PLEASE LOGIN TO KANNADANET.COM FOR REGULAR NEWS-UPDATES

  ಅಸತ್ಯದಿಂದ ಸತ್ಯದ ಕಡೆಗೆ ಹೋಗಿ ಮನುಷ್ಯ ಸಾರ್ಥಕ ಬದುಕು ಮಾಡಿಕೊಳ್ಳುವುದರ ಜೊತೆಗೆ ಪರರಿಗೆ ಉಪಕಾರ ಮಾಡುವುದು ಎಲ್ಲಾ ಧರ್ಮದ ತಿರಳಾಗಿದ್ದು, ಇದನ್ನೇ ಇಸ್ಲಾಂ ಧರ್ಮ ಸೇರಿ ಇತರೆ ಎಲ್ಲಾ ಧರ್ಮ ಕಲಿಸುವ ಪಾಠ ಎಂದು ಹೆಬ್ಬಾಳ ಶ್ರೀಮಠದ ಪರಮಪೂಜ್ಯ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯ ಪಟ್ಟರು.
ಅವರು ಶನಿವಾರ ರಾತ್ರಿ ಸಾರ್ವಜನಿಕ ಮೈದಾನದಲ್ಲಿ ಇಸ್ಲಾಮಿಕ್ ರಿಸರ್ಚ್ ಸೆಂಟರ್ ಏಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ದಿ-ಲೈಟ್ ಇಸ್ಲಾಮಿಕ್ ಎಕ್ಷಿಬಿಷನ್ ಮೋಕ್ಷದ ಮಾರ್ಗ ಮತ್ತು ಉರ್ದು ಪ್ರವಚನ ಸಾರ್ವಜನಿಕ ಪ್ರವಚನ ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ೮೪ ಲಕ್ಷ ಜೀವರಾಶಿಯೊಳಗೆ ಮಾನವ ಶ್ರೇಷ್ಠ ಮಾನವ ಮಾನವನಾಗಿ ಬಾಳಬೇಕು ಅದಕ್ಕೆ ಜ್ಞಾನ ಸಂಪತ್ತು ಗ್ರಹಿಸಿಕೊಂಡು ಎಲ್ಲರೊಂದಿಗೆ ಭಾವೈಕ್ಯತೆಯ ಬದುಕು ಸಾಗಿಸಿ ತಮ್ಮ ಜೀವನ ಸಾರ್ಥಕಗೊಳಿಸಬೇಕು. ಮನುಷ್ಯನ ಜೀವನ ಶ್ಯಾಸ್ವತವಲ್ಲ. ಮನುಷ್ಯನ ಮನಕ್ಕೆ ಸಂಸ್ಕಾರ ಪಡುವ ಕೆಲಸ ಧರ್ಮಗಳಿಂದ ಆಗುತ್ತದೆ. ಪ್ರತಿಯೊಂದು ಧರ್ಮಕ್ಕೆ ಭಕ್ತಿಯಿಂದ ಕಾಣುವುದೇ ಮಾನವನ ಧರ್ಮ ಎಂದರು.
ಮನುಷ್ಯ ಅಹಂಕಾರ ಬಿಟ್ಟು ಪರರಿಗೆ ಉಪಕಾರ ಮಾಡುವುದು ಕಲಿಯಬೇಕು. ತಂದೆ ತಾಯಿಗಳನ್ನು ಸಂತೋಷ ಪಡುವಂತಹ ಕೆಲಸ ಮಾಡಿ ಸನ್ಮಾರ್ಗದ ಹಾದಿಯಲ್ಲಿ ಜೀವನ ಸಾಗಿಸಬೇಕು. ಇಸ್ಲಾಂ ಧರ್ಮದಲ್ಲಿ ಕೂಡ ಇದನ್ನೇ ಹೇಳಿದೆ. ಕಾಯಕವೇ ಕೈಲಾಸ ಎಂಬುವುದು ಈ ಧರ್ಮದಲ್ಲಿ ಹೆಚ್ಚು ಕಂಡು ಬರುತ್ತವೆ. ಮನುಷ್ಯನ ನಡೆ ನುಡಿ ಒಂದಾಗಬೇಕು. ಹಿಂದು-ಮುಸ್ಲಿಂ ಒಂದ ನಮ್ಮ ಭಾರತ ಬಲು ಚೆಂದ ಎಂದು ಹೇಳಿದ ಅವರು, ಪ್ರತಿಯೊಬ್ಬರು ತಮ್ಮ ತಮ್ಮ ಧರ್ಮದ ಜೊತೆಗೆ ಇತರ ಧರ್ಮದ ಬಗ್ಗೆ ಗೌರವ ಕಾಣುವಂತಾಗಬೇಕು ಎಂದು ಹೆಬ್ಬಾಳ ಶ್ರೀಮಠದ ಪರಮಪೂಜ್ಯ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಸಮಾರಂಭದ ಮುಖ್ಯ ಭಾಷಣಕಾರ ಮುಂಬೈನ ಇಸ್ಲಾಮಿಕ್ ಮಾಹಿತಿ ಕೇಂದ್ರದ ಅಧ್ಯಕ್ಷ ಶೇಖ ಝೈದ್ ಪಟೇಲ್ ರವರು ಮಾತನಾಡಿ, ೩೦೦ ಕೋಟಿ ಜನಸಂಖ್ಯೆಯುಳ್ಳ ಅಮೇರಿಕಾ ದೇಶದಲ್ಲಿ ಪ್ರತಿವರ್ಷ ಸುಮಾರು ೧ ಕೋಟಿದಷ್ಟು ಅಪರಾಧ ಪ್ರಕರಣಗಳು ನಡೆಯುತ್ತಲೇ ಇವೆ. ಅಲ್ಲಿ ವಾಸಿಸುವ ಜನರು ಅತೀ ಹೆಚ್ಚು ನಿದ್ರೆ ಗುಳಿಗೆ ಬಳಸುತ್ತಾರೆ. ಹಣದಿಂದ ಶಾಂತಿ, ನೆಮ್ಮದಿ ಸಿಗಲು ಸಾಧ್ಯವಿಲ್ಲ. ಮನುಷ್ಯನ ಜೀವನ ಪರೀಕ್ಷೆ ಇದ್ದಂತೆ. ಇದರಲ್ಲಿ ಏರು-ಪೇರು ಸಹಜವಾದ ಕ್ರೀಯೆ ಕುರಾನ್ ಎಲ್ಲರಿಗೆ ಒಂದೇ ಸಂದೇಶ ನೀಡುತ್ತದೆ. ಮಹ್ಮದ್ ಫೈಗಂಬರ ರವರು ತೋರಿಸಿದ ಮಾರ್ಗದಲ್ಲಿ ನಡೆದು ನಮ್ಮ ಜೀವನ ಸನ್ಮಾರ್ಗದ ಹಾದಿಯತ್ತ ಕೊಂಡೋಯಲು ಸಾಧ್ಯ ಎಂದು ಮುಂಬೈನ ಇಸ್ಲಾಮಿಕ್ ಮಾಹಿತಿ ಕೇಂದ್ರದ ಅಧ್ಯಕ್ಷ ಶೇಖ ಝೈದ್ ಪಟೇಲ್ ರವರು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸೈಯ್ಯದ್ ಫೌಂಡೇಶನ ಅಧ್ಯಕ್ಷ ಹಾಗೂ ಸಮಾಜ ಸೇವಕ ಕೆ.ಎಂ.ಸೈಯ್ಯದ್, ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ, ಕಾಂಗ್ರೆಸ್ ಮುಖಂಡ ಸೈಯ್ಯದ್ ಜುಲ್ಲು ಖಾದರ ಖಾದ್ರಿ, ನ್ಯಾಯವಾದಿ ಇಸ್ಮಾಯಿಲ್ ಗೇಟಿನ್, ಶೇಖ ರಿಜ್ವಾನ್, ಯುವ ನಾಯಕ ಗವಿಸಿದ್ದಪ್ಪ ಮುದಗಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದ ಈ ಪ್ರವಚನ ಕಾರ್ಯಕ್ರಮದಲ್ಲಿ ಈ.ಟಿ.ವಿ. ಉರ್ದು ಸ್ಪೀಕರ್ ಶೇಖ ಅರ್ಷದ ಬಷೀರ ಮದನಿ ವಿಶೇಷ ಪ್ರವಚನ ನೀಡಿದರು. ಸಂಘಟಕರಾದ ಶಬ್ಬೀರ್ ಅಹ್ಮದ್ ತಹಶೀಲ್ದಾರ್, ಖಲೀಲ್ ಪಟೇಲ್, ರಿಯಾಜ್ ಅಹ್ಮದ್ ಪುತ್ತೂರು, ಇಲಿಯಾಸ್ ಖಾನ್ ಡಾವಣಗೇರಿ, ಅಹ್ಮದ್ ಸಾಬ, ಅತ್ತರ ಪಟೇಲ್, ಉಮರ್ ಫಾರೂಕ್ ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಮತ್ತು ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

0 comments:

Post a Comment

 
Top