PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ನಗರ ವಾಣಿಜ್ಯಾತ್ಮಕವಾಗಿ ತೀವ್ರವಾಗಿ ಬೆಳೆಯುತ್ತಿದ್ದು, ದಿನೇ ದಿನೇ ವಾಹನ ಸಂಚಾರ ಮತ್ತು ಜನದಟ್ಟಣೆಯಿಂದ ಸುಗಮ ಸಂಚಾರಕ್ಕೆ ತೊಂದರೆಯುಂಟಾಗುತ್ತಿದೆ. ಸಂಚಾರ ಸುವ್ಯವಸ್ಥೆ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಗರದ ಪ್ರಮುಖ ಸ್ಥಳಗಳಲ್ಲಿ  ನಿಷೇದಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆದೇಶ ಹೊರಡಿಸಿದ್ದಾರೆ.

ಕೊಪ್ಪಳ ನಗರದ ಜವಾಹರ ರಸ್ತೆಯ ಅಶೋಕ ವೃತ್ತದಿಂದ-ಬಹದ್ದೂರಬಂಡಿ ಕ್ರಾಸ್, ಕೊಪ್ಪಳ ನಗರದ ಸಾಲಾರಜಂಗ್ ರಸ್ತೆಯ ಹಳೇ ಡಿ.ಸಿ. ಆಫೀಸ್ ವೃತ್ತದಿಂದ-ಶಾರದಾ ಚಿತ್ರಮಂದಿರದವರೆಗೆ, ಕೊಪ್ಪಳ ನಗರದ ಗವಿಮಠ ರಸ್ತೆಯ ಬಸವೇಶ್ವರ ವೃತ್ತದಿಂದ-ಗಡಿಯಾರ ಕಂಬದವರೆಗೆ, ಫೀಶ್ ಮಾರ್ಕೆಟದಿಂದ-ಹಸನ್ ವೃತ್ತದವರೆಗೆ.
ಪ್ರತಿ ದಿನ ಮುಂಜಾನೆ ೮.೩೦ ರಿಂದ ರಾತ್ರಿ ೯.೦೦ ಗಂಟೆಯವರೆಗೆ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ರಸ್ತೆಯ ಎಡಭಾಗದಲ್ಲಿ ಅಂದರೆ ರಸ್ತೆಯ ಪೂರ್ವದ ಬದಿಗೆ ಮತ್ತು ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರದಂದು ರಸ್ತೆಯ ಬಲಭಾಗದಲ್ಲಿ ಅಂದರೆ ಪಶ್ಚಿಮ ಬದಿಗೆ ವಾಹನ ಪಾರ್ಕಿಂಗ್ ಸಲುವಾಗಿ ದಿನ ನಿಗದಿಪಡಿಸಲಾಗಿದೆ.
