶ್ರೀ ಮಹಾದೇವ ತಾತಾ ಕಲಾ ಸಂಘ, ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ, ಶ್ರೀ ಹುಲಿಕುಂಟರಾಯ ತೊಗಲುಬೊಬೆ ಕಲಾ ತಂಡ ಗುರುವಾರ ಬೆಳಿಗ್ಗೆ ಸನ್ಮಾನಿಸಿ ಗೌರವಿಸಿದವು.
ವೀರಣ್ಣ ಅವರ 'ರಂಗಭೂಮಿ' ನಿವಾಸಕ್ಕೆ ತೆರಳಿದ ಸಂಘ- ಸಂಸ್ಥೆಗಳ ಮುಖಂಡರಾದ ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ್, ಪತ್ರಕರ್ತ ಸಿ. ಮಂಜುನಾಥ್, ತೊಗಲುಬೊಂಬೆ ಕಲಾವಿದ ಕೆ. ಹೊನ್ನೂರುಸ್ವಾಮಿ ಮತ್ತಿತರರು ಸರಳ ಹೃದಯ ಸ್ಪರ್ಶಿ ಸಮಾರಂಭದಲ್ಲಿ ವೀರಣ್ಣ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಂಜುನಾಥ್, ರಂಗಭೂಮಿ ಮತ್ತು ಜಾನಪದ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿರುವ ಬೆಳಗಲ್ ವೀರಣ್ಣ ಅವರು ಬಳ್ಳಾರಿ ಜಿಲ್ಲೆಯ ಹೆಮ್ಮೆ. ನಾಡೋಜ ಗೌರವಕ್ಕೆ ಪಾತ್ರರಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಸಾಂಸ್ಕೃತಿಕ ಪರಂಪರೆಯ ಸಂಪದ್ಭರಿತ ಬಳ್ಳಾರಿ ಜಿಲ್ಲೆಗೆ ಕೇಂದ್ರ ಸರಕಾರದ ಅತ್ಯುನ್ನತ ಪದ್ಮ ಪ್ರಶಸ್ತಿ ಸೇರಿದಂತೆ ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತಂದು ಕೊಡುವಷ್ಟು ಸಶಕ್ತರು ಹಾಗೂ ಪ್ರತಿಭಾನ್ವಿತರು, ಸಾಧನ ಶೀಲರು ಎಂದು ಗುಣಗಾನ ಮಾಡಿದರು.
ಅರ್ಹ ಸಾಧಕರನ್ನು ಪ್ರಶಸ್ತಿ, ಗೌರವ-ಪುರಸ್ಕಾರಗಳು ಹುಡುಕಿಕೊಂಡು ಬರುತ್ತವೆ ಎನ್ನುವುದಕ್ಕೆ ಇದೀಗ ವೀರಣ್ಣ ಅವರಿಗೆ ನಾಡೋಜ ಗೌರವವೇ ಸಾಕ್ಷಿ ಎಂದರು.
ಈ ಸಂದರ್ಭದಲ್ಲಿ ಶ್ರೀಮತಿ ಮಹಾಲಿಂಗಮ್ಮ ವೀರಣ್ಣ, ಕುಟುಂಬ ಸದಸ್ಯರಾದ ಬೆಳಗಲ್ ಮಲ್ಲಿಕಾರ್ಜುನ, ಬಿ ವಿ ಲಕ್ಷ್ಮಿ ಉಪಸ್ಥಿತರಿದ್ದರು.
0 comments:
Post a Comment