ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಶಾಂತಾದೇವಿ ಹಿರೇಮಠರು ಮುಗ್ಧತೆ ಹಾಗೂ ಕುತೂಹಲ ದೃಷ್ಟಿಯಿಂದ ಸಮಾಜವನ್ನು ,ಬದುಕನ್ನು ನೋಡುವ ರೀತಿ ಅದನ್ನು ಅಭಿವ್ಯಕ್ತಿಗೊಳಿಸುವ ರೀತಿ ಶ್ಲಾಘನೀಯ.ಅನುಭವದ ಬರವಣಿಗೆ ಆಪ್ತವಾಗಿ ಮೂಡಿಬಂದಿದೆ ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ಅವರು ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ನಗರದ ಎನ್ ಜಿಓ ಭವನದಲ್ಲಿ ಹಮ್ಮಿಕೊಂಡಿದ್ದ ೮೭ನೇ ಕವಿಸಮಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಈ ವಾರ ಶ್ರೀಮತಿ ಶಾಂತಾದೇವಿ ಹಿರೇಮಠರ "ಮಾತುಕತೆ" ಹರಟೆ ಪುಸ್ತಕದ ಬಗ್ಗೆ ಚರ್ಚೆಯನ್ನು ಹಮ್ಮಿಕೊಳ್ಳಲಾಗಿತ್ತು.
ಅನುಭವಗಳನ್ನು ತಮ್ಮದಾಗಿಸಿಕೊಂಡು ಬರೆದಾಗ ಅರೇ ಇದು ನಾವು ಬರೆಯಬೇಕಿತ್ತಲ್ಲ ಎನ್ನುವ ಭಾವನೆ ಮೂಡಿದರೆ ಆ ಬರಹ ಸಾರ್ಥಕ ಎನಿಸಿಕೊಳ್ಳುತ್ತದೆ. ಆ ರೀತಿಯ ಹರಟೆಗಳನ್ನು ಶಾಂತಾದೇವಿ ಹಿರೇಮಠರು ಬರೆದಿದ್ದಾರೆ. ಆಯಾ ಕಾಲ ಸಂದರ್ಭಕ್ಕೆ ತಕ್ಕಂತ ರಚನೆಗಳು ಮೂಡಿ ಬಂದಿವೆ. ಹರಟೆಗಳ ಗಾತ್ರ ಇನ್ನಷ್ಟು ದೊಡ್ಡದಾಗಬಹುದಿತ್ತು. ಕೆಲವು ಸಲ ಒಮ್ಮುಖವಾಗಿ ಬರೆಯುತ್ತಿದ್ದಾರೆ ಎನಿಸುವಂತೆ ಕೆಲವು ಬರಹಗಳು ಮೂಡಿಬಂದಿವೆ. ಪರ ವಿರೋಧದ ಮುಖಾಮುಖಿಯಾದಾಗ ಲೇಖನಗಳು ಇನ್ನಷ್ಟು ಗಟ್ಟಿ ಎನಿಸುತ್ತವೆ ಎಂದು ಹಿರಿಯ ಬರಹಗಾರ ವಿಠ್ಠಪ್ಪ ಗೋರಂಟ್ಲಿ ಹೇಳಿದರು.

0 comments:
Post a Comment