ಕೊಪ್ಪಳ ನಗರದ ಎನ್.ಹೆಚ್.೬೩ ಹೊಸಪೇಟೆ ರಸ್ತೆಯ ಅಗ್ನಿಶಾಮಕ ಠಾಣೆಯಿಂದ ಗದಗ ರಸ್ತೆಯ ಹಿರೇಹಳ್ಳ ಸೇತುವೆವರೆಗೆ, ಕುಷ್ಟಗಿ ರಸ್ತೆಯ ಸ್ವಾಗತ್ ಕಮಾನದಿಂದ (ಗವಿಮಠ ರಸ್ತೆಯನ್ನು ಒಳಗೊಂಡು) ಗಡಿಯಾರ ಕಂಬದವರೆಗೆ, ಸಿಂಧೋಗಿ ರಸ್ತೆಯಿಂದ (ಜವಾಹರ ರಸ್ತೆ ಒಳಗೊಂಡು) ಕಿನ್ನಾಳ ರಸ್ತೆಯ ಭಾಗ್ಯನಗರ ಕ್ರಾಸ್‌ವರೆಗೆ, ನಗರದ ಬಸ್ ನಿಲ್ದಾಣದಿಂದ ಭಾಗ್ಯನಗರ ಬಸ್ ನಿಲ್ದಾಣದವರೆಗೆ. ಈ ಮಾರ್ಗಗಳಲ್ಲಿ ವಾಹನದ ಸಂಚಾರ ಹೆಚ್ಚಾಗಿ ಇರುವುದರಿಂದ ವಾಹನಗಳ ವೇಗದ ಮಿತಿಯನ್ನು ಗಂಟೆಗೆ ೪೦ ಕಿ.ಮೀ. ವೇಗದಲ್ಲಿ ಚಲಿಸಲು ಆದೇಶಿಸಿದೆ.
ಎನ್.ಹೆಚ್.೬೩ ರಸ್ತೆಯ ಜಿಲ್ಲಾಧಿಕಾರಿಯವರ ಕಾರ್ಯಾಲಯ, ಎಸ್.ಎಫ್.ಎಸ್. ಸ್ಕೂಲ್, ಕೊಣ್ಣೂರು ಹೆರಿಗೆ ಆಸ್ಪತ್ರೆ, ಬಾಲಕರ ಸರಕಾರಿ ಶಾಲೆ, ನಗರಸಭೆ, ಎಲ್.ಐ.ಸಿ. ಆಫೀಸ್, ಜಿಲ್ಲಾ ಸರಕಾರಿ ಆಸ್ಪತ್ರೆ, ಶಾಸಕರ ಮಾದರಿ ಶಾಲೆ (ಕೇಂದ್ರಿಯ ವಿದ್ಯಾಲಯ), ಪಾಟೀಲ್ ಆಸ್ಪತ್ರೆ, ಹಿಂದಿ ಬಿಎಡ್ ಕಾಲೇಜ್, ಟ್ರಿನಿಟಿ ಶಾಲೆ, ಡಾ.ಕೆ.ಜಿ.ಕುಲಕರ್ಣಿ ಆಸ್ಪತ್ರೆ, ಯಶೋ ಆಸ್ಪತ್ರೆ, ಚಂದ್ರಿಕಾ ಆಸ್ಪತ್ರೆ, ಚಿನ್ಮಯಿ ಆಸ್ಪತ್ರೆ, ತಹಶೀಲ್ದಾರ್ ಕಛೇರಿ, ಕೋರ್ಟ್ ಹತ್ತಿರ ವಾಹನಗಳು ಶಬ್ದ ಮಾಲಿನ್ಯ ಮಾಡದಂತೆ ಕ್ರಮವಹಿಸುವುದು.
ಕೊಪ್ಪಳ ನಗರದ ಜವಾಹರ ರಸ್ತೆಯಲ್ಲಿ ಗಡಿಯಾರ ಕಂಬದಿಂದ ಅಶೋಕ ವೃತ್ತದವರೆಗೆ ಭಾರಿ ವಾಹನಗಳು ಅನ್‌ಲೋಡಿಂಗ್ ಸಲುವಾಗಿ ನಿಲ್ಲುವುದರಿಂದ ವಾಹನದಟ್ಟಣೆಯಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗತ್ತಿದ್ದು, ಈ ಸ್ಥಳದಲ್ಲಿ ಪ್ರತಿ ದಿನ ಮುಂಜಾನೆ ೯.೦೦ ಗಂಟೆಯೊಳಗೆ, ಮಧ್ಯಾಹ್ನ ೨.೦೦ ಗಂಟೆಯಿಂದ ೪.೦೦ ಗಂಟೆಯೊಳಗೆ ಮತ್ತು ರಾತ್ರಿ ೮.೦೦ ಗಂಟೆಯ ನಂತರ ಅನ್‌ಲೋಡಿಂಗ್ ಮಾಡಲು ಆದೇಶಿಸಿದೆ.
