PLEASE LOGIN TO KANNADANET.COM FOR REGULAR NEWS-UPDATES


ಕರಡಿ ಸಂಗಣ್ಣನವರಿಗೆ ಸಂಸದರ ಪ್ರಶ್ನೆ
ಸಂಸದರು ಗಂಗಾವತಿಗೆ ಕೃಷಿ ಕಾಲೇಜು ಕೇಳಿದರೆ.....

ನನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾಕ್ಷೇತ್ರಗಳಿದ್ದು, ನನಗೆ ಎಲ್ಲಾ ಕ್ಷೇತ್ರಗಳು ಸರಿ ಸಮಾನ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ನನ್ನೊಂದಿಗೆ ಪೈಪೋಟಿಗಿಳಿಯಲಿ ಹೊರತಾಗಿ, ಇಲ್ಲಸಲ್ಲದ ಆರೋಪ ಮಾಡುವುದನ್ನು ಮಾಜಿ ಶಾಸಕ ಸಂಗಣ್ಣ ಕರಡಿಯವರು ನಿಲ್ಲಿಸಲಿ ಎಂದು ಸಂಸದ ಶಿವರಾಮಗೌಡರು ಹೇಳಿದರು.

ಇಂದಿಗೂ ಆಡದೇ, ಭರವಸೆ ನೀಡದೇ ಕೆಲಸ ಮಾಡುವ ಸಂಸ್ಕಾರ ನನ್ನದು. ಆದರೆ ಭರವಸೆ ನೀಡಿ ಅಡ್ಡಗೋಡೆ ಮೇಲೆ ದೀಪವಿಡುವ ಜಾಯಮಾನ ನನ್ನದಲ್ಲ. ಶೈಕ್ಷಣಿಕ ಕ್ಷೇತ್ರದಲ್ಲಿ ಹೇಳದೇ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ಯಾರೊಂದಿಗೂ ನಿಷ್ಟುರತೆಯಿಂದ ವರ್ತಿಸುವ ಅನಿವಾರ್ಯ ನನಗಿಲ್ಲ. ಕೊಪ್ಪಳ ನಗರದಲ್ಲಿಯೇ ಕೇಂದ್ರೀಯ ವಿದ್ಯಾಲಯಯನ್ನು ಪ್ರಾರಂಭಿಸಿ, ಅದಕ್ಕೆ ಸ್ಥಳಾವಕಾಶವನ್ನು ಕಲ್ಪಿಸಿ, ಕಟ್ಟಡ ಕಾಮಗಾರಿಯನ್ನು ಪ್ರಾರಂಭಿಸಲು ಸೂಚಿಸಿದೆ. ಈಗಾಗಲೇ ಕೊಪ್ಪಳ ವಿಧಾನಸಭಾ ಕ್ಷೇತ್ರದ ಮುನಿರಾಬಾದಿನಲ್ಲಿ ಒಂದು ತೋಟಗಾರಿಕೆ ಮಹಾವಿದ್ಯಾಲಯವನ್ನು ಪ್ರಾರಂಭಿಸಲಾಗಿದೆ. ಅದಕ್ಕೆ ಕಟ್ಟಡದ ಅಡಿಗಲ್ಲು ಸಮಾರಂಭಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ರವರು ಚಾಲನೆ ನೀಡಿದ್ದಾರೆ. ಮೊನ್ನೆ ನಡೆದ ಮುಖ್ಯಮಂತ್ರಿಯವರ ಪರಿಶೀಲನಾ ಸಭೆಯಲ್ಲಿ, ಸಧ್ಯದಲ್ಲಿಯೇ ಪಶುವೈದ್ಯ ಮಹಾವಿದ್ಯಾಲಯವನ್ನು ಪ್ರಾರಂಭಿಸಲು ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲು ತಿಳಿಸಿದ್ದು ಇದೆ.