ಕೊಪ್ಪಳ ನಗರದ ಬಸವೇಶ್ವರ ವೃತ್ತ, ಹಳೆ ಡಿ.ಸಿ. ವೃತ್ತ, ಜವಾಹರ ರಸ್ತೆಯ, ಅಶೋಕ ವೃತ್ತದ ಕಿನ್ನಾಳ ರಸ್ತೆ, ನಗರದ ಬಸ್ ನಿಲ್ದಾಣದ ಮುಂದೆ, ಬನ್ನಿಕಟ್ಟಿ ಹತ್ತಿರ, ಗವಿಮಠದ ಮುಂದೆ, ಗೋಶಾಲೆಯ ಹತ್ತಿರ, ಜಿಲ್ಲಾಧಿಕಾರಿ ಕಛೇರಿಯ ಮುಂದೆ, ಜಗಜೀವನರಾಮ್ ಸರ್ಕಲ್ ಹತ್ತಿರ, ಆಜಾದ್ ಸರ್ಕಲ್ ಹತ್ತಿರ, ರೈಲ್ವೆ ನಿಲ್ದಾಣದ ಹತ್ತಿರ ಈ ಸ್ಥಳಗಳನ್ನು ಆಟೋರಿಕ್ಷಾ ನಿಲ್ದಾಣಗಳೆಂದು ಗುರುತಿಸಲಾಗಿದೆ. 
ಕೊಪ್ಪಳ ನಗರದ ಸಾರ್ವಜನಿಕ ಮೈದಾನ, ಬಸವೇಶ್ವರ ವೃತ್ತದ ಎಸ್.ಬಿ.ಎಂ., ಬ್ಯಾಂಕ್, ಕುಷ್ಟಗಿ ರಸ್ತೆಯಲ್ಲಿ, ಜಿಲ್ಲಾಧಿಕಾರಿಯವರ ಕಛೇರಿ, ಅಗ್ನಿ ಶಾಮಕ ಠಾಣೆ, ಕೋರ್ಟ್, ಗವಿಮಠ, ಗೋಶಾಲೆ, ಬನ್ನಿಕಟ್ಟಿ, ಅಶೋಕ ವೃತ್ತದ ಕಿನ್ನಾಳ ರೋಡ್, ಕಿನ್ನಾಳ ರಸ್ತೆಯ ಭಾಗ್ಯನಗರ ಕ್ರಾಸ್, ಗಡಿಯಾರ ಕಂಬದ ಹತ್ತಿರ ಈ ಸ್ಥಳಗಳನ್ನು ಸಿಟಿ ಬಸ್ ನಿಲ್ದಾಣಗಳೆಂದು ಗುರುತಿಸಲಾಗಿದೆ.
ಕೊಪ್ಪಳ ನಗರದ ವಾರ್‌ಕಾರ್ ಓಣಿಯ ರಸ್ತೆಯಲ್ಲಿ, ಆಜಾದ್ ಸರ್ಕಲ್‌ದಿಂದ ಹಸನ್ ರಸ್ತೆಗೆ ಕೂಡುವ ರಸ್ತೆಯಲ್ಲಿ, ಜವಾಹರ ರಸ್ತೆಯ ಹುಣಸೆ ಮರದ ಹತ್ತಿರದ ರಸ್ತೆಯಲ್ಲಿ ಕಾರ್ ಪಾರ್ಕಿಂಗ್ ಮಾಡಲು ಆದೇಶಿಸಿದೆ.
ಕೊಪ್ಪಳ ನಗರದ ಗಡಿಯಾರ ಕಂಬದಿಂದ ಆಜಾದ್ ಸರ್ಕಲ್ ದವರೆಗೆ ಏಕ ಮುಖ ರಸ್ತೆ ಎಂದು ಗುರುತಿಸಲಾಗಿದೆ.  ಸಾರ್ವಜನಿಕರು, ವಾಹನಗಳ ಮಾಲೀಕರು, ಸಂಬಂಧಪಟ್ಟವರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ  ತಿಳಿಸಿದ್ದಾರೆ.

Advertisement

0 comments:

Post a Comment

 
Top