ಜಿಲ್ಲಾ ಕೇಂದ್ರವಾದ ಕೊಪ್ಪಳದಲ್ಲಿ ಒಂದು ವೈದ್ಯಕೀಯ ಮಹಾವಿದ್ಯಾಲಯ ತರಲು ನಾವೆಲ್ಲರೂ ಶ್ರಮಿಸಬಹುದಾಗಿದ್ದು, ಅಭಿವೃದ್ಧಿಯ ವಿಚಾರದಲ್ಲಿ ಸಂಸದರ ಸಹಕಾರ ಪಡೆಯಬೇಕು. ಇದುವರೆಗೆ ಶೈಕ್ಷಣಿಕ ದೃಷ್ಟಿಯಿಂದ ವಿರೋಧ ಪಕ್ಷದವರು ನೀಡುವ ಪ್ರಸ್ತಾವನೆಗಳಿಗೂ ಸಹ, ನಾನು ಸಹಕಾರ ನೀಡಲು ಸಿದ್ಧನಿದ್ದು, ಅಂತಹದ್ದರಲ್ಲಿ ಮಾಜಿ ಶಾಸಕರು ಇತ್ತೀಚೆಗೆ ನಮ್ಮ ಪಕ್ಷವನ್ನು ಸೇರಿದ್ದರೂ ಸಹ, ಇಲ್ಲಸಲ್ಲದ ಆರೋಪವನ್ನು ಮಾಡುತ್ತಿರುವುದನ್ನು ನೋಡಿದರೆ, ಇನ್ನೂ ಮಾತೃ ಪಕ್ಷದ ಗುಂಗಿನಲ್ಲಿರುವಂತೆ ಕಾಣುತ್ತಿದ್ದು ಅವರಿಗೆ ಏನನ್ನಬೇಕೋ ತಿಳಿಯುತ್ತಿಲ್ಲ. ರಾಜಕೀಯದಲ್ಲಿ ಕೆಳಹಂತದಿಂದ ಮೇಲೆ ಬಂದಂತಹ ಅನುಭವಿ ರಾಜಕಾರಣಿಗಳೇ ಈ ರೀತಿ ಹೇಳಿಕೆಯನ್ನು ನೀಡಿದ್ದು ಎಷ್ಟರಮಟ್ಟಿಗೆ ಸಮಂಜಸ? ಅವರ ರಾಜಕೀಯ ಅನುಭಕ್ಕೆ ಗೌರವವಿದೆ. ಗೌರವಯುತ ವ್ಯಕ್ತಿಯೇ ಸಾರ್ವಜನಿಕವಾಗಿ ತಮ್ಮ ಗೌರವಕ್ಕೆ ಚ್ಯುತಿ ಬರುವಂತೆ ನಡೆದುಕೊಳ್ಳುವುದು ತರವಲ್ಲ.

ಇನ್ನು ನನ್ನ ಕ್ಷೇತ್ರದ ಸಿಂಧನೂರು ತಾಲೂಕಿನ ಜವಳಗೇರಾದ ಸೆಂಟ್ರಲ್ ಸೀಡ್ಸ್ ಫಾರಂನ ೭೫೧೦ ಎಕರೆ ಪ್ರದೇಶದ ಫಾರಂಗೆ ಭೇಟಿಕೊಟ್ಟು ಅಲ್ಲಿ ಉಪಯೋಗಿಸುತ್ತಿರುವ ಭೂಮಿಯನ್ನು ಕುರಿತು ಚರ್ಚಿಸಿ, ಸಾಗುವಳಿ ಮಾಡದೇ ಉಳಿದಿರುವ ೫೯೪೬ ಎಕರೆ ಭೂಮಿಯನ್ನು ಸಾಗುವಳಿ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸಲು ಜವಳಗೇರಾ ಫಾರಂನ ನಿರ್ದೇಶಕರಿಗೆ ಈಗಾಗಲೇ ಸೂಚಿಲಾಗಿ ಹಾಗೂ ಮೀನು ಸಾಕಣೆ, ಸಂಶೋಧನೆ ಮತ್ತು ಮಾರಾಟ ಕೇಂದ್ರವನ್ನು ಪ್ರಾರಂಭಿಸಲು ಈಗಾಗಲೇ ಚರ್ಚಿಸಲಾಗಿದೆ.

ಗಂಗಾವತಿಯಲ್ಲಿ ಈಗಿರುವ ಕೃಷಿ ಸಂಶೋಧನಾ ಕೇಂದ್ರದಲ್ಲಿ ೨೭೫ ಎಕರೆ ಪ್ರದೇಶದಲ್ಲಿ ಕೃಷಿ ಮಹಾವಿದ್ಯಾಲಯವನ್ನು ಪ್ರಾರಂಭಿಸಲು ಸೂಕ್ತ ಸ್ಥಳವಾಗಿದೆ ಎಂದು ಈಗಾಗಲೇ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಗಳು ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದಾರೆ. ಕೃಷಿ ಮಹಾವಿದ್ಯಾಲಯವನ್ನು ಪ್ರಾರಂಭಿಸಲು ಗಂಗಾವತಿಯಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳಿದ್ದು, ಸೂಕ್ತ ಸ್ಥಳವಾಗಿದೆ.

ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಮಹಾವಿದ್ಯಾಲಯವನ್ನು ಸ್ಥಳಾಂತರಿಸಿದ್ದಕ್ಕೆ, ಸ್ಥಳೀಯ ವಿಧಾನ ಪರಿಷತ್ ಸದಸ್ಯರೊಡಗೂಡಿ ಮರು ಪ್ರಾರಂಭಿಸಲಾಗಿದೆ. ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿರುವುದು ಯಲಬುರ್ಗಾ ತಾಲೂಕಿನಲ್ಲಿ ಎನ್ನುವುದನ್ನು ಸ್ವಾಗತಿಸಬೇಕಾಗುತ್ತದೆ.

Advertisement

0 comments:

Post a Comment

 
Top